
ಸದ್ದಿಲ್ಲದೆ ಸೆಟ್ಟೇರುವ ಸಿನಿಮಾಗಳು ಶೂಟಿಂಗ್ ಮುಗಿಸಿಕೊಂಡು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಗಮನ ಸೆಳೆದು ಆ ನಂತರ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿವೆ. ಈ ಸಾಲಿಗೆ ‘ಅವಲಕ್ಕಿ ಪವಲಕ್ಕಿ’ ಸಿನಿಮಾ ಕೂಡ ಸೇರಿಕೊಳ್ಳುತ್ತಿದೆ. ಹಲವು ಚಿತ್ರೋತ್ಸವಗಳಿಗೆ ಆಯ್ಕೆ ಆಗಿ ಸುಮಾರು 60ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲು ಸಜ್ಜಾಗಿದೆ. ಅದರ ಮೊದಲ ಹಂತವಾಗಿ ಚಿತ್ರತಂಡ ಇತ್ತೀಚೆಗಷ್ಟೆಟ್ರೇಲರ್ ಬಿಡುಗಡೆ ಮಾಡಿತು.
ಈ ನೆಪದಲ್ಲಿ ಮಾಧ್ಯಮಗಳ ಮುಂದೆ ಬಂತು ಚಿತ್ರತಂಡ. ರಂಜಿತಾ ಸುಬ್ರಹ್ಮಣ್ಯ ನಿರ್ಮಾಣ, ದುರ್ಗಾಪ್ರಸಾದ್ ನಿರ್ದೇಶನದ ಚಿತ್ರವಿದು. ಇಂದಿರಾ ನಾಯರ್, ರಾಘವೇಂದ್ರ, ಸಿಂಚನಾ, ಪ್ರವೀಣ್, ಪ್ರಿಯಾ ಶಂಕರ್, ಉದಯ ಕುಮಾರ್, ನಾಗರಾಜ್ ಭಂಡಾರಿ ಚಿತ್ರದಲ್ಲಿ ನಟಿಸಿದ್ದಾರೆ.
ಕಾಡು, ಆದಿವಾಸಿಗಳು, ಮಕ್ಕಳು ಮತ್ತು ಅರಣ್ಯ ನಾಶದ ಹಿಂದಿನ ಸಂಚುಗಳೇ ಈ ಚಿತ್ರದ ಪ್ರಧಾನ ಅಂಶಗಳು. ‘ಇದು ನನ್ನ ಮೊದಲ ಸಿನಿಮಾ. ಮೂಲತಃ ಹೈದರಾಬಾದ್. ವಿಭಿನ್ನಕತೆಯನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದೇನೆ. ಫ್ಯಾಂಟಸಿ, ಸೈನ್ಸ್ ಮತ್ತು ಜೀವನ ಇಲ್ಲಿದೆ. ಈಗಾಗಲೇ ಹಲವಾರು ಚಿತ್ರೋತ್ಸವಗಳಲ್ಲಿ ಆನ್ಲೈನ್ ಮೂಲಕ ಆಯ್ಕೆ ಆಗಿ ಹಲವು ಪ್ರಶಸ್ತಿಗಳಿಗೆ ಪಾತ್ರವಾಗಿದೆ. ನೋಡಿದವರು ಸಿನಿಮಾ ಚೆನ್ನಾಗಿದೆ ಎನ್ನುತ್ತಿದ್ದಾರೆ. ನೀವು ಸಿನಿಮಾ ನೋಡಿ’ ಎನ್ನುತ್ತಾರೆ ದುರ್ಗಾಪ್ರಸಾದ್.
‘ನಾವೆಲ್ಲ ಮೈಸೂರಿನವರು. ಬಹುತೇಕ ಹೊಸಬರೇ ಚಿತ್ರದಲ್ಲಿ ನಟಿಸಿದ್ದಾರೆ. ನನಗೆ ಕಥೆ ಇಷ್ಟವಾಗಿ ಈ ಚಿತ್ರವನ್ನು ನಿರ್ಮಿಸಲು ಒಪ್ಪಿಕೊಂಡೆ. ಚಿತ್ರೋತ್ಸವಗಳಲ್ಲಿ ಮೆಚ್ಚುಗೆ ಗಳಿಸಿದ ಸಿನಿಮಾ ಚಿತ್ರಮಂದಿರಗಳಲ್ಲೂ ಯಶಸ್ಸು ಕಾಣುತ್ತದೆಂಬ ನಂಬಿಕೆ ಇದೆ’ ಎಂಬುದು ರಂಜಿತಾ ಸುಬ್ರಹ್ಮಣ್ಯ ಮಾತು. ನಿರೀಕ್ಷಿತ್ ಕ್ಯಾಮೆರಾ, ಜುಬಿನ್ ಪಾಲ್ ಸಂಗೀತ ಚಿತ್ರಕ್ಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.