ಇಬ್ಬರು ಖಡಕ್ ಕಲಾವಿದರು ಒಂದೇ ಚಿತ್ರದಲ್ಲಿ ಜತೆಯಾಗುತ್ತಿದ್ದಾರೆ. ಕಂಚಿನ ಕಂಠದ ವಸಿಷ್ಠ ಸಿಂಹ ಹಾಗೂ ದುನಿಯಾ ಕಿಶೋರ್ ಅವರನ್ನು ಜತೆಯಾಗಿಸುತ್ತಿರುವ ಚಿತ್ರಕ್ಕೆ ಇತ್ತೀಚೆಗೆ ಮುಹೂರ್ತ ನಡೆಯಿತು. ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ.
ಜನಾರ್ಧನ್ ಈ ಚಿತ್ರದ ನಿರ್ಮಾಪಕ. ಮೊನ್ನೆ ನಡೆದ ಚಿತ್ರದ ಮುಹೂರ್ತದಲ್ಲಿ ಜನಾರ್ಧನ್ ಸೋದರಿ ಲತಾ ಶಿವಣ್ಣ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರೆ, ಸ್ವೀಕೃತಿ ಕ್ಯಾಮೆರಾಗೆ ಚಾಲನೆ ನೀಡಿದರು.
ವಸಿಷ್ಠ ಸಿಂಹ ಮೊದಲ ತೆಲುಗು ಚಿತ್ರದ ಫಸ್ಟ್ಲುಕ್
ಈ ಚಿತ್ರದ ಮೂಲಕ ವಚನ್ ಸ್ವಾತಂತ್ರ್ಯ ನಿರ್ದೇಶಕರಾಗುತ್ತಿದ್ದಾರೆ.‘ಪವನ್ ಕುಮಾರ್ ಜತೆ ಲೂಸಿಯಾ ಚಿತ್ರದಲ್ಲಿ ಕೆಲಸ ಮಾಡಿದ್ದೆ. ಆವತ್ತೇ ಈ ಕಥೆಯ ಬಗ್ಗೆ ಛಾಯಾಗ್ರಾಹಕ ನವೀನ್ ಕುಮಾರ್ ಅವರೊಂದಿಗೆ ಚರ್ಚಿಸಿದ್ದೆ. ಅವರು ವಸಿಷ್ಠ ಸಿಂಹ ಅವರನ್ನು ಭೇಟಿ ಮಾಡಿಸಿದ್ದರು. ಅವರಿಂದಲೂ ಒಪ್ಪಿಗೆ ಸಿಕ್ಕ ಮೇಲೆ ಜನಾರ್ಧನ ಅವರ ಪರಿಚಯವಾಯಿತು. ಇದೀಗ ಸಿನಿಮಾ ಸೆಟ್ಟೇರಿದೆ. ಚಿತ್ರಕ್ಕೆ ಇನ್ನೂ ಹೆಸರು ಸಿಕ್ಕಿಲ್ಲ. ಒಂದು ಒಳ್ಳೆಯ ಕತೆಯನ್ನು ಈ ಚಿತ್ರದ ಮೂಲಕ ಹೇಳುತ್ತಿದ್ದೇವೆ’ ಎಂಬುದು ವಚನ್ ಹೇಳುವ ಮಾಹಿತಿ.
ವಸಿಷ್ಠ ಸಿಂಹ ಹಾಗೂ ಕಿಶೋರ್ ಇಬ್ಬರು ಇಲ್ಲಿ ಪೊಲೀಸ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತನಿಖೆಯಲ್ಲಿ ನೆರಳಿನಲ್ಲಿ ಸಾಗುವ ಈ ಕತೆಯಲ್ಲಿ ಇಬ್ಬರ ನಡುವೆ ನಡೆಯುವ ಶೀತಲ ಸಮರ ಚಿತ್ರದ ಮತ್ತೊಂದು ತಿರುವು. ನೈಜ ಧಟನೆಗಳ ಜತೆಗೆ ಕಾಲ್ಪನಿಕ ಅಂಶಗಳು ಚಿತ್ರದಲ್ಲಿ ಬರಲಿವೆ. ಎರಡು ಪಾತ್ರಗಳಿಗೂ ಮಹತ್ವ ಇದೆಯಂತೆ. ‘ಎಲ್ಲ ಸ್ನೇಹಿತ ಬಳಗ ಸೇರಿ ಒಂದೊಳ್ಳೆ ಚಿತ್ರ ಮಾಡಲು ಹೊರಟಿದ್ದೇವೆ. ಇಬ್ಬರ ನಡುವಿನ ಶೀತಲ ಯುದ್ಧ ಕುತೂಹಲ ಮೂಡಿಸುತ್ತದೆ. ಕತೆ ಕೇಳಿದಾಗ ನಾನೇ ಥ್ರಿಲ್ಲಾದೆ’ ಎಂಬುದು ವಸಿಷ್ಠ ಸಿಂಹ ಅವರ ಮಾತು.
ಕೃಷಿ ಕಾಯಿದೆಯ ನಿಜವಾದ ಪರಿಣಾಮಗಳೇನು? ಬಿಚ್ಚಿಟ್ಟ ಕಿಶೋರ್!
ಬೆಂಗಳೂರು, ತುಮಕೂರು, ಮೈಸೂರು, ಮಡಿಕೇರಿ ಸುತ್ತಮುತ್ತ ಹಾಗೂ ಹೊರ ದೇಶಗಳಲ್ಲೂ ಈ ಚಿತ್ರಕ್ಕೆ ಶೂಟಿಂಗ್ ಮಾಡುವ ಪ್ಲಾನ್ ಚಿತ್ರತಂಡದ್ದು. ಚಿಕ್ಕಣ್ಮ ಈ ಚಿತ್ರದಲ್ಲಿ ವಿಶೇಷ ಪಾತ್ರ ಮಾಡುತ್ತಿದ್ದಾರೆ. ಬ್ಯಾಂಡ್ ಸೆಟ್ ಯುವಕನಾಗಿ ಧರ್ಮಣ್ಣ ನಟಿಸುತ್ತಿದ್ದಾರೆ. ನಾಯಕಿ ಆಯ್ಕೆ ಆಗಬೇಕಬೇಕಿದೆ. ನಾಲ್ಕು ಹಾಡುಗಳಿಗೆ ಅನೂಪ್ ಸೀಳಿನ್ ಸಂಗೀತ ನೀಡಲಿದ್ದಾರೆ. ಮಾಸ್ತಿ ಸಂಭಾಷಣೆ ಬರೆದರೆ, ನವೀನ್ ಕುಮಾರ್ ಛಾಯಾಗ್ರಾಹಣ ಮಾಡಲಿದ್ದಾರೆ.