
ಕಡೂರು (ಫೆ.26): ಈ ಶೈಕ್ಷಣಿಕ ವರ್ಷದಿಂದ ರಾಜ್ಯದಲ್ಲಿ ಎಲ್.ಕೆ.ಜಿಯಿಂದ ಪಿಯುಸಿವರೆಗೆ ಮಕ್ಕಳಿಗೆ ಎಲ್ಲಾ ರೀತಿಯ ಸವಲತ್ತು ಒಳಗೊಂಡಿರುವ 500 ಕೆಪಿಎಸ್ ಶಾಲೆಗಳನ್ನು ತೆರೆಯಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಕಡೂರು ಕ್ಷೇತ್ರ ಗಡಿಯ ಮರವಂಜಿ ಗ್ರಾಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಸಮಾರಂಭದಲ್ಲಿ ಜ್ಞಾನ ದೇಗುಲ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿ, 1 ವರ್ಷದಲ್ಲಿ ರಾಜ್ಯದಲ್ಲಿರುವ 6 ಸಾವಿರ ಗ್ರಾಪಂಗಳಲ್ಲಿ ಪಂಚಾಯ್ತಿಗೆ 1ರಂತೆ ಕೆ ಪಿ ಎಸ್ ಶಾಲೆಗಳನ್ನು ತೆರೆಯುವ ಉದ್ದೇಶವಿದ್ದು, ಇದಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೆಚ್ಚಿನ ಆಸಕ್ತಿ ತೋರಿಸಿದ್ದು ಹಣವನ್ನು ನೀಡುತ್ತಾರೆ.
ಕಳೆದ 8 ತಿಂಗಳಲ್ಲಿ ಮಕ್ಕಳಿಗೆ ಶಿಕ್ಷಣ ಕೊಡುವುದು ದೇವರ ಕೆಲಸ ಎಂದುಕೊಂಡು ಕೆಲಸ ಮಾಡುತ್ತಿದ್ದೇನೆ ಎಂದರು. ಎಲ್ಲ ರೀತಿ ಸೌಲಭ್ಯವಿರುವ 500 ಕೆ ಪಿ ಎಸ್ ಶಾಲೆಗಳನ್ನು ಮೇಲ್ದ್ರರ್ಜೆಗೇರಿಸಲಾಗುವುದು. ಶಾಸಕರೊಂದಿಗೆ ಸಮಾ ಲೋಚಿಸಿ ಯಾವ ಶಾಲೆಗಳನ್ನು ಕೆಪಿಎಸ್ ಶಾಲೆಗಳಾಗಿ ಪರಿವರ್ತಿಸ ಬೇಕು ಎಂಬ ಪಟ್ಟಿ ನೀಡಬೇಕು ಎಂದು ಬಿಇಒ ರವರಿಗೆ ಸಚಿವರು ಸೂಚನೆ ನೀಡಿದರು. ರಾಜ್ಯದಲ್ಲಿ ಕೇವಲ 20 ಮಕ್ಕಳಿರುವ 10 ಸಾವಿರ ಶಾಲೆಗಳಿವೆ ಎಂದು ಆತಂಕ ವ್ಯಕ್ತಪಡಿಸಿದ ಸಚಿವರು, ತಮಗೆ ಕಷ್ಟದ ಶಿಕ್ಷಣ ಇಲಾಖೆಯನ್ನು ನೀಡಿದ್ದು, ದೊಡ್ಡ ಜವಾಬ್ದಾರಿ ಹೊತ್ತಿದ್ದೇನೆ. ಈ ಸರ್ಕಾರಿ ಶಾಲೆ ಅದ್ಭುತ ಕಾರ್ಯಕ್ರಮ ನನಗೆ ಸಂತೋಷ ತಂದಿದೆ ಎಂದರು.
