
ಬಳ್ಳಾರಿ(ಅ.11) ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಬಳ್ಳಾರಿ ಜೈಲಿನಲ್ಲಿ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಬೆನ್ನು ನೋವಿನಿಂದ ಬಳಲುತ್ತಿರುವ ನಟ ದರ್ಶನ್ ಈಗಾಗಲೇ ವೈದ್ಯರ ತಪಾಸಣೆಗೆ ಒಳಗಾಗಿದ್ದಾರೆ. ನ್ಯೂರೋ ಸರ್ಜನ್ ವರದಿ ಬಳಿಕ ನಟ ದರ್ಶನ್ ಬೆಂಗಳೂರಿಗೆ ಸ್ಥಳಾಂತರ ಮಾಡುವ ಸಾಧ್ಯತೆ ಇದೆ. ಜೈಲಿನಲ್ಲಿ ಬೆನ್ನು ನೋವು ಉಲ್ಬಣಗೊಂಡಿರುವ ಹಿನ್ನಲೆಯಲ್ಲಿ ಪೊಲೀಸರು ಕೋರ್ಟ್ ಅನುಮತಿ ಪಡೆದು ಬೆಂಗಳೂರಿಗೆ ಸ್ಥಳಾಂತರ ಮಾಡುವ ಸಾಧ್ಯತೆ ಇದೆ.
ನಟ ದರ್ಶನ್ಗೆ ಬೆನ್ನು ನೋವಿನ ಸಮಸ್ಯೆ ಇರುವ ಕಾರಣ ಇತ್ತೀಚೆಗೆ ಸರ್ಜಿಕಲ್ ಚೇರ್ಗೆ ಮನವಿ ಮಾಡಿದ್ದು ಭಾರಿ ಸದ್ದು ಮಾಡಿತ್ತು. ಇದಾದ ಬಳಿಕ ದರ್ಶನ್ ಬೆನ್ನು ನೋವಿನ ಸಮಸ್ಯೆ ಉಲ್ಬಣಗೊಳ್ಳುತ್ತಲೇ ಹೋಗಿದೆ. ಕಳೆದ ವಾರ ಆರ್ಥೋಪೆಡಿಕ್ ಸರ್ಜನ್ ದರ್ಶನ್ ಬೆನ್ನು ನೋವಿನ ಕುರಿತು ತಪಾಸಣೆ ಮಾಡಿದ್ದಾರೆ. ಆದರೆ ವರದಿ ನೀಡಲು ನ್ಯೂರೋ ಸರ್ಜನ್ ಕೂಡ ತಪಾಸಣೆ ಮಾಡಬೇಕಿದೆ. ಹೀಗಾಗಿ ಇದೀಗ ವಿಮ್ಸ್ ಆಸ್ಪತ್ರೆಯ ನ್ಯೂರೋ ಸರ್ಜನ್ ಡಾ. ವಿಶ್ವನಾಥ್ ಅವರು ದರ್ಶನ್ ತಪಾಸಣೆ ಮಾಡಲಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್: ಸೋಪಲ್ಲಿ ದರ್ಶನ್ ಬಟ್ಟೆ ಒಗೆದಿದ್ದರೂ ರಕ್ತದ ಕಲೆ ಸಿಕ್ಕಿದೆ!
ವಿಶ್ವನಾಥ್ ತಪಾಸಣೆ ಬಳಿಕ ಆರ್ಥೋಪೆಡಿಕ್ ಸರ್ಜನ್ ದರ್ಶನ್ ಬೆನ್ನು ನೋವಿನ ಕುರಿತು ಸಂಪೂರ್ಣ ವರದಿ ನೀಡಲಿದ್ದಾರೆ. ವರದಿಯಲ್ಲಿ ದರ್ಶನ್ಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದರೆ ಮಾತ್ರ ಬೆಂಗಳೂರಿಗೆ ಸ್ಥಳಾಂತರ ಮಾಡುವ ಸಾಧ್ಯತೆ ಇದೆ. ವೈದ್ಯರ ಹೆಚ್ಚಿನ ಚಿಕಿತ್ಸೆಗೆ ಸೂಚಿಸಿದ್ದರೆ, ಈ ವೈದ್ಯರ ವರದಿಯನ್ನು ಕೋರ್ಟ್ಗೆ ಸಲ್ಲಿಸಿ ನಟ ದರ್ಶನ್ನ್ನು ಬಳ್ಳಾರಿಯಿಂದ ಬೆಂಗಳೂರಿಗೆ ಸ್ಥಳಾಂತರ ಮಾಡುವ ಸಾಧ್ಯತೆ ಇದೆ.
