
ಬೆಂಗಳೂರು (ಮೇ 14): ಹಾಸನ ಸಂಸದ ಪ್ರಜ್ವಲ್ ರೇಬಣ್ಣ ಅಶ್ಲೀಲ ವಿಡಿಯೋ ಪ್ರಕರಣದ ಸಂತ್ರಸ್ತೆಯನ್ನು ಕಿಡ್ನಾಪ್ ಮಾಡಿದ ಆರೋಪದಲ್ಲಿ ಜೈಲು ಸೇರಿದ್ದ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಸತತ 6 ದಿನಗಳ ಬಳಿಕ ಜಾಮೀನು ಪಡೆದು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆ ಆಗಿದ್ದಾರೆ.
ಪ್ರಜ್ವಲ್ ರೇವಣ್ಣ ಅವರದ್ದೆನ್ನಲಾದ ಅಶ್ಲೀಲ ವಿಡಿಯೋ ದೃಶ್ಯಗಳಲ್ಲಿದ್ದ ಸಂತ್ರಸ್ತ ಮಹಿಳೆಯನ್ನು ಕಿಡ್ನಾಪ್ ಮಾಡಿದ ಆರೋಪದಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ) ಫೊಲೀಸರು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರನ್ನು ಬಂಧಿಸಿದ್ದರು. ಇನ್ನು ಬಂಧನಕ್ಕೂ ಮುನ್ನವೇ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರೂ ತಿರಸ್ಕಾರ ಆಗಿತ್ತು. ಆದರೆ, ಸಂತ್ರಸ್ತ ಮಹಿಳೆಯೇ ತನ್ನನ್ನು ರೇವಣ್ಣ ಅವರು ಕಿಡ್ನಾಪ್ ಮಾಡಿಲ್ಲ. ನಾನು ಸಂಬಂಧಿಕರ ಮನೆಗೆ ತೆರಳಿದ್ದೆನು ಎಂದು ಹೇಳಿದ್ದರು. ಆದರೆ, ಸಂತ್ರಸ್ತ ಮಹಿಳೆ, ಮಾಜಿ ಸಚಿವ ರೇವಣ್ಣ ಅವರ ಮಗ ಪ್ರಜ್ವಲ್ ಅವರಿಂದ ನನಗೆ ಲೈಂಗಿಕ ಕಿರುಕುಳ ಉಂಟಾಗಿದೆ ಎಂದು ಹೇಳಿಕೊಂಡಿದ್ದರು. ಇದರ ಬೆನ್ನಲ್ಲಿಯೇ ಒಂದು ವಾರಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಮಾಜಿ ಸಚಿವ ಹೆಚ್.ಡಿ. ಅವರಿಗೆ ನಿನ್ನೆ ಜಾಮೀನು ಮಂಜೂರಾಗಿತ್ತು.
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್: ಹೊಳೆನರಸೀಪುರ, ಹಾಸನದಲ್ಲಿ ಎಫ್ಎಸ್ಎಲ್ ಪರಿಶೀಲನೆ
ನ್ಯಾಯಾಲಯದಿಂದ ಜಾಮೀನು ಲಭ್ಯವಾದ ನಿನ್ನೆ ಬಿಡುಗಡೆಗೆ ವಿಧಿಸಲಾಗಿದ್ದ ಷರತ್ತುಗಳನ್ನು ಸಂಜೆಯೊಳಗೆ ಪೂರೈಕೆ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಒಂದು ದಿನ ರಾತ್ರಿ ಹೆಚ್ಚುವರಿಯಾಗಿ ಜೈಲಿನಲ್ಲಿ ಕಳೆದರು. ಇಂದು ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬೆನ್ನಲ್ಲಿಯೇ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರು ಜೈಲಿನಿಂದ ಬಿಡುಗಡೆ ಆಗಿದ್ದಾರೆ. ಜೊತೆಗೆ, ಮಧ್ಯಾಹ್ನ 3 ಗಂಟೆಗೆ ರಾಹುಕಾಲ ಆರಂಭವಾಗುವ ಹಿನ್ನೆಲೆಯಲ್ಲಿ ಅಷ್ಟರೊಳಗೆ ಜೈಲಿನಿಂದ ಬಿಡುಗಡೆ ಆಗಿ ಮನೆಯಲ್ಲಿ ಪೂಜೆಯೊಂದರಲ್ಲಿ ಪಾಲ್ಗೊಳ್ಳಬೇಕಿತ್ತು. ಈ ಹಿನ್ನೆಲೆಯಲ್ಲಿ ರಾಹುಕಾಲದ ಮೊದಲೇ ಮಧ್ಯಾಹ್ನ 1.30ಕ್ಕೆ ಜೈಲಿನಿಂದ ಹೊರಗೆ ಬಂದು ತಮ್ಮ ತಂದೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಮನೆಗೆ ತೆರಳಿದ್ದಾರೆ.
