ಕಾಶ್ಮೀರ ಕಣಿವೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಇಂಟರ್ನೆಟ್ ವ್ಯವಸ್ಥೆ ಕಡಿತಗೊಳಿಸಲಾಗಿದೆ. 370ನೇ ವಿಧಿ ರದ್ದು ಪಡಿಸಿದ್ದರ ಪರಿಣಾಮ ಈ ಕ್ರಮಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಆದರೆ ಇದರ ಬಿಸಿ ಈಗ ಜಮ್ಮು-ಕಾಶ್ಮೀರ ಕ್ರಿಕೆಟ್ ತಂಡಕ್ಕೂ ತಟ್ಟಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ನವದೆಹಲಿ[ಆ.29]: 370ನೇ ವಿಧಿ ರದ್ದತಿಯಿಂದಾಗಿ ಭದ್ರತೆ ದೃಷ್ಟಿಯಿಂದ ಕಾಶ್ಮೀರದಲ್ಲಿ ಮೊಬೈಲ್ ನೆಟ್ವರ್ಕ್ ಮೇಲೆ ನಿರ್ಬಂಧ ಹೇರಲಾಗಿದೆ. ಇದರ ಬಿಸಿ ಜಮ್ಮು-ಕಾಶ್ಮೀರ ಕ್ರಿಕೆಟ್ ತಂಡಕ್ಕೂ ತಟ್ಟಿದೆ.
ಜಮ್ಮು ಕಾಶ್ಮೀರದಲ್ಲಿ ಕ್ಯಾಪ್ಟನ್ ನಾಪತ್ತೆ: ಟೂರ್ನಿ ಆಡಲು ಆಟಗಾರರೇ ಇಲ್ಲ..!
ಹೌದು, ಇದರಿಂದಾಗಿ ಜಮ್ಮು-ಕಾಶ್ಮೀರ ಕ್ರಿಕೆಟ್ ಸಂಸ್ಥೆಗೆ ತನ್ನ ಆಟಗಾರರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಅಂಡರ್-23 ವಿಝ್ಝಿ ಟ್ರೋಫಿಯಿಂದ ಹಿಂದೆ ಸರಿದಿರುವ ಜಮ್ಮು-ಕಾಶ್ಮೀರ ತಂಡ, ಮುಂದಿನ ತಿಂಗಳು ಆರಂಭಗೊಳ್ಳಲಿರುವ ವಿಜಯ್ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಗೆ ಶಿಬಿರ ಆರಂಭಿಸಲು ಆಟಗಾರರೊಂದಿಗೆ ಸಂವಹನ ನಡೆಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸ್ಥಳೀಯ ಟೀವಿ ವಾಹಿನಿಗಳಲ್ಲಿ ಆಟಗಾರರು, ಕ್ರಿಕೆಟ್ ಸಂಸ್ಥೆಯನ್ನು ಸಂಪರ್ಕಿಸಿ ಶಿಬಿರಕ್ಕೆ ಹಾಜರಾಗುವಂತೆ ಜಾಹೀರಾತು ನೀಡಲಾಗಿದೆ. ಭಾರತೀಯ ಕ್ರಿಕೆಟ್ನಲ್ಲಿ ಇಂತಹ ಪ್ರಸಂಗ ಬಹಳ ಅಪರೂಪವಾಗಿದ್ದು, ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿದೆ.
ಕಾಶ್ಮೀರದಲ್ಲಿ ಹೈಅಲರ್ಟ್; ಕಣಿವೆ ರಾಜ್ಯ ತೊರೆಯಲು ಇರ್ಫಾನ್ಗೆ ಸೂಚನೆ!
ಜಮ್ಮು-ಕಾಶ್ಮೀರ ತಂಡದ ಸಲಹೆಗಾರರಾಗಿರುವ ಭಾರತೀಯ ಕ್ರಿಕೆಟಿಗ ಇರ್ಫಾನ್ ಪಠಾಣ್, ‘ಜಮ್ಮು ಆಟಗಾರರು ನಮ್ಮ ಸಂಪರ್ಕದಲ್ಲಿದ್ದಾರೆ. ಆದರೆ ಕಾಶ್ಮೀರ ಆಟಗಾರರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಇಂತಹ ಅನುಭವ ಎಂದೂ ಆಗಿರಲಿಲ್ಲ. ಇದು ನನ್ನ ವೃತ್ತಿಜೀವನದ ವಿಶೇಷ ಸವಾಲು’ ಎಂದಿದ್ದಾರೆ.