Hubballi Riot: ಹುಬ್ಬಳ್ಳಿ ಘಟನೆ ಮೌಲ್ವಿ ಬಂಧಿಸಿ, ಕ್ರಮ ಕೈಗೊಳ್ಳಿ: ಈಶ್ವರಪ್ಪ ಆಗ್ರಹ

By Govindaraj SFirst Published Apr 21, 2022, 3:01 AM IST
Highlights

ಹುಬ್ಬಳ್ಳಿಯಲ್ಲಿ ಪೊಲೀಸ್‌ ಜೀಪಿನ ಮೇಲೆ ನಿಂತು, ತಲೆ ಕತ್ತರಿಸಿ ಎಂದೆಲ್ಲ ಹೇಳಿಕೆ ನೀಡಿ ಗೂಂಡಾಗಿರಿ, ದೊಂಬಿಗೆ ಪ್ರಚೋದಿಸಿ, ಬಳಿಕ ಪರಾರಿ ಆಗಿರುವ ಮೌಲ್ವಿಯನ್ನು ತಕ್ಷಣ ಬಂಧಿಸಲು ಕ್ರಮ ಕೈಗೊಳ್ಳಬೇಕೆಂದು ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿ ಅವರನ್ನು ಒತ್ತಾಯಿಸಿದರು.

ಶಿವಮೊಗ್ಗ (ಏ.21): ಹುಬ್ಬಳ್ಳಿಯಲ್ಲಿ (Hubballi) ಪೊಲೀಸ್‌ ಜೀಪಿನ ಮೇಲೆ ನಿಂತು, ತಲೆ ಕತ್ತರಿಸಿ ಎಂದೆಲ್ಲ ಹೇಳಿಕೆ ನೀಡಿ ಗೂಂಡಾಗಿರಿ, ದೊಂಬಿಗೆ ಪ್ರಚೋದಿಸಿ, ಬಳಿಕ ಪರಾರಿ ಆಗಿರುವ ಮೌಲ್ವಿಯನ್ನು ತಕ್ಷಣ ಬಂಧಿಸಲು ಕ್ರಮ ಕೈಗೊಳ್ಳಬೇಕೆಂದು ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ (KS Eshwarappa) ಅವರು ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿ ಅವರನ್ನು ಒತ್ತಾಯಿಸಿದರು. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಶಾಂತಿಯಿಂದಿದ್ದ ಕರ್ನಾಟಕದಲ್ಲಿ ಕೊಲೆ, ದೊಂಬಿ, ಗಲಭೆ ಸೃಷ್ಟಿಸುವ ಷಡ್ಯಂತ್ರ ನಡೆದಿದೆ. ಇದನ್ನು ಉಗ್ರವಾಗಿ ಖಂಡಿಸುತ್ತೇವೆ. ಇಂತಹ ಎಲ್ಲ ಘಟನೆಯನ್ನು ಎದುರಿಸುವ ತಾಕತ್ತು ಹಿಂದೂ ಸಮಾಜಕ್ಕೆ ಇದೆ. 

ಆದರೆ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು ಎಂದು ಸುಮ್ಮನಿದ್ದೇವೆ ಎಂದು ಹೇಳಿದರು. ಹುಬ್ಬಳ್ಳಿ ಕಾಂಗ್ರೆಸ್‌ ಮುಖಂಡ ಅಲ್ತಾಫ್‌ ಹಳ್ಳೂರು ಕೂಡ ಇದೇ ಮೌಲ್ವಿಯ ಪಕ್ಕದಲ್ಲಿ ನಿಂತು ಗಲಭೆಗೆ ಪ್ರಚೋದನೆ ನೀಡಿದ್ದಾರೆ. ಕಲ್ಲು ಹೊಡೆಯಲು ಬೆಂಬಲಿಸಿದ್ದಾರೆ. ಆಸ್ಪತ್ರೆ, ಮನೆ, ದೇವಸ್ಥಾನಗಳ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದರು. ಹೇಡಿಯಂತೆ ಓಡಿ ಹೋದ ಮೌಲ್ವಿಯನ್ನು ಬಿಡಬಾರದು. ರಾಷ್ಟ್ರದ್ರೋಹದ ಪ್ರಕರಣದಲ್ಲಿ ಗಲಭೆ ಮಾಡಿದವರೆಲ್ಲರನ್ನೂ ಬಂಧಿಸಬೇಕು. ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಗಲಭೆ -ಬಂಧನ- ಜಾಮೀನು ಎಂದು ಈ ಗೂಂಡಾಗಳಿಗೆ ಅಭ್ಯಾಸವಾಗಿದೆ.

