
ಬೆಂಗಳೂರು (ಮೇ 14) : ಕಳೆದ ಸಾಲಿನಲ್ಲಿ ಆವರಿಸಿದ ಬರಗಾಲದಿಂದಾಗಿ ಬೆಂಗಳೂರಿನ ಬೋರ್ವೆಲ್ಗಳೆಲ್ಲವೂ ಬತ್ತಿ ಹೋಗಿದ್ದವು. ಇದರಿಂದ ಬುದ್ಧಿ ಕಲಿತ ಬೆಂಗಳೂರು ಜಲಮಂಡಳಿಯು ಎಲ್ಲ ಸರ್ಕಾರಿ ಕಚೇರಿಗಳು, ಕಟ್ಟಡಗಳು, ಶಾಲಾ ಕಾಲೇಜುಗಳು, ಬಸ್ ನಿಲ್ದಾಣಗಳು ಹಾಗೂ ದೇವಾಲಯಗಳಿಗೆ ಮಳೆ ನೀರು ಕೊಯ್ಲು ಅಳವಡಿಕೆ ಮತ್ತು ಇಂಗುಗುಂಡಿಗಳ ನಿರ್ಮಾಣಕ್ಕೆ ಮುಂದಾಗಿದೆ.
ಬೆಂಗಳೂರಿನಲ್ಲಿ ಸಮರ್ಪಕ ನೀರಿನನಿರ್ವಹಣೆ ಕುರಿತು ಸಭೆ ಮಾಡಿದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್ಬಿ) ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಅವರು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ, ಸರಕಾರಿ ಶಾಲೆಗಳು, ಕಾಲೇಜುಗಳು, ಬಿಬಿಎಂಪಿ ಅಧೀನದ ಶೈಕ್ಷಣಿಕ ಸಂಸ್ಥೆಗಳು ಆಸ್ಪತ್ರೆಗಳು, ಪಾರ್ಕ್ಗಳು, ಸರಕಾರಿ ಕಟ್ಟಡಗಳಲ್ಲಿರುವ ಅಂಗನವಾಡಿಗಳು ಸೇರಿದಂತೆ ಸರಕಾರಿ ಕಟ್ಟಡಗಳಲ್ಲಿ ಜಲಮಂಡಳಿಯ ವತಿಯಿಂದ ಮಳೆ ನೀರು ಕೊಯ್ಲು ವ್ಯವಸ್ಥೆ ಹಾಗೂ ಇಂಗುಗುಂಡಿಗಳನ್ನು ಅಳವಡಿಸಲಾಗುವುದು. ಒಂದು ವಾರದಲ್ಲಿ ಕ್ರಿಯಾ ಯೋಜನೆ ಸಲ್ಲಿಸುವಂತೆ ಅಧೀನ ಅಧಿಕಾರಿಗಳಿಗೆ ತಿಳಿಸಿದರು.
ಶೋಕಿಗಾಗಿ ಸಾಲ ಮಾಡಿ, ಸಾಲಕ್ಕಾಗಿ 6 ತಿಂಗಳ ಗಂಡು ಮಗುವನ್ನೇ ಮಾರಿದ ಅಪ್ಪ
ಸಾರ್ವಜನಿಕರಿಗೆ ಮಾದರಿಯಾಗುವ ನಿಟ್ಟಿನಲ್ಲಿ ಈಗಾಗಲೇ ಜಲಮಂಡಳಿಯ ವತಿಯಿಂದ ತಮ್ಮ ವ್ಯಾಪ್ತಿಯಲ್ಲಿ 1,000 ಕ್ಕೂ ಅಧಿಕ ಮಳೆ ನೀರು ಇಂಗುಗುಂಡಿಗಳನ್ನು ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ 1000 ಇಂಗು ಗುಂಡಿಗಳನ್ನು ಜಲಮಂಡಳಿ ನಿರ್ಮಿಸಲಿದೆ. ಆದರ ಜೊತೆಗೆ, ಮಳೆ ನೀರು ಕೊಯ್ಲು ಅಳವಡಿಕೆಗೆ ಮಾದರಿ ಆಗುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿರುವ ಎಲ್ಲ ಸರಕಾರಿ ಶಾಲೆಗಳು, ಕಾಲೇಜುಗಳು, ಬಿಬಿಎಂಪಿ ಅಧೀನದ ಶೈಕ್ಷಣಿಕ ಸಂಸ್ಥೆಗಳು ಆಸ್ಪತ್ರೆಗಳು, ಪಾರ್ಕ್ಗಳು, ಸರಕಾರಿ ಕಟ್ಟಡಗಳಲ್ಲಿರುವ ಅಂಗನವಾಡಿಗಳು ಸೇರಿದಂತೆ ಸರಕಾರಿ ಕಟ್ಟಡಗಳಲ್ಲಿ ಮಳೆ ನೀರು ಪದ್ದತಿಯನ್ನು ಅಳವಡಿಸಬೇಕು ಎಂದು ಸೂಚಿಸಿದರು
ಮಳೆ ನೀರು ಕೊಯ್ಲು ಅಳವಡಿಕೆ ಮೂಲಕ ನೀರನ್ನು ಮರುಬಳಕೆ ಮಾಡುವ ಹಾಗೂ ಹೆಚ್ಚುವರಿ ನೀರನ್ನು ಇಂಗು ಗುಂಡಿಗಳ ಮೂಲಕ ಅಂತರ್ಜಲ ಮರುಪೂರಣ ಮಾಡಿಸುವ ವ್ಯವಸ್ಥೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಜೊತೆಗೆ, ಮಳೆ ನೀರು ಕೊಯ್ಲು ವ್ಯವಸ್ಥೆ ಹಾಗೂ ಇಂಗುಗುಂಡಿಗಳ ಅಳವಡಿಕೆಯ ಮಾಹಿತಿ, ಅದರಿಂದಾಗುವ ಪ್ರಯೋಜನಗಳ ಬಗ್ಗೆಯೂ ಫಲಕ ಅಳವಡಿಸಿ ಮಾಹಿತಿ ನೀಡಬೇಕು. ಇದರಿಂದ ಜನರು ಕೂಡ ನೀರಿನ ಮಹತ್ವ ಅರಿತು ಮಳೆ ನೀರು ಕೊಯ್ಲು ಅಳವಡಿಕೆ ಮೊರೆ ಹೋಗಬಹುದು ಎಂದು ತಿಳಿಸಿದರು.
