Dileep Raj: 'ಅವನೇ ನಮ್ಮ ತಂಡದಲ್ಲಿ ಮೊದಲು ಹೀರೋ ಆಗಿದ್ದು'.. ಓಲ್ಡನ್ ಡೇಸ್ ನೆನೆದ 'ಗೋಲ್ಡನ್‌ ಸ್ಟಾರ್‌ʼಗಣೇಶ್‌

Published : May 13, 2026, 05:35 PM IST
Dileep Raj Ganesh

ಸಾರಾಂಶ

ಕೇವಲ 15-20 ದಿನಗಳ ಹಿಂದಷ್ಟೇ ದಿಲೀಪ್ ಅವರನ್ನು ಭೇಟಿಯಾಗಿದ್ದ ಗಣೇಶ್‌ಗೆ ಈ ಸುದ್ದಿಯನ್ನು ನಂಬಲು ಸಾಧ್ಯವಾಗುತ್ತಿಲ್ಲವಂತೆ. 'ಹೃದಯದ ತಪಾಸಣೆಗೆ ಹೋಗಬೇಕಿದ್ದ ವ್ಯಕ್ತಿ, ಅಲ್ಲಿಗೆ ತಲುಪುವ ಮೊದಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದು ವಿಧಿಯ ಕ್ರೂರ ಆಟ ಎನ್ನದೆ ವಿಧಿಯಿಲ್ಲ' ಎನ್ನಲೇಬೇಕು!

ನಟ ದಿಲೀಪ್ ರಾಜ್ ಅವರ ನಿಧನದ ಹಿನ್ನೆಲೆಯಲ್ಲಿ 'ಗೋಲ್ಡನ್ ಸ್ಟಾರ್' ಗಣೇಶ್ ಅವರು ಹಂಚಿಕೊಂಡ ಭಾವುಕ ನೆನಪು!

"ನಮ್ಮ ತಂಡದಲ್ಲಿ ಅವನೇ ಮೊದಲು 'ಹೀರೋ' ಆಗಿದ್ದು..!".. ಗೆಳೆಯ ದಿಲೀಪ್ ರಾಜ್ ಅಗಲಿಕೆಗೆ 'ಗೋಲ್ಡನ್ ಸ್ಟಾರ್' ಗಣೇಶ್ ಕಣ್ಣೀರು!

ಸ್ಯಾಂಡಲ್‌ವುಡ್ ಮತ್ತು ಕಿರುತೆರೆಯ ಜನಪ್ರಿಯ ನಟ, ನಿರ್ಮಾಪಕ ದಿಲೀಪ್ ರಾಜ್ (Dileep Raj) ಅವರ ಅಕಾಲಿಕ ನಿಧನ ಇಡೀ ಚಿತ್ರರಂಗವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎನ್ನುವಾಗಲೇ, ಮಗು ನಗೆಯ ಈ ಪ್ರತಿಭಾನ್ವಿತ ಕಲಾವಿದ ಸದ್ದಿಲ್ಲದೆ ಇಹಲೋಕ ತ್ಯಜಿಸಿದ್ದಾರೆ. ಈ ನೋವಿನ ಸಂದರ್ಭದಲ್ಲಿ ದಿಲೀಪ್ ಅವರ ಆಪ್ತ ಗೆಳೆಯ 'ಗೋಲ್ಡನ್ ಸ್ಟಾರ್' ಗಣೇಶ್ (Golden Star Ganesh) ಹಳೆಯ ದಿನಗಳನ್ನು ನೆನಪಿಸಿಕೊಂಡು ತೀವ್ರ ಭಾವುಕರಾಗಿದ್ದಾರೆ.

2000ನೇ ಇಸವಿ.. ಆ ರಂಗಭೂಮಿಯ ದಿನಗಳು!

