Vijay Sankeshwar ಡಿ.9ಕ್ಕೆ 5 ಭಾಷೆಗಳಲ್ಲಿ 1 ಸಾವಿರ ಚಿತ್ರಮಂದಿರಗಳಲ್ಲಿ ವಿಜಯಾನಂದ ತೆರೆಗೆ

By Vaishnavi ChandrashekarFirst Published Nov 7, 2022, 10:10 AM IST
Highlights

ವಿಜಯ ಸಂಕೇಶ್ವರರ ಬಯೋಪಿಕ್‌ ವಿಜಯಾನಂದ.ರಿಷಿಕಾ ಶರ್ಮಾ ನಿರ್ದೇಶನದ ಸಿನಿಮಾದ ಇದಾಗಿದ್ದು ಡಿಸೆಂಬರ್ 9ಕ್ಕೆ ತೆರೆ ಕಾಣಲಿದೆ.

ಉದ್ಯಮಿ ಹಾಗೂ ಪದ್ಮಶ್ರೀ ಡಾ ವಿಜಯ ಸಂಕೇಶ್ವರ ಅವರ ಜೀವನ ಆಧಾರಿತ ‘ವಿಜಯಾನಂದ’ ಚಿತ್ರವು ಆಡಿಯೋ ಬಿಡುಗಡೆ ಮಾಡಿಕೊಳ್ಳುವ ಮೂಲಕ ಸಿನಿಮಾ ಸದ್ದು ಮಾಡಲು ಆರಂಭಿಸುತ್ತಿದೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ಬರುತ್ತಿರುವ ಈ ಚಿತ್ರದ ಕುರಿತು ಡಾ ವಿಜಯ ಸಂಕೇಶ್ವರ ಅವರು ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಹೇಳಿದ ಮಾತುಗಳು ಇಲ್ಲಿವೆ.  

- ಕನ್ನಡದ ವ್ಯಕ್ತಿಗಳ ಜೀವನ ಚರಿತ್ರೆ ಆಧರಿಸಿ ಬೇರೆ ಭಾಷೆಗಳಲ್ಲಿ ಸಿನಿಮಾಗಳು ಬಂದಿವೆ. ಹಾಗೆ ಬೇರೆ ಭಾಷೆಯ ಸಾಧಕರ ಕುರಿತ ಚಿತ್ರಗಳು ಕನ್ನಡದಲ್ಲಿ ಬಂದಿವೆ. ಆದರೆ, ಕನ್ನಡದ ವ್ಯಕ್ತಿಯ ಜೀವನ ಆಧಾರಿತ ಚಿತ್ರ ಕನ್ನಡದಲ್ಲಿ ಬರುತ್ತಿರುವುದು ಇದೇ ಮೊದಲು. ಇದು ಹೆಮ್ಮೆಯ ಸಂಗತಿ. 

- ನೂರಕ್ಕೆ ನೂರರಷ್ಟು ಸತ್ಯ ಸಂಗತಿಗಳನ್ನು ಒಳಗೊಂಡ ಚಿತ್ರವಿದು. ಸಿನಿಮಾಗಾಗಿ ಅನಗತ್ಯವಾಗಿ ಏನನ್ನೂ ಸೇರಿಸಿಲ್ಲ. 

- ನಾನು ಯಂಗ್ ಆಗಿದ್ದಾಗ ಹೇಗಿದ್ದೆ ಎನ್ನುವ ಕಲ್ಪನೆ ಯಾರಿಗೂ ಇಲ್ಲ. ಕನ್ನಡಕ ಹಾಕುತ್ತಿದ್ದೆ. ಎದೆ ಉಬ್ಬಿಸಿಕೊಂಡು ನಡೆಯುತ್ತಿದ್ದೆ. ಕಲರ್ ಕಲರ್ ಶರ್ಟ್‌ಗಳನ್ನು ಹಾಕುತ್ತಿದ್ದೆ. ತುಂಬಾ ಜೋಶ್ ಆಗಿದ್ದೆ. ಇದೆಲ್ಲವನ್ನೂ ನಿಹಾಲ್ ತೆರೆ ಮೇಲೆ ತೋರಿಸುವ ಮೂಲಕ ನನ್ನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಆದರೆ, ನಾನು ನಿಹಾಲ್ ಅವರಷ್ಟು ಸುಂದರವಾಗಿಲ್ಲ. ನನ್ನ ಪತ್ನಿ ಲಲಿತಾ ಪಾತ್ರ ಮಾಡಿರುವ ಯುವ ನಟಿ ಸಿರಿ ಪ್ರಹ್ಲಾದ್ ಅವರನ್ನು ನೋಡಿದಾಗ ಲಲಿತಾ ಸಂಕೇಶ್ವರ ಅವರನ್ನೇ ನೋಡಿದಂತಾಯಿತು. 

- ನನ್ನ ತಂದೆ ಪಾತ್ರ ಮಾಡಿರುವ ಅನಂತ್‌ನಾಗ್ ಅವರು ಥೇಟ್ ನನ್ನ ತಂದೆಯಂತೆ. ಮಾತು, ಉಡುಗೆ-ನಡಿಗೆಯಲ್ಲಿ ಅನಂತ್‌ನಾಗ್ ಅವರು ನನ್ನ ತಂದೆ ಬಿ ಜಿ ಸಂಕೇಶ್ವರ ಅವರನ್ನು ನೆನಪಿಸಿದರು.