ಸರಕಾರಿ ಶಾಲೆ, ಕಾಲೇಜುಗಳಲ್ಲಿ ಹೆಚ್ಚಿನ ಆದ್ಯತೆ ನೀಡಿ: ನಗರದಲ್ಲಿರುವ ಸರಕಾರಿ ಶಾಲೆ, ಕಾಲೇಜುಗಳು, ಬಿಬಿಎಂಪಿ ಯ ಶೈಕ್ಷಣಿಕ ಸಂಸ್ಥೆಗಳು ಹಾಗೂ ಸರಕಾರಿ ಕಟ್ಟಡಗಳಲ್ಲಿರುವ ಅಂಗನವಾಡಿಗಳಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲು ಹೆಚ್ಚಿನ ಆದ್ಯತೆ ನೀಡಬೇಕು. ಶಾಲಾ ವಿದ್ಯಾರ್ಥಿಗಳು ಈ ವ್ಯವಸ್ಥೆಯನ್ನು ಹಾಗೂ ಅದರಿಂದ ಅವರಿಗೆ ಆಗುತ್ತಿರುವ ಉಪಯೋಗವನ್ನು ಪ್ರಾಯೋಗಿಕವಾಗಿ ವೀಕ್ಷಿಸಬೇಕು. ಇದರಿಂದ ತಮ್ಮ ಅಕ್ಕ ಪಕ್ಕದ ಪ್ರದೇಶದಲ್ಲಿ ಹೆಚ್ಚಿನ ಜನರಿಗೆ ತಿಳುವಳಿಕೆಯನ್ನು ಹಂಚುವ ಕಾರ್ಯ ಆಗಬೇಕು ಎನ್ನುವುದು ಉದ್ದೇಶವಾಗಿದೆ. ಖಾಸಗಿ ಶೈಕ್ಷಣಿಕ ಸಂಸ್ಥೆಗಳಲ್ಲೂ ಈ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅಳವಡಿಸಿ ವಿದ್ಯಾರ್ಥಿಗಳಿಗೆ ಈ ಬಗ್ಗೆ ಪ್ರಾತ್ಯಕ್ಷಿಕೆ ನೀಡಬೇಕು ಎಂದು ಸೂಚನೆ ನೀಡಿದರು..
ಅಮೃತಧಾರೆ ನಟಿ ಛಾಯಾಸಿಂಗ್ಗೆ 66 ಗ್ರಾಂ ಗೋಲ್ಡ್, 159 ಗ್ರಾಂ ಬೆಳ್ಳಿ ಕೊಟ್ಟ ಬೆಂಗಳೂರು ಪೊಲೀಸ್ ಕಮಿಷನರ್
ಧಾರ್ಮಿಕ ಪ್ರದೇಶ, ಸಾರ್ವಜನಿಕ ಸ್ಥಳದಲ್ಲಿ ಅಳವಡಿಕೆ:
ಬಿಬಿಎಂಪಿಯ ವಲಯವಾರು ಪ್ರದೇಶಗಳಲ್ಲಿ ಎಲ್ಲ ಧಾರ್ಮಿಕ ಸಂಸ್ಥೆಗಳ ಆವರಣದಲ್ಲೂ ಜಲಮಂಡಳಿ ವತಿಯಿಂದ ಮಳೇ ನೀರು ಕೊಯ್ಲು ಪದ್ದತಿಯನ್ನು ಅಳವಡಿಸಲಾಗುವುದು. ಈ ಮೂಲಕ ಆಯಾ ಸ್ಥಳಗಳಿಗೆ ಭೇಟಿ ನೀಡುವಂತಹ ಜನರಿಗೆ ಈ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ನೀರಿನ ಸದ್ಬಳಕೆಗೆ ಉತ್ತೇಜನ ನೀಡಿದಂತಾಗುತ್ತದೆ. ಜೊತೆಗೆ, ಸರಕಾರಿ ನಿಲ್ದಾಣಗಳು, ಬಿಎಂಟಿಸಿ ಬಸ್ ನಿಲ್ದಾಣಗಳಲ್ಲೂ ಆಯಾ ಸಂಸ್ಥೆಗಳ ಸಹಕಾರದೊಂದಿಗೆ ಮಳೆ ನೀರು ಕೋಯ್ಲು ವ್ಯವಸ್ಥೆ ಹಾಗೂ ಇಂಗುಗುಂಡಿಗಳನ್ನು ಅಳವಡಿಸಲಾಗುತ್ತದೆ. ಇದರಿಂದ ಹೆಚ್ಚಿನ ಜನರನ್ನು ತಲುಪಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