ಹೈಕೋರ್ಟ್ ಆದೇಶ ಪ್ರತಿ ಪರಿಶೀಲಿಸಿ ನಟ ಉಪೇಂದ್ರ ವಿರುದ್ಧ ತನಿಖೆ, ಕೇಸ್ ವರ್ಗಾವಣೆ

By Gowthami KFirst Published Aug 15, 2023, 9:47 AM IST
Highlights

ನಟ ಉಪೇಂದ್ರ ವಿರುದ್ಧ ದಾಖಲಾಗಿರೋ ಕೇಸುಗಳ ವರ್ಗಾವಣೆ ಮಾಡಿ . ಹೈಕೋರ್ಟ್ ಆದೇಶ ಪ್ರತಿ ಪರಿಶೀಲನೆ ನಡೆಸಿ ಉಪ್ಪಿ ವಿರುದ್ಧ ತನಿಖೆ ನಡೆಸಲು ನಿರ್ಧರಿಸಲಾಗಿದೆ.

ಬೆಂಗಳೂರು (ಆ.15): ಜಾತಿ ನಿಂದನೆ ಆರೋಪ ಹಿನ್ನೆಲೆ ನಟ ಉಪೇಂದ್ರಗೆ ಸಂಕಷ್ಟ ಎದುರಾಗಿತ್ತು. ತಮ್ಮ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ರದ್ದು ಕೋರಿ ಉಪ್ಪಿ ಹೈಕೋರ್ಟ್ ಮೆಟ್ಟಿಲೇರಿದ್ದರು.  ಉಪೇಂದ್ರ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಎಫ್‌ಐಆರ್‌ಗೆ ಮಧ್ಯಂತರ ತಡೆಕೋರಿ ಆದೇಶ ನೀಡಿತ್ತು. ಇದೀಗ ನಟ ಉಪೇಂದ್ರ ವಿರುದ್ಧ ದಾಖಲಾಗಿರೋ ಕೇಸುಗಳ ವರ್ಗಾವಣೆಯಾಗುವ ಸಾಧ್ಯತೆ ಇದೆ. ಹಲಸೂರು ಗೇಟ್ ಠಾಣೆಯಲ್ಲಿ ದಾಖಲಾಗಿರೋ ಕೇಸ್ ಅನ್ನು ಚೆನ್ನಮ್ಮನಕೆರೆ ಠಾಣೆಗೆ ವರ್ಗಾವಣೆ ಮಾಡಲು ಆಲೋಚಿಸಲಾಗಿದೆ. 

ಮೊದಲು ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ (Chennamana Achchukattu police station) ಪ್ರಕರಣ ದಾಖಲಾಗಿತ್ತು. ಹೀಗಾಗಿ ಹಲಸೂರು ಗೇಟ್ ಠಾಣೆ ಎಫ್ ಐಆರ್ ಕೂಡ ಅಲ್ಲಿಗೆ ವರ್ಗಾವಣೆ ಮಾಡಲು ನಿರ್ಧಾರ ಮಾಡಲಾಗಿದೆ. ಚೆನ್ನಮ್ಮನಕೆರೆ ಠಾಣೆಯ ಕೇಸ್ ಬಗ್ಗೆ ವಿ.ವಿ.ಪುರಂ ಎಸಿಪಿ ನಾಗರಾಜ್  ತನಿಖೆ ನಡೆಸಲಿದ್ದಾರೆ. ಆ.13 ರಂದು ಉಪೇಂದ್ರಗೆ ವಿಚಾರಣೆಗೆ ಹಾಜರಾಗಲು ಎಸಿಪಿ ನಾಗರಾಜ್ ನೊಟೀಸ್ ನೀಡಿದ್ದರು. ಆದರೆ ನಟ ಉಪೇಂದ್ರ ವಿಚಾರಣೆಗೆ ಹಾಜರಾಗಿರಲಿಲ್ಲ. ಬದಲಾಗಿ ಯಾರ ಕಣ್ಣಿಗೂ ಬೀಳದೆ ತಮ್ಮ ವಕೀಲರ ಮೂಲಕ ಹೈಕೋರ್ಟ್ ಮೋರೆ ಹೋಗಿದ್ದರು. ಸೋಮವಾರ ಹೈಕೋರ್ಟ್ ನಟ ಉಪೇಂದ್ರ ಅರ್ಜಿ ಪುರಸ್ಕರಿಸಿ ಎಫ್ ಐಆರ್ ಗೆ ತಡೆಯಾಜ್ಞೆ ನೀಡಿತ್ತು.

