ಜಗತ್ತಿನ 90% ಕರೆನ್ಸಿ ತಯಾರಿಸುತ್ತಿದ್ದ ಶ್ರೀಮಂತ ವಿಮಾನದಲ್ಲಿದ್ದುದು ಹೈಜಾಕರ್‌ಗಳಿಗೆ ಗೊತ್ತೇ ಇರಲಿಲ್ಲ!

By Bhavani BhatFirst Published Sep 11, 2024, 9:38 PM IST
Highlights

ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿರುವ ʼIC814 ದಿ ಕಂದಹಾರ್ ಹೈಜಾಕ್ʼ ಡಾಕ್ಯುಮೆಂಟರಿ ಫಿಲಂ ಸದ್ದು ಮಾಡುತ್ತಿದೆ. ಇದರ ಬಗ್ಗೆ ಇನ್ನಷ್ಟು ವಿವರಗಳು ಬೆಳಕು ಕಾಣುತ್ತಿವೆ. ಹೈಜಾಕ್‌ ಆದ ವಿಮಾನದಲ್ಲಿದ್ದ ವಿಶಿಷ್ಟ ವ್ಯಕ್ತಿಯೊಬ್ಬನ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಇದು. 
 

1999ರಲ್ಲಿ ನೇಪಾಳದ ಕಠ್ಮಂಡುವಿನಿಂದ ದೆಹಲಿಗೆ ಹೊರಟಿದ್ದ ಪ್ರಯಾಣಿಕ ವಿಮಾನವನ್ನು ಇಸ್ಲಾಮಿಕ್‌ ಉಗ್ರಗಾಮಿಗಳು ಹೈಜಾಕ್‌ ಮಾಡಿ ಅಫಘಾನಿಸ್ತಾನದ ಕಂದಹಾರ್‌ಗೆ ಒಯ್ದರು. ಎಂಟು ದಿನಗಳ ಕಾಲ ನಡೆದ ಈ ಒತ್ತೆನಾಟಕ ಭಾರತದ ಇತಿಹಾಸವನ್ನೇ ತಿದ್ದಿ ಬರೆಯಿತು. ಈ ಕುಖ್ಯಾತ ಘಟನೆಯನ್ನು ಆಧರಿಸಿದ ʼIC814 ದಿ ಕಂದಹಾರ್ ಹೈಜಾಕ್ʼ ಮಿನಿ-ವೆಬ್‌ ಸರಣಿಯನ್ನು ಈಗ ನೆಟ್‌ಫ್ಲಿಕ್ಸ್ ಸ್ಟ್ರೀಮ್ ಮಾಡಲು ಪ್ರಾರಂಭಿಸಿದೆ. ಅಂದಿನಿಂದ ಕಂದಹಾರ್ ಹೈಜಾಕ್ ಘಟನೆ ಸಾರ್ವಜನಿಕರಲ್ಲಿ ಕುತೂಹಲ ಸೃಷ್ಟಿಸಿದೆ.

ಸರಣಿಯು ಎಷ್ಟು ನಿಜ, ಎಷ್ಟು ಕಾಲ್ಪನಿಕ ಎಂಬುದರ ಕುರಿತು ಕೆಲವು ವಿವಾದ ಇದೆ. ಇದರ ನಡುವೆ ನಿಜವಾದ ಅಪಹರಣದ ಘಟನೆಯ ಕೆಲವು ವಿವರಗಳು ಇಂಟರೆಸ್ಟಿಂಗ್‌ ಆಗಿವೆ. ವಿಮಾನದಲ್ಲಿ ಇದ್ದ 176 ಪ್ರಯಾಣಿಕರೊಂದಿಗೆ ಶ್ರೀಮಂತ ಉದ್ಯಮಿಯೊಬ್ಬನಿದ್ದ. ಅವನು ಅಂತಿಂಥವನಾಗಿರಲಿಲ್ಲ. ಪ್ರಯಾಣಿಕರಲ್ಲಿ ಯಾರಿಗೂ ತಮ್ಮೊಂದಿಗೆ ಕುಳಿತಿದ್ದ ಈ ಹೈಪ್ರೊಫೈಲ್ ಪ್ರಯಾಣಿಕನ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಅಪಹರಣಕಾರರಿಗೂ ಈ ಪ್ರಯಾಣಿಕನ ನಿಜವಾದ ಗುರುತಿನ ಬಗ್ಗೆ ಯಾವುದೇ ಸುಳಿವು ಇರಲಿಲ್ಲ. ಗೊತ್ತಿದ್ದರೆ ಇನ್ನೊಂದು ಬರ್ಬರವಾದ ಸ್ಕೆಚ್‌ ಹಾಕುತ್ತಿದ್ದರೋ ಏನೋ!

Latest Videos

ಆ ಪ್ರಯಾಣಿಕನ ಹೆಸರು ರಾಬರ್ಟೊ ಗಿಯೊರಿ. ಆತ ಸ್ವಿಸ್-ಇಟಾಲಿಯನ್ ಉದ್ಯಮಿ. ಗಿಯೋರಿ ಆ ಸಮಯದಲ್ಲಿ ಸ್ವಿಟ್ಜರ್ಲೆಂಡ್‌ನ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬನಾಗಿದ್ದ. ಅವರು ವಿಶ್ವದ ಕರೆನ್ಸಿ-ಪ್ರಿಂಟಿಂಗ್ ವ್ಯವಹಾರದ 90% ಕ್ಕಿಂತ ಹೆಚ್ಚಿನ ಭಾಗದ ಮೇಲೆ ನಿಯಂತ್ರಣ ಹೊಂದಿದ್ದ UK ಮೂಲದ ಕಂಪನಿಯಾದ ʼಡಿ ಲಾ ರೂʼಯ ಮಾಲೀಕನಾಗಿದ್ದ! ಡಿ ಲಾ ರೂ ವಿಶ್ವದ 70ಕ್ಕೂ ಹೆಚ್ಚು ದೇಶಗಳ ಕರೆನ್ಸಿ ನೋಟುಗಳನ್ನು ಮುದ್ರಿಸುತ್ತಿತ್ತು.