ಶೀಘ್ರದಲ್ಲೇ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಸಚಿವ ಕೆ.ಎನ್.ರಾಜಣ್ಣ
ಗುಡಿ ಚಿಕ್ಕದು ಮಾಡಿ ಶಾಲೆ ದೊಡ್ಡದು ಮಾಡಿ ಎಂಬ ಘೋಷಣೆಯಂತೆ ಗ್ರಾಮಸ್ಥರು ದೇವಾಲಯಗಳಿಗಿಂತ ದೇವರಾಗಿರುವ ನಿಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ ಅವರನ್ನು ತಿದ್ದುವ ಶಿಕ್ಷಕರ ಪಾತ್ರ ದೊಡ್ಡದು. ವಿಜ್ಞಾನಿ ಬಾಲಕೃಷ್ಣರವರು ಈ ಸರಕಾರಿ ಶಾಲೆಯಲ್ಲಿ ಓದಿ ಉನ್ನತ ಸ್ಥಾನ ಗಳಿಸಿರುವುದು ಗುಣಮಟ್ಟದ ಶಿಕ್ಷಣ ನೀಡಿರುವ ಸರ್ಕಾರಿ ಶಾಲೆ ಸಾಧನೆ ಎಂದರು. ರಾಜ್ಯದ 76,000 ಶಾಲೆಗಳು ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುತ್ತದೆ. 13 ಸಾವಿರ ಅನುದಾನಿತ ಶಾಲೆಗಳು ಸೇರಿ 1. 20 ಕೋಟಿ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಬಾರಿ ಬಜೆಟ್ ನಲ್ಲಿ 44,500 ಕೋಟಿ ರು. ಶಿಕ್ಷಣ ಇಲಾಖೆಗೆ ಮೀಸಲಿಡಲಾಗಿದೆ. ಇಂದು ತಮಗೆ ಊಟಕ್ಕೆ ಇಲ್ಲದಿದ್ದರೂ ಪರವಾಗಿಲ್ಲ ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬ ಪೋಷಕರ ಹಠ ಮತ್ತು ಛಲಕ್ಕೆ ಮೆಚ್ಚಬೇಕು ಎಂದರು. ಈ ಶಾಲೆಗೆ ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ಈ ವರ್ಷವೇ ಅನುದಾನ ಕೊಡುತ್ತೇನೆ ಎಂದು ಘೋಷಿಸಿದರು.
ವಿರೋಧ ಪಕ್ಷದವರಿಗೆ ಮಾಡಲು ಕೆಲಸವಿಲ್ಲ ಇದಕ್ಕೆ ನೀವು ಉತ್ತರ ಕೊಡಬೇಕು. ಸರ್ಕಾರದ ಗ್ಯಾರಂಟಿಗಳ ಮೂಲಕ ಮಹಿಳೆಯರಿಗೆ ಪ್ರಯೋಜನ ಆಗಿದೆ. ನೀವು ಆಶೀರ್ವಾದ ಮಾಡಬೇಕು. 1- 10ನೇ ತರಗತಿವರೆಗೂ ಮಕ್ಕಳಿಗೆ ವಾರಕ್ಕೆರಡು ಬಾರಿ ಮೊಟ್ಟೆ ನೀಡುತ್ತಿದ್ದೇವೆ. ಒಂದು ವರ್ಷಕ್ಕೆ 55 ಲಕ್ಷ ಮಕ್ಕಳಿಗೆ 1020 ಕೋಟಿ ರು. ಹೆಚ್ಚಾಗುತ್ತಿದೆ, 60 ಲಕ್ಷ ಲೀ. ಪ್ರತಿದಿನ ಹಾಲು ಕೊಡುತ್ತಿದ್ದೇವೆ. ರಾಗಿ ಮಾಲ್ಟಿನ ಜೊತೆ ಮೊಟ್ಟೆ ಕಡ್ಡಾಯವಾಗಿ ನೀಡಲಾಗುತ್ತಿದೆ ಎಂದರು ಸಭೆಯಲ್ಲಿ ಗ್ಯಾರಂಟಿಗಳ ಕುರಿತು ಹೆಣ್ಣುಮಕ್ಕಳಿಗೆ ಪ್ರಶ್ನೆ ಮಾಡಿದ ಅವರು ಗ್ಯಾರಂಟಿಗಳ ಮೂಲಕ ವರ್ಷಕ್ಕೆ 24 ಸಾವಿರ ರು. ನೀಡಿ ಕುಟುಂಬವನ್ನು ಆರ್ಥಿಕವಾಗಿ ಸ್ವಾವಲಂಬಿ ಮಾಡುತ್ತಿದೆ. ವೋಟು ಯಾರಿಗೆ ಹಾಕಿದರೂ ಇದು ನಿಮ್ಮ ಸರ್ಕಾರ ರಾಜ್ಯದ 7 ಕೋಟಿ ಜನರ ಸರ್ಕಾರವಾಗಿದ್ದು ಈ ಸರ್ಕಾರ ಉಳಿಸುವುದು ನಿಮ್ಮ ಕೈಯಲ್ಲಿದೆ.
