
ಬೆಂಗಳೂರು, (ಆ.19): ಕೋವಿಡ್-19 ನಂತರ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ವಿನ್ಯಾಸ ಮತ್ತು ಉತ್ಪಾದನಾ (ಇಎಸ್ಡಿಎಂ) ಕ್ಷೇತ್ರಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮಹತ್ವದ ಕ್ರಮಗಳನ್ನು ಕೈಗೊಂಡಿರುವ ರಾಜ್ಯ ಸರ್ಕಾರ, ಈ ಕ್ಷೇತ್ರದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಖರೀದಿಸಲಾಗುವ ಭೂಮಿಗೆ ಶೇ 25ರಷ್ಟು ನೇರ ಸಬ್ಸಿಡಿ ನೀಡುವುದೂ ಸೇರಿದಂತೆ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದೆ.
ಭಾರತೀಯ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಸಂಘ (ಐಇಎಸ್ಎ) ಬುಧವಾರ ಹಮ್ಮಿಕೊಂಡಿದ್ದ ʼವಿಷನ್ ಶೃಂಗಸಭೆ- 2020 ಅನ್ನು ಉದ್ದೇಶಿಸಿ ಆನ್ಲೈನ್ನಲ್ಲಿ ಮುಖ್ಯ ಭಾಷಣ ಮಾಡಿದ ಎಲೆಕ್ಟ್ರಾನಿಕ್ಸ್, ಐಟಿ- ಬಿಟಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ, ಇಡೀ ದೇಶದಲ್ಲಿ ಇಂಥ ಕ್ರಮ ಕೈಗೊಂಡಿರುವ ಏಕೈಕ ಹಾಗೂ ಮೊದಲ ರಾಜ್ಯ ಕರ್ನಾಟಕವಾಗಿದೆ. ಈ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಹಾಗೂ ಹೆಚ್ಚೆಚ್ಚು ಉದ್ಯೋಗಾವಕಾಶ ಸೃಷ್ಟಿ ಮಾಡಲು ಇಂಥ ದಿಟ್ಟಹೆಜ್ಜೆ ಇಡಲಾಗಿದೆ ಎಂದರು.
ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಖರೀದಿಸುವ ಜಮೀನುಗಳಿಗೆ ಈ ರಿಯಾಯಿತಿ ಅನ್ವಯ ಆಗುವುದಿಲ್ಲ. ಉಳಿದ ಯಾವುದೇ ಜಿಲ್ಲೆಗಳಲ್ಲಿ 50 ಎಕರೆವರೆಗೆ ಭೂಮಿ ಖರೀದಿ ಮಾಡಿ ಕೈಗಾರಿಕೆ ಸ್ಥಾಪಿಸಿದರೂ ಈ ಸೌಲಭ್ಯ ದೊರೆಯಲಿದೆ. ಕೆಐಎಡಿಬಿ/ಕೆಎಸ್ಎಸ್ಐಡಿಸಿ ಯಿಂದ ಖರೀದಿಸಿದ ಭೂಮಿಯ ಮಾರ್ಗದರ್ಶಿ ದರ ಅಥವಾ ಭೂಮಿಯ ಖರೀದಿ ದರದ ಶೇ 25ರಷ್ಟು ರಿಯಾಯಿತಿ ಸಿಗಲಿದೆ ಎಂದು ವಿವರಿಸಿದರು.
ಕೇಂದ್ರಕ್ಕೆ ಮನಸೋತ ಸ್ಯಾಮ್ಸಂಗ್; ವಿಯೆಟ್ನಾಂನಿಂದ ಇಂಡಿಯಾ ಕಡೆಗೆ 3 ಲಕ್ಷ ಕೋಟಿ ರೂ. ಹೆಜ್ಜೆ
ಇದಲ್ಲದೆ, ಕೈಗಾರಿಕಾ ಘಟಕ ಸ್ಥಾಪನೆ ಮತ್ತು ಯಂತ್ರಗಳ ಖರೀದಿಗೆ ಹೂಡಿಕೆ ಮಾಡುವ ಒಟ್ಟು ಹಣದಲ್ಲಿ ಶೇ 20ರಷ್ಟು ರಿಯಾಯಿತಿ ನೀಡುವುದಾಗಿಯೂ ಅವರು ಘೋಷಿಸಿದರು.
