₹3000 ಕೋಟಿ ಕಲ್ಯಾಣ ಕರ್ನಾಟಕ ಅನುದಾನ ಅಕ್ರಮ: ತನಿಖೆಗೆ ಆದೇಶ

By Kannadaprabha NewsFirst Published May 31, 2023, 1:37 AM IST
Highlights

ಬಿಜೆಪಿ ಅಧಿಕಾರಾವಧಿಯ ಎಲ್ಲ ಅಕ್ರಮ, ಭ್ರಷ್ಟಾಚಾರಗಳನ್ನು ತನಿಖೆ ನಡೆಸುವುದಾಗಿ ಹೇಳಿರುವ ಕಾಂಗ್ರೆಸ್‌ ಸರ್ಕಾರ ಇದಕ್ಕೆ ಪೂರಕವಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ 3000 ಕೋಟಿ ರು. ಅನುದಾನದ ಬಳಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮವನ್ನು ತನಿಖೆಗೆ ವಹಿಸಿ ಆದೇಶ ನೀಡಿದೆ. 

ಬೆಂಗಳೂರು (ಮೇ.31) : ಬಿಜೆಪಿ ಅಧಿಕಾರಾವಧಿಯ ಎಲ್ಲ ಅಕ್ರಮ, ಭ್ರಷ್ಟಾಚಾರಗಳನ್ನು ತನಿಖೆ ನಡೆಸುವುದಾಗಿ ಹೇಳಿರುವ ಕಾಂಗ್ರೆಸ್‌ ಸರ್ಕಾರ ಇದಕ್ಕೆ ಪೂರಕವಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ 3000 ಕೋಟಿ ರು. ಅನುದಾನದ ಬಳಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮವನ್ನು ತನಿಖೆಗೆ ವಹಿಸಿ ಆದೇಶ ನೀಡಿದೆ.

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ(Welfare Karnataka Development Board)ಗೆ ಈ ಹಿಂದೆ ಬಿಡುಗಡೆ ಮಾಡಿರುವ ಅನುದಾನದಲ್ಲಿ ಭಾರೀ ದುರ್ಬಳಕೆ ಆಗಿರುವ ಆರೋಪಗಳಿದ್ದು, ಆ ಬಗ್ಗೆ ತನಿಖೆ ನಡೆಸುವಂತೆ ಕೋರಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ(Priyank kharge) ಅವರು ಬರೆದಿರುವ ಪತ್ರದ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಆದೇಶ ಮಾಡಿದ್ದಾರೆ.

ಲೂಟಿಯೇ ಮೋದಿ ಸರ್ಕಾರದ 9 ವರ್ಷದ ಸಾಧನೆ; ಜಿಎಸ್‌ಟಿಯಿಂದ ಜನರ ಜೀವನ ಕಷ್ಟವಾಗಿಸಿದೆ: ಮಲ್ಲಿಕಾರ್ಜುನ ಖರ್ಗೆ

ಏನಿದು ಪ್ರಕರಣ?

ಬಿಜೆಪಿ ಅಧಿಕಾರಾವಧಿಯಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಸರ್ಕಾರ 3000 ಕೋಟಿ ರು. ಅನುದಾನ ನೀಡಿದೆ. ಈ ಅನುದಾನ ಬಳಕೆಯಲ್ಲಿ ಲೋಪವಾಗಿದೆ ಎಂದು ಸಿಎಜಿ ವರದಿ ನೀಡಿದೆ. ದೇಸಿ ಹಸು ಸಾಕಣೆ, ಶಾಲೆಗಳ ಅಭಿವೃದ್ಧಿ, ಹೊಲಿಗೆ ತರಬೇತಿ, ಕೋವಿಡ್‌ನಿಂದ ಮೃತ ಶಿಕ್ಷಕರಿಗೆ ಪರಿಹಾರ ಹೀಗೆ ಬೇರೆ ಬೇರೆ ಕಾರಣಗಳಿಗೆ ಅಕ್ರಮವಾಗಿ ವೆಚ್ಚ ಮಾಡಿರುವ ಬಗ್ಗೆ ದೂರುಗಳಿವೆ. ಅದರ ತನಿಖೆಗೆ ಸರ್ಕಾರ ಆದೇಶಿಸಿದೆ.