ಬೆಂಗಳೂರಿನ ಪದ್ಮನಾಭನಗರದಲ್ಲಿನ ದೇವೇಗೌಡರ ಮನೆಯ ಗೇಟಿನಲ್ಲಿಯೇ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರನ್ನು ಎಸ್ಐಟಿ ಪೊಲೀಸರು ಬಂಧಿಸಿದ್ದರು. ಎಸ್ಐಟಿ ವಶದಲ್ಲಿ ಮೂರು ದಿನ ವಿಚಾರಣೆಯನ್ನು ಎದುರಿಸಿದ್ದ ರೇವಣ್ಣ ನಂತರ ನ್ಯಾಯಾಂಗ ಬಂಧನಕ್ಕೆ ಒಳಗಾಗಿ, ಜೈಲು ಸೇರಿದ್ದರು. ಈಗ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲಿಯೇ ಪುನಃ ತಮ್ಮ ತಂದೆ ಮನೆ ದೇವೇಗೌಡರ ನಿವಾಸಕ್ಕೆ ತೆರಳಿದ್ದಾರೆ. ಅಲ್ಲಿ ತಮ್ಮ ತಾಯಿ ಚೆನ್ನಮ್ಮ ಹಾಗೂ ತಂದೆ ದೇವೇಗೌಡರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡರು. ಮನೆಯಲ್ಲಿ ಸಂತಸದ ವಾತಾವರಣ ಮನೆ ಮಾಡಿತ್ತು.
ಅಮೃತಧಾರೆ ನಟಿ ಛಾಯಾಸಿಂಗ್ಗೆ 66 ಗ್ರಾಂ ಗೋಲ್ಡ್, 159 ಗ್ರಾಂ ಬೆಳ್ಳಿ ಕೊಟ್ಟ ಬೆಂಗಳೂರು ಪೊಲೀಸ್ ಕಮಿಷನರ್
ದೇವೇಗೌಡರ ಮನೆ ಬಳಿ ಭದ್ರತೆ: ಮಾಜಿ ಸಚಿವ ಹೆಚ್.ಡಿ. ರೇವಣ್ಣ ಜೈಲಿನಿಂದ ಬಿಡುಗಡೆ ಆಗಿ ಮಾಜಿ ಪ್ರಧಾನಿ ದೇವೇಗೌಡರ ಮನೆಗೆ ಆಗಮಿಸುವುದು ತಿಳಿಯುತ್ತಿದ್ದಂತೆಯೇ ಜೆಡಿಎಸ್ನ ನೂರಾರು ಕಾರ್ಯಕರ್ತರು ದೇವೇಗೌಡರ ಮನೆ ಬಳಿ ಜಮಾಯಿಸಿದ್ದರು. ರೇವಣ್ಣ ಪರವಾಗಿ ಘೋಷಣೆ ಕೂಗುತ್ತಾ ಅವರಿಗೆ ಶುಭ ಕೋರಲು ಹಾರ-ತುರಾಯಿಗಳನ್ನು ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ರೇವಣ್ಣ ಮಾಧ್ಯಮಗಳಿಗೂ ಪ್ರತಿಕ್ರಿಯೆ ಕೊಡದೇ, ಅಭಿಮಾನಿಗಳ ಬಳಿಯೂ ಹೋಗದೇ ಸೀದಾ ಮನೆಯೊಳಗೆ ಹೋದರು. ಇನ್ನು ನೂರಾರು ಅಭಿಮಾನಿಗಳು ಜಮಾಯಿಸಿದ್ದ ಹಿನ್ನೆಲೆಯಲ್ಲಿ ದೇವೇಗೌಡರ ಮನೆಯ ಬಳಿ ಪೊಲೀಸ್ ಬಿಗಿ ಭಧ್ರತೆ ಒದಗಿಸಲಾಗಿದೆ. ಎರಡು ಕೆಎಸ್ಆರ್ಪಿ ತುಕಡಿ ನಿಯೋಜಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