
ಬೆಂಗಳೂರು: ಈ ಬಾರಿಯ ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ ಸಾಹಿತಿ ಬಾನು ಮುಷ್ತಾಕ್ ಆಯ್ಕೆಯನ್ನು ವಿರೋಧಿಸಿ ಮಾಜಿ ಸಂಸದ, ಬಿಜೆಪಿ ನಾಯಕ ಪ್ರತಾಪ್ ಸಿಂಹ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಪಿಐಎಲ್ನ್ನು ನ್ಯಾಯಾಲಯ ವಜಾಗೊಳಿಸಿದೆ. ತಮ್ಮ ಅರ್ಜಿ ವಜಾಗೊಳ್ಳುತ್ತಿದ್ದಂತೆ ಪ್ರತಾಪ್ ಸಿಂಹ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ನಮ್ಮ ನಾಯಕರ ವಿರುದ್ಧ ಸಿದ್ದರಾಮಯ್ಯ ಸರ್ಕಾರ ಹಾಕಿರುವ ಎಫ್ಐಆರ್ ರದ್ದಾಗಬೇಕಾಗುತ್ತದೆ ಎಂದು ಹೇಳಿದ್ದಾರೆ.
ಸಾಹಿತಿ ಬಾನು ಮುಷ್ತಾಕ್ ಅವರ ಈ ಭಾಷಣವನ್ನು ಕೋರ್ಟ್ ನ ಮುಂದಿಟ್ಟಿದ್ದೆವು. ಇದಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಅವಕಾಶವಿದೆ ಎನ್ನುವುದಾದರೆ, ಇದು ಹಿಂದೂ ದೇವತೆ ಮತ್ತು ಹಿಂದೂ ಸಂಸ್ಕೃತಿಯ ಅಂಗವಾಗಿರುವ ಅರಿಶಿಣ ಕುಂಕುಮದ ಮೇಲಿನ ದ್ವೇಷವಲ್ಲ ಎನ್ನುವುದಾದರೆ ನಮ್ಮ ನಾಯಕರ ವಿರುದ್ಧ ಸಿದ್ದರಾಮಯ್ಯ ಸರ್ಕಾರ ಹಾಕಿರುವ ಬಹಳಷ್ಟು FIRಗಳನ್ನು ಕೂಡಲೇ ರದ್ದಾಗಬೇಕಾಗುತ್ತದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ದಸರಾ ಉದ್ಘಾಟನಾ ವಿವಾದ: ಬಾನು ಬೆನ್ನಿಗೆ ನಿಂತ ರಾಜ್ಯದ ಲೇಖಕಿಯರು, ನಾಳೆ ಮಹತ್ವದ ಸುದ್ದಿಗೋಷ್ಠಿ
ಇದನ್ನೂ ಓದಿ: 'ಕೈಮುಗಿಯುವೆ, ದಸರಾ ಉದ್ಘಾಟನೆ ಒಪ್ಪಬೇಡಿ: ಬಾನು ಮುಷ್ತಾಕ್ಗೆ ಅಜೀಂ ಮನವಿ
ದಸರಾ ಉದ್ಘಾಟನೆಗೆ ಭಾನುಮುಸ್ತಾಕ್ ಆಯ್ಕೆ ಪ್ರಶ್ನಿಸಿ ಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿ ವಜಾ ವಿಚಾರಕ್ಕೆ ಸಂಬಂಧಿಸಿದ ರಾಮನಗರದಲ್ಲಿ ಮಾಜಿ ಸಂಸದ ಡಿ.ಕೆ.ಸುರೇಶ್ ಪ್ರತಿಕ್ರಿಯಿಸಿದ್ದಾರೆ. ನಾವೆಲ್ಲರೂ ಭಾರತೀಯರು ಅಂತ ಒಪ್ಪಿಕೊಂಡ ಮೇಲೆ ಪದೇಪದೇ ಬೇರೆ ರೀತಿಯ ಚರ್ಚೆ ಬೇಡ. ಇದು ಕೋಮುವಾದವನ್ನ ಹುಟ್ಟುಹಾಕೋದು ಬಿಟ್ಟು ಬೇರೇನೂ ಅಲ್ಲ. ಬಿಜೆಪಿ ಸ್ನೇಹಿತರಿಗೆ ಅನೇಕ ಬಾರಿ ಹೇಳಿದ್ದೇನೆ, ದೇಶದಲ್ಲಿ ಭಾರತೀಯರು ಬದುಕಲಿಕ್ಕೆ ಬಿಡಿ. ಭಾರತವನ್ನ ವಿರೋಧಿಸುವವರ ಪರವಾಗಿ ನಾವ್ಯಾರು ಇಲ್ಲ. ಆದರೆ ನೀವು ಪದೇಪದೇ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರಬೇಡಿ. ಸರ್ವಧರ್ಮದ ವಿಚಾರ ಹಾಗೂ ಬಸವಣ್ಣನವರ ನಾಯಕತ್ವ, ಸಂವಿಧಾನಕ್ಕೆ ಅಗೌರವ ತೋರಬೇಡಿ. ರಾಜ್ಯಕ್ಕೆ ಧಕ್ಕೆ ಆಗುವ ರೀತಿ ನಡೆದುಕೊಳ್ಳಬೇಡಿ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಗ್ರೇಟರ್ ಬೆಂಗಳೂರು ಟೌನ್ ಶಿಪ್ ವಿರೋಧಿಸಿ ರೈತರ ಅಹೋರಾತ್ರಿ ಧರಣಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಸುರೇಶ್, ಈಗಾಗಲೇ ಡಿಸಿಎಂ ಡಿಕೆ ಶಿವಕುಮಾರ್ ಅವರು ಈ ಬಗ್ಗೆ ಎಲ್ಲಾ ವಿಚಾರ ತಿಳಿಸಿದ್ದಾರೆ. ರೈತರ ಪ್ರತಿಭಟನೆ ರಾಜಕೀಯ ಪ್ರೇರಿತ ಹೊರತು ಬೇರೇನು ಅಲ್ಲ. ರೈತರ ಹಿತಕಾಯುಲು ಸರ್ಕಾರ, ಡಿಕೆಶಿ ಹಾಗೂ ಬಾಲಕೃಷ್ಣರವರು ಬದ್ಧರಾಗಿದ್ದೇವೆ.ಕೆಲವರು ರಾಜಕೀಯವನ್ನೇ ಮಾಡಬೇಕು ಅಂದಾಗ ಅವರಿಗೆ ಉತ್ತರ ಕೊಡಲು ಕಷ್ಟ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