Latest Videos

ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್, ಪೊಲೀಸರ ಕೈಸೇರಿದ ಪ್ರಾಥಮಿಕ ವರದಿ

ಇವರಿಗೆ ಕಾನೂನಿನ ರುಚಿ ತೋರಿಸಬೇಕು. ಈ ಗಲಭೆಗೆ ಯಾವ ಪಕ್ಷ, ಸಂಘಟನೆ, ವ್ಯಕ್ತಿಗಳು ಬೆಂಬಲ ನೀಡಿದ್ದಾರೆ ಎಂಬುದರ ಬಗ್ಗೆ ತುರ್ತು ಗಮನ ಹರಿಸಬೇಕಾಗಿದೆ ಎಂದು ಒತ್ತಾಯಿಸಿದರು. ರಾಜ್ಯದಲ್ಲಿ ಬಿಜೆಪಿ ಉತ್ತಮ ಆಡಳಿತ ನೀಡುತ್ತಿರುವುದನ್ನು ಕಾಂಗ್ರೆಸ್‌ ನಾಯಕರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪುಂಡರನ್ನು ಬೆಂಬಲಿಸುತ್ತಿದೆ. ಕಲ್ಲಂಗಡಿ ಹಣ್ಣು ಬಿದ್ದಿದ್ದರ ಕುರಿತು ಬೊಬ್ಬೆ ಹೊಡೆಯುವ ಕಾಂಗ್ರೆಸ್‌ ಮುಖಂಡರು ಹುಬ್ಬಳ್ಳಿ ಗಲಭೆಯನ್ನು ಯಾಕೆ ಖಂಡಿಸುವುದಿಲ್ಲ. ಪೊಲೀಸರ ತಲೆ ಮೇಲೆ ಕಲ್ಲು ಹಾಕುವ, ತಲೆ ಕಡಿಯುವ ಸ್ಕೆಚ್‌ ಹಾಕಲಾಗಿತ್ತು. 

ಆದರೆ, ಕಾಂಗ್ರೆಸ್‌ನವರಿಗೆ ಇದು ವಿಚಾರವೇ ಅಲ್ಲ. ಬದಲಾಗಿ ತುಷ್ಟೀಕರಣದ ರಾಜಕಾರಣ ಮಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ ಅವರಿಗೆ ಬೇರೆ ಉದ್ಯೋಗವೇ ಇಲ್ಲ. ಪರ್ಸೆಂಟೇಜ್‌, ಮುಸಲ್ಮಾನ ತುಷ್ಟೀಕರಣ ಎರಡೇ ವಿಷಯ ಇಟ್ಟುಕೊಂಡು ಹೋಗುತ್ತಿದ್ದಾರೆ. ಜನರು ಅನೇಕ ಸಂಕಷ್ಟಎದುರಿಸುತ್ತಿದ್ದಾರೆ. ಅವರ ಸಮಸ್ಯೆ ಕಡೆಗೆ ಗಮನವೇ ಇಲ್ಲ. ಈ ಮೊದಲು ರಾಜ್ಯದಲ್ಲಿ ಕನಿಷ್ಠ ವಿಪಕ್ಷವಾಗಿಯಾದರೂ ಈ ಪಕ್ಷ ಇತ್ತು. ಇವರು ಹೀಗೆಯೇ ಮುಂದುವರಿದರೆ ಆ ಅವಕಾಶವೂ ಅವರಿಗೆ ಸಿಗುವುದಿಲ್ಲ. ಇದು ಸತ್ಯ ಎಂದು ಈಶ್ವರ್ಪಪ್ಪ ಹೇಳಿದರು.

