ಹಾವೇರಿ ಸಾಹಿತ್ಯ ಸಮ್ಮೇಳನಕ್ಕೆ 25 ಕೋಟಿ ರೂ. ಖರ್ಚು: ಹಿಂದಿನ ಸಮ್ಮೇಳನಕ್ಕಿಂತ ದುಪ್ಪಟ್ಟಾದ ವೆಚ್ಚ.!

Published : Feb 28, 2023, 03:06 PM IST
ಹಾವೇರಿ ಸಾಹಿತ್ಯ ಸಮ್ಮೇಳನಕ್ಕೆ 25 ಕೋಟಿ ರೂ. ಖರ್ಚು: ಹಿಂದಿನ ಸಮ್ಮೇಳನಕ್ಕಿಂತ ದುಪ್ಪಟ್ಟಾದ ವೆಚ್ಚ.!

ಸಾರಾಂಶ

ಹಾವೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರೋಬ್ಬರಿ 25 ಕೋಟಿ ರೂ. ಖರ್ಚು ಮಾಡಲಾಗಿದೆ. ಸರ್ಕಾರ ನೀಡಿದ್ದ 20 ಕೋಟಿ ರೂ. ಅನುದಾನಕ್ಕಿಂತ ಹೆಚ್ಚುವರಿಯಾಗಿ 5 ಕೋಟಿ ಖರ್ಚಾಗಿದೆ ಎಂದು ಉಸ್ತುವಾರಿ ಸಚಿವ ಶಿವರಾಂ ಹೆಬ್ಬಾರ್‌ ಹೇಳಿದ್ದಾರೆ.

ವರದಿ- ಪವನ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್ 

ಹಾವೇರಿ (ಫೆ.28): ಹಾವೇರಿ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಬೇಕು ಎಂಬ ಹಲವು ವರ್ಷಗಳ ಬೇಡಿಕೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಡೇರಿಸಿದ್ದರು. ಸಿಎಂ ತವರು ಜಿಲ್ಲೆಯಲ್ಲಿ ಅಕ್ಷರ ಜಾತ್ರೆಗೆ 20 ಕೋಟಿರೂ. ಅನುದಾನ ಕೊಟ್ಟಿದ್ದರು. ಆದರೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಂ ಹೆಬ್ಬಾರ್‌ ಸಮ್ಮೇಳನ ನಡೆಸೋಕೆ 25 ಕೋಟಿ ಖರ್ಚಾಗಿದೆ ಎಂದು ಹೇಳಿದ್ದಾರೆ.

ಹಾವೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಂ ಹೆಬ್ಬಾರ್‌ ಅವರು. ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ ನೀಡಿದ್ದ ಅನುದಾನಕ್ಕಿಂತ 5 ಕೋಟಿ ರೂ. ಹೆಚ್ಚುವರಿಯಾಗಿ ಖರ್ಚಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ, ಇದು ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲೇ ದಾಖಲೆಯ ವೆಚ್ಚವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ತವರು ಜಿಲ್ಲೆ ಹಾವೇರಿಯಲ್ಲಿ ಅದ್ದೂರಿಯಾಗಿ ಸಮ್ಮೇಳನ ನಡೆಯಲಿ ಎಂಬ ಕಾರಣಕ್ಕೆ 20 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದರು. ಇದು ಸಾಹಿತ್ಯ ಸಮ್ಮೇಳನಗಳ ಇತಿಹಾಸದಲ್ಲಿಯೇ  ಗರಿಷ್ಟ ಅನುದಾನ ಆಗಿತ್ತು. ಆದರೆ, ಈ ಮೊತ್ತವನ್ನೂ ಮೀರಿ 5 ಕೋಟಿ ಹೆಚ್ಚುವರಿ ಹಣ ಖರ್ಚು ಮಾಡಲಾಗಿದೆ.

ಹಾವೇರಿ: ಆನ್‌ಲೈನ್‌ ಗೇಮ್ ಆಡಲು ಬ್ಯಾಂಕ್ ಹಣ ದುರ್ಬಳಕೆ ಮಾಡಿಕೊಂಡ ಡೆಪ್ಯುಟಿ ಮ್ಯಾನೇಜರ್..!