ಖರೀದಿ ಮಾಡಲಾದ ಭೂಮಿಯ ನೋಂದಣಿಗೆ ಖರ್ಚು ಮಾಡಿದ ಮುದ್ರಾಂಕ ಮತ್ತು ನೋಂದಣಿ ಶುಲ್ಕವನ್ನೂ ಸರ್ಕಾರವೇ ಪೂರ್ಣ ಮರುಪಾವತಿಸಲಿದೆ. ಭೂ ಪರಿವರ್ತನೆಗೆ ಖರ್ಚು ಮಾಡಿದ ಶುಲ್ಕವನ್ನೂ ಮರುಪಾವತಿ ಮಾಡಲಾಗುವುದು. ಐದು ವರ್ಷಗಳ ಕಾಲ ಪ್ರತಿ ಯೂನಿಟ್ಗೆ ಒಂದು ರೂಪಾಯಿ ಸಬ್ಸಿಡಿ ನೀಡಲಾಗುವುದು. ಜತೆಗೆ ಬಳಕೆ ಮಾಡುವ ವಿದ್ಯುತ್ ಮೇಲಿನ ತೆರಿಗೆಯನ್ನು ಐದು ವರ್ಷಗಳವರೆಗೆ ಸಂಪೂರ್ಣ ರಿಯಾಯಿತಿ ಕೊಡಲಾಗುವುದು ಹಾಗೂ ಒಟ್ಟಾರೆ ವಹಿವಾಟಿನ ಮೇಲೆ ಶೇ 1ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಡಾ. ಅಶ್ವತ್ಥನಾರಾಯಣ ಹೇಳಿದರು.
ಹೀಗೆ ವಿನಾಯಿತಿಗಳನ್ನು ಉಪ ಮುಖ್ಯಮಂತ್ರಿ ಪ್ರಕಟಿಸುತ್ತಿದ್ದ ಹಾಗೆಯೇ ವೆಬಿನಾರ್ನಲ್ಲಿ ಭಾಗವಹಿಸಿದ್ದ ಉದ್ಯಮಿಗಳು ಸಂತಸ ವ್ಯಕ್ತಪಡಿಸಿದರು. ಕರ್ನಾಟಕದಲ್ಲಿ ಹೆಚ್ಚೆಚ್ಚು ಬಂಡವಾಳ ಹೂಡುವ ಭರವಸೆ ನೀಡಿದರು.
ಈಗಾಗಲೇ ಈ ಎಲ್ಲ ಪ್ರಸ್ತಾವನೆಗಳಿಗೆ ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಗುರುವಾರ ಸಂಪುಟ ಸಭೆ ನಡೆಯಲಿದ್ದು ಇವೆಲ್ಲಕ್ಕೂ ಅನುಮೋದನೆ ಪಡೆಯಲಾಗುವುದು ಎಂದು ಹೇಳಿದರು.
ಯಾವ ಕ್ಷೇತ್ರಕ್ಕೆ ಅನುಕೂಲ?:
ಎಲೆಕ್ಟ್ರಾನಿಕ್ ಉತ್ಪನ್ನಗಳ ಉತ್ಪಾದನೆ ಮತ್ತು ವಿನ್ಯಾಸ, ಸೆಮಿಕಂಡಕ್ಟರ್ಗಳ ವಿನ್ಯಾಸ ಮತ್ತು ತಯಾರಿ, ಎಲೆಕ್ಟ್ರಾನಿಕ್ ಉತ್ಪಾದನಾ ಸೇವೆ, ಸೋಲಾರ್ ಸೆಲ್ಗಳ ಉತ್ಪಾದನೆ, ಎಲ್ಇಡಿಗಳ ತಯಾರಿ, ಜತೆಗೆ ರಾಷ್ಟ್ರೀಯ ಎಲೆಕ್ಟ್ರಾನಿಕ್ಸ್ ನೀತಿಯ ಅಡಿಯಲ್ಲಿ ಯಾವುದೇ ಉತ್ಪನ್ನವನ್ನು ತಯಾರಿಸಿದರೆ ಅಥವಾ ವಿನ್ಯಾಸ ಮಾಡಿದರೆ ಮೇಲೆ ತಿಳಿಸಿದ ಎಲ್ಲ ಸೌಲಭ್ಯಗಳು ಸಿಗಲಿವೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.
