Karnataka Film Chamber Of Commerce: ಫಿಲಂ ಚೇಂಬರ್‌ ಚುನಾವಣೆಗೆ ಆಗ್ರಹಿಸಿ ಪ್ರತಿಭಟನೆ

By Kannadaprabha NewsFirst Published Mar 16, 2022, 11:51 AM IST
Highlights

ಕರ್ನಾಟಕ ಸರ್ಕಾರದ ಆದೇಶಕ್ಕೆ ಬೆಲೆ ಕೊಡದೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆಯನ್ನು ಅನವಶ್ಯಕವಾಗಿ ಮುಂದೂಡುತ್ತಿದ್ದಾರೆ. 

ಬೆಂಗಳೂರು (ಮಾ.16): ಕರ್ನಾಟಕ ಸರ್ಕಾರದ (Karnataka Government) ಆದೇಶಕ್ಕೆ ಬೆಲೆ ಕೊಡದೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆಯನ್ನು (Karnataka Film Chamber Election) ಅನವಶ್ಯಕವಾಗಿ ಮುಂದೂಡುತ್ತಿದ್ದಾರೆ. ವಾಣಿಜ್ಯ ಮಂಡಳಿಯ ಸದಸ್ಯರ ಹಿತಾಸಕ್ತಿಗಾಗಿ ಈ ಕೂಡಲೇ ಚುನಾವಣೆಯನ್ನು ನಡೆಸಬೇಕೆಂದು ಆಗ್ರಹಿಸಿ ನಿರ್ಮಾಪಕ ಭಾ ಮಾ ಹರೀಶ್‌ (Bha Ma Harish) ನೇತೃತ್ವದಲ್ಲಿ ಕೆಲ ನಿರ್ಮಾಪಕರು (Producers) ವಾಣಿಜ್ಯ ಮಂಡಳಿಯಲ್ಲಿ ಧರಣಿ ಪ್ರತಿಭಟನೆ (Protest) ನಡೆಸಿದರು.

 ಸುಮಾರು 50ಕ್ಕೂ ಹೆಚ್ಚು ನಿರ್ಮಾಪಕರನ್ನು ಒಳಗೊಂಡ ನಿರ್ಮಾಪಕ ಭಾ ಮಾ ಹರೀಶ್‌ ನೇತೃತ್ವದ ತಂಡ ಹಾಗೂ ಹಾಲಿ ವಾಣಿಜ್ಯ ಮಂಡಳಿಯಲ್ಲಿರುವ ಪದಾಧಿಕಾರಿಗಳ ನಡುವೆ ಮಾತಿನ ವಾಗ್ವಾದ ನಡೆದು ಕೈ ಮಿಲಾಯಿಸಿಕೊಳ್ಳುವ ವಾತಾವರಣ ನಿರ್ಮಾಣವಾಗಿತ್ತು. ಈ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಭಾ ಮಾ ಹರೀಶ್‌, ‘ನಿಯಮದ ಪ್ರಕಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಎರಡು ವರ್ಷಗಳ ಹಿಂದೆಯೇ ಚುನಾವಣೆ ನಡೆಯಬೇಕಿತ್ತು. 

ಕೊರೋನಾ (Coronavirus) ಕಾರಣಕ್ಕೆ ಚುನಾವಣೆ ಮುಂದೂಡಲಾಯಿತು. ಈ ನಡುವೆ ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳು, ಏ.15ರ ಒಳಗೆ ಚುನಾವಣೆ ಮಾಡುವಂತೆ ವಾಣಿಜ್ಯ ಮಂಡಳಿಗೆ ಆದೇಶ ಹೊರಡಿಸಿದೆ. ಆದರೆ, ಇದುವರೆಗೂ ಚುನಾವಣೆ ಘೋಷಣೆ ಮಾಡಿಲ್ಲ. ಎರಡು ದಿನಗಳ ಒಳಗೆ ಚುನಾವಣೆ ದಿನಾಂಕ ಘೋಷಣೆ ಮಾಡದೆ ಹೋದರೆ, ಮತ್ತೆ ವಾಣಿಜ್ಯ ಮಂಡಳಿಯಲ್ಲಿ ಧರಣಿ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

