Kichcha Sudeep: ಸುದೀಪ್‌ ಕನ್ನಡಪ್ರೇಮ ಮತ್ತೆ ಸಾಬೀತು, ದುಬೈನಲ್ಲೂ ಕನ್ನಡಿಗರ ಜೊತೇನೇ ಪಟ್ಟಾಂಗ!

By Bhavani BhatFirst Published Sep 16, 2024, 7:26 PM IST
Highlights

ಸೈಮಾ ಇವೆಂಟ್‌ನಲ್ಲಿ ಕಿಚ್ಚ ಸುದೀಪ್ ಅವರು 'ಕನ್ನಡ್' ಎಂದು ಹೇಳಿದ ಗಣ್ಯರೊಬ್ಬರನ್ನು ತಿದ್ದಿ, 'ಕನ್ನಡ' ಎಂದು ಹೇಳುವಂತೆ ಮಾಡಿದ್ದರು. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಮತ್ತೊಂದು  ಅಲ್ಲಿನದೇ ವಿಡಿಯೋದಲ್ಲಿ ಸುದೀಪ್ ಕನ್ನಡದ ನಟನಟಿಯರ ಜೊತೆಗೆ ಹರಟೆ ಹೊಡೀತಿರೋದು ಕಾಣಿಸ್ತಿದೆ. 

ಮೊನ್ನೆ ಮೊನ್ನೆ ದುಬೈನಲ್ಲಿ ಅದ್ದೂರಿಯಾಗಿ ಸೈಮಾ 2024 ಇವೆಂಟ್ ನಡೆದಿದೆ. ಇದರಲ್ಲಿ ಕಿಚ್ಚ ಸುದೀಪ್‌ ಭಾಗವಹಿಸಿದ್ದರು. ಗಣ್ಯರೊಬ್ಬರಿಗೆ ಕಿಚ್ಚ ಸುದೀಪ್‌ ಸರಿಯಾಗಿಯೇ ಟಾಂಗ್‌ ಕೊಟ್ಟರು. ವೇದಿಕೆ ಮೇಲೆ ಇದ್ದ ಒಬ್ಬ ಗಣ್ಯರು, 'ಕನ್ನಡ್' ಎಂಬ ಪದಬಳಕೆ ಮಾಡಿದರು. ಕೂಡಲೇ ಕಿಚ್ಚ, ಅವರು ಹೇಳಿದ್ದನ್ನು ತಿದ್ದಿದ್ದಾರೆ. "ಅಲ್ಲಾ, ನಾನು ಮುಂಬೈನವರು ಮಾತ್ರ ಕನ್ನಡವನ್ನು ಕನ್ನಡ್ ಅಂತ ಹೇಳ್ತಾರೆ ಅಂದ್ಕೊಂಡಿದ್ದೆ. ಆದರೆ ನೀವು ಹೈದರಾಬಾದ್‌ನವರಾಗಿಯೂ ಕನ್ನಡ್ ಅಂತೀರಲ್ಲಾ" ಎಂದು ಹೇಳಿದ್ದಾರೆ. 

ಯಾರು ವೇದಿಕೆ ಮೇಲೆ 'ಕನ್ನಡ್‌' ಅಂತ ಹೇಳಿದ್ದರೋ, ಅವರು ಕೂಡಲೇ ಸುದೀಪ್‌ಗೆ ಕ್ಷಮೆ ಕೇಳಿ 'ಕನ್ನಡ' ಅಂತ ಹೇಳಿದ್ದಾರೆ. ಆಗ ಅಲ್ಲಿ ಇದ್ದವರು ಜೋರಾಗಿ ಕೂಗಿ ಚಪ್ಪಾಳೆ, ಶಿಳ್ಳೆ ಹೊಡೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಲ್ಲಿ ವೈರಲ್ ಆಯಿತು. ಸುದೀಪ್ ಅವರ ಕನ್ನಡ ಪ್ರೀತಿಯನ್ನು ಎಲ್ಲರೂ ಹೊಗಳಿದ್ದಾರೆ.