ಸಿಎಂಗೆ ಪ್ರಿಯಾಂಕ್‌ ಪತ್ರ:

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಸಂಘದಿಂದ ಮಂಡಳಿಯ ಅನುದಾನ ದುರುಪಯೋಗ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸುವಂತೆ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಸಿದ್ದರಾಮಯ್ಯನವರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಸಿಎಂ ವಿವೇಚನಾ ಕೋಟಾದಲ್ಲಿ ಅಭಿವೃದ್ಧಿ ಮಂಡಳಿ ಸಿದ್ಧಪಡಿಸಿದ ಕ್ರಿಯಾ ಯೋಜನೆಯಲ್ಲಿ ಅಕ್ರಮ ಆಗಿದೆ. ಅಭಿವೃದ್ಧಿ ಮಂಡಳಿಯ ಕಳಪೆ ಕಾಮಗಾರಿ ಬಗ್ಗೆ ಸಿಎಜಿ ವರದಿ ನೀಡಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ತನಿಖೆ ಮಾಡುವ ಅಗತ್ಯವಿದೆ ಎಂದು ಅವರು ತಮ್ಮ ಪತ್ರದಲ್ಲಿ ಮನವಿ ಮಾಡಿದ್ದರು.

ಕಲಬುರಗಿ: ಡಾ. ಶರಣಪ್ರಕಾಶ ಪಾಟೀಲರಿಗೆ ಮತ್ತೆ ಮಂತ್ರಿ ಭಾಗ್ಯ!

ಅಧಿಕಾರ ವ್ಯಾಪ್ತಿ ಮೀರಿ 327 ಕೋಟಿ ರು. ದೇಶಿ ಹಸುಗಳ ಸಾಕಾಣಿಕೆಗೆ ಪ್ರೋತ್ಸಾಹ ಧನ ನೀಡಿರುವ ಮಾಹಿತಿ ಇದೆ. ಈಗಾಗಲೇ ಹಸು ಹೊಂದಿರುವವರಿಗೆ ಅನುದಾನ ನೀಡಿದಂತೆ ದಾಖಲೆ ಸೃಷ್ಟಿಸಿ ಅಕ್ರಮ ಎಸಗಿರುವ ಆರೋಪಗಳಿವೆ. ಅಧ್ಯಕ್ಷರು, ಕಾರ್ಯದರ್ಶಿಗಳಿಗೆ ಅಧಿಕಾರ ಇಲ್ಲದಿದ್ದರೂ ಖಾಸಗಿ ಅನುದಾನಿತ ಶಾಲೆಗಳಿಗೆ 327 ಕೋಟಿ ರು. ಮಂಜೂರು ಮಾಡಲಾಗಿದೆ. ಅಧಿಕಾರ ವ್ಯಾಪ್ತಿ ಮೀರಿ ಹೊಲಿಗೆ ತರಬೇತಿಗೆ 2 ಕೋಟಿ ರು. ವೆಚ್ಚ ಮಾಡಲಾಗಿದೆ. ಕೊರೋನಾದಿಂದ ಮೃತಪಟ್ಟಖಾಸಗಿ ಶಿಕ್ಷಕರಿಗೆ ಸರ್ಕಾರದ ಅನುಮೋದನೆ ಇಲ್ಲದೆ 50 ಸಾವಿರ ರು. ಪರಿಹಾರ ನೀಡಲಾಗಿದೆ. ಲೋಕೋಪಯೋಗಿ ಬಾಡಿಗೆ ಕಟ್ಟಡಗಳಿಗೆ ನಿಯಮ ಬಾಹಿರವಾಗಿ ಕೋಟ್ಯಂತರ ರು. ಖರ್ಚು ಮಾಡಲಾಗಿದೆ. ಒಂದು ಜಿಲ್ಲೆಗೆ ಒದಗಿಸುವ ಅನುದಾನವನ್ನು ಸೇಡಂ ತಾಲೂಕು ಒಂದಕ್ಕೆ ಅಕ್ರಮವಾಗಿ ಕೋಟ್ಯಂತರ ರು. ಬಳಸಲಾಗಿದೆ. ಮೇಲ್ಕಂಡ ವಿಚಾರಗಳಿಗೆ ಸೂಕ್ತ ತನಿಖೆಗೆ ಆದೇಶಿಸಬೇಕು ಎಂದು ಕೋರಿದ್ದರು.

click me!