ಕೋವಿಡ್19 ಮಹಾಮಾರಿಯಿಂದ ಸ್ಯಾಂಡಲ್ವುಡ್ ಸಂಪೂರ್ಣ ಮಂಕಾಗಿತ್ತು. ವಾರಾಂತ್ಯದ ಕರ್ಫ್ಯೂ ಚಿತ್ರರಂಗವನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿತ್ತು. ಆದರೆ ರಾಜ್ಯ ಸರ್ಕಾರ ವೀಕೆಂಡ್ ಕರ್ಪ್ಯೂ ಹಿಂತೆಗೆದುಕೊಂಡ ಹಿನ್ನೆಲೆಯಲ್ಲಿ ಸಿನಿಮಾಗಳ ರಿಲೀಸ್ಗೆ ಕ್ಷಣಗಣನೆ ಪ್ರಾರಂಭವಾಗಿದೆ.
ಕೋವಿಡ್19 (Covid19) ಮಹಾಮಾರಿಯಿಂದ ಸ್ಯಾಂಡಲ್ವುಡ್ (Sandalwood) ಸಂಪೂರ್ಣ ಮಂಕಾಗಿತ್ತು. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆಯನ್ನು ಶೇ 50ಕ್ಕೆ ನಿರ್ಬಂಧಿಸಿರುವುದು ಹಾಗೂ ವಾರಾಂತ್ಯದ ಕರ್ಫ್ಯೂ ಚಿತ್ರರಂಗವನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿತ್ತು. ವೀಕೆಂಡ್ ಕರ್ಫ್ಯೂ (Weekend Curfew) ಇದ್ದಿದ್ದರಿಂದ ಯಾವುದೇ ಹೊಸ ಸಿನಿಮಾಗಳನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲು ಯಾವುದೇ ನಿರ್ಮಾಪಕರು (Producers) ಧೈರ್ಯ ಮಾಡಿರಲಿಲ್ಲ. ಆದರೆ ರಾಜ್ಯ ಸರ್ಕಾರ ವೀಕೆಂಡ್ ಕರ್ಪ್ಯೂ ಹಿಂತೆಗೆದುಕೊಂಡ ಹಿನ್ನೆಲೆಯಲ್ಲಿ ಸಿನಿಮಾಗಳ ರಿಲೀಸ್ಗೆ ಕ್ಷಣಗಣನೆ ಪ್ರಾರಂಭವಾಗಿದೆ.
ಲೂಸ್ ಮಾದ ಯೋಗೇಶ್ (Yogesh) ಅಭಿನಯದ 'ಒಂಬತ್ತನೇ ದಿಕ್ಕು' (Ombatthane Dikku) ಚಿತ್ರವು ಕೂಡ ಬಹಳ ದಿನಗಳಿಂದ ರಿಲೀಸ್ ಕ್ಯೂನಲ್ಲಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಡಿಸೆಂಬರ್ 31ರಂದು ಈ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ಅಂದು ಕರ್ನಾಟಕ ಬಂದ್ ಮತ್ತಿತರ ಕಾರಣಗಳಿಂದ ಜನವರಿ 28ರಂದು ಸಿನಿಮಾವನ್ನು ರಿಲೀಸ್ ಮಾಡಲು ನಿರ್ದೇಶಕ ದಯಾಳ್ ಪದ್ಮನಾಭನ್ (Dayal Padmanabhan) ಪ್ಲ್ಯಾನ್ ಮಾಡಿಕೊಂಡಿದ್ದರು. ಈ ಮೂರನೇ ಅಲೆಯಿಂದಾಗಿ ಅಂದು ರಿಲೀಸ್ ಆಗಲಿದೆಯೋ, ಇಲ್ಲವೋ ಎಂಬ ಅನುಮಾನ ಎಲ್ಲರಲ್ಲಿಯೂ ಇತ್ತು. ಇದೀಗ ಅದು ಬಗೆಹರಿದಿದೆ. ಅಂದುಕೊಂಡ ಸಮಯಕ್ಕೆ ಜನವರಿ 28ರಂದೇ ಸಿನಿಮಾವನ್ನು ರಿಲೀಸ್ ಮಾಡುವುದಾಗಿ ದಯಾಳ್ ಹೇಳಿಕೊಂಡಿದ್ದಾರೆ.
ಲೂಸ್ ಮಾದ ಯೋಗೇಶ್ 'ಒಂಭತ್ತನೇ ದಿಕ್ಕು' ಟ್ರೇಲರ್ ರಿಲೀಸ್: ಪುನೀತ್ಗೆ ಅರ್ಪಣೆ
'ಒಂಭತ್ತನೇ ದಿಕ್ಕು' ಚಿತ್ರದಲ್ಲಿ ಯೋಗಿಗೆ ನಾಯಕಿಯಾಗಿ ಅದಿತಿ ಪ್ರಭುದೇವ (Aditi Prabhudeva) ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್ (Trailer) ಬಿಡುಗಡೆಯಾಗಿದ್ದು, ಸಿನಿರಸಿಕರಿಂದ ಮೆಚ್ಚುಗೆಯನ್ನು ಪಡೆದಿದೆ. ವಿಶೇಷವಾಗಿ ಈ ಚಿತ್ರದ ಟೈಟಲ್ ಟ್ರ್ಯಾಕ್ ಇದೇ ತಿಂಗಳ 24ರಂದು ಬಿಡುಗಡೆಯಾಗುತ್ತಿದ್ದು, ವಿ.ರಘು ಈ ಹಾಡಿಗೆ ಸಾಹಿತ್ಯ ರಚಿಸಿದ್ದಾರೆ. ನಿಹಾಲ್ ಟೌರೊ ದನಿಯಲ್ಲಿ ಟೈಟಲ್ ಟ್ರ್ಯಾಕ್ ಮೂಡಿಬಂದಿದ್ದು, ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸಿದ್ದಾರೆ. ಸಿನಿಮಾದಲ್ಲಿ ಎರಡು ಕಥಾಹಂದರ ಜೊತೆಯಾಗಿ ಸಾಗುತ್ತದೆ. ಸಸ್ಪೆನ್ಸ್, ಥ್ರಿಲ್ಲರ್ ಕತೆಯನ್ನು ಒಳಗೊಂಡಿರುವ ಸಿನಿಮಾ ಇದಾಗಿದ್ದು, ಪುರಾತನ ದೇವಾಲಯ, ವಿಗ್ರಹ ಕಳವು. ಇದು ಚಿತ್ರದ ಎರಡು ಮುಖ್ಯ ತಿರುವುಗಳು.
