ಕರ್ನಾಟಕದಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಹತೆ ಇರುವವರು 4,779 ಅಭ್ಯರ್ಥಿಗಳು

By Suvarna NewsFirst Published Nov 3, 2021, 7:08 PM IST
Highlights

* ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಹತೆ ಇರುವವರು 4,779 ಅಭ್ಯರ್ಥಿಗಳು
* ಮೈಸೂರು ವಿವಿಯ ಉಪಕುಲಪತಿ ಜಿ ಹೇಮಂತ ಕುಮಾರ್ ಮಾಹಿತಿ
* ಮುಂದಿನ ಕೆ-ಸೆಟ್ ಪರೀಕ್ಷೆಯನ್ನು ಮುಂದಿನ ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ನಡೆಸುವ ಸಾಧ್ಯತೆ

ಮೈಸೂರು, (ನ.03): ರಾಜ್ಯದಲ್ಲಿ ಸಹಾಯಕ ಪ್ರಾಧ್ಯಾಪಕರ (Assistant Professor) ಹುದ್ದೆಗಳಿಗೆ (Jobs) 4,779 ಅರ್ಹ ಅಭ್ಯರ್ಥಿಗಳಿದ್ದಾರೆ ಎಂದು ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (ಕೆ-ಸೆಟ್) ನ್ನು ನಡೆಸಲು ನೋಡಲ್ ಅಧಿಕಾರ ಹೊಂದಿರುವ ಮೈಸೂರು ವಿಶ್ವವಿದ್ಯಾಲಯ ಮಾಹಿತಿ ನೀಡಿದೆ.

ಮೈಸೂರು ವಿಶ್ವವಿದ್ಯಾಲಯದ (Mysuru University) ಉಪಕುಲಪತಿ ಜಿ ಹೇಮಂತ ಕುಮಾರ್ ಮಾಹಿತಿ ನೀಡಿದ್ದು, ಯುಜಿಸಿ ಮಾರ್ಗಸೂಚಿಯ ಪ್ರಕಾರ ಮಾಡರೇಶನ್ ಮತ್ತು ಸ್ಕ್ರೀನಿಂಗ್ ಸಮಿತಿಯ ಸಭೆ ನಡೆಸಿ ಕನಿಷ್ಟ ಅಂಕಗಳ ಅರ್ಹತೆ (cut-off marks) ನ್ನು ನಿಗದಿಪಡಿಸಲಾಗಿದೆ ಎಂದು ಹೇಳಿದರು.

ಶಿಕ್ಷಕರ ಅರ್ಹತಾ ಪರೀಕ್ಷೆ ಅರ್ಹತಾ ಅಂಕ ಕಡಿಮೆಗೆ ಸರ್ಕಾರ ನಕಾರ

41 ವಿಷಯಗಳಿಗೆ 11 ನೋಡಲ್ ಕೇಂದ್ರಗಳಲ್ಲಿ ಜು.25 ರಂದು ಕೆ-ಸೆಟ್ ಪರೀಕ್ಷೆ(KSET Exam) ನಡೆದಿತ್ತು. 83,907  ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಸಿದ್ದರು. ಆದರೆ 69,857 ಮಂದಿ ಮಾತ್ರ ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ ಶೇ. 6.84 ರಷ್ಟು ಅಂದರೆ 4,779 ಮಂದಿ ಮಾತ್ರ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಹತೆ ಪಡೆದಿದ್ದಾರೆ. 

2,470 ಪುರುಷ ಅಭ್ಯರ್ಥಿಗಳಿದ್ದರೆ, 2,309 ಮಂದಿ ಮಹಿಳಾ ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಮೈಸೂರು ಕೇಂದ್ರ 1,059 ಅಭ್ಯರ್ಥಿಗಳೊಂದಿಗೆ ಅಗ್ರ ಶ್ರೇಣಿಯಲ್ಲಿದೆ. ನಂತರದ ಸ್ಥಾನದಲ್ಲಿ 985 ಅಭ್ಯರ್ಥಿಗಳು ಬೆಂಗಳೂರು ಕೇಂದ್ರದವರಾಗಿದ್ದಾರೆ. 

ಮುಂದಿನ ಕೆ-ಸೆಟ್ ಪರೀಕ್ಷೆಯನ್ನು ಮುಂದಿನ ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ನಡೆಸುವ ಸಾಧ್ಯತೆ ಇದೆ ಎಂದು ಕೆ-ಸೆಟ್ ಪರೀಕ್ಷೆಯ ಸಂಯೋಜಕರಾದ ಪ್ರೊಫೆಸರ್ ಹೆಚ್ ರಾಜಶೇಖರ್ ತಿಳಿಸಿದ್ದಾರೆ.

ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅಧಿಸೂಚನೆ
ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ ವಿವಿಧ ವಿಷಯಗಳ 1242 ಸಹಾಯಕ ಪ್ರಾಧ್ಯಾಪಕ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸರ್ಕಾರ ಅಧಿಸೂಚನೆ ಹೊರಡಿಸಿದೆ.

