ರಿಯಲ್ ಸ್ಟಾರ್ ಉಪೇಂದ್ರ ಅವರ 25 ವರ್ಷ ಹಳೆಯ ಸಿನಿಮಾ 'ಉಪೇಂದ್ರ'ದ ಆಮಂತ್ರಣ ಪತ್ರಿಕೆಯನ್ನು ಯಾರೂ ತೆರೆಯಲು ಸಾಧ್ಯವಾಗಲಿಲ್ಲ. ಉಪೇಂದ್ರ ಅವರ ವಿಭಿನ್ನ ಚಿಂತನೆಗಳಿಗೆ ಈ ಘಟನೆಯೇ ಸಾಕ್ಷಿ.
ಬೆಂಗಳೂರು (ಅ.25): ರಿಯಲ್ ಸ್ಟಾರ್ ಉಪೇಂದ್ರ ಅವರ ಚಿಂತನೆಗಳೇ ವಿಭಿನ್ನವಾಗಿರುತ್ತವೆ ಎನ್ನುವುದಕ್ಕೆ ಅವರ ಎ, ಉಪೇಂದ್ರ, ಬುದ್ಧಿವಂತ ಸಿನಿಮಾಗಳೇ ಸಾಕ್ಷಿಯಾಗಿವೆ. ಆದರೆ, ಸಿನಿಮಾ ಮಾತ್ರವಲ್ಲ ಇತರೆ ಕಾರ್ಯಗಳಲ್ಲಿಯೂ ಉಪೇಂದ್ರ ಅವರ ವಿಭಿನ್ನ ಚಿಂತನೆಗೆ ಈ 25 ವರ್ಷದ ಹಿಂದಿನ ಆಮಂತ್ರಣ ಪತ್ರಿಕೆ ಸಾಕ್ಷಿಯಾಗಿದೆ. ಈ ಪತ್ರಿಕೆಯನ್ನು ಇಂದಿನ 25 ಜನರು ಸೇರಿ ಬಿಚ್ಚಲು ಪ್ರಯತ್ನ ಮಾಡಿದರೂ ಯಾರಿಂದಲೂ ಬಿಚ್ಚಲು ಸಾಧ್ಯವಾಗಲಿಲ್ಲ.
ಕನ್ನಡ ಚಿತ್ರರಂಗದ ಅಮೂಲಾಗ್ರ ರತ್ನಗಳಲ್ಲಿ ಉಪೇಂದ್ರ ಅವರೂ ಒಬ್ಬರೆಂದರೆ ತಪ್ಪಾಗಲಾರದು. ಉಪೇಂದ್ರ ಅವರ ಚಿಂತನೆಗಳು ವಾಸ್ತವಿಕತೆಗೆ ಹತ್ತಿರವಾಗಿದ್ದರೂ ಅವುಗಳನ್ನು ಅರ್ಥೈಸಿಕೊಳ್ಳುವುದಕ್ಕೆಂತಲೇ ಬುದ್ಧಿವಂತಿಕೆ ಖರ್ಚು ಮಾಡಬೇಕಾಗುತ್ತದೆ. ಉಪೇಂದ್ರ ನಿರ್ದೇಶನ ಮತ್ತು ನಟನೆಯ 'ಎ' ಸಿನಿಮಾ ಅರ್ಥ ಮಾಡಿಕೊಳ್ಳಲಾಗದೇ ಜನರು ಎರಡು ಮೂರು ಬಾರಿ ಸಿನಿಮಾವನ್ನು ನೋಡಿದ್ದಾರೆ. ಸಿನಿಮಾ ನೋಡುವುದಕ್ಕೆ ಸಿಂಪಲ್ ಆಗಿದ್ದರೂ ಅದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ದೊಡ್ಡ ಸವಾಲಾಗಿತ್ತು. ಇದಾದ ನಂತರ ಉಪೇಂದ್ರ ಸಿನಿಮಾವನ್ನು ರಿಲೀಸ್ ಮಾಡಿದ ನಂತರ ಅಲ್ಲಿಯೂ ಸಮಾಜದಲ್ಲಿ ಇರುವ ವ್ಯವಸ್ಥೆಯನ್ನು ಹಾಗೂ ಒಬ್ಬ ವ್ಯಕ್ತಿಯಲ್ಲಿ ಇರುವ ಮನಸ್ಥಿತಿಯನ್ನು ಆಧರಿಸಿ ಸಿನಿಮಾ ಮಾಡಲಾಗಿತ್ತು. ಆದರೆ, ಉಪೇಂದ್ರ ಸಿನಿಮಾ ರಿಲೀಸ್ ಆಗಿ 25 ವರ್ಷಗಳಾದರೂ, ಕೆಲವರು 25 ಬಾರಿ ಸಿನಿಮಾ ನೋಡಿದ್ದರೂ ಅದರ ಉದ್ದೇಶವನ್ನು ಅರಿತುಕೊಳ್ಳಲು ಇನ್ನೂ ಕೆಲವರಿಗೆ ಸಾಧ್ಯವೇ ಆಗಿಲ್ಲ.
