
ಸ್ಯಾಂಡಲ್ವುಡ್ ನಟ ಧ್ರುವ ಸರ್ಜಾ ವಿರುದ್ಧ ಕೋಟ್ಯಂತರ ರೂಪಾಯಿ ವಂಚನೆ ಆರೋಪದ ಮೇಲೆ ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ರಾಘವೇಂದ್ರ ಹೆಗಡೆ ಅವರು ಧ್ರುವ ಸರ್ಜಾ ವಿರುದ್ಧ 3.15 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ರಾಘವೇಂದ್ರ ಹೆಗಡೆ ನೀಡಿದ ಮಾಹಿತಿಯ ಪ್ರಕಾರ, 2016ರಲ್ಲಿ ತಮ್ಮ ಮೊದಲ ಚಿತ್ರದ ಯಶಸ್ಸಿನ ಬಳಿಕ ಧ್ರುವ ಸರ್ಜಾ ಅವರೊಂದಿಗೆ ಕೆಲಸ ಮಾಡಲು ಬಯಸಿದರು. 2016ರಿಂದ 2018ರವರೆಗೆ ಸರ್ಜಾ ನಿರಂತರ ಸಂಪರ್ಕದಲ್ಲಿದ್ದು, ‘ದಿ ಸೋಲ್ಜರ್’ ಚಿತ್ರದ ಸ್ಕ್ರಿಪ್ಟ್ ನೀಡಿದರು. ಅವರ ನಿರಂತರ ವಿನಂತಿ ಹಾಗೂ ಒತ್ತಾಯದ ಹಿನ್ನೆಲೆಯಲ್ಲಿ ಸಹಕರಿಸಲು ಒಪ್ಪಿಕೊಂಡ ಹೆಗಡೆ, ಸರ್ಜಾ ಅವರ ಬೇಡಿಕೆಯಂತೆ ಒಪ್ಪಂದಕ್ಕೆ ಸಹಿ ಮಾಡುವ ಮುನ್ನ 3 ಕೋಟಿ ರೂಪಾಯಿ ನೀಡಿದರು. ಈ ಹಣವನ್ನು ಅವರು ಒಂದು ಫ್ಲ್ಯಾಟ್ ಖರೀದಿಸಲು ಬಳಸಿಕೊಳ್ಳುವುದಾಗಿ ಸರ್ಜಾ ಭರವಸೆ ನೀಡಿದ್ದರು.
ಹೆಗಡೆ ಅವರು ಹೆಚ್ಚಿನ ಬಡ್ಡಿದರದಲ್ಲಿ ಸಾಲ ಪಡೆದು, ತಮ್ಮ ನಿರ್ಮಾಣ ಕಂಪನಿಗಳಾದ RH ಎಂಟರ್ಟೈನ್ಮೆಂಟ್ ಹಾಗೂ ರೂ 9 ಎಂಟರ್ಟೈನ್ಮೆಂಟ್ ಮೂಲಕ ಮತ್ತು ವೈಯಕ್ತಿಕ ನಿಧಿಯಿಂದ ಒಟ್ಟು ₹3.15 ಕೋಟಿಯನ್ನು ಫೆಬ್ರವರಿ 21, 2019ರ ಒಳಗೆ ವರ್ಗಾಯಿಸಿದರು. ಒಪ್ಪಂದದ ಪ್ರಕಾರ ಚಿತ್ರೀಕರಣ ಜನವರಿ 2020ರಲ್ಲಿ ಪ್ರಾರಂಭವಾಗಿ ಜೂನ್ 2020ರಲ್ಲಿ ಪೂರ್ಣಗೊಳ್ಳಬೇಕಿತ್ತು.
ಆದರೆ ಹಣ ಪಡೆದ ನಂತರ, ಸರ್ಜಾ ಪದೇಪದೇ ಡೇಟ್ಸ್ ಮುಂದೆ ಹಾಕುತ್ತಲೇ ಬಂದಿದ್ದಾರೆ, ನಂತರ COVID-19 ಲಾಕ್ಡೌನ್ ನಂತರವೂ ಪ್ರತಿಕ್ರಿಯೆ ನೀಡಲಿಲ್ಲ ಎಂದು ಹೆಗಡೆ ಆರೋಪಿಸಿದ್ದಾರೆ. ಅಲ್ಲದೆ, ಸ್ಕ್ರಿಪ್ಟ್ ರೈಟರ್ ಹಾಗೂ ಪ್ರಚಾರ ಸಲಹೆಗಾರರಿಗೆ ಹೆಚ್ಚುವರಿ ಪಾವತಿಗಳನ್ನು ಒತ್ತಾಯಿಸಿ, ಒಟ್ಟು ವೆಚ್ಚವನ್ನು ₹3.43 ಕೋಟಿಗೆ ಹೆಚ್ಚಿಸಿದರು. ಕೊನೆಗೆ ಸರ್ಜಾ ಯೋಜನೆಯಿಂದ ಹಿಂದೆ ಸರಿದು, ಕರೆಗಳಿಗೆ ಪ್ರತಿಕ್ರಿಯೆ ನೀಡದೆ, ಸಭೆಗಳಿಗೆ ಹಾಜರಾಗದೆ, ಮುಂದುವರಿಸಲು ಸಾಧ್ಯವಿಲ್ಲವೆಂದು ಅಲ್ಲಗಳೆದಿದ್ದಾರೆ.