ಇಂದು ಗಣೇಶ್ 'ಗೋಲ್ಡನ್ ಸ್ಟಾರ್', ದುನಿಯಾ ವಿಜಯ್ 'ಸಲಗ', ಶ್ರೀನಗರ ಕಿಟ್ಟಿ 'ಡೈಮಂಡ್ ಸ್ಟಾರ್'. ಆದರೆ ಇವರೆಲ್ಲರೂ ಚಿತ್ರರಂಗಕ್ಕೆ ಬರುವ ಮೊದಲು ಅಂದರೆ 2000ನೇ ಇಸವಿಯಲ್ಲಿ ರಂಗಭೂಮಿಯಲ್ಲಿ ಒಟ್ಟಿಗೆ ಬೆಳೆದವರು. ಆ ದಿನಗಳನ್ನು ನೆನೆದ ಗಣೇಶ್, "ನಾವೆಲ್ಲರೂ ಕಾಲೇಜು ಮುಗಿಸಿ ಚಿತ್ರರಂಗಕ್ಕೆ ಒಟ್ಟಿಗೆ ಬಂದವರು. ರಂಗಭೂಮಿಯಲ್ಲಿ ನಾವೆಲ್ಲ ನಾಟಕಗಳನ್ನು ಮಾಡುತ್ತಾ ಕಷ್ಟಪಡುತ್ತಿದ್ದ ಕಾಲವದು. ಆದರೆ ಆ ಸಮಯದಲ್ಲಿ ನಮ್ಮೆಲ್ಲರಿಗಿಂತ ಮೊದಲು ಜನಪ್ರಿಯತೆ ಗಳಿಸಿದ್ದು, ಮೊದಲು ಅವಕಾಗಳನ್ನು ಗಿಟ್ಟಿಸಿಕೊಂಡಿದ್ದು ಇದೇ ದಿಲೀಪ್ ರಾಜ್" ಎಂದು ಅಂದಿನ ದಿನಗಳ ಗತವೈಭವವನ್ನು ಮೆಲುಕು ಹಾಕಿದರು.

ಕಿಟ್ಟಿ - ದಿಲೀಪ್ ಜೋಡಿಯ ಆ ದಿನಗಳು:

ದಿಲೀಪ್ ರಾಜ್ ಅವರ ಬೆಳವಣಿಗೆಯನ್ನು ಕಂಡು ಅವರ ಗೆಳೆಯರ ಬಳಗ ಯಾವಾಗಲೂ ಹೆಮ್ಮೆ ಪಡುತ್ತಿತ್ತಂತೆ. "ಪ್ರೀತಿಗಾಗಿ ಎಂಬ ಸೀರಿಯಲ್‌ನಲ್ಲಿ ಶ್ರೀನಗರ ಕಿಟ್ಟಿ ಮತ್ತು ದಿಲೀಪ್ ಒಟ್ಟಿಗೆ ನಟಿಸುತ್ತಿದ್ದರು. ನಾನು ಮತ್ತು ವಿಜಯ್ ಆ ಸೀರಿಯಲ್ ಸೆಟ್‌ಗೆ ಹೋಗಿ ಇವರ ನಟನೆಯನ್ನು ನೋಡುತ್ತಿದ್ದೆವು. ದಿಲೀಪ್ ತುಂಬಾ ಅದ್ಭುತವಾಗಿ ಡ್ಯಾನ್ಸ್ ಮಾಡುತ್ತಿದ್ದರು ಮತ್ತು ಅಪ್ಪಟ ಶ್ರಮಜೀವಿಯಾಗಿದ್ದರು. ಸಣ್ಣ ವಯಸ್ಸಿನಲ್ಲೇ ಅವರ ಈ ಅಗಲಿಕೆ ನಮಗೆ ದೊಡ್ಡ ಶಾಕ್ ನೀಡಿದೆ" ಎಂದು ಗಣೇಶ್ ಬೇಸರ ವ್ಯಕ್ತಪಡಿಸಿದ್ದಾರೆ.