ಎಲೆಕ್ಟ್ರಾನಿಕ್ ಉತ್ಪನ್ನಗಳ ಉತ್ಪಾದನೆ ಮತ್ತು ವಿನ್ಯಾಸಕ್ಕೆ ಮೂರು ಜಿಲ್ಲೆಗಳಲ್ಲಿ ಕ್ಲಸ್ಟರ್ಗಳನ್ನು ಸ್ಥಾಪಿಸಲಾಗಿದೆ. ಅದರಲ್ಲಿ ಚಿಕ್ಕಬಳ್ಳಾಪುರದಲ್ಲಿ ಮೊಬೈಲ್ ಮತ್ತು ಎಲೆಕ್ಟ್ರಾನಿಕ್ಸ್, ಮೈಸೂರು ಜಿಲ್ಲೆಯಲ್ಲಿ ಪಿಸಿಬಿಎ ಮತ್ತು ಐಸಿಬಿ ಹಾಗೂ ಚಿತ್ರದುರ್ಗ ಜಿಲ್ಲೆಯಲ್ಲಿ ಎಲ್ಇಡಿ ದೀಪಗಳನ್ನು ತಯಾರಿ ಮಾಡಲಾಗುತ್ತಿದೆ. ಪ್ರತಿ ಜಿಲ್ಲೆಯಲ್ಲೂ 10 ಸಾವಿರ ಉದ್ಯೋಗ ಸೃಷ್ಟಿ ಹಾಗೂ 725 ದಶಲಕ್ಷ ಡಾಲರ್ನಷ್ಟು ಬಂಡವಾಳ ಆಕರ್ಷಿಸಲಾಗುತ್ತಿದೆ, 20 ಸಾವಿರಕ್ಕೂ ಹೆಚ್ಚು ಯುವಕರಿಗೆ ಕೌಶಲ ತರಬೇತಿ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು
ಡಿಜಿಟಲ್ ಎಕಾನಮಿ ಮಿಷನ್:
ರಾಜ್ಯದಲ್ಲಿ ಡಿಜಿಟಲ್ ಆರ್ಥಿಕತೆಯನ್ನು ಉತ್ತೇಜಿಸಲು ಹಾಗೂ ಹೂಡಿಕೆಯನ್ನು ಆಕರ್ಷಿಸುವ ಉದ್ದೇಶದಿಂದ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಅನ್ನು ಸ್ಥಾಪನೆ ಮಾಡಲಾಗುತ್ತಿದೆ. ಈ ಕ್ಷೇತ್ರದಲ್ಲಿ ಹೊಸದಾಗಿ ಬರುವ ಕಂಪನಿಗಳಿಗೆ ಸೇವೆಯನ್ನು ಒದಗಿಸುವ ಹಾಗೂ ನೀತಿನಿರೂಪಣೆ ಮಾಡುವ ಕೆಲಸವನ್ನು ಈ ಸಂಸ್ಥೆ ಮಾಡಲಿದೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಒಟ್ಟು 13 ಜಿಲ್ಲೆಗಳಲ್ಲಿ 25 ಕೈಗಾರಿಕಾ ಪ್ರದೇಶಗಳಿದ್ದು, ಇದುವರೆಗೂ 7 ಸಾವಿರ ಎಕರೆಯಷ್ಟು ಭೂಮಿಯನ್ನು ನೀಡಲಾಗಿದೆ. ಈ ಪೈಕಿ ಎಲೆಕ್ಟ್ರಾನಿಕ್ ಉತ್ಪನ್ನಗಳ ಉತ್ಪಾದನೆ ಮತ್ತು ವಿನ್ಯಾಸ ಕ್ಷೇತ್ರಕ್ಕೆ 7 ಎಸ್ಇಝೆಡ್ಗಳಿದ್ದು, ಒಟ್ಟು 800 ಎಕರೆ ಭೂಮಿ ಇದೆ ಎಂದು ಡಿಸಿಎಂ ವಿವರ ನೀಡಿದರು.
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