
ಇತ್ತೀಚೆಗೆ ಶಿವರಾಜ್ಕುಮಾರ್ ಮತ್ತು ದರ್ಶನ್ ಪುತ್ರ ವಿನೀಶ್ ಅವರು ಆಕಸ್ಮಿಕವಾಗಿ ಭೇಟಿಯಾಗಿದ್ದರು. ಈ ಕುರಿತು ಶಿವಣ್ಣ ಮಾತನಾಡಿ, ‘ನಾನು ಶೂಟಿಂಗ್ ಮಾಡುತ್ತಿದ್ದೆ. ವಿನೀಶ್ ಅಲ್ಲಿ ನಿಂತಿದ್ದ. ಅವನನ್ನು ನೋಡಿ ತುಂಬಾ ನೋವಾಯಿತು. ನನ್ನ ಬಳಿ ಬಂದು ಹೇಗಿದ್ದೀರಾ ಅಣ್ಣಾ ಅಂತ ವಿಚಾರಿಸಿದ. ಅವನು ನನ್ನ ಬಗ್ಗೆ ಕೇರ್ ತಗೊಂಡಿದ್ದು ಮನಸ್ಸಿಗೆ ನಾಟಿತು. ತಲೆ ಕೆಡಿಸಿಕೊಳ್ಳಬೇಡ, ದೇವರ ಮೇಲೆ ಭಾರ ಹಾಕಿ, ಎಲ್ಲವೂ ಸರಿಹೋಗುತ್ತದೆ ಅಂದೆ. ದರ್ಶನ್ಗೆ ಹೀಗೇಕಾಯಿತು ಅಂತ ಯಾರಿಗೂ ಗೊತ್ತಿಲ್ಲ. ಹೀಗಾಗಲಿ ಅಂತ ಯಾರೂ ಬಯಸುವುದೂ ಇಲ್ಲ. ದರ್ಶನ್ ತಂದೆ ಸಮಯದಿಂದಲೂ ನಾವು ಎಲ್ಲರೂ ಒಂದೇ ಕುಟುಂಬದಂತೆ ಇದ್ದವರು’ ಎಂದರು.
ಶಿವರಾಜ್ಕುಮಾರ್ ‘45’ ಸಿನಿಮಾ ಶೂಟಿಂಗ್ ವೇಳೆಯಲ್ಲಿ ಬದುಕಿನ ತೀವ್ರವಾದೊಂದು ಹಂತವನ್ನು ದಾಟಿ ಬಂದಿದ್ದಾರೆ. ಹಾಗಾಗಿ ಈ ಸಿನಿಮಾ ಜೊತೆ ಅವರಿಗೆ ವಿಶೇಷ ಆತ್ಮೀಯತೆ ಇದೆ. ಅರ್ಜುನ್ ಜನ್ಯಾ ನಿರ್ದೇಶನದ, ರಮೇಶ್ ರೆಡ್ಡಿ ನಿರ್ಮಾಣದ, ಉಪೇಂದ್ರ, ರಾಜ್ ಬಿ. ಶೆಟ್ಟಿ ನಟನೆಯ. ಡಿ.25ರಂದು ಬಿಡುಗಡೆಯಾಗುತ್ತಿರುವ ಈ ಸಿನಿಮಾ ಕುರಿತು ಅವರ ಮಾತುಗಳು ಇಲ್ಲಿವೆ.
- 45 ಸಿನಿಮಾ ಶೂಟಿಂಗ್ ವೇಳೆಯಲ್ಲಿಯೇ ನನಗೆ ಕ್ಯಾನ್ಸರ್ ಇರುವುದು ಗೊತ್ತಾಯಿತು. ಎಲ್ಲರಿಗೂ ಹೇಳಿದಾಗ ಎಲ್ಲರೂ ಶಾಕ್ ಆದರು. ಆ ಸಂದರ್ಭದಲ್ಲಿ ರವಿ ಸರ್ ಒಮ್ಮೆ ಮನೆಗೆ ಬಂದಿದ್ದರು. ಗೀತಾ ಬಳಿ, ಯಾವುದೇ ಕಾರಣಕ್ಕೂ ಅವನು ಶೂಟಿಂಗ್ ಹೋಗುವುದನ್ನು ತಡೆಯಬೇಡ ಅದೇ ಅವನನ್ನು ಮಂದೆ ಕರೆದುಕೊಡು ಹೋಗುತ್ತದೆ ಎಂದರು. ಅದೇ ಮಾತು ನಿಜವಾಯಿತು. ಎಲ್ಲರೂ ನನಗೆ ಸಪೋರ್ಟ್ ಮಾಡಿದರು. ಎಲ್ಲರಿಂದ ನಾನು ಬದುಕಿ ಬಂದೆ.
