ಅಕ್ಷಿ ಸಿನಿಮಾ ನೋಡಿ ನನ್ನ ಮಗ ನೇತ್ರದಾನಕ್ಕೆ ಮುಂದಾದ: ಜಾಕ್‌ ಮಂಜುನಾಥ್‌

By Kannadaprabha NewsFirst Published Nov 26, 2021, 9:22 AM IST
Highlights

‘ಅಕ್ಷಿ ಸಿನಿಮಾ ನೋಡುತ್ತಿದ್ದರೆ ಅಪ್ಪು, ಅಣ್ಣಾವ್ರೇ ಕಣ್ಣೆದುರು ಬರುತ್ತಿದ್ದರು. ಪದೇ ಪದೇ ಕಣ್ಣೊದ್ದೆ ಆಗುತ್ತಿತ್ತು. ಚಿತ್ರ ನೋಡಿ ಹೊರಬಂದಾಗ ನನ್ನ ಮಗ ಹೇಳಿದ ಮೊದಲ ಮಾತು, ಅಪ್ಪ, ನಾನೂ ಕಣ್ಣು ದಾನ ಮಾಡಬೇಕು ಅಂತ. ಹೊಸ ಹುಡುಗರಲ್ಲೂ ಅಂಥದ್ದೊಂದು ಅರಿವು ಮೂಡಿಸುವ ಚಿತ್ರವಿದು’ ಎಂದು ನಿರ್ಮಾಪಕ ಜಾಕ್‌ ಮಂಜುನಾಥ್‌ ಹೇಳಿದ್ದಾರೆ.

ರಾಷ್ಟ್ರಪ್ರಶಸ್ತಿ ವಿಜೇತ, ನೇತ್ರದಾನದ (Eye Donation) ಬಗ್ಗೆ ಅರಿವು ಮೂಡಿಸುವ ‘ಅಕ್ಷಿ’ (Akshi) ಚಿತ್ರ ಡಿ.3ರಂದು ತೆರೆಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಜಾಕ್‌ ಮಂಜುನಾಥ್‌ (Jack Manju) ಮಾತನಾಡಿದರು. ಈ ಸಿನಿಮಾವನ್ನು ಜಾಕ್‌ ಮಂಜು ಅವರೇ ವಿತರಣೆ ಮಾಡಲಿದ್ದಾರೆ.

ನಿರ್ದೇಶಕ ಮನೋಜ್‌ ಕುಮಾರ್‌ (Manoj Kumar), ‘ಈ ಸಿನಿಮಾದ ಆಡಿಯೋ ಹಕ್ಕನ್ನು ಪುನೀತ್‌ ರಾಜ್‌ಕುಮಾರ್‌ (Puneeth Rajkumar) ಅವರ ಪಿಆರ್‌ಕೆ (PRK) ಸ್ಟುಡಿಯೋ ಪಡೆದುಕೊಂಡಿತ್ತು. ಅಪ್ಪು ಗತಿಸುವ ಕೆಲವು ದಿನಗಳ ಮುಂಚೆ ನಿಮ್ಮ ಸಿನಿಮಾ ನೋಡಬೇಕು, ಪ್ರೈವೇಟ್‌ ಲಿಂಕ್‌ (Priavte link) ಕಳಿಸಿ ಅಂದಿದ್ದರು. ರಾತ್ರಿಯಿಡೀ ನಿದ್ದೆ ಬಿಟ್ಟು ಪ್ರೈವೇಟ್‌ ಲಿಂಕ್‌ ಕ್ರಿಯೇಟ್‌ ಮಾಡಿ ಅವರಿಗೆ ಕಳಿಸಿದ್ದೆ. ಇದೀಗ ಅವರ ಅನುಪಸ್ಥಿತಿಯಲ್ಲಿ ಸಿನಿಮಾ ಬಿಡುಗಡೆ ಮಾಡಬೇಕಾಗಿರುವುದು ನೋವಿನ ಸಂಗತಿ. ಡಾ.ರಾಜ್‌ (Dr. Rajkumar) ನಿಧನದ ಬಳಿಕ ಕೆಲವು ಹಳ್ಳಿಗಳಲ್ಲಿ ನಡೆದ ಘಟನೆಗಳಿಂದ ಸ್ಫೂರ್ತಿ ಪಡೆದು ಈ ಚಿತ್ರ ನಿರ್ಮಿಸಲಾಗಿದೆ. ಮಕ್ಕಳ ಮೂಲಕ ನೇತ್ರದಾನದ ಅರಿವು ಮೂಡಿಸುವ ಕತೆ ಚಿತ್ರದ್ದು’ ಎಂದರು.

"

ನಿರ್ಮಾಪಕ ಕಲಾದೇಗುಲ ಶ್ರೀನಿವಾಸ್‌ (Kaladegula Srinivas), ‘ಪುನೀತ್‌ ಈ ಸಿನಿಮಾ ನೋಡಿದ್ದಾರೆ ಅಂತ ನನ್ನ ಒಳಮನಸ್ಸು ಹೇಳುತ್ತಿದೆ. ಒಂದು ವೇಳೆ ನೋಡದಿದ್ದರೂ ಅವರ ಕಣ್ಣುಗಳು ಚಿತ್ರ ನೋಡುವ ಭರವಸೆ ಇದೆ’ ಎಂದರು. ಈ ಚಿತ್ರದ ‘ಕಣ್ಣೊಂದು ಹೇಳಿತು, ಬದುಕಲು ಬಿಡಿ ನನ್ನನ್ನು..’ ಹಾಡನ್ನು ಪುನೀತ್‌ ಅವರಿಗೆ ಅರ್ಪಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿ ಗುಪ್ತಾ ಸೀರೀಸ್‌ ಮಾಲಿಕ ವೆಂಕಟೇಶ್‌ ಗುಪ್ತಾ ಹಾಗೂ ಚಿತ್ರತಂಡದವರು ಇದ್ದರು.

ರಾಷ್ಟ್ರಪ್ರಶಸ್ತಿ ವಿಜೇತ ಅಕ್ಷಿ ಚಿತ್ರ ಶೀಘ್ರ ತೆರೆಗೆ!

ನಟಿ ಇಳಾ ವಿಟ್ಲ ಮಾತನಾಡಿ, ‘ನನಗೆ ನೆಗೆಟಿವ್‌ ರೋಲ್‌ (Negative role) ಮಾಡಿ ಮಾಡಿ ಸಾಕಾಗಿತ್ತು. ಆತ್ಮತೃಪ್ತಿಯ ಕೆಲಸಕ್ಕಾಗಿ ಕಾಯುತ್ತಿದ್ದೆ. ಈ ಪಾತ್ರ ಆ ತೃಪ್ತಿ ತಂದುಕೊಟ್ಟಿತು. ಕಲಾವಿದರನ್ನು ಒಂದೇ ಪಾತ್ರಕ್ಕೆ ಫಿಕ್ಸ್‌ ಮಾಡಬೇಡಿ. ಅವರ ಪ್ರತಿಭೆ ಹೊರಬರಲು ಅವಕಾಶ ಕೊಡಿ’ ಎಂದು ವಿನಂತಿಸಿದರು.

click me!