
ವಿಕ್ಕಿ ವರುಣ್ ನಿರ್ದೇಶಿಸಿ, ನಾಯಕನಾಗಿ ನಟಿಸಿರುವ ‘ಕಾಲಾಪತ್ಥರ್’ ಸಿನಿಮಾ ಇಂದು ತೆರೆಗೆ ಬರುತ್ತಿದೆ. ಇದು ಸೈನಿಕನೊಬ್ಬನ ಬದುಕಿನ ಮೇಲೆ ಬೆಳಕು ಚೆಲ್ಲುವ ಜೊತೆಗೆ ಆತನ ಸಂದಿಗ್ಧವನ್ನೂ ಚಿತ್ರಿಸುವ ಸಿನಿಮಾ. ಧನ್ಯಾ ರಾಮ್ಕುಮಾರ್ ನಾಯಕಿ. ಭುವನ್ ಸುರೇಶ್ ಹಾಗೂ ನಾಗರಾಜ್ ಬಿಲ್ಲಿನಕೋಟೆ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಸಿನಿಮಾ ಬಗ್ಗೆ ವಿಕ್ಕಿ ವರುಣ್, ‘ಇದೊಂದು ಕಪ್ಪು ಕಲ್ಲಿನ ಕಥೆ. ಸಿನಿಮಾ ಹೀರೋ ಸೈನಿಕ. ಊರಿಗೆ ಹೆಮ್ಮೆ ತರುವ ಕೆಲಸ ಮಾಡಿದಾಗ, ಊರಲ್ಲಿ ಅವನ ಕಲ್ಲಿನ ಪ್ರತಿಮೆ ಎದ್ದು ನಿಲ್ಲುತ್ತೆ. ಅಲ್ಲಿಂದ ಮುಂದೆ ಏನೆಲ್ಲ ನಡೆಯುತ್ತೆ ಎಂಬುದೇ ಸಿನಿಮಾದ ವಿಷಯ. ಹೀರೋ ಹಾಗೂ ಕಲ್ಲಿನ ಪ್ರತಿಮೆ ನಡುವಿನ ಬಂಧ, ದ್ವೇಷ, ಹೊಡೆದಾಟ, ಇವೆಲ್ಲದರ ನಡುವೆ ನವಿರಾದ ಪ್ರೇಮಕಥೆಯೂ ಇದೆ’ ಎನ್ನುತ್ತಾರೆ. ಅಚ್ಯುತ್ ಕುಮಾರ್, ಟಿ ಎಸ್ ನಾಗಾಭರಣ, ರಾಜೇಶ್ ನಟರಂಗ, ಸಂಪತ್ ಮೈತ್ರೇಯ ನಟಿಸಿದ್ದಾರೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನವಿದೆ.
ಟ್ರೇಲರ್ ಬಿಡುಗಡೆ: ವಿಕ್ಕಿ ವರುಣ್ ಹಾಗೂ ಧನ್ಯ ರಾಮ್ಕುಮಾರ್ ನಟನೆಯ ‘ಕಾಲಾಪತ್ಥರ್’ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಇದೇ ಸೆಪ್ಟೆಂಬರ್ 13ಕ್ಕೆ ಸಿನಿಮಾ ತೆರೆಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಟ್ರೇಲರ್ ಅನ್ನು ಅದ್ದೂರಿಯಾಗಿ ಅನಾವರಣ ಮಾಡಲಾಯಿತು. ಭುವನ್ ಸುರೇಶ್ ಹಾಗೂ ನಾಗರಾಜ್ ಬಿಲ್ಲಿನಕೋಟೆ ನಿರ್ಮಿಸಿರುವ ಈ ಚಿತ್ರವನ್ನು ವಿಕ್ಕಿ ವರಣ್ ಅವರೇ ನಿರ್ದೇಶಿಸಿದ್ದಾರೆ. ‘ನಾನು ನಟನಾಗಲು ಚಿತ್ರರಂಗಕ್ಕೆ ಬಂದಿದ್ದಲ್ಲ. ನಿರ್ದೇಶಕನಾಗುವ ಕನಸು ಇತ್ತು. ‘ಕೆಂಡಸಂಪಿಗೆ’ ಚಿತ್ರಕ್ಕೆ ಹೀರೋ ಆದೆ.
ಹೀರೋ ಆಗಲು ಚಿತ್ರರಂಗಕ್ಕೆ ಬಂದವನಲ್ಲ, ನಿರ್ದೇಶಕನಾಗುವ ಕನಸು ಇತ್ತು: ನಟ ವಿಕ್ಕಿ ವರುಣ್
ಈಗ ನಾನೇ ನಾಯಕನಾಗಿ ನಟಿಸಿರುವ ‘ಕಾಲಾಪತ್ಥರ್’ ಚಿತ್ರವನ್ನು ನಿರ್ದೇಶಿಸುವ ಮೂಲಕ ನನ್ನ ನಿರ್ದೇಶನದ ಕನಸ್ಸನ್ನು ಈಡೇರಿಸಿಕೊಂಡಿದ್ದೇನೆ. ಹೊಸ ರೀತಿಯ ಕತೆ ಇರುವ ಸಿನಿಮಾ ಇದು’ ಎಂದು ವಿಕ್ಕಿ ವರುಣ್ ಹೇಳಿಕೊಂಡರು. ಧನ್ಯ ರಾಮ್ಕುಮಾರ್, ‘ಚಿತ್ರದ ಟ್ರೇಲರ್ ನೋಡಿದಾಗ ಸಿನಿಮಾ ಮೇಲಿನ ಭರವಸೆ ಹೆಚ್ಚಿಸಿದೆ. ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವ ಸಿನಿಮಾ ಇದು’ ಎಂದರು. ನಟ ವಿನಯ್ ರಾಜ್ಕುಮಾರ್, ಹಿರಿಯ ನಿರ್ದೇಶಕ ಟಿ ಎಸ್ ನಾಗಾಭರಣ, ರಾಜೇಶ್ ನಟರಂಗ, ಚಕ್ರವರ್ತಿ ಚಂದ್ರಚೂಡ್, ನಿರ್ಮಾಪಕರಾದ ಭುವನ್ ಸುರೇಶ್, ನಾಗರಾಜ್ ಬಿಲ್ಲನಕೋಟೆ, ಮಾಸ್ತಿ ಮುಂತಾದವರು ಹಾಜರಿದ್ದು, ಚಿತ್ರದ ಕುರಿತು ಮಾತನಾಡಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.