ಅಥಣಿ: ಈಜಿನಲ್ಲಿ ಚಿನ್ನದ ಪದಕ ಗೆದ್ದ 72ರ ವೃದ್ಧ..!

By Kannadaprabha NewsFirst Published Nov 18, 2023, 8:05 PM IST
Highlights

ತಮ್ಮ ತೋಟದ ಜಮೀನದಲ್ಲಿನ ಭಾವಿ, ಸಮೀಪದ ಕೆರೆ ಮತ್ತು ನದಿಗಳಲ್ಲಿ ಈಜುವ ಹವ್ಯಾಸ ಬೆಳೆಸಿಕೊಂಡಿದ್ದವರು ಬಲವಂತ ಬಿ.ಪತ್ತಾರ ಅವರು ಧಾರವಾಡದಲ್ಲಿ ನಡೆದ ಹಿರಿಯರ ಈಜು ಸ್ಪರ್ಧೆಯಲ್ಲಿ 100 ಮೀ, 200 ಮೀ ಮತ್ತು 400 ಮೀ, ಫ್ರೀ ಸ್ಟೈಲ್ ವಿಭಾಗದಲ್ಲಿ 3 ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದಾರೆ. 50 ಮೀ ಫ್ರೀ ಸ್ಟೈಲ್ ವಿಭಾಗದಲ್ಲಿ ಬೆಳ್ಳಿ ಪದಕ ಮತ್ತು 400 ಮೀಟರ್ ಫ್ರೀ ಸ್ಟೈಲ್ ರಿಲೇಯಲ್ಲಿ ಕಂಚಿನ ಪದಕ ಗೆದ್ದುಕೊಂಡು ಅನೇಕ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ.

ಅಥಣಿ(ನ.18):  ಧಾರವಾಡದಲ್ಲಿ ನ.4 ಮತ್ತು 5ರಂದು ನಡೆದ ಕರ್ನಾಟಕ ಮುಕ್ತ ಹಿರಿಯರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ 70 ರಿಂದ 75ರ ಹಿರಿಯರ ಈಜು ಸ್ಪರ್ಧೆಯ ವಿಭಾಗದಲ್ಲಿ ಪಟ್ಟಣದ ಬಿಎಸ್ಎನ್ಎಲ್ ನಿವೃತ್ತ ಅಧಿಕಾರಿ ಬಲವಂತ ಬಿ.ಪತ್ತಾರ ತಮ್ಮ 72ನೇ ಇಳಿ ವಯಸ್ಸಿನಲ್ಲಿ 3 ಚಿನ್ನದ ಪದಕ, ಒಂದು ಬೆಳ್ಳಿ ಪದಕ ಮತ್ತು ಒಂದು ಕಂಚಿನ ಪದಕ ಗಿಟ್ಟಿಸಿಕೊಂಡಿದ್ದಾರೆ.

ತಮ್ಮ ತೋಟದ ಜಮೀನದಲ್ಲಿನ ಭಾವಿ, ಸಮೀಪದ ಕೆರೆ ಮತ್ತು ನದಿಗಳಲ್ಲಿ ಈಜುವ ಹವ್ಯಾಸ ಬೆಳೆಸಿಕೊಂಡಿದ್ದವರು ಬಲವಂತ ಬಿ.ಪತ್ತಾರ ಅವರು ಧಾರವಾಡದಲ್ಲಿ ನಡೆದ ಹಿರಿಯರ ಈಜು ಸ್ಪರ್ಧೆಯಲ್ಲಿ 100 ಮೀ, 200 ಮೀ ಮತ್ತು 400 ಮೀ, ಫ್ರೀ ಸ್ಟೈಲ್ ವಿಭಾಗದಲ್ಲಿ 3 ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದಾರೆ. 50 ಮೀ ಫ್ರೀ ಸ್ಟೈಲ್ ವಿಭಾಗದಲ್ಲಿ ಬೆಳ್ಳಿ ಪದಕ ಮತ್ತು 400 ಮೀಟರ್ ಫ್ರೀ ಸ್ಟೈಲ್ ರಿಲೇಯಲ್ಲಿ ಕಂಚಿನ ಪದಕ ಗೆದ್ದುಕೊಂಡು ಅನೇಕ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ.

ನಾಳೆ ವಿಶ್ವಕಪ್ ಫೈನಲ್ ಹೈವೋಲ್ಟೇಜ್ ಕದನ; ಭಾರತದ ಗೆಲುವಿಗೆ ವಿಘ್ನೇಶ್ವರನಿಗೆ ಪೂಜೆ ಸಲ್ಲಿಸಿದ ಕರವೇ!

