ಮಗನ ಅಗಲಿಕೆಯ ದುಃಖದಲ್ಲೇ ಕಣ್ಣು ಮುಚ್ಚಿದ ಗಾನಕೋಗಿಲೆ!; 88ರ ಇಳಿವಯಸ್ಸಲ್ಲಿ ಜಾನಕಿ ಅವರನ್ನು ಕುಗ್ಗಿಸಿತ್ತು ಏಕೈಕ ಪುತ್ರನ ಸಾವು!

Published : Jul 11, 2026, 08:39 PM IST
Singer S Janaki Passes Away Months After Losing Her Only Son

ಸಾರಾಂಶ

ಗಾನಕೋಗಿಲೆ ಎಸ್. ಜಾನಕಿ ಅವರು ತಮ್ಮ 88ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಇದಕ್ಕೂ ಕೆಲವೇ ತಿಂಗಳುಗಳ ಹಿಂದೆ ತಮ್ಮ ಏಕೈಕ ಪುತ್ರ ಮುರಳಿ ಕೃಷ್ಣ ಅವರನ್ನು ಕಳೆದುಕೊಂಡಿದ್ದ ಅವರು, ಮಗನ ಸಾವಿನ ದುಃಖದಲ್ಲೇ ಕೊನೆಯುಸಿರೆಳೆದರು.

ಮೈಸೂರು (ಜು.11): ದಕ್ಷಿಣ ಭಾರತದ ಕೋಟ್ಯಂತರ ಸಂಗೀತ ಪ್ರೇಮಿಗಳನ್ನು ತಮ್ಮ ಮಾಧುರ್ಯಭರಿತ ಕಂಠದಿಂದ ರಂಜಿಸಿದ್ದ ಗಾನಕೋಗಿಲೆ ಎಸ್. ಜಾನಕಿ ಶನಿವಾರ ವಯೋಸಹಜ ಕಾಯಿಲೆಯಿಂದ ಸಾವು ಕಂಡಿದ್ದಾರೆ. ಆರು ದಶಕಗಳ ಕಾಲ ಸಂಗೀತ ಸಾಮ್ರಾಜ್ಯದ ಮಹಾರಾಜ್ಞಿಯಾಗಿ ಮೆರೆದ ಜಾನಕಿ ಅಮ್ಮನವರ ಕೊನೆಯ ದಿನಗಳ ಬದುಕು ಮಾತ್ರ ಅತ್ಯಂತ ನೋವಿನಿಂದ ಕೂಡಿತ್ತು. ತಮ್ಮ 88ರ ಇಳಿವಯಸ್ಸಿನಲ್ಲಿ ಇದ್ದೊಬ್ಬ ಏಕೈಕ ಮಗ ಮುರಳಿ ಕೃಷ್ಣ (65) ಅವರನ್ನು ಕಳೆದುಕೊಂಡ ದುಃಖದಲ್ಲೇ ಜಾನಕಿ ಅಮ್ಮ ಕೊನೆಯ ದಿನಗಳನ್ನು ಕಳೆದಿದ್ದರು. ಮಗನ ಹಠಾತ್ ಸಾವು ತಾಯಿಯಾಗಿ ಅವರನ್ನು ಸಂಪೂರ್ಣವಾಗಿ ಕುಗ್ಗಿಸಿಬಿಟ್ಟಿತ್ತು.

ಇಳಿವಯಸ್ಸಲ್ಲಿ ಆಸರೆಯಾಗಿದ್ದ ಮಗನನ್ನೇ ಕಿತ್ತುಕೊಂಡ ವಿಧಿ!

ಮೂಲತಃ ಆಂಧ್ರಪ್ರದೇಶದ ಗುಂಟೂರಿನವರಾದ ಎಸ್. ಜಾನಕಿ ಅವರು 50ರ ದಶಕದಲ್ಲಿ ಚಿತ್ರರಂಗ ಪ್ರವೇಶಿಸಿ ಚೆನ್ನೈನಲ್ಲಿ ನೆಲೆಸಿದ್ದರು. ತಮ್ಮ ಅಸಾಧಾರಣ ಯಶಸ್ಸಿನ ಅವಧಿಯಲ್ಲೇ ರಾಮ್ ಪ್ರಸಾದ್ ಅವರನ್ನು ವಿವಾಹವಾಗಿದ್ದ ಜಾನಕಿ ಅವರಿಗೆ ಜನಿಸಿದ ಏಕೈಕ ಪುತ್ರನೇ ಮುರಳಿ ಕೃಷ್ಣ. ತಾಯಿಯಂತೆಯೇ ಕಲಾ ಜಗತ್ತಿನಲ್ಲಿ ಆಸಕ್ತಿ ಹೊಂದಿದ್ದ ಮುರಳಿ ಕೃಷ್ಣ, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ಅಲ್ಲದೆ ಪ್ರಸಿದ್ಧ ಭರತನಾಟ್ಯ ಕಲಾವಿದರು ಆಗಿದ್ದರು. ಇತ್ತೀಚಿನ ವರ್ಷಗಳಲ್ಲಿ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ತಾಯಿಗೆ ಮುರಳಿ ಕೃಷ್ಣ ಅವರೇ ಏಕೈಕ ಆಸರೆಯಾಗಿದ್ದರು.

