
ನಟಿ ತಾರಾ ಅನುರಾಧ ಅವರಿಗೆ ನಾಳೆ ಅಂದ್ರೆ ಮಾರ್ಚ್ 4 ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಕಲರ್ಸ್ ಕನ್ನಡ ವಾಹಿನಿಯಿಂದ ವಿಶೇಷ ರೂಪದಲ್ಲಿ ಶುಭಾಶಯ ತಿಳಿಸಲಾಗಿದೆ. ನನ್ನಮ್ಮ ಸೂಪರ್ಸ್ಟಾರ್ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿರುವ ತಾರಾ ಅವರಿಗೆ ವಿಶೇಷ ರೂಪದಲ್ಲಿ ಶುಭಾಶಯ ಹೇಳಲಾಗಿದ್ದು, ಅದರ ಪ್ರೊಮೋ ಬಿಡುಗಡೆ ಮಾಡಲಾಗಿದೆ. 2013ರಲ್ಲಿ ನಟಿ ತಾರಾ ಅವರಿಗೆ ಮಗ ಹುಟ್ಟಿದ್ದು ಅವನಿಗೆ ಈಗ 11 ವರ್ಷ. ಕಲರ್ಸ್ ಕನ್ನಡ ವಾಹಿನಿಯ ಕಡೆಯಿಂದ ತಾರಾ ಅವರಿಗೆ ಸರ್ಪ್ರೈಸ್ ಆಗಿ ಮಗನ ಕಡೆಯಿಂದ ಹುಟ್ಟುಹಬ್ಬ ವಿಷ್ ಮಾಡಿಸಲಾಗಿದೆ.
ಈ ಕ್ಷಣದಲ್ಲಿ ಮಗನನ್ನು ತಬ್ಬಿಕೊಂಡು ತಾರಾ ಭಾವುಕರಾದರು. ಅದಕ್ಕೆ ಕಾರಣವೂ ಇದೆ. ತಾರಾ ಅವರಿಗೆ ಮೂರು ಬಾರಿ ಮಿಸ್ಕ್ಯಾರೇಜ್ ಅಂದ್ರೆ ಗರ್ಭಪಾತವಾಗಿತ್ತು. ಆ ಬಳಿಕ ಹುಟ್ಟಿದ ಮಗ ಈತ. ತಾರಾ ಮತ್ತು ಛಾಯಾಗ್ರಾಹಕ ಎಚ್ ಸಿ ವೇಣು ದಂಪತಿಯ ಪುತ್ರ ಕೃಷ್ಣ. ಅಂದಹಾಗೆ ಕೃತಕ ಗರ್ಭಧಾರಣೆ ಮೂಲಕ ತಾರಾ ಮಗನನ್ನು ಪಡೆದುಕೊಂಡಿದ್ದಾರೆ. ಇವರು ಮಗನಿಗೆ ಜನ್ಮ ನೀಡಿದ್ದ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರು ಈ ಬಗ್ಗೆ ಮಾಧ್ಯಮಗಳಿಗೆ ವಿಷಯ ತಿಳಿಸಿದ್ದರು. ಸುಮಾರು ಬಾರಿ ಕೌನ್ಸಿಲಿಂಗ್ ಮಾಡಿದ ಮೇಲೆ IVF ವಿಧಾನದ ಮೂಲಕ ಮಗು ಪಡೆಯಲು ತಾರಾ ಅವರು ಒಪ್ಪಿಗೆ ಸೂಚಿಸಿದ್ದರು ಎಂದು ವೈದ್ಯ ಗುರುಮೂರ್ತಿ ಹೇಳಿದ್ದರು. ಪತಿಯ ವೀರ್ಯಾಣುವನ್ನು ಸಂಗ್ರಹಿಸಿ ಕೃತಕವಾಗಿ ಗರ್ಭ ಬೆಳವಣಿಗೆ ಸಾಧಿಸಿ ಮಗುವನ್ನು ಪಡೆಯುವ ವಿಧಾನವಿದು. ವಿಭಿನ್ನ ಕಾರಣಗಳಿಂದ ನೈಸರ್ಗಿಕವಾಗಿ ಮಕ್ಕಳಾಗಲು ಸಾಧ್ಯವಾಗದ ಸಂದರ್ಭದಲ್ಲಿ ಎಷ್ಟೋ ತಾಯಂದಿರು ಐವಿಎಫ್ ಮೂಲಕ ಮಗುವನ್ನು ಪಡೆದುಕೊಂಡಿದ್ದಾರೆ, ಪಡೆದುಕೊಳ್ಳುತ್ತಿದ್ದಾರೆ. ಇದೇ ಮಾದರಿಯಲ್ಲಿ ತಾರಾ ಕೂಡ ಮಗನನ್ನು ಪಡೆದುಕೊಂಡಿದ್ದು, ಆ ದಿನವನ್ನು ನೆನೆದು ಇದೀಗ ಕಣ್ಣೀರಾಗಿದ್ದಾರೆ.
