
ತುಳುನಾಡಿನ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳವನ್ನೇ ಮುಖ್ಯ ಕಥಾವಸ್ತುವಾಗಿಟ್ಟುಕೊಂಡ ಮೊತ್ತ ಮೊದಲ ಬಹುನಿರೀಕ್ಷಿತ ತುಳು, ಕನ್ನಡ ಚಲನಚಿತ್ರ ‘ಬಿರ್ದ್ದ ಕಂಬಳ’ ಮತ್ತು ‘ವೀರ ಕಂಬಳ’ ಚಿತ್ರೀಕರಣಕ್ಕೆ ಅಣಿಯಾಗಿದೆ. ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಹಿಂದಿ, ತೆಲುಗು, ತಮಿಳಿಗೂ ಚಿತ್ರ ಡಬ್ ಆಗಲಿದೆ.
ತುಳು ರಂಗಭೂಮಿಯ ಲೇಖಕ ವಿಜಯಕುಮಾರ್ ಕೊಡಿಯಾಲಬೈಲ್ ಸಂಭಾಷಣೆ ರಚಿಸುತ್ತಿದ್ದಾರೆ. ‘ನವೆಂಬರ್, ಡಿಸೆಂಬರ್ನಲ್ಲಿ ಸಾಂಪ್ರದಾಯಿಕ ಹಾಗೂ ಆಧುನಿಕ ಕಂಬಳ ಕ್ರೀಡೆ ನಡೆಯುವುದರಿಂದ ಚಿತ್ರೀಕರಣ ಪೂರ್ತಿಗೊಳ್ಳಲು ಅಲ್ಲಿಯವರೆಗೂ ಕಾಯಬೇಕಾಗಿದೆ. ಕಲಾವಿದರ ಆಯ್ಕೆಗೆ ಅವಿಭಜಿತ ದ.ಕ. ಜಿಲ್ಲೆಯಲ್ಲಿ 4 ಕಡೆ ಆಡಿಶನ್ ನಡೆಸಲು ತೀರ್ಮಾನಿಸಲಾಗಿದೆ’ ಎಂದು ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ರಾಜೇಂದ್ರ ಸಿಂಗ್ ಬಾಬು ಮಾಹಿತಿ ನೀಡಿದರು.
‘ಕಂಬಳದ ಬಗ್ಗೆ ಚಿತ್ರ ಮಾಡಲು ಕಳೆದ 7 ವರ್ಷಗಳಿಂದ ಸಂಶೋಧನೆ ನಡೆಸುತ್ತಿದ್ದೇನೆ. ನನ್ನ ತಾಯಿ ಉಡುಪಿಯವರು, ಪತ್ನಿ ಪುತ್ತೂರಿನವರು. ಹಾಗಾಗಿ ತುಳು ಭಾಷೆಯಲ್ಲಿ ಚಲನಚಿತ್ರ ಮಾಡುವ ಆಸೆಯಿತ್ತು. ಕೆಲ ತಿಂಗಳ ಹಿಂದೆ ಮೂಡುಬಿದಿರೆ, ಪುತ್ತೂರಿನಲ್ಲಿ ಕಂಬಳ ವೀಕ್ಷಿಸಿದಾಗ ಸಾವಿರಾರು ದಾರಿಗಳು ಕಂಡವು. ಅಗಾಧವಾದ ಸಂಸ್ಕೃತಿ ಇದರಲ್ಲಿ ಅಡಕವಾಗಿದೆ. ಇನ್ನು ನೂರು ಮಂದಿ ನೂರು ಚಿತ್ರ ಮಾಡುವಷ್ಟುಕತೆಗಳು ಕಂಬಳದಲ್ಲಿವೆ’ ಎಂದು ಶ್ಲಾಘಿಸಿದರು.
ಶ್ರೀ ಕ್ಷೇತ್ರ ಸುಬ್ರಹ್ಮಣ್ಯದಲ್ಲಿ ಸಚಿವ ಎಸ್. ಅಂಗಾರ ಅವರಿಂದ ಸಿನಿಮಾದ ಶೀರ್ಷಿಕೆ ಬಿಡುಗಡೆಯಾಗಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದದೊಂದಿಗೆ ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ ಎಂದು ರಾಜೇಂದ್ರ ಸಿಂಗ್ ಬಾಬು ತಿಳಿಸಿದರು.
ತುಳು ರಂಗಭೂಮಿ ನಟ, ನಿರ್ದೇಶಕ ವಿಜಯ…ಕುಮಾರ್ ಕೊಡಿಯಾಲ…ಬೈಲ್, ನಿರ್ಮಾಪಕ ಅರುಣ್ ರೈ ತೋಡಾರ್, ಕಂಬಳ ಕ್ಷೇತ್ರದ ವಿದ್ವಾಂಸ ಗುಣಪಾಲ ಕಡಂಬ ಇದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.