Latest Videos

ನಟ ಉಪೇಂದ್ರನಿಗೆ ಬಿಗ್‌ ರಿಲೀಫ್‌ ಕೊಟ್ಟ ಹೈಕೋರ್ಟ್‌: ಎಫ್‌ಐಆರ್‌ಗೆ ತಡೆ

ನಟ ಉಪೇಂದ್ರ ವಿರುದ್ಧ ಯಾವುದೇ ವಿಚಾರಣೆ ತನಿಖೆ ನಡೆಸದಂತೆ ತಡೆಯಾಜ್ಞೆ ನೀಡಿತ್ತು. ಈ ಹಿನ್ನೆಲೆ ಪೊಲೀಸರು ಯಾವುದೇ ತನಿಖೆ ಕೈಗೊಳ್ಳಲಿಲ್ಲ. ಹೀಗಾಗಿ ಹೈಕೋರ್ಟ್ ಆದೇಶ ಪ್ರತಿ ನೋಡಿಕೊಂಡು ಮುಂದುವರೆಯಲು ಪೊಲೀಸರು ನಿರ್ಧಾರ ಮಾಡಿದ್ದಾರೆ. ಹೈಕೋರ್ಟ್ ಆದೇಶ ಏನು ಇದೆ ಎಂದು ಪರಿಶೀಲನೆ ನಡೆಸಿ ಬಳಿಕ ತನಿಖೆ ನಡೆಸಲಾಗುವುದು ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಘಟನೆ ಹಿನ್ನೆಲೆ: ಪ್ರಜಾಕೀಯ 6 ವರ್ಷ ಪೂರೈಸಿದ ಸಂದರ್ಭದಲ್ಲಿ ನಟ ಉಪೇಂದ್ರ ಫೇಸ್ಬುಕ್ ಲೈವ್‌ ಬಂದು ಮಾತನಾಡಿದ್ದರು. ಈ ವೇಳೆ "ಊರು ಎಂದ ಮೇಲೆ ಹೊಲಗೇರಿ ಇರುತ್ತೆ" ಎನ್ನುವ ಗಾದೆ ಮಾತನ್ನು ಹೇಳಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಉಪೇಂದ್ರ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ ಭಾರೀ ಆಕ್ರೋಶ ವ್ಯಕ್ತವಾಯಿತು. ಕೂಡಲೇ ಉಪೇಂದ್ರ ವಿಡಿಯೋ ಡಿಲೀಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆ ಕೇಳಿದ್ದರು. ಆದರೂ ಆಕ್ರೋಶ ಕಮ್ಮಿ ಆಗಿರಲಿಲ್ಲ. ಬೆಂಗಳೂರು, ರಾಮನಗರದಲ್ಲಿ ಉಪೇಂದ್ರ ಪ್ರತಿಕೃತಿ ದಹಿಸಿ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಉಪೇಂದ್ರ ಆಕ್ಷೇಪಾರ್ಹ ಪದ ಬಳಕೆಯನ್ನು ಖಂಡಿಸಿ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಹಾಗೂ ಹಲಸೂರು ಗೇಟ್ ಪೊಲೀಸ್ ಠಾಣೆಗಳಲ್ಲಿ ಅಟ್ರಾಸಿಟಿ ಕೇಸ್ ದಾಖಲಾಗಿತ್ತು.

ಕಾರ್ಮಿಕನಿಗೆ ಗುದ್ದಿದ ರಚಿತಾ ರಾಮ್ ಕಾರು, ಮಾನವೀಯತೆ ಮರೆತ್ರಾ ನಟಿ!

 

ಸಚಿವರಾದ ಹೆಚ್. ಸಿ ಮಹದೇವಪ್ಪ ಕೂಡ ಉಪೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆ ನಡೆಯಿತು. ಕೆಲವರು ಉಪೇಂದ್ರ ಪದ ನಿಂತರು. ಉಪೇಂದ್ರ ಗೊತ್ತಿಲ್ಲದೇ ಆ ಪದ ಬಳಸಿದ್ದಾರೆ. ಬಳಿಕ ಅದಕ್ಕೆ ಕ್ಷಮೆ ಕೂಡ ಕೇಳಿದ್ದಾರೆ. ಅಲ್ಲಿಗೆ ಮುಗೀತು. ನಾವು ಉಪೇಂದ್ರ ಬೆಂಬಲಕ್ಕೆ ನಿಲ್ಲುತ್ತೇವೆ ಎಂದಿದ್ದರು.

click me!