- ನನ್ನ ತಂದೆಗೆ ನನ್ನ ಮೇಲೆ ಅಪಾರ ಭರವಸೆ ಇತ್ತು. ಆದರೆ, ಲಾರಿ ಬ್ಯುಸಿನೆಸ್ ಮಾಡುತ್ತೇನೆ ಎಂದಾಗ ಹೆದರಿದರು. ಒಂದು ಲಾರಿಯಿಂದ ಶುರುವಾಗಿ ದೇಶದ ಅತೀ ದೊಡ್ಡ ಕಂಪನಿ ಆಗಿ ಬೆಳೆದಿದ್ದು, 20 ಸಾವಿರ ಕಾರ್ಮಿಕರ ಶ್ರಮ ಎಲ್ಲವೂ ಆಗಿದ್ದು ನಾನು 17ನೇ ವಯಸ್ಸಿನಲ್ಲಿ ಇದ್ದಾಗ ಹುಟ್ಟಿಕೊಂಡ ಆಲೋಚನೆಯಿಂದ. 

- ರಿಷಿಕಾ ಶರ್ಮಾ ನೋಡಲು ಚಿಕ್ಕ ಹುಡುಗಿ. ಆದರೆ, ಅದ್ಭುತವಾದ ಸಿನಿಮಾ ಮಾಡಿದ್ದಾರೆ. ನಾನು ನಿರ್ದೇಶಕರ ಆತ್ಮ ವಿಶ್ವಾಸಕ್ಕೆ, 2 ವರ್ಷದ ಅವರ ಶ್ರಮಕ್ಕೆ ನಾನು ಸೋತೆ. 

ಒಂದು ಟ್ರಕ್‌ನಿಂದ ಶುರು: ಉದ್ಯಮಿ ವಿಜಯ ಸಂಕೇಶ್ವರರ ಬಯೋಪಿಕ್‌

 

-ವಿಜಯಾನಂದ ಚಿತ್ರ ಡಿ. 9ಕ್ಕೆ 5 ಭಾಷೆಗಳಲ್ಲಿ ಒಂದು ಸಾವಿರ ಚಿತ್ರಮಂದಿರಗಳಲ್ಲಿ ತೆರೆಗೆ ಬರುತ್ತಿದೆ. ನ.19ಕ್ಕೆ ಟ್ರೇಲರ್ ಬಿಡುಗಡೆ ಆಗುತ್ತಿದೆ. 

- ಡಿಸೆಂಬರ್ ತಿಂಗಳು ನಮ್ಮ ಕುಟುಂಬಕ್ಕೆ ವಿಶೇಷ. ಡಿ.14ಕ್ಕೆ ನನ್ನ 50ನೇ ವಿವಾಹ ವಾರ್ಷಿಕೋತ್ಸವ. ಡಿ.22ಕ್ಕೆ ನನ್ನ ಮಗ ಆನಂದ ಸಂಕೇಶ್ವರ ಅವರ 22ನೇ ವರ್ಷದ ಮದುವೆ ವಾರ್ಷಿಕೋತ್ಸವ. ಡಿ.1ಕ್ಕೆ ನನ್ನ ಮೊಮ್ಮಗ ಶಿವ ಸಂಕೇಶ್ವರ ಹೊಸ ಬ್ಯುಸಿನೆಸ್ ಆರಂಭಿಸುತ್ತಿದ್ದಾನೆ.  

ಪ್ಯಾನ್ ಇಂಡಿಯಾ ಸಿನಿಮಾ ಆಗಿ ಬರುತ್ತಿರುವ ಈ ಚಿತ್ರದ ಹಾಗೆ ಆದ ಆಲಿಂಗನ...’ ಎನ್ನುವ ರೊಮ್ಯಾಂಟಿಕ್ ಹಾಡನ್ನು ಚಿತ್ರದ ನಾಯಕ ನಿಹಾಲ್ ಹಾಗೂ ನಾಯಕಿ ಸಿರಿ ಪ್ರಹ್ಲಾದ್ ಅವರ ಕಾಂಬಿನೇಶನ್‌ನಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಇದೇ ಹಾಡಿನ ಪ್ರದರ್ಶನ ಮಾಡಲಾಯಿತು. ನಟ ಶರಣ್, ನಟಿ ಹರ್ಷಿಕಾ ಪೂಣಚ್ಚ, ನಿರ್ದೇಶಕಿ ರಿಷಿಕಾ ಶರ್ಮಾ, ನಟ ನಿಹಾಲ್, ನಟಿ ಸಿರಿ ಪ್ರಹ್ಲಾದ್, ಭರತ್ ಬೋಪಣ್ಣ, ಸಂಗೀತ ನಿರ್ದೇಶಕ ಗೋಪಿ ಸುಂದರ್, ಲಲಿತಾ ಸಂಕೇಶ್ವರ, ರಾಜೇಶ್ ನಟರಂಗ, ಇಮ್ರಾನ್ ಸರ್ಧಾರಿಯಾ ಅವರು ಹಾಜರಿದ್ದು ಚಿತ್ರದ ಕುರಿತು ಹೇಳಿದರು. ವಿಆರ್‌ಎಲ್ ಪ್ರೊಡಕ್ಷನ್ ಮೂಲಕ ಡಾ. ಆನಂದ ಸಂಕೇಶ್ವರ ಅವರೇ ಈ ಚಿತ್ರವನ್ನು ನಿರ್ಮಿಸಿದ್ದು, ಡಾ ವಿಜಯ ಸಂಕೇಶ್ವರ ಅವರ ಗುರುಗಳ ಪಾತ್ರದಲ್ಲಿ ರವಿಚಂದ್ರನ್ ನಟಿಸಿದ್ದಾರೆ.   

click me!