ಲಾಲಿ ಹಾಡುತ್ತಾ ತಮ್ಮನನ್ನು ತೊಟ್ಟಿಲಲ್ಲಿ ಮಲಗಿಸಿದ ಧ್ರುವ ಸರ್ಜಾ ಮಗಳು: ಕ್ಯೂಟ್ ವಿಡಿಯೋ ವೈರಲ್
'ಅಮ್ಮನೇ ನನಗೆ ಸ್ಫೂರ್ತಿ, ನಾನು ಅಮ್ಮನ ದೊಡ್ಡ ಫ್ಯಾನ್, ದೊಡ್ಡವನಾಗಿ ನಾನು ಅಮ್ಮನಂತೆ ಸ್ಟಾರ್ ಆಗ್ತಿನಿ ಎಂದು ಪುಟಾಣಿ ಕೃಷ್ಣ ಆರು ವರ್ಷದವನಿರುವಾಗಲೇ ವೇದಿಕೆಯೊಂದರಲ್ಲಿ ಹೇಳಿಕೊಂಡಿದ್ದ. 'ಶಿವಾರ್ಜುನ' ಚಿತ್ರದ ಮೂಲಕ ಬೆಳ್ಳಿತೆರೆಗೆ ಪ್ರವೇಶ ಪಡೆದಿರುವ ಕೃಷ್ಣ, ತಾಯಿ ಜೊತೆ ತೆರೆಹಂಚಿಕೊಂಡಿದ್ದ. ಶಿವನಂದಿ ಪಾತ್ರಕ್ಕೆ ಬಣ್ಣಹಚ್ಚಿರುವ ಕೃಷ್ಣ, ಡಬ್ಬಿಂಗ್ ಕೂಡ ಮಾಡಿ ಸೈ ಅನಿಸಿಕೊಂಡಿದ್ದಾನೆ. ಆ ಸಂದರ್ಭದಲ್ಲಿ ಅಮ್ಮನಂತೆಯೇ ಸ್ಟಾರ್ ಆಗುವ ಆಸೆ ವ್ಯಕ್ತಪಡಿಸಿದ್ದ. ನಾನು ಅಮ್ಮನ ಚಿತ್ರಗಳನ್ನು ನೋಡುತ್ತಲೇ ಬರುತ್ತಿದ್ದೇನೆ. ಅವರ ಜೊತೆ ಚಿತ್ರೀಕರಣಕ್ಕೆ ಆಗಾಗ ಹೋಗುತ್ತಿರುತ್ತೇನೆ.ಅಮ್ಮನಂತೆ ನಾನು ನಟಿಸಬೇಕು ಎಂದು ಆಸೆಯಾಗುತ್ತಿತ್ತು. ಅಮ್ಮನೇ ನನ್ನ ಮೆಚ್ಚಿನ ನಟಿ, ನೆಚ್ಚಿನ ನಟ ರಾಕಿಂಗ್ ಸ್ಟಾರ್ ಯಶ್ ಎಂದು ಹೇಳಿರುವ ಕೃಷ್ಣ , ನಾನು ಹೀರೋ ಆಗಬೇಕು. ಧ್ರುವ ಸರ್ಜಾ ರೀತಿ ಫೈಟ್ ಮಾಡಬೇಕು ಎಂದಿದ್ದ.
ಇನ್ನು ತಾರಾ ಅವರ ಕುರಿತಂತೂ ಹೇಳುವುದೇ ಬೇಡ. ಅವರ ಅಭಿನಯಕ್ಕೆ ಅವರೇ ಸಾಟಿ. ತುಳಸಿದಳ ಚಿತ್ರದ ಮೂಲಕ ಸಿನಿಮಾದ ಮೂಲಕ ಸ್ಯಾಂಡಲ್ವುಡ್ನಲ್ಲಿ ಗುರುತಿಸಿಕೊಂಡವರು ಇವರು. ಆನಂದ್ , ಗುರಿ , ಮನೆಯೇ ಮಂತ್ರಾಲಯ , ರಣರಂಗ , ಡಾಕ್ಟರ್ ಕೃಷ್ಣ , ಉಂಡು ಹೋದ ಕೊಂಡು ಹೋದ , ಬೆಳ್ಳಿ ಕಾಲುಂಗುರ , ಮುಂಜಾನೆಯ ಮಂಜು , ಮುದ್ದಿನ ಮಾವ , ಸಿಪಾಯಿ , ಕಾನೂರು ಹೆಗ್ಗಡತಿ , ಹಸೀನಾ , ಸೈನೈಡ್ , ಈ ಬಂಧನ , ಶ್ರಾವಣಿ ಸುಬ್ರಮಣ್ಯ , ಹೆಬ್ಬೆಟ್ ರಾಮಕ್ಕ , ಬಡವ ರಾಸ್ಕಲ್ ಮುಂತಾದ ಸಿನಿಮಾಗಳಲ್ಲಿ ತಾರಾ ಅನುರಾಧಾ ಅಭಿನಯಿಸಿದ್ದಾರೆ. ತಮ್ಮ ಅಭಿನಯಕ್ಕೆ ರಾಜ್ಯ ಪ್ರಶಸ್ತಿ ಹಾಗೂ ರಾಷ್ಟ್ರ ಪ್ರಶಸ್ತಿಯನ್ನು ತಾರಾ ಅನುರಾಧಾ ಮುಡಿಗೇರಿಸಿಕೊಂಡಿದ್ದಾರೆ.
ಜೀನೀ ಗೆಟಪ್ಗೆ ಬಿಗ್ಬಾಸ್ ತುಕಾಲಿ ಸಂತೋಷ್ ರೆಡಿಯಾಗಿದ್ದು ಹೀಗೆ ನೋಡಿ... ವಿಡಿಯೋ ವೈರಲ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.