- ಅಮೆರಿಕಾಗೆ ಚಿಕಿತ್ಸೆಗೆ ಹೋಗುವಾಗ ಏನಾದರೂ ಎಡವಟ್ಟಾದರೆ ಎಂಬ ಭಯವಿತ್ತು. ನನ್ನಿಂದ ಏನೂ ತೊಂದರೆ ಆಗಬಾರದು ಅಂತ ಹಠದಿಂದ ಕನ್ನಡ, ತಮಿಳು ಎರಡೂ ಡಬ್ಬಿಂಗ್ ಮಾಡಿದೆ. ಆಗ ಉಪೇಂದ್ರ, ರಾಜ್ ಬಿ.ಶೆಟ್ಟಿ ಅವರಿರುವ ಸನ್ನಿವೇಶಗಳನ್ನು ಎಂಜಾಯ್ ಮಾಡಿದ್ದೇನೆ.
- ಅರ್ಜುನ್ ಜನ್ಯಾ ಕತೆ ಹೇಳುವಾಗಲೇ ವಿಶೇಷ ಅನ್ನಿಸಿತ್ತು. ನೀವೇ ನಿರ್ದೇಶನ ಮಾಡಿ ಎಂದಿದ್ದೆ. ರಮೇಶ್ ರೆಡ್ಡಿಯವರಂತೂ ಅದ್ಭುತ ಮನುಷ್ಯ. ಇಬ್ಬರೂ ಸೇರಿ ದೊಡ್ಡ ಸಿನಿಮಾ ಮಾಡಿದ್ದಾರೆ. ಇದೊಂದು ಅಮರಚಿತ್ರಕಥಾದಂತಹ ಸಿನಿಮಾ ಆಗಬೇಕು ಅಂತ ನನ್ನಾಸೆ. ಕತೆ ಅಮರವಾಗಬೇಕು.
- ಚಿತ್ರರಂಗಕ್ಕೆ ಬಂದು 41 ವರ್ಷಗಳಾಗಿವೆ. ಜೀವನದಲ್ಲಿ ಎಲ್ಲವನ್ನೂ ನೋಡಿದ್ದೇನೆ. ಚಿಕ್ಕಂದಿನಿಂದಲೇ ಸಿನಿಮಾ ನೋಡಿಕೊಂಡು ಬೆಳೆದಿದ್ದೇನೆ. ಈ ಚಿತ್ರದಲ್ಲಿ ಒಂದು ಶಕ್ತಿ ಇದೆ. ಜೀವನದ ಗಾಢವಾದ ಅರ್ಥವಿದೆ. ಸಿನಿಮಾ ನೋಡಿದ ಜನರಿಗೆ ಇದೇ ಅಲ್ಲವೇ ಜೀವನ, ಇದಲ್ಲವೇ ಜೀವನದ ಹಾದಿ ಅಂತ ಅನ್ನಿಸದೇ ಇರದು. ಅರ್ಜುನ್ ಜನ್ಯಾ ಈ ಚಿತ್ರದಲ್ಲಿ ಹೊಸ ಜಗತ್ತನ್ನೇ ಕಟ್ಟಿಕೊಟ್ಟಿದ್ದಾರೆ.
- ಹೆಣ್ಣಿನ ಪಾತ್ರ ದಲ್ಲಿ ತೋರಿಸಿದ್ದಾರೆ. ಪಾತ್ರಗಳ ವಿಚಾರ ಬಂದಾಗ ನಾವು ಇಮೇಜ್ ನೋಡಬಾರದು. ನಾವು ನಿಂತ ಭೂಮಿ, ಹೆತ್ತ ತಾಯಿ, ಹೆಂಡತಿ, ತಂಗಿ, ಅಕ್ಕ, ಮಗಳು ಎಲ್ಲರೂ ಹೆಣ್ಣು. ನಾವು ಸ್ತ್ರೀಶಕ್ತಿ ನಡುವೆ ಬದುಕುತ್ತಿದ್ದೇವೆ. ಅಂತಹ ಶಕ್ತಿಯ ವೇಷ ಧರಿಸುವುದೇ ಒಂದು ಅದೃಷ್ಟ.
- ಸುದೀಪ್ ಅವರ ‘ಮಾರ್ಕ್’ ಕೂಡ ರಿಲೀಸ್ ಆಗುತ್ತಿದೆ. ಈ ಸಲ ಸಾಲು ಸಾಲು ರಜೆಗಳಿವೆ. ಇಂಥಾ ಸಮಯ ಬರುವುದೇ ಅಪರೂಪ ಮತ್ತು ಚಿತ್ರರಂಗಕ್ಕೆ ಒಳ್ಳೆಯದು. ಹಾಗಾಗಿ ನಮ್ಮ, ಅವರ ಎರಡೂ ಸಿನಿಮಾಗಳಿಗೂ ಒಳ್ಳೆಯದಾಗುತ್ತದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.