
'ಮಳೆ', 'ಧೈರ್ಯಂ' ಹಾಗೂ 'ದಿಲ್ ಪಸಂದ್' ಚಿತ್ರದ ಮೂಲಕ ವಿಭಿನ್ನ ಕಥಾಹಂದರಗಳನ್ನು ತೆರೆಗೆ ತಂದಿದ್ದ ನಿರ್ದೇಶಕ ಶಿವತೇಜಸ್ ಇದೀಗ ಹೊಸ ಸಿನಿಮಾದೊಂದಿಗೆ ಕನ್ನಡ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ಅವರ ಹೊಸ ಚಿತ್ರದ ಹೆಸರು 'ಪಾರ್ಟ್ನರ್'.
ಇಂದಿನ ಯುವಜನತೆಯಲ್ಲಿ ಪ್ರೀತಿ, ಬ್ರೇಕ್ಅಪ್ ಹಾಗೂ ಲಿವ್-ಇನ್ ಸಂಬಂಧಗಳು ಸಾಮಾನ್ಯವಾಗಿರುವ ಕಾಲಘಟ್ಟದಲ್ಲಿ, ಜೀವನದಲ್ಲಿ ನಿಜವಾದ 'ಪಾರ್ಟ್ನರ್' ಎಂದರೆ ಕೊನೆಯವರೆಗೂ ನಂಬಿಕೆ, ಪ್ರೀತಿ ಮತ್ತು ಬೆಂಬಲದೊಂದಿಗೆ ಜೊತೆಯಾಗಿ ನಿಲ್ಲುವ ಜೀವನ ಸಂಗಾತಿ ಎಂಬ ಸಂದೇಶವನ್ನು ಈ ಚಿತ್ರದ ಮೂಲಕ ನಿರ್ದೇಶಕರು ಹೇಳಲು ಹೊರಟಿದ್ದಾರೆ.
ರೊಮ್ಯಾಂಟಿಕ್ ಕಾಮಿಡಿಯ ಜೊತೆಗೆ ಭಾವನಾತ್ಮಕ ಕಥಾಹಂದರವನ್ನು ಒಳಗೊಂಡಿರುವ 'ಪಾರ್ಟ್ನರ್' ಪ್ರೇಕ್ಷಕರಿಗೆ ಮನರಂಜನೆಯ ಜೊತೆಗೆ ಬದುಕಿನ ಮೌಲ್ಯಗಳನ್ನು ನೆನಪಿಸುವ ಫ್ಯಾಮಿಲಿ ಎಂಟರ್ಟೈನರ್ ಆಗಿ ಮೂಡಿಬಂದಿದೆ. ಇಂದಿನ ಕಾಲದಲ್ಲಿ ಮದುವೆಗೆ ಸರ್ಕಾರಿ ಉದ್ಯೋಗ ಅಥವಾ ಸಾಫ್ಟ್ವೇರ್ ವೃತ್ತಿಯವರನ್ನೇ ಆದ್ಯತೆ ನೀಡುವ ಸಾಮಾಜಿಕ ಮನೋಭಾವವನ್ನೂ ಚಿತ್ರದಲ್ಲಿ ಸೂಕ್ಷ್ಮವಾಗಿ ಚಿತ್ರಿಸಲಾಗಿದೆ.
ಚಿತ್ರದಲ್ಲಿ ಕೃಷ್ಣ ಅಜೇಯ್ ರಾವ್ ನಾಯಕನಾಗಿ ಹಾಗೂ ಬೃಂದಾ ಆಚಾರ್ಯ ನಾಯಕಿಯಾಗಿ ಅಭಿನಯಿಸಿದ್ದಾರೆ. ಹಿರಿಯ ನಟ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಪಾತ್ರ ಕಥೆಗೆ ಮತ್ತಷ್ಟು ಬಲ ತುಂಬಲಿದೆ. ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸದ್ಯ ಪೋಸ್ಟ್ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ.
ಹೆಚ್.ಪಿ.ಆರ್. ಎಂಟರ್ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಹರೀಶ್ ದೇವಿತಂದ್ರೆ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರಕ್ಕೆ ಸುಜ್ಞಾನ್ ಅವರ ಛಾಯಾಗ್ರಹಣ, ನಕುಲ್ ಅಭಯಂಕರ್ ಅವರ ಸಂಗೀತ ನಿರ್ದೇಶನ, ಕೆ.ಎಂ. ಪ್ರಕಾಶ್ ಅವರ ಸಂಕಲನವಿದೆ. ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ಕವಿರಾಜ್, ಪ್ರಮೋದ್ ಮರವಂತೆ, ನಾಗಾರ್ಜುನ ಹಾಗೂ ಶರ್ಮಾ ಸಾಹಿತ್ಯ ರಚಿಸಿದ್ದಾರೆ. ವಿಭಿನ್ನ ಕಥಾವಸ್ತು ಮತ್ತು ಮನಮುಟ್ಟುವ ಭಾವನೆಗಳೊಂದಿಗೆ 'ಪಾರ್ಟ್ನರ್' ಕನ್ನಡ ಸಿನಿಪ್ರೇಕ್ಷಕರ ಗಮನ ಸೆಳೆಯುವ ನಿರೀಕ್ಷೆಯಲ್ಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.