ಕನ್ನಡದಲ್ಲಿ ‘ದ ಬ್ರಿಡ್ಜ್ ಮ್ಯಾನ್’;ಸೇತುಬಂಧು ಗಿರೀಶ್ ಭಾರದ್ವಾಜ್ ಬದುಕಿನ ಕಥೆ!

By Suvarna NewsFirst Published Dec 15, 2020, 3:56 PM IST
Highlights

ಸೇತುಬಂಧು ಎಂದರೆ ಬಹುತೇಕರಿಗೆ ನೆನಪಾಗುವ ಹೆಸರು ಗಿರೀಶ್ ಭಾರದ್ವಾಜ್. ಸುಳ್ಯದಲ್ಲಿ ಹುಟ್ಟಿ, ಮಂಡ್ಯದಲ್ಲಿ ವಿದ್ಯಾಭ್ಯಾಯಾಸ ಮಾಡಿ, ಬೆಂಗಳೂರಿನಲ್ಲಿ ಉದ್ಯೋಗ ಮಾಡಿಕೊಂಡಿದ್ದ ವ್ಯಕ್ತಿ, ತೂಗು ಸೇತುವೆಗಳ ನಿರ್ಮಾಣದ ಮೂಲಕ ಮನುಷ್ಯರ ಬದುಕು- ಸಂಬಂಧಗಳನ್ನು ಕಟ್ಟಿದವರು. 
 

2017ರಲ್ಲಿ ಪದ್ಮಶ್ರೀ ಪ್ರಶಸ್ತಿಗೂ ಪಾತ್ರರಾದವರು. ಕರ್ನಾಟಕ ಸೇರಿದಂತೆ ದೇಶಾದ್ಯಂತ 139 ಸೇತುವೆಗಳನ್ನು ಕಟ್ಟಿ, 240 ಹಳ್ಳಿಗಳಲ್ಲಿ ಸಂಪರ್ಕ ಕ್ರಾಂತಿಗೆ ನಾಂದಿ ಹಾಡಿದ, 3 ಲಕ್ಷಕ್ಕೂ ಹೆಚ್ಚು ಜನರ ಬದುಕು ಮತ್ತು ಕನಸುಗಳನ್ನು ನಿಜ ಮಾಡಿದ ವ್ಯಕ್ತಿ. ಇವರನ್ನು ಬ್ರಿಡ್ಜ್‌ಮ್ಯಾನ್ ಅಂತಲೂ ಕರೆಯುತ್ತಾರೆ. ಈ ಸಾಹಸಿಗನ ಬದುಕು ಈಗ ಸಿನಿಮಾ ಆಗುತ್ತಿದೆ. ಚಿತ್ರದ ಹೆಸರು ‘ದ ಬ್ರಿಡ್ಜ್ ಮ್ಯಾನ್’.

ಸಂತೋಷ್ ಕೊಡಂಕೇರಿ ನಿರ್ದೇಶನದ ಈ ಚಿತ್ರವನ್ನು ಎಸ್ ಕೆ ಟಾಕೀಸ್ ಮೂಲಕ ಶಾಂತ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಈಗಷ್ಟೆ ಚಿತ್ರದ ಟೈಟಲ್ ಲಾಂಚ್ ಮಾಡಿದ್ದಾರೆ. ಚಿತ್ರದಲ್ಲಿ ಬ್ರಿಡ್ಜ್ ಮ್ಯಾನ್ ಪಾತ್ರವನ್ನು ಯಾರು ಮಾಡಲಿದ್ದಾರೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಜತೆಗೆ ಇದು ಕನ್ನಡ ಮತ್ತು ಹಿಂದಿಯಲ್ಲಿ ಮೂಡಿ ಬರುತ್ತಿರುವುದರಿಂದ ಎರಡೂ ಭಾಷೆಗಳಿಗೆ ಸೂಕ್ತ ಎನಿಸುವ ಕಲಾವಿದರ ಹುಡುಕಾಟದಲ್ಲಿ ಇದ್ದಾರೆ ನಿರ್ದೇಶಕರು. ಧನ್ವಿಕ್ ಗೌಡ ಕ್ಯಾಮೆರಾ, ವಿನಯ್ ಶರ್ಮ ಸಂಗೀತ ಚಿತ್ರಕ್ಕಿದೆ. ಕುಶಾಲ ನಗರದ ನಿಸರ್ಗದಾಮದಲ್ಲಿರುವ ಹಳೆಯ ಸೇತುವೆ, ಇವರ ಮೊದಲ ನಿರ್ಮಾಣದ ಬ್ರಿಡ್ಜ್. ಶಶಿಕುಮಾರ್ ಹಾಗೂ ಸುಧಾರಾಣಿ ನಟನೆಯ ‘ಸ್ವಾತಿ’ ಚಿತ್ರದ ಆರಂಭದ ದೃಶ್ಯದಲ್ಲಿ ಬರುವ ಬ್ರಿಡ್ಜ್ ಇವರ ನಿರ್ಮಾಣದ ಎರಡನೇ ಸೇತುವೆಯಂತೆ.

‘ನಾನು ಚಿಕ್ಕಂದಿನಿಂದಲೂ ಕೇಳಿದ, ಕೇಳುತ್ತಿರುವ ಸಾಹಸಿಗ ಎಂದರೆ ಅದು ಸೇತುಬಂಧು ಗಿರೀಶ್ ಭಾರಧ್ವಾಜ್. ಅವರ ಬದುಕಿನ ಪಯಣವನ್ನು ಸಿನಿಮಾ ಮಾಡಬೇಕು ಎಂಬುದು ನನ್ನ ಕನಸು ಆಗಿತ್ತು. ಅದು ಈಗ ಕೂಡಿ ಬರುತ್ತಿದೆ. ಹುಟ್ಟಿ ಬೆಳೆದ ಹಳ್ಳಿಯ ಸಮಸ್ಯೆಗಳನ್ನು ತಿಳಿದು, ಹಳ್ಳಿ ಮತ್ತು ನಗರಗಳ ಸಂಪರ್ಕ ಕಲ್ಪಿಸುವ ತೂಗು ಸೇತುವೆ ಕಟ್ಟುವ ಮೂಲಕ ತಮ್ಮ ಸಾಹಸವನ್ನು ಆರಂಭಿಸಿದವರು. ತಾವು ಹುಟ್ಟಿ ಬೆಳೆದ ಹಳ್ಳಿಯಿಂದಲೇ ಜಗತ್ತಿನ ಗಮನ ಸೆಳೆದ ಈ ವ್ಯಕ್ತಿಯ ಕತೆ ಸಿನಿಮಾಗೂ ಮಿಗಿಲಾಗಿದೆ. ಹೀಗಾಗಿ ನಾನು ಸಿನಿಮಾ ಮಾಡಬೇಕು ಎಂದು ನಿರ್ಧರಿಸಿದೆ’ ಎನ್ನುತ್ತಾರೆ ನಿರ್ದೇಶಕರು. 

click me!