ಹಿಂದಿನ ಕಲಬುರಗಿ ಸಮ್ಮೇಳನಕ್ಕೆ 14 ಕೋಟಿ ರೂ. ಖರ್ಚು: ಮೈಸೂರಿನಲ್ಲಿ ನಡೆದಿದ್ದ 83 ನೇ ಸಾಹಿತ್ಯ ಸಮ್ಮೇಳನಕ್ಕೆ 8 ಕೋಟಿ ಖರ್ಚು ಆಗಿತ್ತು. ಧಾರವಾಡದಲ್ಲಿ ನಡೆದಿದ್ದ 84ನೇ ಸಾಹಿತ್ಯ ಸಮ್ಮೇಳನಕ್ಕೆ 10 ಕೋಟಿ ಖರ್ಚಾಗಿದೆ. ಕಲಬುರಗಿಯಲ್ಲಿ ನಡೆದಿದ್ದ 85ನೇ ಸಾಹಿತ್ಯ ಸಮ್ಮೇಳನಕ್ಕೆ 14 ಕೋಟಿ ಖರ್ಚು ಮಾಡಲಾಗಿತ್ತು. ಆದರೆ, ಮುಖ್ಯಮಂತ್ರಿ ತವರು ಜಿಲ್ಲೆ ಹಾವೇರಿಯಲ್ಲಿ ನಡೆದ ಅಕ್ಷರ ಜಾತ್ರೆಗೆ ಖರ್ಚಾಗಿದ್ದು ಬರೋಬ್ಬರಿ 25 ಕೋಟಿ ರೂಪಾಯಿ ಎಂಬುದನ್ನು ಕೇಳಿ ಎಲ್ಲರೂ ಬಾಯಿ ಮೇಲೆ ಬೆರಳಿಟ್ಟುಕೊಂಡು ಆಶ್ವರ್ಯದಿಂದ ನೋಡುತ್ತಿದ್ದಾರೆ. 

ಸಚಿವರು ಕೊಟ್ಟ ಸಮ್ಮೇಳನದ ಖರ್ಚಿನ ವಿವರ (ರೂ.ಗಳಲ್ಲಿ)

  • ವೇದಿಕೆ ನಿರ್ಮಾಣ    5 ಕೋಟಿ
  • ವಸತಿ ವ್ಯವಸ್ಥೆ        2 ಕೋಟಿ
  • ಸಾರಿಗೆ ವ್ಯವಸ್ಥೆ        89 ಲಕ್ಷ
  • ವಿದ್ಯುತ್‌ ಅಲಂಕಾರ    33 ಲಕ್ಷ
  • ಕನ್ನಡ ರಥ ಸಂಚಾರ    25 ಲಕ್ಷ
  • ಸಾಂಸ್ಕೃತಿಕ ತಂಡಗಳಿಗೆ     62 ಲಕ್ಷ
  • ಅಧ್ಯಕ್ಷರ ಮೆರವಣಿಗೆಗೆ    37 ಲಕ್ಷ
  • ಊಟ, ತಿಂಡಿ ಖರ್ಚು    8 ಕೋಟಿ

ಊಟಕ್ಕೆ ಹೆಚ್ಚುವರಿ 3 ಕೋಟಿ ರೂ. ಖರ್ಚು: ಕೆಲ ಸಮಿತಿಗಳು ಭಾರಿ ಅಚ್ಚುಕಟ್ಟುತನ ಪ್ರದರ್ಶನ ಮಾಡಿದಂತೆ ತೋರುತ್ತದೆ. ನಿಗದಿ ಮಾಡಿದ್ದ ಅನುದಾನಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಖರ್ಚು ಮಾಡಿದಂತಿದೆ. ಆಹಾರ ಸಮಿತಿಗೆ  5 ಕೋಟಿ ಅನುದಾನ ನಿಗದಿಪಡಿಸಲಾಗಿತ್ತು. ಆದರೆ, ಊಟ ತಿಂಡಿಗೆ 8 ಕೋಟಿ ಖರ್ಚಾಗಿದೆ ಅಂತ ಸಮೀತಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದೆ. ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಜನ ಸಮ್ಮೇಳನಕ್ಕೆ ಬಂದಿದ್ದರು. ಹಿಂಗಾಗಿ 3 ಕೋಟಿ ಹೆಚ್ಚುವರಿ ಖರ್ಚಾಗಿದೆ ಎಂದು ಜಿಲ್ಲಾಡಳಿತ ಹೇಳುತ್ತಿದೆ.