ಇದನ್ನೂ ಓದಿ: ತುಂಬಾ ಪ್ರಯಾಸಪಟ್ಟು ಮೌಂಟ್ ಎವರೇಸ್ಟ್ ಹತ್ತುತ್ತೇವೆ... ಯಲಾಕುನ್ನಿ ಚಿತ್ರದ ಬಗ್ಗೆ ನಟ ಕೋಮಲ್ ಹೇಳಿದ್ದೇನು?
ಉಪೇಂದ್ರ ಸಿನಿಮಾದ ಮತ್ತೊಂದು ವಿಭಿನ್ನ ಪ್ರಯತ್ನವನ್ನು ರಿವೀಲ್ ಆಗಿದೆ. ಇನ್ನು ಉಪೇಂದ್ರ ಸಿನಿಮಾದ ಬಿಡುಗಡೆಗೆ ತಯಾರಿಸಲಾಗಿದ್ದ ಆಮಂತ್ರಣ ಪತ್ರಿಕೆಯೂ ಕೂಡ ವಿಭಿನ್ನವಾಗಿತ್ತು. ಈ ಆಮಂತ್ರಣ ಪತ್ರಿಕೆಯನ್ನು ಓಪನ್ ಮಾಡುವುದಕ್ಕೂ ಬುದ್ಧಿವಂತಿಕೆ ಪ್ರದರ್ಶನ ಮಾಡಲೇಬೇಕಿತ್ತು. ಇಲ್ಲವೆಂದರೆ ಆಮಂತ್ರಣ ಪತ್ರಿಕೆ ತೆರೆಯಲಾಗದೇ ಕೈ ಕೈ ಹಿಸುಕಿಕೊಂಡು ಕೂರಬೇಕಾಗುತ್ತದೆ. ನಾವು ಇನ್ವಿಟೇಷನ್ ಕಾರ್ಡ್ ತೆರೆದು ನೋಡಲೇಬೇಕೆಂದರೆ ಸ್ವತಃ ಉಪೇಂದ್ರ ಅವರಿಗೆ ಕರೆ ಮಾಡಿ ಮಾಹಿತಿ ತಿಳಿದುಕೊಳ್ಳಬೇಕು. ಇನ್ನು ಆಮಂತ್ರಣ ಪತ್ರಿಕೆ ಪಡೆದ ಅದೆಷ್ಟು ಜನರು ಉಪೇಂದ್ರ ಅವರಿಗೆ ಕರೆ ಮಾಡಿ ಕ್ವಾಟ್ಲೆ ಕೊಟ್ಟಿದ್ದಾರೋ ಎಂದು ಊಹಿಸಿದರೆ ಖಂಡಿತ ನಗು ಬರುತ್ತದೆ.