ಪ್ಯಾನ್ ಇಂಡಿಯ ಮಾಸ್ಟರ್ಸ್ ಗೇಮ್ಸ್ ಅಸೋಸಿಯೇಶನ್ ಸಹಕಾರದೊಂದಿಗೆ ಫೆಡರೇಶನ್ ಕರ್ನಾಟಕ ಮಾಸ್ಟರ್ಸ್ ಗೇಮ್ಸ್ ಅಸೋಸಿಯಯೇಶನ್, ಜಿಲ್ಲಾ ಮಾಸ್ಟರ್ಸ್ ಗೇಮ್ಸ್ ಅಸೋಸಿಯಯೇಶನ್ ಈ ಕ್ರೀಡಾಕೂಟವನ್ನು ಆಯೋಜಿಸಿತ್ತು. ಕರ್ನಾಟಕ ಮಾಸ್ಟರ್ ಗೇಮ್ಸ್ ಅಸೋಸಿಯನ್ ಜನರಲ್ ಸೆಕ್ರೆಟರಿ ನಟರಾಜ ಹಾಗೂ ಸಂಚಾಲಕರಾದ ಭಾರತಿ ಕೊಠಾರಿ, ಜ್ಯೋತಿ ಕೋರೆ ಪದಕ ವಿಜೇತರಿಗೆ ಚಿನ್ನದ ಪದಕ ಮತ್ತು ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಿದರು.

ಸನ್ 2022ರ ನವೆಂಬರ್‌ 22 ರಂದು ಹರಿಯಾಣದ ಅಂಬಾಲಾದಲ್ಲಿ ಜರುಗಿದ 18ನೇ ರಾಷ್ಟ್ರೀಯ ಮಾಸ್ಟರ್ ಚಾಂಪಿಯನಶಿಪ್ ವತಿಯಿಂದ ಆಯೋಜಿಸಲಾಗಿದ್ದ ಹಿರಿಯರ ಈಜು ಸ್ಪರ್ಧೆಯಲ್ಲಿ ಬಲವಂತ ಪತ್ತಾರ ಅವರು ಭಾಗವಹಿಸಿ 400 ಮೀ ಪ್ರೀ ಸ್ಟೈಲ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದುಕೊಂಡಿರುವುದನ್ನು ಕೂಡ ಇಲ್ಲಿ ಸ್ಮರಿಸಬಹುದು.

ಅಥಣಿಯ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಯಾವುದೇ ಈಜುಗೊಳದ ಸೌಲಭ್ಯವಿಲ್ಲದೆ, ಯಾವುದೇ ತರಬೇತಿ ಇಲ್ಲದೆ ತೋಟದ ಬಾವಿಗಳಲ್ಲಿ, ಕೆರೆ ಮತ್ತು ನದಿಗಳಲ್ಲಿ ಪ್ರತಿದಿನ ಈಜುವ ಹವ್ಯಾಸವನ್ನು ರೂಢಿಸಿಕೊಳ್ಳುವ ಮೂಲಕ ಬಲವಂತ ಪತ್ತಾರ ಅವರು ರಾಜ್ಯ ಮತ್ತು ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನ ಗಿಟ್ಟಿಸಿಕೊಂಡು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಇವರ ಸಾಧನೆಗೆ ಅಥಣಿ ನಾಗರಿಕರು, ಕುಟುಂಬಸ್ಥರು, ಅಭಿಮಾನಿಗಳು, ಸ್ನೇಹಿತರು ಸಂತಸ ವ್ಯಕ್ತಪಡಿಸಿ, ಅಭಿನಂದಿಸಿದ್ದಾರೆ.

'ಮೋದಿ ಗೆಲ್ಲಿಸಿ ಭಾರತ ಉಳಿಸಿ' ; ಶ್ರೀರಾಮ ಸೇನೆಯಿಂದ ಅಭಿಯಾನ ಶುರು: ಪ್ರಮೋದ್ ಮುತಾಲಿಕ್

ಪ್ರತಿದಿನ ಈಜಾಡುವ ಹವ್ಯಾಸ ರೂಢಿಸಿಕೊಂಡಿದ್ದೇನೆ. ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದುಕೊಂಡಿರುವುದು ನನಗೆ ಸಂತಸ ತಂದಿದೆ. ಮುಂದಿನ ದಿನಮಾನಗಳಲ್ಲಿ ಅವಕಾಶ ದೊರಕಿದರೆ ಅಂತಾರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಭಾಗವಹಿಸುವ ಗುರಿ ಹೊಂದಿದ್ದೇನೆ ಎಂದು ಅಥಣಿ ಈಜುಪಟು ಬಲವಂತ ಪತ್ತಾರ ಹೇಳಿದ್ದಾರೆ.  

ಅಥಣಿ ತಾಲೂಕಿನಲ್ಲಿ ಅನೇಕ ಜನ ಈಜುಗಾರರು ಇದ್ದಾರೆ. ಈಜುಗಾರರಿಗೆ ಸುವ್ಯವಸ್ಥಿತವಾದ ಈಜುಗೊಳ್ಳ ಮತ್ತು ತರಬೇತಿದಾರರು ಇದ್ದರೇ ಇನ್ನಷ್ಟು ಉತ್ತಮ ಸಾಧಕರು ಹೊರಹೊಮ್ಮಲು ಸಾಧ್ಯವಿದೆ. ಸ್ಥಳೀಯ ಜನಪ್ರತಿನಿಧಿಗಳು ಮತ್ತು ಸರ್ಕಾರ ಈಜುಕೊಳವನ್ನು ನಿರ್ಮಿಸುವುದು ಅಗತ್ಯ ಎಂದು ಅಥಣಿ ಜಲಯೋಗ ತಜ್ಞ ವಿಲಾಸ್ ರಾವ್ ಕುಲಕರ್ಣಿ ತಿಳಿಸಿದ್ದಾರೆ. 

click me!