ವಿಚ್ಛೇದನದ ನಂತರ ತಾಯಿಯೊಂದಿಗೇ ಇದ್ದ ಮುರಳಿ

ಭರತನಾಟ್ಯ ಅಭ್ಯಾಸ ಮಾಡುವಾಗ ತಮ್ಮ ಗುರುವಾಗಿದ್ದ ಉಮಾ ಎಂಬುವವರನ್ನು ಮುರಳಿ ಕೃಷ್ಣ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಹೆಣ್ಣುಮಕ್ಕಳು ಜನಿಸಿದ ಬಳಿಕ ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದ ಉಮಾ ಅವರಿಂದ ವಿಚ್ಛೇದನ ಪಡೆದಿದ್ದರು. ವಿಚ್ಛೇದನದ ನಂತರ ಹೆಣ್ಣುಮಕ್ಕಳು ತಾಯಿಯೊಂದಿಗೆ ಹೋದಾಗ, ಒಂಟಿಯಾಗಿದ್ದ ಮುರಳಿ ಕೃಷ್ಣ ತಮ್ಮ ತಾಯಿ ಎಸ್. ಜಾನಕಿ ಅವರೊಂದಿಗೆ ಉಳಿದ ದಿನಗಳನ್ನು ಕಳೆಯಲು ನಿರ್ಧರಿಸಿದ್ದರು. ತಾಯಿಯ ಯೋಗಕ್ಷೇಮವನ್ನು ಅವರೇ ಹತ್ತಿರದಿಂದ ನೋಡಿಕೊಳ್ಳುತ್ತಿದ್ದರು.

ಹೃದಯಾಘಾತದಿಂದ ತಾಯಿಗಿಂತ ಮುಂಚೆ ಹೊರಟ ಮಗ

ಕಳೆದ ಜನವರಿಯಲ್ಲಿ ಮುರಳಿ ಕೃಷ್ಣ ಅವರಿಗೆ ಹಠಾತ್ ಆರೋಗ್ಯ ಏರುಪೇರಾಗಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದರು. 88ರ ಇಳಿವಯಸ್ಸಿನಲ್ಲಿ ತನ್ನ ಕಣ್ಣೆದುರೇ ಮಗ ಶವವಾಗಿ ಬಿದ್ದಿದ್ದನ್ನು ಕಂಡು ಜಾನಕಿ ಅಮ್ಮ ಅಕ್ಷರಶಃ ಜೀವಚ್ಛವವಾಗಿದ್ದರು. ಹೆತ್ತ ಮಗನನ್ನು ಸ್ಮಶಾನಕ್ಕೆ ಕಳುಹಿಸುವ ದುರ್ಗತಿ ಯಾವ ತಾಯಿಗೂ ಬರಬಾರದು ಎಂದು ಅಂದು ಚಿತ್ರರಂಗ ಕಂಬನಿ ಮಿಡಿದಿತ್ತು. ಆ ಘಟನೆಯ ನಂತರ ಜಾನಕಿ ಅಮ್ಮ ತೀವ್ರ ಮಾನಸಿಕ ಖಿನ್ನತೆ ಮತ್ತು ದೈಹಿಕ ಬಳಲಿಕೆಗೆ ಒಳಗಾಗಿದ್ದರು.

ಮಗ ಸಾವು ಕಂಡ ಕೆಲವೇ ತಿಂಗಳಲ್ಲಿ ಎಸ್‌.ಜಾನಕಿ ಕೂಡ ಇಹಲೋಕ ತ್ಯಜಿಸಿದ್ದಾರೆ. ತಮ್ಮ ಇಡೀ ಜೀವನದಲ್ಲಿ ಸಂಗೀತವನ್ನೇ ಆರಾಧಿಸಿದ್ದ ಎಸ್‌.ಜಾನಕಿ ಅವರಿಗೆ ಇದ್ದ ವಿಶೇಷ ಶಕ್ತಿಯೆಂದರೆ, ಅದು ಧ್ವನಿ ಬದಲಾವಣೆ. ಸಣ್ಣ ಮಗುವಿನಂತೆ ಹಾಡುತ್ತಿದ್ದ ಎಸ್‌.ಜಾನಕಿ ಏಕಾಏಕಿ ಪ್ರೌಢ ಮಹಿಳೆಯ ಕಂಠವಾಗಿ ಬದಲಾಗುತ್ತಿದ್ದರು. ಗಾಯನದಲ್ಲಿಯೇ ನಟನೆಯ ಭಾವನೆಗಳನ್ನು ತರುತ್ತಿದ್ದ ಗಾಯನದ ನಾಯಕಿ ಎನಿಸಿದ್ದರು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

S Janaki: ಭಾರತದ ಗಾನ ಕೋಗಿಲೆ ಎಸ್ ಜಾನಕಿ ವಿಧಿವಶ; ಲೆಕ್ಕವಿಲ್ಲದಷ್ಟು ಪ್ರಶಸ್ತಿ, ಕನ್ನಡದ ನಂಟು ಹೊಂದಿದ್ದ ಗಾಯಕಿ ಇನ್ನು ನೆನಪು ಮಾತ್ರ!
'ಎರಡು ಪ್ಲೇಟ್ ದೋಸೆ' ಲುಕ್‌ನಲ್ಲಿ ಮಿಂಚಿದ 'ಪುಟ್ಟಗೌರಿ': ಇಲ್ಲಿವೆ ಸಾನ್ಯ ಅಯ್ಯರ್ ಬೋಲ್ಡ್ ಪೋಟೋಸ್