9ಕೆ ಸ್ಟುಡಿಯೋಸ್ ಹಾಗೂ ನಿರ್ದೇಶಕ ಗುರು ದೇಶಪಾಂಡೆ ಅವರ ಜಿ ಸಿನಿಮಾಸ್ ಬ್ಯಾನರ್ನಲ್ಲಿ ಈ ಚಿತ್ರ ನಿರ್ಮಾಣ ಆಗಿದೆ. ದಯಾಳ್ ನಿರ್ದೇಶನದ ಹತ್ತೊಂಭತ್ತನೆಯ ಆಕ್ಷನ್ ಥ್ರಿಲ್ಲರ್ ಚಿತ್ರ 'ಒಂಬತ್ತನೇ ದಿಕ್ಕು'. ಈ ಹಿಂದೆ 'ಹಗ್ಗದ ಕೊನೆ', 'ಆ ಕರಾಳ ರಾತ್ರಿ', 'ರಂಗನಾಯಕಿ'ಯಂತಹ ವಿಭಿನ್ನ ಚಿತ್ರಗಳನ್ನು ಡೈರೆಕ್ಟ್ ಮಾಡಿದ್ದಾರೆ. ಈ ಚಿತ್ರದ ಕಥೆ ಎರಡು ಟೈಮ್ ಲೈನ್ನಲ್ಲಿ ಸಾಗುತ್ತದೆ. ನಮಗೆ ಸಿಗುವುದಿಲ್ಲ ಎಂದು ಗೊತ್ತಿದರೂ ನಾವು ಮತ್ತೊಂದು ದಾರಿಯಲ್ಲಿ ಏನನ್ನೋ ಹುಡುಕುತ್ತಾ ಹೋಗುತ್ತೇವೆ. ಅದು ಮತ್ತೊಂದು ಕಡೆ ಸಿಗುತ್ತದೆ. ಹೀಗೆ ಇಲ್ಲದ ಕಡೆ ಹುಡುಕುತ್ತಾ ಸಾಗುತ್ತೇವೆ. ಇದು ಚಿತ್ರದಲ್ಲಿರುವ ಸಾರಾಂಶ. ಚಿತ್ರದಲ್ಲಿ ಯೋಗಿ ಇಲ್ಲಿಯವರೆಗೂ ಮಾಡದ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅಪ್ಪನ ಪಾತ್ರದಲ್ಲಿ ಹಿರಿಯ ನಟ ಅಶೋಕ್ ನಟಿಸಿದ್ದಾರೆ.
DNA Kannada Movie: ವಿಭಿನ್ನ ಶೀರ್ಷಿಕೆಯ ಚಿತ್ರದ ಆಡಿಯೋ ಬಿಡುಗಡೆ
ಇನ್ನು, ವಿಭಿನ್ನ ಶೀರ್ಷಿಕೆಯ 'ಡಿಎನ್ಎ' (DNA) ಚಿತ್ರ ಈ ವರ್ಷದ ಆರಂಭದಲ್ಲೇ ತೆರೆಕಾಣಬೇಕಿತ್ತು. ಜ.7ರಂದು ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ರಿಲೀಸ್ ದಿನಾಂಕವನ್ನು ರದ್ದು ಮಾಡಿತ್ತು. ಇದೀಗ ಈ ಚಿತ್ರವನ್ನು ಜನವರಿ 28ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈ ಚಿತ್ರಕ್ಕೆ ಪ್ರಕಾಶ್ರಾಜ್ ಮೇಹು (PrakashRaj Mehu) ನಿರ್ದೇಶನ ಮಾಡಿದ್ದು, ಎಂ. ಮೈಲಾರಿ ಬಂಡವಾಳ ಹೂಡಿದ್ದಾರೆ. ಮಾತೃಶ್ರೀ ಎಂಟರ್ಪ್ರೈಸಸ್ ಬ್ಯಾನರ್ನ ಈ ಚಿತ್ರದಲ್ಲಿ ಅಚ್ಯುತ್ ಕುಮಾರ್, ರೋಜರ್ ನಾರಾಯಣ್, ಎಸ್ತರ್ ನರೋನ, ಯಮುನಾ, ಮಾ.ಕೃಷ್ಣ ಚೈತನ್ಯ, ಅನಿತಾ ಭಟ್, ನಿಹಾರಿಖ, ನೀನಾಸಂ ಶ್ವೇತಾ, ಶೋಭಾ ಮೈಸೂರು ಮುಂತಾದ ಕಲಾವಿದರು ನಟಿಸಿದ್ದಾರೆ.