ಹೆಗಡೆ ಅವರು 2021ರಲ್ಲಿ ಕರ್ನಾಟಕ ಫಿಲ್ಮ್ ಚೇಂಬರ್ಗೆ ಬಂದ ಹೈದರಾಬಾದ್ ಮೂಲದ ಪೀಪಲ್ ಮೀಡಿಯಾ ಫ್ಯಾಕ್ಟರಿಯ ಪತ್ರವನ್ನು ಉಲ್ಲೇಖಿಸಿದ್ದು, ಅದರಲ್ಲಿ ಸರ್ಜಾ ಮತ್ತೊಂದು ಯೋಜನೆಗೆ ಹಣ ಪಡೆದು ಕೆಲಸ ನಿರಾಕರಿಸಿದ್ದಾಗಿ ಮತ್ತು ಮಾಧಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದಾಗಿ ತಿಳಿಸಲಾಗಿದೆ.
ಅಂಬೋಲಿ ಪೊಲೀಸರು, ಹೆಗಡೆ ಸಲ್ಲಿಸಿದ ಹಣಕಾಸಿನ ದಾಖಲೆಗಳು, ಒಪ್ಪಂದಗಳು ಹಾಗೂ ಬ್ಯಾಂಕ್ ವ್ಯವಹಾರಗಳನ್ನು ಪರಿಶೀಲಿಸುತ್ತಿದ್ದು, 2018ರಿಂದ 18% ಬಡ್ಡಿದರದಲ್ಲಿ ಒಟ್ಟಾರೆ ನಷ್ಟ ₹9.58 ಕೋಟಿಗೂ ಮೀರಿದೆ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 316(2) (ಅಪರಾಧಿ ನಂಬಿಕೆ ಉಲ್ಲಂಘನೆ) ಮತ್ತು 318(4) (ವಂಚನೆ ಹಾಗೂ ಆಸ್ತಿ ಹಸ್ತಾಂತರಕ್ಕೆ ಅಪ್ರಾಮಾಣಿಕ ಪ್ರೇರಣೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರ ಪ್ರಕಾರ, ದೂರು ಸ್ವೀಕರಿಸಿದ ಬಳಿಕ API ಪ್ರದೀಪ್ ಫಂಡೆ ಸರ್ಜಾಗೆ ಎರಡು ಬಾರಿ ಸಮನ್ಸ್ ಕಳುಹಿಸಿದರು. ಹಾಜರಾಗದೆ, ಸರ್ಜಾ ಬೆಂಗಳೂರಿನ ನ್ಯಾಯಾಲಯದಿಂದ 10 ದಿನಗಳ ಟ್ರಾನ್ಸಿಟ್ ನಿರೀಕ್ಷಣಾ ಜಾಮೀನು ಪಡೆದು, ಜುಲೈ 30ರಂದು ದಿನೋಶಿ ಸೆಷನ್ಸ್ ಕೋರ್ಟ್ಗೆ ಅರ್ಜಿ ಸಲ್ಲಿಸಿದರು. ಆಗಸ್ಟ್ 5ರಂದು ಮಧ್ಯಂತರ ರಕ್ಷಣೆಯೊಂದಿಗೆ ₹50,000 ಜಾಮೀನು ನೀಡಲು ನ್ಯಾಯಾಲಯ ಆದೇಶಿಸಿದ್ದು, ಪ್ರಕರಣವನ್ನು ಆಗಸ್ಟ್ 14, 2025ರವರೆಗೆ ಮುಂದೂಡಲಾಗಿದೆ.
ಸರ್ಜಾ ಪರ ವಕೀಲೆ ಅಶಿಮಾ ಮಂಡ್ಲಾ, ವಿಷಯ ವಿಚಾರಣೆಯಲ್ಲಿರುವುದರಿಂದ ಪ್ರತಿಕ್ರಿಯೆ ನೀಡಲು ನಿರಾಕರಿಸಿ, ತಮ್ಮ ಕಕ್ಷಿದಾರರು ನಿಯಮಾನುಸಾರ ಸಾಕ್ಷ್ಯಗಳನ್ನು ಸಲ್ಲಿಸುವುದಾಗಿ ತಿಳಿಸಿದ್ದಾರೆ. ಅಂಬೋಲಿ ಪೊಲೀಸ್ ಠಾಣೆಯ ಹಿರಿಯ ಇನ್ಸ್ಪೆಕ್ಟರ್ ಪ್ರಮೋದ್ ಕುಮಾರ್ ಶ್ರೀರಾಮ್ ಕೊಕಟೆ, ಪ್ರಕರಣ ದಾಖಲಾಗಿ ತನಿಖೆ ಮುಂದುವರಿಯುತ್ತಿದೆ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.