Haveri: ಮದುವೆ ಸಾಲ ತೀರಿಸಲಾಗದೇ ತಂದೆ- ತಾಯಿ ನೇಣಿಗೆ ಶರಣು: ಮನನೊಂದು ಮದುವೆಯಾದ ಮಗಳೂ ಆತ್ಮಹತ್ಯೆ

2.5 ಕೋಟಿ ರೂ. ಜಿಎಸ್‌ಟಿ ತೆರಿಗೆ: ಇದರಲ್ಲಿ ಕನ್ನಡ ಕನ್ನಡ ಎನ್ನುತ್ತಲೇ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು 75 ಲಕ್ಷ ಹೆಚ್ಚುವರಿ ಅನುದಾನ ಕೊಡಿ ಅಂತಿದೆ. ಸಾಂಸ್ಕೃತಿಕ ತಂಡಗಳ ಆಯ್ಕೆ ಸಮಿತಿಗೆ ಹೆಚ್ಚುವರಿಯಾಗಿ 20 ಲಕ್ಷ, ನೀರು ಪೂರೈಕೆಗೆ ಹೆಚ್ಚುವರಿಯಾಗಿ 16 ಲಕ್ಷ ಕೊಟ್ಟುಬಿಡಿ ಎಂದು ಅಧಿಕಾರಿಗಳು ಮತ್ತು ಸಮಿತಿಗಳ ಸದಸ್ಯರು ಹೇಳುತ್ತಿದ್ದಾರೆ. ವಿವಿಧ ಸಮಿತಿಗಳಿಗೆ ಹಂಚಿಕೆಯಾಗಿದ್ದ ಅನುದಾನದ ಮೇಲೆ ಶೇ5 ರಿಂದ ಶೇ.18 ರವರೆಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಹಾಕಲಾಗಿದೆ. ಬರೋಬ್ಬರಿ 2.55 ಕೋಟಿ ಜಿಎಸ್‌ಟಿಗೆ ಖರ್ಚಾಗಿದೆ. ಎಂಸಿಎ ಸೇವಾ ಶುಲ್ಕ (ಶೇ 5ರಂತೆ) ಒಟ್ಟು 92 ಲಕ್ಷ ರೂ. ತಗುಲಿದೆ. 

ಸರ್ಕಾರಿ ನೌಕರರ ದಿನದ ವೇತನ ಸಮ್ಮೇಳನಕ್ಕೆ ಬಂದಿಲ್ಲ: ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 20 ಸಾವಿರ ಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸಿ, 1 ಕೋಟಿ ರೂ. ಪ್ರತಿನಿಧಿ ಶುಲ್ಕದ ಆದಾಯ ನಿರೀಕ್ಷಿಸಲಾಗಿತ್ತು. ಆನ್‌ಲೈನ್‌ ನೋಂದಣಿಯ ತಾಂತ್ರಿಕ ತೊಡಕು ಮತ್ತು ಕಸಾಪ ಸದಸ್ಯತ್ವ ಕಡ್ಡಾಯ ನಿಯಮಗಳಿಂದ ಕೇವಲ 10 ಸಾವಿರ ಪ್ರತಿನಿಧಿಗಳಷ್ಟೇ ಬಂದರು. ಇದರಿಂದ 50 ಲಕ್ಷ ಆದಾಯ ತಗ್ಗಿತು. ಸರ್ಕಾರಿ ನೌಕರರ ಒಂದು ದಿನದ ವೇತನದಿಂದ ಅಂದಾಜು 1.40 ಕೋಟಿ ರೂ. ಆದಾಯ ಬರಬೇಕಿತ್ತು. ಆದರೆ, ಬಂದದ್ದು 20 ಲಕ್ಷ ಮಾತ್ರ ಎಂದು ಜಿಲ್ಲಾಡಳಿತ ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡೇಂಜರ್ ಡಿಸೆಂಬರ್: ಧಾರವಾಡದಲ್ಲಿ ಧಗಧಗನೇ ಹೊತ್ತಿ ಉರಿದ ಕಾರು, ಇಬ್ಬರು ಪ್ರಾಣಾಪಾಯದಿಂದ ಪಾರು!
ಗುಂಡ್ಲುಪೇಟೆಯಲ್ಲಿ ಹನುಮ ಭಕ್ತರ ಆಕ್ರೋಶ; ಡಿಜೆ ವಶಕ್ಕೆ ಪಡೆದ ಪೊಲೀಸರ ವಿರುದ್ಧ ಭಾರಿ ಪ್ರತಿಭಟನೆ!