ರಾಬರ್ಟೊ ಗಿಯೊರಿ ತನ್ನ ಸಂಗಾತಿ ಕ್ರಿಸ್ಟಿನಾ ಕ್ಯಾಲಬ್ರೆಸಿ ಅವರೊಂದಿಗೆ ನೇಪಾಳದಲ್ಲಿ ರಜಾದ ಮಜಾ ಅನುಭವಿಸಿದ ಬಳಿಕ ಕಠ್ಮಂಡುವಿನಿಂದ ಹಿಂತಿರುಗುತ್ತಿದ್ದ. ದಿಲ್ಲಿಗೆ ಬಂದು ಅಲ್ಲಿಂದ ಅವನು ಸ್ವಿಜರ್‌ಲ್ಯಾಂಡ್‌ಗೆ ಹೋಗಬೇಕಿತ್ತು. ಹೈಜಾಕ್‌ ಆದ ಬಳಿಕ ಅವನಾಗಲೀ ಅವರ ಪತ್ನಿಯಾಗಲೀ ತಮ್ಮ ನಿಜ ಗುರುತು ಯಾರಿಗೂ ಆಗದಂತೆ ಎಚ್ಚರ ವಹಿಸಿದರು.  

ಕಂದಹಾರ್ ವಿಮಾನ ಅಪಹರಣದ ಚಿತ್ರದಲ್ಲಿ ಉಗ್ರರಿಗೆ ಮುಸ್ಲಿಂ ಹೆಸರಿಗೆ ಬದಲು ಹಿಂದೂ ಹೆಸರು ವಿವಾದ

ಇನ್ನು ಹೈಜಾಕರ್‌ಗಳ ಜೊತೆಗಿನ ಸಂಧಾನದ ಸಮಯದಲ್ಲಿ, ವಿಮಾನ ಪ್ರಯಾಣಿಕರಿಗೆ ಅಪಾಯವಾಗದಂತೆ ನೋಡಿಕೊಳ್ಳಬೇಕು ಎಂದು ಭಾರತದ ಮೇಲೆ ಹೆಚ್ಚಿನ ಅಂತಾರಾಷ್ಟ್ರೀಯ ಒತ್ತಡವಿತ್ತು. ಇದಕ್ಕೆ ಕಾರಣ, ಅಪಹರಣಕ್ಕೊಳಗಾದ ವಿಮಾನದಲ್ಲಿ ಜಿಯೋರಿ ಇದ್ದುದೇ ಎಂದು ಹೇಳಲಾಗುತ್ತಿದೆ. ಅವನನ್ನು ಕಾಪಾಡಲು ಯುರೋಪಿನ ದೇಶಗಳು ಕಟಿಬದ್ಧವಾಗಿದ್ದವು. 

ಇಂಡಿಯನ್ ಏರ್‌ಲೈನ್ಸ್ ಫ್ಲೈಟ್ ಐಸಿ 814 ಅನ್ನು ಎಂಟು ದಿನಗಳ ಕಾಲ ಉಗ್ರರು ಒತ್ತೆಯಿಟ್ಟುಕೊಂಡಿದ್ದರು. ಒತ್ತೆಯಾಳುಗಳ ಬಿಡುಗಡೆಗೆ ಬದಲಾಗಿ ಭಾರತ ಸರ್ಕಾರ 20 ಕೋಟಿ ಡಾಲರ್‌ ಕೊಡಬೇಕು ಹಾಗೂ ಭಾರತ ಸರ್ಕಾರದ ವಶದಲ್ಲಿರುವ ಹಲವಾರು ಭಯೋತ್ಪಾದಕರನ್ನು ಬಿಡುಗಡೆ ಮಾಡಬೇಕೆಂದು ಬೇಡಿಕೆ ಇಟ್ಟಿದ್ದರು. ಅವರಲ್ಲಿ ಒಬ್ಬ ಮಸೂದ್ ಅಜರ್. ಈತ ನಂತರ ಜೈಶ್-ಎ-ಮೊಹಮ್ಮದ್ ಎಂಬ ಉಗ್ರಗಾಮಿ ಸಂಘಟನೆ ಸ್ಥಾಪಿಸಿದ. ಒತ್ತೆಯಾಳುಗಳಿಗೆ ಬದಲಾಗಿ ಅಹ್ಮದ್ ಒಮರ್ ಸಯೀದ್ ಶೇಖ್, ಮುಷ್ತಾಕ್ ಅಹ್ಮದ್ ಜರ್ಗರ್ ಮತ್ತು ಮಸೂದ್ ಅಜರ್ ಎಂಬ ಮೂವರು ಭಯೋತ್ಪಾದಕರನ್ನು ಭಾರತ ಬಿಡುಗಡೆ ಮಾಡಬೇಕಾಯಿತು. ಮಸೂದ್ ಅಜರ್ 2019ರ ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್.

25 ವರ್ಷಗಳ ನಂತರ ಹೈಜಾಕ್ ಸತ್ಯ? ಪಾಕಿಸ್ತಾನದ ಉಗ್ರರ ಹೆಸರು ಭೋಲಾ ಮತ್ತು ಶಂಕರ್ ಎಂದಿದ್ದೇಕೆ?
 

click me!