ಗ್ಯಾರಂಟಿ ಯೋಜನೆ ಸಫಲವಾಗಿರುವುದನ್ನು ಕಂಡು ಬಿಜೆಪಿಗೆ ಹೊಟ್ಟೆಯುರಿ: ಸಚಿವ ಸಂತೋಷ್ ಲಾಡ್
ಮುಂದಿನ ದಿನಗಳಲ್ಲಿ ಕಡೂರು ಕ್ಷೇತ್ರಕ್ಕೆ ನೀರಾವರಿ ಸೇರಿದಂತೆ ಯಾವುದೇ ಯೋಜನೆಗಳನ್ನು ತರಲು ಆನಂದ್ ರವ ರೊಂದಿಗೆ ಕೈಜೋಡಿಸುತ್ತೇವೆ. ದುಡ್ಡು ಕೊಟ್ಟು ಶಿಕ್ಷಣಪಡೆಯಲು ಸಾಧ್ಯವಿಲ್ಲ ಅದು ಗುರುವಿನ ಮೂಲಕ ತಲುಪಬೇಕು ಎಂದು ಶಿಕ್ಷಕರಿಗೆ ಕರೆ ನೀಡಿದರು. ಭೋಜನಶಾಲೆ ಮತ್ತು ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಚಾಲನೆ ನೀಡಿದ ಶಾಸಕ ಕೆ.ಎಸ್ ಆನಂದ್ ಮಾತನಾಡಿ, ಸಚಿವ ಮಧು ಬಂಗಾರಪ್ಪನವರು ಶಾಲೆ ಶತಮಾನ ಸಂಭ್ರಮದಲ್ಲಿ ಭಾಗವಹಿಸಿರುವುದು ನಮ್ಮೆಲ್ಲರ ಅದೃಷ್ಟ. ಸರಕಾರಿ ಶಾಲೆಗಳನ್ನು ಮುಚ್ಚುತ್ತಿರುವ ಸಂದರ್ಭದಲ್ಲಿ ಮರವಂಜಿ ಗ್ರಾಮದವರು ತಮ್ಮೂರಿನ ಐತಿಹಾಸಿಕ ಶಾಲಾ ಕಾರ್ಯಕ್ರಮಕ್ಕೆ ಹೆಚ್ಚು ಉತ್ಸಾಹದಿಂದ ಭಾಗವಹಿಸುತ್ತಿರುವುದು ನನಗೂ ಸಚಿವರಿಗೂ ಸಂತೋಷ ತಂದಿದೆ ಎಂದರು. ಈ ಶಾಲೆಯ ಜ್ಞಾನ ದೇಗುಲ ಇಂತಹ ಶಾಲೆಗಳ ಉಳಿವಿಗೆ ಕೈಜೋಡಿಸಬೇಕು. ಇಂದು ಯಾವುದೇ ಖಾಸಗಿ ಶಾಲೆಗೆ ಕಡಿಮೆ ಇಲ್ಲದಂತೆ ಆಂಗ್ಲ ಮಾಧ್ಯಮ ತೆರೆಯಲಾಗುತ್ತಿದೆ ಬಡವರ ದನಿಯಾಗಿ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಆಗುವ ನಿಟ್ಟಲ್ಲಿ ಮಧು ಬಂಗಾರಪ್ಪ ಬೆಳೆಯುತ್ತಿದ್ದಾರೆ. ನಮ್ಮ ಕ್ಷೇತ್ರದ ಶಿಕ್ಷಣಕ್ಕೆ ಆದ್ಯತೆ ಕೊಡಬೇಕು ಎಂದು ಮನವಿ ಮಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