Latest Videos

ಎರಡು ವರ್ಷಗಳ ಹಿಂದೆ ಹೊರರಾಜ್ಯದಲ್ಲಿ ಸುದೀಪ್ ಅವರು ಒಂದು ಸಂದರ್ಶನ ನೀಡಿದ್ದರು. ಅದರಲ್ಲೂ ನಿರೂಪಕಿ 'ಕನ್ನಡ್' ಎಂದು ಹೇಳಿದ್ದರು. ಆಗ ಸುದೀಪ್ ಅವರನ್ನು ತಿದ್ದಿದ್ದರು. "ಹಿಂದಿ ಹೇಗೆ ಹಿಂದ್ ಆಗುವುದಿಲ್ಲವೋ, ಹಾಗೆ ಕನ್ನಡವು ಕನ್ನಡ್ ಆಗುವುದಿಲ್ಲ. ನೀವು ಕನ್ನಡ ಭಾಷೆ ಮಾತನಾಡುವುದಿರಲಿ, ಭಾಷೆಯ ಹೆಸರನ್ನಾದರೂ ಸರಿಯಾಗಿ ಹೇಳಿ. ನೀವು ತೆಲುಗು, ತಮಿಳು ಹೆಸರನ್ನು ಸರಿಯಾಗಿ ಹೇಳುತ್ತೀರಿ, ಆದರೆ ಕನ್ನಡದ ಬಗ್ಗೆ ಹೇಳುವಾಗ ತಪ್ಪಾಗಿ ಹೇಳುತ್ತೀರಿ" ಎಂದು ಕ್ಲಾಸ್ ತೆಗೆದುಕೊಂಡಿದ್ದರು. ಆಗಲೂ ಅವರ ನಿಲುವು ಎಲ್ಲರಿಗೆ ಮೆಚ್ಚುಗೆಯಾಗಿತ್ತು.

ಇಲ್ಲಿ ಇನ್ನೊಂದು ವಿಡಿಯೋ ಇದೆ ನೋಡಿ. ಇಲ್ಲಿ ಸ್ವತಃ ಕಿಚ್ಚ ಸುದೀಪ್‌, ಇದೇ ಇವೆಂಟ್‌ಗೆ ಬಂದ ಕನ್ನಡದ ಸ್ಟಾರ್‌ಗಳ ಜೊತೆಗೇ ಪಟ್ಟಾಂಗ ಹೊಡೆಯುತ್ತಿದ್ದಾರೆ. ಇಲ್ಲಿ ಅವರ ಜೊತೆಗೆ ಇರುವವರಾದರೂ ಯಾರು ನೋಡಿ. ಒಬ್ಬರು ಕನ್ನಡದ ಒಂದು ಕಾಲದ ಕ್ವೀನ್‌, ಕನಸಿನ ಕನ್ಯೆ ಮಾಲಾಶ್ರೀ. ಇನ್ನೊಬ್ಬರು ಅವರ ಮಗಳು ಆರಾಧನಾ. ಆರಾಧನಾ ಇತ್ತೀಚೆಗೆ ಕಾಟೇರ ಫಿಲಂನಲ್ಲಿ ಗಮನ ಸೆಳೆದಿದ್ದಾರೆ. ಮತ್ತೊಬ್ಬರು ವಿಲನ್‌ ಪಾತ್ರಗಳಲ್ಲಿ ರಂಜಿಸುವ ರವಿಶಂಕರ್‌. ಇವರ ಮೂಲ ತೆಲುಗು ಆದರೂ ಕನ್ನಡ ಫಿಲಂಗಳಲ್ಲೇ ಇವರು ಜನಪ್ರಿಯತೆ ಪಡೆದವರು. ಇಲ್ಲಿರುವ ಅಷ್ಟೂ ಮಂದಿ ಕನ್ನಡವನ್ನು ಚೆನ್ನಾಗಿ ಬಲ್ಲವರು ಹಾಗೂ ಕನ್ನಡ ಫಿಲಂಗಳಿಂದ ರಾಷ್ಟ್ರೀಯ ಲೆವೆಲ್‌ನಲ್ಲಿ ಹೆಸರಾದವರು. 