ಹುಬ್ಬಳ್ಳಿ ಘಟನೆಯನ್ನು ಅನೇಕ ರಾಷ್ಟ್ರಭಕ್ತ ಮುಸಲ್ಮಾನರು, ಜನರು ಖಂಡಿಸಿದ್ದಾರೆ. ಇಂತಹ ಘಟನೆಯನ್ನು ಇಷ್ಟಪಡುವುದೂ ಇಲ್ಲ. ಆದರೆ ಕಾಂಗ್ರೆಸ್‌, ಜೆಡಿಎಸ್‌ ಅಧಿಕಾರ ದಾಹಕ್ಕೆ ಕೊಲೆ, ದೊಂಬಿಗೆ ಬೆಂಬಲ ನೀಡುತ್ತಿವೆ ಎಂದು ದೂರಿದರು. ಪೂಜ್ಯ ದಿಂಗಾಲೇಶ್ವರ ಶ್ರೀಗಳು ಈಶ್ವರಪ್ಪ ಅವರು ಯಾವ ತಪ್ಪೂ ಮಾಡಿಲ್ಲ, ಅವರು ನಿರಪರಾಧಿ ಎಂದು ಹೇಳಿದ್ದಾರೆ. ಇದಕ್ಕಾಗಿ ಅವರಿಗೆ ವಂದಿಸುತ್ತೇನೆ. ಆದರೆ ಇವರು ಸೇರಿ ಕಾಂಗ್ರೆಸ್‌ ನಾಯಕರು ಸುಖಾಸುಮ್ಮನೆ ಕಮೀಷನ್‌ ಆರೋಪ ಮಾಡುತ್ತಿರುವುದು ಸರಿಯಲ್ಲ. ಏನಾದರೂ ಇದ್ದರೆ ದಾಖಲೆ ನೀಡಬೇಕು ಎಂದು ಒತ್ತಾಯಿಸಿದರು.

Congress Vs BJP ಸಂತೋಷ್ ಮನೆಗೆ ಕಾಂಗ್ರೆಸ್ ನಾಯಕರ ಭೇಟಿ, ನ್ಯಾಯ ಸಿಗುವವರೆಗೂ ಹೋರಾಟ ಎಂದ ಡಿಕೆಶಿ!

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕಾಂಗ್ರೆಸ್‌ ಏಜೆಂಟ್‌. ಇದರಲ್ಲಿ ಅನುಮಾನವಿಲ್ಲ. ಇಂತಹ ದಾರಿಯಲ್ಲಿ ಹೋಗೋ ದಾಸಯ್ಯ ಹೇಳಿದರಂತೆ ಆರೋಪಗಳನ್ನೆಲ್ಲಾ ತನಿಖೆಗೆ ಒಳಪಡಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಶಾಸಕ ಹರತಾಳು ಹಾಲಪ್ಪ, ಎಸ್‌.ದತ್ತಾತ್ರಿ, ಎಸ್‌.ಎನ್‌. ಚನ್ನಬಸಪ್ಪ, ನಗರ ಬಿಜೆಪಿ ಅಧ್ಯಕ್ಷ ಜಗದೀಶ್‌, ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್‌ ಸೂಡಾ ಅಧ್ಯಕ್ಷ ನಾಗರಾಜ್‌, ಮಾಧ್ಯಮ ಪ್ರಮುಖ್‌ ಅಣ್ಣಪ್ಪ ಇದ್ದರು.

click me!