2015ನೇ ಸಾಲಿನ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಅರ್ಹ ಅಭ್ಯರ್ಥಿಗಳಿಲ್ಲದೆ ಭರ್ತಿಯಾಗದೆ ಉಳಿದಿದ್ದ 145 ಹುದ್ದೆಗಳು, ಪ್ರಸ್ತುತ ಭರ್ತಿ ಮಾಡಬೇಕಿರುವ 1097 ಹುದ್ದೆಗಳು ಸೇರಿ ಒಟ್ಟು 1242 ಹುದ್ದೆಗಳು ಖಾಲಿ ಇದ್ದು, ಅವುಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವನ್ನು ಆಯ್ಕೆ ಪ್ರಾಧಿಕಾರವನ್ನಾಗಿ ಆಯ್ಕೆ ಮಾಡಲಾಗಿದೆ.

ಪ್ರಾಧಿಕಾರವು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಮೆರಿಟ್‌ ಆಧಾರದ ಮೇಲೆ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲು ಸೂಚಿಸಿದೆ. ಯುಜಿಸಿ ವೇತನ ಶ್ರೇಣಿ 57700 ರು.- 1,82,400 ರು. ಅಡಿ ನೇರ ನೇಮಕಾತಿ ಮಾಡಲು ಸೂಚಿಸಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಸ್ಥಳೀಯ ವೃಂದ ಹಾಗೂ ಮಿಕ್ಕುಳಿದ ವೃಂದವಾರು ಹುದ್ದೆಗಳ ವಿವರಗಳನ್ನು ಉನ್ನತ ಶಿಕ್ಷಣ ಇಲಾಖೆ ಅಧಿಸೂಚನೆಯಲ್ಲಿ ಪ್ರಕಟಿಸಿದೆ.

ಶಿಕ್ಷಕರ ಅರ್ಹತಾ ಪರೀಕ್ಷೆ ಅರ್ಹತಾ ಅಂಕ ಕಡಿಮೆಗೆ ಸರ್ಕಾರ ನಕಾರ
ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಲು ನಡೆಸುವ ಅರ್ಹತಾ ಪರೀಕ್ಷೆಯಲ್ಲಿ ನಿಗದಿಪಡಿಸಿರುವ ಶೇಕಡಾವಾರು ಅರ್ಹತಾ ಅಂಕಗಳನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರ ನಿರಾಕರಿಸಿದ್ದು, ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಪರಿಷತ್‌ (ಎನ್‌ಸಿಟಿಇ) ರೂಪಿಸಿರುವ ನಿಯಮಾವಳಿಯಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದೆ.

ಬಿಜೆಪಿ ಎಸ್‌.ವಿ. ಸಂಕನೂರು ಅವರು ಶೂನ್ಯವೇಳೆಯಲ್ಲಿ ಮಾಡಿದ ಪ್ರಸ್ತಾಪಕ್ಕೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಅವರು ನೀಡಿರುವ ಉತ್ತರದಲ್ಲಿ, ಆರ್‌ಟಿಇ ಕಾಯ್ದೆ-2009ರ ಪ್ರಕಾರ ಶಾಲೆಗಳಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಉತ್ತಮ ಗುಣಮಟ್ಟದ ಅರ್ಹ ಶಿಕ್ಷಕರನ್ನು ನೇಮಿಸಲು ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಪರಿಷತ್‌ ರೂಪಿಸಿರುವ ನಿಯಮಾವಳಿ ಪ್ರಕಾರವೇ ಅರ್ಹತಾ ಪರೀಕ್ಷೆ ನಡೆಸಲಾಗುತ್ತದೆ.

ಇದರ ಅನ್ವಯ ಸಾಮಾನ್ಯ ವರ್ಗ/2ಎ, ಎ2ಬಿ, 3ಎ ಮತ್ತು 3ಬಿ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಶೇ. 60 ಅಥವಾ ಶೇ. 60ಕ್ಕಿಂತ ಹೆಚ್ಚು ಅಂಕ ಹಾಗೂ ಎಸ್‌ಸಿ,ಎಸ್‌ಟಿ, ಪ್ರವರ್ಗ-1 ಹಾಗೂ ಅಂಗವಿಕಲರು ಕನಿಷ್ಠ ಶೇ. 55 ಅಂಕ ಗಳಿಸಬೇಕು. ಆದರೆ 6-8ನೇ ತರಗತಿಗೆ ಬೋಧಿಸಲು ಆಯ್ಕೆಯಾಗುವ ಶಿಕ್ಷಕರು ಆಯಾ ಬೋಧನಾ ವಿಷಯದಲ್ಲಿ ಶೇ. 50ರಷ್ಟು ಅಂಕ ಗಳಿಸಬೇಕು ಎಂಬ ನಿಯಮ ಜಾರಿಯಲ್ಲಿರುತ್ತದೆ. ಅದರಂತೆ ಸರ್ಕಾರ ಕ್ರಮ ವಹಿಸುತ್ತಿದೆ ಎಂದು ವಿವರಿಸಲಾಗಿದೆ.

click me!