ಲಕ್ಷ್ಮೀ-ಮಾಲಾಶ್ರೀ ಅವ್ರೆಲ್ಲ ಯಾವುದೇ ಕಂಪ್ಲೇಂಟ್ ಮಾಡ್ತಿರ್ಲಿಲ್ಲ, ಸಿನಿಮಾ ಪ್ರೀತಿ ಅಷ್ಟಿತ್ತು: ಕೆ ಮಂಜು!

ಈ ವಿಡಿಯೋದಲ್ಲಿ ಕಿಚ್ಚ ಸುದೀಪ್‌, ಆರಾಧನಾ ಅವರ ಕೈಯಲ್ಲಿರುವ ಏನನ್ನೋ ತೋರಿಸಿ ನಗಿಸುತ್ತಿದ್ದಾರೆ. ಬಹುಶಃ ಟ್ಯಾಟೂ ತೋರಿಸಿ ಏನೋ ಹೇಳುತ್ತಿರಬಹುದು. ಈ ವಿಡಿಯೋ ಇದೀಗ ವೈರಲ್‌ ಆಗುತ್ತಿದೆ. ಕನ್ನಡ ನೆಟಿಜೆನ್‌ಗಳು ಇದನ್ನು ನೋಡಿ ಖುಷಿಯಾಗಿದ್ದಾರೆ. 

ಅನೇಕ ಸಲ ನಮ್ಮ ಸೆಲೆಬ್ರಿಟಿಗಳು ವೇದಿಕೆಯ ಮೇಲೆ ಕನ್ನಡದ ಮೇಲೆ ಪ್ರೀತಿಯ ಸುರಿಮಳೆ ಸುರಿಸುತ್ತಾರೆ. ಆದರೆ ಸುದೀಪ್‌ ಹಾಗಲ್ಲ. ಅವರು ವಿದೇಶಕ್ಕೆ ಹೋದರೂ ಕನ್ನಡಿಗರನ್ನು ಹುಡುಕಿ ಹುಡುಕಿ ಮಾತನಾಡಿಸುತ್ತಾರೆ. ಕನ್ನಡಿಗರು ಮಾತನಾಡಿಸಿದರೆ ಚೆನ್ನಾಗಿ ಸ್ಪಂದಿಸುತ್ತಾರೆ. ಅಚ್ಚಕನ್ನಡದಲ್ಲಿ ಮಾತನಾಡುತ್ತಾರೆ. ಬಿಗ್‌ ಬಾಸ್‌ ಕಾರ್ಯಕ್ರಮದಲ್ಲಿ ಅವರ ಸ್ಪಷ್ಟ ಸುಲಲಿತ ಕನ್ನಡ ಮಾತು ಕೇಳಿ ಫಿದಾ ಆಗದವರೇ ಇಲ್ಲ. 

ವಿವಾದಕ್ಕೆ ಗುರಿಯಾಗಿದ್ದ'H2O' ಸಿನಿಮಾ ಹಾಗೂ ಆ ದಿನಗಳ ಬಗ್ಗೆ ಬಾಯ್ಬಿಟ್ಟ ಉಪೇಂದ್ರ!
 

ಸದ್ಯ ಸುದೀಪ್ ಅವರು 'ಮ್ಯಾಕ್ಸ್' ಸಿನಿಮಾದ ರಿಲೀಸ್‌ ವಿಚಾರದಲ್ಲಿ ಬ್ಯುಸಿ ಆಗಿದ್ದಾರೆ. 'ವಿಕ್ರಾಂತ್ ರೋಣ' ಬಳಿಕ ತೆರೆಗೆ ಬರುತ್ತಿರುವ ಸಿನಿಮಾ ಇದಾಗಿದ್ದು, ಕನ್ನಡದ ಜೊತೆಗೆ ಬೇರೆ ಬೇರೆ ಭಾಷೆಗಳಲ್ಲೂ ರಿಲೀಸ್ ಆಗಲಿದೆ. ವಿಜಯ್ ಕಾರ್ತಿಕೇಯನ್ ಇದರ ನಿರ್ದೇಶನ ಮಾಡುತ್ತಿದ್ದು, ವಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿದೆ.

 

click me!