S Narayan ಸಿನಿಮಾದಿಂದ ರಾಜಕೀಯದತ್ತ ಎಸ್.ನಾರಾಯಣ್, ಶೀಘ್ರದಲ್ಲೇ ರಾಜಕೀಯ ನಾಯಕನಾಗಿ ನಿಮ್ಮ ಮುಂದೆ

By Suvarna NewsFirst Published Jan 30, 2022, 10:14 PM IST
Highlights

* ಸಿನಿಮಾದಿಂದ ರಾಜಕೀಯದತ್ತ ಎಸ್.ನಾರಾಯಣ್ ಒಲವು
* ಕಾಂಗ್ರೆಸ್ ಸೇರ್ಪಡೆಗೆ ಮುಂದಾದ ಕಲಾ ಸಾಮ್ರಾಟ್ ಎಸ್.ನಾರಾಯಣ್
* ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜೊತೆ ಮಾತುಕತೆ

ಬೆಂಗಳೂರು, (ಜ.30): ಸುಮಾರು ಎರಡು ದಶಕಗಳಿಗೂ ಹೆಚ್ಚು ಕಾಲ ಕನ್ನಡ ಚಿತ್ರರಂಗದಲ್ಲಿ ತೊಡಗಿಸಿಕೊಂಡು  ಹಲವು ಹಿಟ್ ಚಿತ್ರಗಳನ್ನು ನೀಡಿರುವ ಎಸ್.ನಾರಾಯಣ್ ಅವರ ಚಿತ್ತ ಇದೀಗ ರಾಜಕೀಯದತ್ತ ನೆಟ್ಟಿದೆ.

ಕನ್ನಡ ನಟ, ನಿರ್ದೇಶಕ, ನಿರ್ಮಾಪಕ ಎಸ್.ನಾರಾಯಣ್ (S Narayan) ಈಗ ರಾಜಕೀಯದತ್ತ ಒಲವು ತೋರಿಸಿದ್ದು, ಕಾಂಗ್ರೆಸ್ (Congress) ಸೇರ್ಪಡೆಗೆ ಮುಂದಾಗಿದ್ದಾರೆ.  

ಎಸ್‌ ನಾರಾಯಣ್ '5ಡಿ' ಚಿತ್ರ ಫಸ್ಟ್ ಲುಕ್ ಬಿಡುಗಡೆ ಮಾಡಿದ DKS!

ಹೌದು...ಎಸ್ ನಾರಾಯಣ್ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar)​ ಅವರನ್ನ ಭೇಟಿ ಮಾಡಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾತುಕತೆ ನಡೆಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ನಾರಾಯಣ್ ಪಕ್ಷ ಸೇರುತ್ತಿರುವ ಬಗ್ಗೆ ಸುಳಿವು ನೀಡಿದ್ದು,  ಪಕ್ಷದ ಸಿದ್ಧಾಂತ ಒಪ್ಪಿ ಅವರು ಸೇರ್ಪಡೆಯಾಗುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. 

ಡಿಕೆಶಿಯಿಂದ 5ಡಿ' ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿಸಿದ್ರು 
ಯೆಸ್...ಕೆಲ ತಿಂಗಳುಗಳ ಹಿಂದೆ ಎಸ್‌ ನಾರಾಯಣ ಅವರು ತಮ್ಮ '5ಡಿ' ಚಿತ್ರದ ಫಸ್ಟ್‌ ಲುಕ್ ಅನ್ನು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಂದ ಬಿಡುಗಡೆ ಮಾಡಿಸಿದ್ದರು.

ಈ ವೇಳೆ ಮಾತನಾಡಿದ್ದ ಡಿಕೆಶಿ, ನಾನು ಮೂಲತಃ ವಿತರಕನಾಗಿದ್ದವನು. ಕೆಲವು ಕಡೆ ಚಿತ್ರಮಂದಿರಗಳನ್ನು ನಡೆಸುತ್ತಿದ್ದೆ. ಹೀಗಾಗಿ ಚಿತ್ರರಂಗದೊಂದಿಗೆ ಹಳೆಯ ನಂಟಿದೆ. ಎಸ್.ನಾರಾಯಣ್ ಶೂನ್ಯದಿಂದ ಸಾಧನೆ ಮಾಡಿದವರು. ಅವರ ಈ ಚಿತ್ರಕ್ಕೆ ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದನ್ನು ಇಲ್ಲಿ ಸ್ಮರಿಸಬಹುದು.

1981ರ ವರ್ಷದಲ್ಲಿ ನಟನಾಗಬೇಕು ಎಂದುಕೊಂಡು ಬೆಂಗಳೂರಿಗೆ ಬಂದ ನಾರಾಯಣ್, ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ. ನಿರ್ದೇಶಕ, ನಿರ್ಮಾಪಕ, ನಟನಾಗಿ ಜನರನ್ನು ರಂಜಿಸಿದ್ದಾರೆ.ಇದೀಗ ರಾಜಕೀಯಕ್ಕೆ ಧುಮುಕಲು ನಿರ್ಧರಿಸಿದ್ದಾರೆ.

ಸುಮಾರು ಎರಡು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವ ಎಸ್.ನಾರಾಯಣ್ ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಚೈತ್ರದ ಪ್ರೇಮಾಂಜಲಿ ನಿರ್ದೇಶನದ ಮೂಲಕ ಸ್ವತಂತ್ರ ವೃತ್ತಿ ಜೀವನ ಆರಂಭಿಸಿದ ಅವರು ವರನಟ ಡಾ.ರಾಜ್‍ಕುಮಾರ್ ಅವರ ಶಬ್ಧವೇದಿ, ಡಾ.ವಿಷ್ಣುವರ್ಧನ್ ಅವರ ವೀರಪ್ಪ ನಾಯಕ ಸೇರಿದಂತೆ ಅಮೋಘ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಇವರು ಕೇವಲ ಸಿನಿಮಾಗಳಲ್ಲಿ ಮಾತ್ರ ನಟಿಸದೆ ಟಿವಿ ಕಿರುತೆರೆಯಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸುಮತಿ, ಭಾಗೀರತಿ, ಅಂಬಿಕಾ, ದುರ್ಗ, ಪಾರ್ವತಿ, ಚಂದ್ರಿಕಾ, ಸೂರ್ಯವಂಶ, ವೈಶಾಲಿ, ಮುಂತಾದ ಧಾರವಾಹಿಗಳಲ್ಲಿ ನಟಿಸಿದ್ದಾರೆ. ಇದೀಗ ರಾಜಕೀಯಕ್ಕೆ ಎಂಟ್ರಿ ಕೊಡಲು ಸಿದ್ಧರಾಗಿದ್ದು, ಚುನಾವಣೆಗೆ ಸ್ಪರ್ಧೆ ಮಾಡ್ತಾರಾ ಎನ್ನುವುದನ್ನು ಕಾದುನೋಡಬೇಕಿದೆ.

click me!