
ಬೆಳಗಾವಿ: ರಾಜ್ಯದಲ್ಲಿ ಬೇಸಿಗೆಯಲ್ಲಿ ಸುರಿದ ಅಕಾಲಿಕ ಮಳೆಗೆ ಮತ್ತೊಂದು ಜೀವ ಬಲಿಯಾಗಿದೆ. ನಿನ್ನೆಯಂತೆ ಇಂದು ಕೂಡ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಮಿಂಚಿನಿಂದ ಕೂಡಿದ ಧಾರಾಕಾರ ಮಳೆಯಾಗಿದ್ದು, ಹಲವು ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ. ಬೆಳಗಾವಿ ತಾಲೂಕಿನ ಹೊಸೂರ ಗ್ರಾಮದಲ್ಲಿ ಮಳೆಗೆ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಮನೆಯ ಗೋಡೆ ಕುಸಿದು ಪತ್ನಿ ಸಾವನ್ನಪ್ಪಿದ್ದರೆ ಪತಿ ಅನಾಹುತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಮಳೆ ನಿಲ್ಲೋದನ್ನು ಕಾಯುತ್ತಿದ್ದವರಿಗೆ ಕಾದಿದ್ದ ಜವರಾಯ
ಮೃತ ಮಹಿಳೆಯನ್ನು 34 ವರ್ಷದ ಪರ್ವಿನ್ ಬೇಪಾರಿ(34) ಎಂದು ಗುರುತಿಸಲಾಗಿದೆ. ಇವರ ಪತಿ ಶರೀಫ್ ಬೇಪಾರಿ ಈ ಅವಘಡದಲ್ಲಿ ಬದುಕುಳಿದಿದ್ದಾರೆ. ಈ ದಂಪತಿ ಕೋಳಿಗಳನ್ನು ಮಾರಾಟ ಮಾಡುವುದಕ್ಕೆ ಬೈಕ್ ಮೇಲೆ ಹೊರಟಿದ್ದರು. ಮಳೆ ಹೆಚ್ಚಾದ ಹಿನ್ನೆಲೆ ಪಾಳು ಮನೆ ಕೆಳಗೆ ನಿಂತಿದ್ದರು. ಇವರ ದುರಾದೃಷ್ಟಕ್ಕೆ ಇದೇ ವೇಳೆ ಇವರು ಮಳೆಯಿಂದ ಆಶ್ರಯ ಪಡೆಯಲು ನಿಂತಿದ್ದ ಪಾಳು ಮನೆಯ ಗೋಡೆ ಏಕಾಏಕಿ ಕುಸಿದು ಬಿದ್ದು, ಪರ್ವೀನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬದುಕುಳಿದ ಶರೀಫ್ ಅವರಿಗೆ ಬೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಕುಟುಂಬಸ್ಥರ ಆಗ್ರಹಿಸಿದ್ದಾರೆ. ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇತ್ತ ಬೆಳಗಾವಿ ಜಿಲ್ಲೆಯಾದ್ಯಂತ ಬಿರುಗಾಳಿ ಮಿಶ್ರಿತ ಆಲಿಕಲ್ಲು ಮಳೆಯಾಗಿದ್ದು, ಹಲವು ಕಡೆಗಳಲ್ಲಿ ಸಣ್ಣಪುಟ್ಟ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿದೆ. ಮಳೆ ಹಾಗೂ ಗಾಳಿಗೆ ಕೆಎಲ್ಇ ಸಂಸ್ಥೆ ಆವರಣದಲ್ಲಿದ್ದ ತಗಡಿನ ಶೀಟು ಹಾರಿ ಹೋಗಿದೆ. ಸದ್ಯ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಮಳೆ ನಿಂತ ಬಳಿಕ ಎರಡು ಕ್ರೇನ್ ಬಳಸಿ ಈ ತಗಡಿನ ಶೀಟುಗಳ ತೆರವು ಕಾರ್ಯಾಚರಣೆ ನಡೆದಿದೆ.
ಹಾಗೆಯೇ ಬೆಳಗಾವಿಯ ಮತ್ತೊಂದು ಕಡೆ ಬಿರುಗಾಳಿಗೆ ಹಲವು ಗೂಡಂಗಡಿಗೆ ಹಾನಿಯಾಗಿದೆ. ಬಿರುಗಾಳಿಗೆ ಗೂಡಂಗಡಿಗಳ ಮೇಲ್ಛಾವಣಿ ಹಾರಿ ಹೋಗಿದ್ದು, ಅಂಗಡಿಗಳಲ್ಲಿದ್ದ ಆಹಾರ ಸಾಮಾಗ್ರಿಗಳು ಸೇರಿದಂತೆ ವಸ್ತುಗಳಿಗೆ ಹಾನಿಯಾಗಿದೆ. ರಂಜಾನ್ ನಿಮಿತ್ತ ಇಲ್ಲಿ 20ಕ್ಕೂ ಹೆಚ್ಚು ಆಹಾರದ ಅಂಗಡಿಗಳನ್ನು ಹಾಕಲಾಗಿತ್ತು. ಆದರೆ ಸಂಜೆ ಏಳು ಗಂಟೆಗೆ ಆಹಾರ ಖಾದ್ಯಗಳನ್ನ ಸಿದ್ಧಪಡಿಸುವಾಗಲೇ ಗಾಳಿ ಮಳೆ ಶಾಕ್ ನೀಡಿದ್ದು, ಇದರಿಂದ ಅಂಗಡಿಗಳ ಮಾಲೀಕರು ಪರದಾಡುವಂತಾಯ್ತು.
ಇದನ್ನೂ ಓದಿ: ರೈತರ ಕೈಗೆ ಸಿಕ್ಕ ಪಂಪ್ಸೆಟ್ ಕೇಬಲ್ ಕಳ್ಳರು: ಕದ್ದ ಕೇಬಲ್ನಿಂದ ಮರಕ್ಕೆ ಕಟ್ಟಿ ಥಳಿಸಿದ ರೈತರು
ನಿನ್ನೆಯಷ್ಟೇ ಕೊಪ್ಪಳದಲ್ಲಿ ಸುರಿದ ಬೇಸಿಗೆ ಮಳೆ ವೇಳೆ ಸಿಡಿಲು ಬಡಿದು 8ನೇ ತರಗತಿಯ ಬಾಲಕ ಮಂಜುನಾಥ ಮುದೇಗೌಡ (14) ಮೃತಪಟ್ಟಿದ್ದರು. ಕೊಪ್ಪಳದ ಯಲಬುರ್ಗಾ ತಾಲೂಕಿನಲ್ಲಿ ಆಡು ಮೇಯಿಸಲು ತೆರಳಿದ್ದಾಗ ಸಿಡಿಲು ಬಡಿದು ಮುದೇಗೌಡ ಸಾವನ್ನಪ್ಪಿದ್ದರು.
ಇದನ್ನೂ ಓದಿ: ಚಿಕ್ಕಮಗಳೂರು : 50 ಅಡಿ ಆಳದ ಕಂದಕಕ್ಕೆ ಬಿದ್ದ ಕಾರು: ಅನುಮಾನ ಹುಟ್ಟಿಸಿದ ಅಪಘಾತ ಪ್ರಕರಣ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