ಕಳೆದ 25 ವರ್ಷಗಳ ಹಿಂದೆ ಉಪೇಂದ್ರ ಸಿನಿಮಾ ರಿಲೀಸ್ಗೆ ಸಿದ್ಧಪಡಿಸಲಾದ ಆಮಂತ್ರಣ ಪತ್ರಿಕೆಯನ್ನು ಇದೀಗ ಪುನಃ ವೀಕ್ಷಕರ ಮುಂದೆ ತೋರಿಸಿದ್ದಾರೆ. ಉಪೇಂದ್ರ ಸಿನಿಮಾದ ರೀ ರಿಲೀಸ್ ಕಾರ್ಯಕ್ರಮದಲ್ಲಿ ಆಮಂತ್ರಣ ಪತ್ರಿಕೆಯನ್ನು ತೋರಿಸಿ ಯಾರಾದರೂ ಇದನ್ನು ಓಪನ್ ಮಾಡುತ್ತೀರಾ ಎಂದು ಸವಾಲು ಹಾಕಿದ್ದಾರೆ. ಆಗ ಮಾಧ್ಯಮ ಮಿತ್ರರು ನಾವು ಓಪನ್ ಮಾಡುತ್ತೇವೆ ಎಂದು ಹೇಳಿದ್ದಾರೆ. ಆಗ ವೇದಿಕೆ ಮುಂದಿದ್ದ ಮಾಧ್ಯಮದವರ ಕೈಗೆ ಅವರ ಆಮಂತ್ರಣ ಪತ್ರಿಕೆ ಬಾಕ್ಸ್ ಅನ್ನು ಎಸೆದಿದ್ದಾರೆ. ಅದನ್ನು ಸುಮಾರು 25ಕ್ಕೂ ಅಧಿಕ ಜನರು ಆಮಂತ್ರಣ ಪತ್ರಿಕೆಯ ಬಾಕ್ಸ್ ತೆರೆಯಲು ಪ್ರಯತ್ನ ಮಾಡಿದ್ದಾರೆ. ಆದರೆ, ಯಾರೊಬ್ಬರಿಂದಲೂ ಅದನ್ನು ತೆರೆಯಲು ಸಾಧ್ಯವಾಗಲಿಲ್ಲ. ಇದಾದ ನಂತರ ಪುನಃ ಬಾಕ್ಸ್ ಪಡೆದ ನಟ ಉಪೇಂದ್ರ ಅವರು ಚಕ್ ಎಂದು 2 ಸೆಕೆಂಡ್ಗಳಲ್ಲಿ ಬಾಕ್ಸ್ ತೆರೆದು ಅದರೊಳಗಿದ್ದ ಆಮಂತ್ರಣ ಪತ್ರಿಕೆಯನ್ನು ಬಿಚ್ಚಿ ಎಲ್ಲರ ಮುಂದೆ ಪ್ರದರ್ಶನ ಮಾಡುತ್ತಾರೆ.
ಇತ್ತೀಚೆಗೆ ಉಪೇಂದ್ರ ಸಿನಿಮಾವನ್ನು ಸೆ.20ರಂದು ವಿವಿಧ ಸಿನಿಮಾ ಮಂದಿರಗಳಲ್ಲಿ ರೀ ರಿಲೀಸ್ ಮಾಡಲಾಗಿತ್ತು. ಈ ಸಿನಿಮಾ ಕೆಲವು ಚಿತ್ರಮಂದಿರಗಳಲ್ಲಿ ಸುಮಾರು 2 ವಾರಗಳಿಗಿಂತ ಹೆಚ್ಚು ದಿನಗಳು ಓಡಿದೆ. ಒಂದು ಬಾರಿ ಸಿನಿಮಾ ನೋಡಿದರೆ ಮತ್ತೊಮ್ಮೆ ನೋಡುವುದಿಲ್ಲ ಎಂಬುದಕ್ಕೆ ಉಪೇಂದ್ರ ಸಿನಿಮಾ ಅಪವಾದವಾಗಿದೆ. ರೀ ರಿಲೀಸ್ ಸಿನಿಮಾವೊಂದು ಇದೀಗ ಎರಡು ವಾರಗಳ ಕಾಲ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಂಡು ಹಣ ಮಾಡಿದ್ದಕ್ಕೆ ನಿರ್ಮಾಪಕ ಶಿಲ್ಪಾ ಶ್ರೀನಿವಾಸ್ ಭಾರಿ ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ರಜನಿಕಾಂತ್ಗೆ ಕೈ ಕೊಡ್ತಾರಾ ಶ್ರುತಿ ಹಾಸನ್; ಏಕಾಏಕಿ 2 ಸಿನಿಮಾದಿಂದ ಹೊರಬಂದಿದ್ದು ಯಾಕೆ?