ಪ್ರಮುಖವಾಗಿ ವೈದ್ಯರ ಹೆಚ್ಚುವರಿ ಸ್ಕ್ಯಾನಿಂಗ್, ಸರ್ಜರಿ ಹಾಗೂ ಚಿಕಿತ್ಸೆಗೆ ಸೂಚಿಸಿದರೆ ಮಾತ್ರ ಬೆಂಗಳೂರಿಗೆ ಸ್ಥಳಾಂತರ ಮಾಡಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
ಅಕ್ಟೋಬರ್ 10 ರಂದು ಕೋರ್ಟ್ ಜಾಮೀನು ಅರ್ಜಿ ವಿಚಾರಣೆ ವೇಳೆ ದರ್ಶನ್ ನಿರೀಕ್ಷೆಗಳು ಗರಿಗೆದರಿತ್ತು. ಜಾಮೀನು ಸಿಗುವ ಸಾಧ್ಯತೆಗಳು ಹೆಚ್ಚಾಗಿದೆ ಅನ್ನೋ ವಿಶ್ವಾಸದಲ್ಲಿದ್ದ ನಟ ದರ್ಶನ್ ಕೈಸನ್ನೆ ಮೂಲಕ ಸಂಭ್ರಮ ಸೂಚಿಸಿದ್ದರು. ಆದರೆ ಅರ್ಜಿ ವಿಚಾರಣೆ ಮುಂದೂಡಿಕೆ ಆಗಿರುವ ಮಾಹಿತಿ ತಿಳಿಯುತ್ತಿದ್ದಂತೆ ದರ್ಶನ್ ಬೇಸರಗೊಂಡಿದ್ದಾರೆ. ಇದರ ಬೆನ್ನಲ್ಲೇ ದರ್ಶನ್ ಬೆನ್ನು ನೋವಿನ ಸಮಸ್ಯೆಯೂ ಉಲ್ಬಣಗೊಂಡಿದೆ ಎಂದು ವರದಿ ಹೇಳುತ್ತಿದೆ.
ಹಬ್ಬದ ಪ್ರಯುಕ್ತ ರಜಾ ದಿನವಾಗಿರುವ ಕಾರಣ ಕನಿಷ್ಠ ಮೂರು ದಿನ ಬಳ್ಳಾರಿ ಜೈಲಿನಲ್ಲೇ ಇರಬೇಕಾದ ಪರಿಸ್ಥಿತಿ ಇದೆ. ಇಷ್ಟೇ ಅಲ್ಲ ಮೂರು ದಿನ ರಜೆ ಇರುವ ಕಾರಣ ಭೇಟಿಗೆ ಜೈಲಿಗೆ ಯಾರೂ ಬರುವಂತಿಲ್ಲ. ಒಂಟಿತನದಲ್ಲಿದ್ದ ದರ್ಶನ್ಗೆ ಕುಟುಂಬಸ್ಥರು ಬಂದು ಭೇಟಿ ಮಾಡುತ್ತಿದ್ದ ಕಾರಣ ಕೊಂಚ ನಿಟ್ಟುಸಿರು ಬಿಟ್ಟಿದ್ದರು. ಇದೀಗ ಜಾಮೀನು ಅರ್ಜಿ ಕೂಡ ಮುಂದೂಡಲಾಗಿದೆ. ಇತ್ತ ಜೈಲಿಗೂ ಯಾರೂ ಭೇಟಿ ಮಾಡುವಂತಿಲ್ಲ. ಇದರಿಂದ ಹೈರಾಣಾಗಿರುವ ದರ್ಶನ್ ಇದೀಗ ವೈದ್ಯರ ವರದಿಗಾಗಿ ಕಾಯುತ್ತಿದ್ದಾರೆ.
ದರ್ಶನ್ ರಕ್ತ ಚರಿತ್ರೆ ಬಿಚ್ಚಿಟ್ಟ ಎಸ್ಪಿಪಿ ಪ್ರಸನ್ನಕುಮಾರ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