"ನಾನು ಅವನನ್ನು ಸೀನಿಯರ್ ಅಂತಲೇ ಕರೆಯುತ್ತಿದ್ದೆ":

ಗಣೇಶ್ ಅವರಿಗೆ ದಿಲೀಪ್ ಕೇವಲ ಗೆಳೆಯನಾಗಿರಲಿಲ್ಲ, ಒಂದು ರೀತಿಯಲ್ಲಿ ಸ್ಫೂರ್ತಿಯೂ ಆಗಿದ್ದರು. "ಚಿತ್ರರಂಗಕ್ಕೆ ನಾವು ಹೊಸಬರಾಗಿದ್ದಾಗ, ಮೆಗಾ ಸೀರಿಯಲ್‌ಗಳ ಹವಾ ಶುರುವಾಗಿತ್ತು. ಆಗ ಯಾವ ಸೀರಿಯಲ್ ನೋಡಿದರೂ ದಿಲೀಪ್ ರಾಜ್ ಅವರೇ ಲೀಡ್ ರೋಲ್‌ನಲ್ಲಿ ಇರುತ್ತಿದ್ದರು. ಅಷ್ಟೊಂದು ಬ್ಯುಸಿ ಕಲಾವಿದನಾಗಿದ್ದ ಕಾರಣ ನಾನು ಭೇಟಿಯಾದಾಗಲೆಲ್ಲಾ ಸೀನಿಯರ್.. ಸೀನಿಯರ್.. ಎಂದೇ ತಮಾಷೆ ಮಾಡುತ್ತಾ ಮಾತನಾಡಿಸುತ್ತಿದ್ದೆ. ಅವರು ಯಾವಾಗಲೂ ಹ್ಯಾಪಿ ಮ್ಯಾನ್ ಆಗಿದ್ದರು" ಎನ್ನುತ್ತಾರೆ ಗಣೇಶ್.

ವಿಧಿಯ ಅಟ್ಟಹಾಸಕ್ಕೆ ಮರುಗಿದ ಗೆಳೆಯ:

ಕೇವಲ 15-20 ದಿನಗಳ ಹಿಂದಷ್ಟೇ ದಿಲೀಪ್ ಅವರನ್ನು ಭೇಟಿಯಾಗಿದ್ದ ಗಣೇಶ್‌ಗೆ ಈ ಸುದ್ದಿಯನ್ನು ನಂಬಲು ಸಾಧ್ಯವಾಗುತ್ತಿಲ್ಲವಂತೆ. ಹೃದಯದ ತಪಾಸಣೆಗೆ ಹೋಗಬೇಕಿದ್ದ ವ್ಯಕ್ತಿ, ಅಲ್ಲಿಗೆ ತಲುಪುವ ಮೊದಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದು ವಿಧಿಯ ಕ್ರೂರ ಆಟ ಎನ್ನದೆ ವಿಧಿಯಿಲ್ಲ. "ದಿಲೀಪ್ ರಾಜ್ ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿ ಸಿಗಲಿ" ಎಂದು ಪ್ರಾರ್ಥಿಸಿರುವ ಗಣೇಶ್, ತಮ್ಮ ಒಡನಾಡಿಯ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

ಒಟ್ಟಿನಲ್ಲಿ, ಗಣೇಶ್ ಅವರ ಈ ಮಾತುಗಳು ಕೇವಲ ಒಬ್ಬ ನಟನ ಬಗ್ಗೆಯಲ್ಲ, ಬದಲಿಗೆ ಕಷ್ಟದ ದಿನಗಳಲ್ಲಿ ಜೊತೆಯಾಗಿದ್ದ ಒಬ್ಬ ನೈಜ ಗೆಳೆಯನ ಬಗ್ಗೆ ಇರುವ ಅಪಾರ ಪ್ರೀತಿ ಮತ್ತು ಗೌರವವನ್ನು ಎತ್ತಿ ತೋರಿಸುತ್ತವೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

50 ವರ್ಷಕ್ಕೆ ನಿವೃತ್ತಿ ತಗೋತೇನಪ್ಪಾ ಎಂದಿದ್ದ Dileep Raj 47ಕ್ಕೇ ಮುಗಿಸಿದ್ರು ಪಯಣ, ಮುಂದಿನ ಪ್ಲ್ಯಾನ್​ ಏನಿತ್ತು
Dileep Raj's death: ಜಿಮ್​ಗೆ ಹೋಗ್ತಿರೋರೇ ಹೆಚ್ಚು ಹೃದಯಾಘಾತದಿಂದ ಸಾಯ್ತಿರೋದು ಯಾಕೆ? ತಜ್ಞರು ಏನಂದ್ರು