
‘ಮ್ಯಾಂಗೋ ಪಚ್ಚ’ ಚಿತ್ರದ ಮೂಲಕ ಕಿಚ್ಚ ಸುದೀಪ್ ಸೋದರಳಿಯ ಸಂಚಿತ್ ಸಂಜೀವ್ ಮೆಚ್ಚುಗೆ ಗಳಿಸಿರುವುದು ಮಾತ್ರವಲ್ಲ, ಈ ಸಿನಿಮಾದ ಖಳ ಪಾತ್ರಧಾರಿ ಪ್ರಶಾಂತ್ ಹಿರೇಮಠ ಕೂಡ ಅಪಾರ ಹೊಗಳಿಕೆಗೆ ಪಾತ್ರವಾಗಿದ್ದಾರೆ. ಸಿನಿಮಾ ನೋಡಿದವರೆಲ್ಲಾ ಅವರ ಅದ್ಭುತ ನಟನೆಯನ್ನು ಮೆಚ್ಚಿಕೊಳ್ಳುತ್ತಿದ್ದಾರೆ.
ಕಿಚ್ಚ ಸುದೀಪ್ ಮ್ಯಾಂಗೋ ಪಚ್ಚ ಸಿನಿಮಾದ ಚಿತ್ರೀಕರಣ ಸಂದರ್ಭದಲ್ಲಿಯೇ ಅವರ ಪ್ರತಿಭೆಯನ್ನು ಮೆಚ್ಚಿಕೊಂಡು ‘ಮಾರ್ಕ್’ ಸಿನಿಮಾದಲ್ಲಿ ಒಂದು ಪಾತ್ರ ಕೊಟ್ಟಿದ್ದರು. ಈಗಂತೂ ಎಲ್ಲಾ ಸಂದರ್ಭಗಳಲ್ಲಿಯೂ ಮೆಚ್ಚಿಕೊಳ್ಳುತ್ತಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ನಟನಾ ರತ್ನವೊಂದು ದೊರೆತಿದೆ.
ಪ್ರಶಾಂತ್ ಹಿರೇಮಠ 1989ರಿಂದ 2022ರವರೆಗೆ ಮೈಸೂರಿನ ರಂಗಾಯಣದಲ್ಲಿ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದವರು. 180ಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿದ್ದಾರೆ. ನಿರ್ದೇಶನ ಮಾಡಿದ್ದಾರೆ. ಮಹತ್ವದ ಪಾತ್ರಗಳನ್ನು ಮಾಡಿದ್ದಾರೆ. ಇದೀಗ ಚಿತ್ರರಂಗಕ್ಕೆ ಬಂದಿದ್ದಾರೆ.
‘ಮ್ಯಾಂಗೋ ಪಚ್ಚ ಚಿತ್ರದ ನಿರ್ದೇಶಕ ವಿವೇಕ್ ನಾನು ಈ ಸಿನಿಮಾದಲ್ಲಿ ನಟಿಸಲು ಕಾರಣಕರ್ತರು. ಅವರು ಕೊಟ್ಟ ಅವಕಾಶದಿಂದ ಈಗ ಜನ ಗುರುತಿಸುವಂತಾಗಿದೆ. ಅವರು ನನ್ನ ಪಾತ್ರದ ಕುರಿತು, ಅದೊಂದು ಅಬ್ಬರವಿಲ್ಲದ ಪಾತ್ರ, ಸದಾ ಲೆಕ್ಕಾಚಾರ ಮಾಡುವ ಪಾತ್ರ ಎಂದು ಮೊದಲೇ ತಿಳಿಸಿದ್ದರು. ಜನ ಮೆಚ್ಚಿಕೊಂಡಿದ್ದು ಸಂತೋಷ ತಂದಿದೆ’ ಎನ್ನುತ್ತಾರೆ ಪ್ರಶಾಂತ್.
ರಂಗಭೂಮಿಯಲ್ಲಿ ಅಮೋಘ ಸಾಧನೆ ಮಾಡಿರುವ ಅವರು, ‘ಸುದೀಪ್ ನನ್ನ ನಟನೆ ಮೆಚ್ಚಿಕೊಂಡರು. ಶಿವರಾಜ್ಕುಮಾರ್ ಸಿನಿಮಾ ನೋಡಿದ ಬಳಿಕ ನಿಮಗೆ ನಟನೆಯಲ್ಲಿ ಬಹಳ ದೊಡ್ಡ ಭವಿಷ್ಯವಿದೆ ಎಂದು ಹೇಳಿದರು. ಅವರ ಮೆಚ್ಚುಗೆಗೆ, ಚಿತ್ರತಂಡ ಕೊಟ್ಟ ಅವಕಾಶಕ್ಕೆ ನಾನು ಆಭಾರಿ’ ಎನ್ನುತ್ತಾರೆ.
ಸದ್ಯಕ್ಕೆ ಅವರು ನಾಗರಾಜ ಸೋಮಯಾಜಿ ನಿರ್ದೇಶನದ ‘ದೇವಿ ಮಹಾತ್ಮೆ’ ಚಿತ್ರದಲ್ಲಿ ಖಳ ನಾಯಕನ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಅಗಾಧ ಪ್ರತಿಭೆ ಅವರಿಗೆ ಇನ್ನೂ ಸಾಕಷ್ಟು ಸಿನಿಮಾಗಳ ಪಾತ್ರಗಳ ಅವಕಾಶವನ್ನು ಒದಗಿಸುವುದು ನಿಶ್ಚಿತವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.