‘ಆ್ಯಕ್ಟ್ 1978’ ಕನ್ನಡಿಗರ ಗಮನ ಸೆಳೆದ ನಿರ್ದೇಶಕ ಮಂಸೋರೆ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
'ರಾಷ್ಟ್ರ ಪ್ರಶಸ್ತಿ' ನಿರ್ದೇಶಕ ಮಂಸೋರೆ ಮತ್ತು ಅಖಿಲಾ ಜುಲೈ 4ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕೋವಿಡ್ ನಿಯಮದ ಕಾರಣ ಕೆಲವೇ ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ ನೆರವೇರಿತು. ಜೀವನದ ಮುಖ್ಯ ದಿನದಂದು ಇಬ್ಬರು ಮುಖ್ಯ ವ್ಯಕ್ತಿಗಳನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಮಂಸೋರೆ ಬರೆದುಕೊಂಡಿದ್ದಾರೆ.
'ನನ್ನ ಜೀವನದ ಇಬ್ಬರು ಬಹು ಮುಖ್ಯ ವ್ಯಕ್ತಿಗಳ ಅನುಪಸ್ಥಿತಿಯಲ್ಲಿ.. ಒಂದು ಬಹು ಕಾಲದ ಗೆಳತಿ ಹಾಗೂ ನನ್ನ ಜೀವನದ ಹಾದಿಯಲ್ಲಿ ಪ್ರಮುಖ ಪಾತ್ರವಹಿಸಿರುವ ಅಖಿಲಾ ಅರೊಂದಿಗೆ ವಿವಾಹ ನಿಶ್ಚಿತಾರ್ಥ ನೆರವೇರಿತು. ಕೋವಿಡ್ ನಿಯಮಾವಳಿಗಳ ಕಾರಣದಿಂದ ಹೆಚ್ಚು ಜನರನ್ನು ಕರೆಯಲಾಗಲಿಲ್ಲಾಕ್ಷಮೆ ಇರಲಿ,' ಎಂದು ಬರೆದುಕೊಂಡಿರುವ ಮಂಸೋರೆ, ಸ್ನೇಹಿತ ಸಂಚಾರಿ ವಿಜಯ್ ಮತ್ತು ತಂದೆ ಫೋಟೋವನ್ನು ಹಂಚಿಕೊಂಡಿದ್ದಾರೆ. ಆ.15ರಂದು ಇವರ ವಿವಾಹ ಸಮಾರಂಭ ನಡೆಯಲಿದೆ.
ಪರಕೀಯರ ವಿರುದ್ಧ ಸಮರ ಸಾರಿದ ಮೊದಲ ಮಹಿಳೆಯ ಕತೆ: ಮಂಸೋರೆ
2014ರಲ್ಲಿ ಬಿಡುಗಡೆಯಾದ ಸಂಚಾರಿ ವಿಜಯ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ 'ಹರಿವು' ಚಿತ್ರಕ್ಕೆ ಉತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಬಂದಿತ್ತು. ಚಿತ್ರದಲ್ಲಿ ಸಂಚಾರಿ ವಿಜಯ್ ಅಭಿನಯ ಎಂಥವರಿಗೂ ಆಶ್ಚರ್ಯ ತರಿಸಿತ್ತು. 2018ರಲ್ಲಿ 'ನಾತಿಚರಾಮಿ' ಚಿತ್ರದಲ್ಲಿ ಶ್ರುತಿ ಹರಿಹರನ್ ಮತ್ತು ಸಂಚಾರಿ ವಿಜಯ್ ನಟಿಸಿದ್ದ ಚಿತ್ರಕ್ಕೆ ಉತ್ತಮ ಪ್ರಾದೇಶಿಕ ಚಿತ್ರ ರಾಷ್ಟ್ರ ಪ್ರಶಸ್ತಿ ಪಡೆಯಿತು ಹಾಗೂ ಮಂಸೋರೆ ಅವರ ಉತ್ತಮ ಸಾಹಿತ್ಯಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸಿತು. 2020ರಲ್ಲಿ ಲಾಕ್ಡೌನ್ ನಂತರ ಬಿಡುಗಡೆಯಾದ ಮೊದಲ ದಕ್ಷಿಣ ಭಾರತ ಚಿತ್ರ ಆ್ಯಕ್ಟ್ 1978. ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರು ಪಡೆದ ಈ ಚಿತ್ರ ಮುಂಬರುವ ದಿನಗಳಲ್ಲಿ ಮತ್ತೊಂದು ಪ್ರಶಸ್ತಿ ಮಡಿಲಿಗೇರಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ .ಸದ್ಯಕ್ಕೆ‘ರಾಣಿ ಅಬ್ಬಕ್ಕ’ನ ಕುರಿತ ಚಿತ್ರ ಮಾಡುವ ತಯಾರಿಯಲ್ಲಿದ್ದಾರೆ ಮಂಸೋರೆ.