Karnataka Film Chamber Of Commerce: ಬೇಡಿಕೆಗಳಿಗೆ ಸಮ್ಮತಿಸಿದ ಸಿಎಂಗೆ ಚಿತ್ರರಂಗದಿಂದ ಧನ್ಯವಾದ

ಮೇ28ಕ್ಕೆ ಚುನಾವಣೆ ನಡೆಸುತ್ತೇವೆಂದು ಮಾಹಿತಿ ನೀಡಿದ್ದೇವೆ. ಅದರಂತೆ ನಡೆಸುತ್ತೇವೆ. ಇದರಲ್ಲಿ ಅನುಮಾನ ಬೇಡ.
-ಎನ್‌.ಎಂ.ಸುರೇಶ್‌, ಕಾರ್ಯದರ್ಶಿ, ಫಿಲಂ ಚೇಂಬರ್‌

ಮಲ್ಟಿಪ್ಲೆಕ್ಸ್‌-ಥಿಯೇಟರ್‌ಗಳಲ್ಲಿ ಏಕ ರೀತಿಯ ಟಿಕೆಟ್‌ ದರ ನಿಗದಿಗೆ ಆಗ್ರಹ: ‘ಮಲ್ಟಿಪ್ಲೆಕ್ಸ್‌ ಹಾಗೂ ಥಿಯೇಟರ್‌ಗಳಲ್ಲಿ ಏಕ ರೀತಿಯ ಟಿಕೆಟ್‌ ದರ ನಿಗದಿ ಮಾಡಲು ಹಿಂದಿನಿಂದಲೂ ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ. ಗರಿಷ್ಠ 200 ರು. ದರ ನಿಗದಿ ಮಾಡುವ ಪ್ರಸ್ತಾವನೆಯನ್ನು ಸರ್ಕಾರದ ಮುಂದೆ ಇಟ್ಟಿದ್ದೇವೆ. ತಾಂತ್ರಿಕ ಕಾರಣಕ್ಕೆ ಈ ಆದೇಶ ಹೊರಬೀಳಲು ವಿಳಂಬವಾಗುತ್ತಿದೆ’ ಎಂದು ಕರ್ನಾಟಕ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಹೇಳಿದ್ದಾರೆ.

ಬೆಂಗಳೂರಿನ ಉತ್ತರಹಳ್ಳಿಯಲ್ಲಿ ಆಧುನೀಕರಣಗೊಂಡ ವೈಭವಿ- ವೈಷ್ಣವಿ ಥಿಯೇಟರ್‌ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ‘ಮಲ್ಟಿಪ್ಲೆಕ್ಸ್‌ಗಳಿಗೆ ಸಮನಾಗಿ ಥಿಯೇಟರ್‌ಗಳೂ ಬೆಳೆಯಬೇಕು. ವೈಭವಿ ಥಿಯೇಟರ್‌ ಮಾಲೀಕ ನರಸಿಂಹಲು ಅದನ್ನು ಮಾಡಿ ತೋರಿಸಿದ್ದಾರೆ’ ಎಂದರು. ನಿರ್ದೇಶಕ ಜೋಗಿ ಪ್ರೇಮ್‌ ನವೀಕರಣಗೊಂಡ ಥಿಯೇಟರ್‌ ಅನ್ನು ಉದ್ಘಾಟಿಸಿ, ‘ಈ ಥಿಯೇಟರ್‌ನ ಸೌಂಡ್‌ ಕ್ವಾಲಿಟಿ ವಿದೇಶಿ ಥಿಯೇಟರ್‌ಗಳ ಗುಣಮಟ್ಟದಲ್ಲಿದೆ’ ಎಂದರು.

ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ.ಚಂದ್ರಶೇಖರ್‌, ವೈಭವಿ ವೈಷ್ಣವಿ ಥಿಯೇಟರ್‌ ಮಾಲೀಕ ನರಸಿಂಹಲು, ಫಿಲಂ ಚೇಂಬರ್‌ ಕಾರ್ಯದರ್ಶಿ ಎನ್‌.ಎಂ.ಸುರೇಶ್‌, ನಟ ರಾಣಾ, ನಟಿ ರೀಷ್ಮಾ ನಾಣಯ್ಯ, ವಿತರಕ ಬಾಷಾ ಮತ್ತಿತರರು ಉಪಸ್ಥಿತರಿದ್ದರು. ಆಧುನೀಕರಣಗೊಂಡ ವೈಭವಿ- ವೈಷ್ಣವಿ ಥಿಯೇಟರ್‌ ಅನ್ನು ನಿರ್ದೇಶಕ ಪ್ರೇಮ್‌ ಉದ್ಘಾಟಿಸಿದರು.

Puneeth Rajkumar ಹುಟ್ಟುಹಬ್ಬಕ್ಕೆ ಕ್ಷಣಗಣನೆ: 4000 ಚಿತ್ರಮಂದಿರಗಳಲ್ಲಿ 'ಜೇಮ್ಸ್‌' ಬಿಡುಗಡೆ

ಶೂಟಿಂಗ್‌ ವೇಳೆ ನಟರು, ಸಿಬ್ಬಂದಿ ರಕ್ಷಣೆಗೆ 8 ನಿಯಮ: ಕನ್ನಡ ಚಿತ್ರಗಳ ಸಾಹಸ ದೃಶ್ಯಗಳ ಚಿತ್ರೀಕರಣದಲ್ಲಿ ಭಾಗವಹಿಸುವ ಸಾಹಸ ಕಲಾವಿದರು ಮತ್ತು ಇತರ ಕಾರ್ಮಿಕರ ರಕ್ಷಣೆಗಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಎಂಟು ನಿಯಮಾವಳಿಗಳನ್ನು ರೂಪಿಸಿದೆ. ಮುಖ್ಯಮಂತ್ರಿಗಳ ಸೂಚನೆಯ ಮೇರೆ ಸಭೆ ಸೇರಿದ್ದ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ, ಚಲನಚಿತ್ರ ಕಾರ್ಮಿಕರ, ಕಲಾವಿದರ, ತಂತ್ರಜ್ಞರ ಒಕ್ಕೂಟ, ಸಾಹಸ ಕಲಾವಿದರ ಸಂಘಗಳು ಈ ನಿಯಮಗಳನ್ನು ಸಿದ್ಧಪಡಿಸಿವೆ. 

ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ಫೈಟರ್‌ ಹಾಗೂ ಎಲ್ಲಾ ವಿಭಾಗದ ಕಾರ್ಮಿಕರಿಗೆ ಕಡ್ಡಾಯ ವಿಮೆ, ಸಾಹಸ ದೃಶ್ಯ ಚಿತ್ರೀಕರಣದ ವೇಳೆ ಆ್ಯಂಬ್ಯುಲೆನ್ಸ್‌, ವೈದ್ಯರು, ಪ್ರಥಮ ಚಿಕಿತ್ಸೆ ವ್ಯವಸ್ಥೆ ಮಾಡಬೇಕು, ಸಾಹಸ ಚಿತ್ರೀಕರಣಕ್ಕೆ ನುರಿತ ತಂತ್ರಜ್ಞರು ಹಾಗೂ ಕಾರ್ಮಿಕರನ್ನು ಬಳಸಿಕೊಳ್ಳಬೇಕು, ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ಫೈಟ​ರ್‍ಸ್ ಹಾಗೂ ಇತರರು ಸ್ವಯಂ ಪ್ರೇರಣೆಯಿಂದ ಕೆಲಸ ಮಾಡುವುದಾಗಿ ಒಪ್ಪಿ ಸಹಿ ಮಾಡಿರುವ ಒಪ್ಪಂದ ಪತ್ರ ಮಾಡಬೇಕು, ಚಿತ್ರೀಕರಣದ ಸ್ಥಳದಲ್ಲಿ ಯಾವುದೇ ಸಂಘದ ಕಾರ್ಮಿಕರಿಗೆ ತೊಂದರೆ ಉಂಟಾದಾಗ ಆಯಾ ಸಂಘದ ಮುಖ್ಯಸ್ಥರೇ ನೇರ ಹೊಣೆಯಾಗಿರುತ್ತಾರೆ ಎಂಬ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

click me!