
ಘೋಷಣೆ ಮಾಡದೇ ಇದ್ದ ಹೊಸ ಥ್ರಿಲ್ಲರ್ ಸ್ಕಿ್ರಪ್ಟ್ ಹಿಡಿದುಕೊಂಡು ಚಿಕ್ಕಮಗಳೂರು ಕಡೆಗೆ ಹೋಗಿ ಕೇವಲ 40 ದಿನಗಳಲ್ಲಿ ಚಾಚೂ ಅನ್ನದೆ ಶೂಟಿಂಗ್ ಮುಗಿಸಿ ಬಂದಿದೆ. ಈ ಚಿತ್ರಕ್ಕೆ ರಿಷಬ್ ಶೆಟ್ಟಿನಾಯಕ. ಟಿಎನ್ ಸೀತಾರಾಮ್ ನಿರ್ದೇಶನದ ‘ಮಗಳು ಜಾನಕಿ’ ಧಾರಾವಾಹಿ ಖ್ಯಾತಿಯ ಗಾನವಿ ಲಕ್ಷ್ಮಣ್ ನಾಯಕಿ.
ರಿಷಬ್ ಶೆಟ್ಟಿಮತ್ತು ತಂಡ ಪ್ಲಾನಿಂಗ್ಗೆ ಹೆಸರುವಾಸಿ. ಅತಿ ಕಡಿಮೆ ಬಜೆಟ್ಟಿನಲ್ಲಿ, ಅತಿ ಕಡಿಮೆ ದಿಗಳಲ್ಲಿ, ಅತಿ ಸುಂದರವಾಗಿ ಶೂಟಿಂಗ್ ಹೇಗೆ ಮಾಡಬಹುದು ಎಂಬುದನ್ನು ಕರಗತ ಮಾಡಿಕೊಂಡಿರುವ ತಂಡ ತಮ್ಮ ಪ್ಲಾನ್ ಪ್ರಕಾರವೇ ಸಾಮಾಜಿಕ ಅಂತರ ಮತ್ತು ಹತ್ತು ಹಲವು ಸುರಕ್ಷತಾ ಕ್ರಮಗಳನ್ನು ಕೈಗೊಂಡು ಶೂಟಿಂಗ್ ಮುಗಿಸಿಕೊಂಡು ಬಂದಿದೆ. ಇದೊಂದು ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಚಿತ್ರ. ನಿಲಯದ ಕಲಾವಿದ ಪ್ರಮೋದ್ ಶೆಟ್ಟಿಪ್ರಮುಖ ಪಾತ್ರ ಮಾಡಿದ್ದಾರೆ. ಅವರಿಲ್ಲದೇ ಇದ್ದರೆ ರಿಷಬ್ ಸಿನಿಮಾ ಪೂರ್ತಿಯಾಗುವುದಾದರೂ ಹೇಗೆ!
ಅರವಿಂದ್ ಕಶ್ಯಪ್ ಚಿತ್ರದ ಛಾಯಾಗ್ರಾಹಕರು. ಉಳಿದಂತೆ ಯಾರ ಹೆಸರೂ ಸದ್ಯಕ್ಕೆ ಬಹಿರಂಗಗೊಂಡಿಲ್ಲ. ಇವತ್ತು ನಾಳೆ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಲು ಮತ್ತಿತರ ಕತೆಗಳನ್ನು ಹೇಳಲು ರಿಷಬ್ ಶೆಟ್ಟಿಕಾತರರಾಗಿದ್ದಾರೆ. ಸಹೃದಯ ಓದುಗರು ಅವರ ಕಡೆಗೆ ಗಮನ ಇಡಬಹುದು. ಎಲ್ಲರೂ ಸುಮ್ಮನೆ ಇರುವ ಹೊತ್ತಿನಲ್ಲಿ ರಿಷಬ್ ತಮ್ಮ ವೇಗ ಹೆಚ್ಚಿಸಿದ್ದಾರೆ. ಅವರ ಸ್ಪೀಡ್ ನೋಡಿದರೆ ಇದೇ ವರ್ಷ ಮತ್ತೆರಡು ಸಿನಿಮಾ ಬರುವುದರಲ್ಲಿ ಅಚ್ಚರಿಯಿಲ್ಲ. ಥಿಯೇಟರ್ ತೆರೆಯದಿದ್ದರೇನಂತೆ ಓಟಿಟಿ ಇದ್ದೇ ಇದೆಯಲ್ಲ, ನೋಡುಗರು ಒಳ್ಳೆಯ ಸಿನಿಮಾಗಾಗಿ ಕಾಯುತ್ತಿದ್ದಾರಲ್ಲ.
ಅಂದಹಾಗೆ ರಿಷಬ್ ಮತ್ತು ಗಾನವಿ ಈ ಹಿಂದೆ ವಿನು ಬಳಂಜ ಸಿನಿಮಾದಲ್ಲಿ ಸಿನಿಮಾದಲ್ಲಿ ನಟಿಸಬೇಕಿತ್ತು. ಆ ಸಿನಿಮಾ ಪೋಸ್ಟ್ಪೋನ್ ಆಗಿರುವುದರಿಂದ ಮಗಳು ಜಾನಕಿಗೆ ಹೊಸ ಸಿನಿಮಾದಲ್ಲಿ ಅವಕಾಶವೆಂಬ ಲಡ್ಡು ಬಾಯಿಗೆ ಬಂದು ಬಿದ್ದಿದೆ. ತಮ್ಮ ನಟನೆಯಿಂದ ಕಿರುತೆರೆ ಪ್ರೇಕ್ಷಕರ ಹೃದಯ ಕದ್ದಿರುವ ಗಾನವಿ ಈಗ ಹಿರಿತೆರೆಗೆ ಪ್ರಮೋಷನ್ ಪಡೆದು ದೊಡ್ಡ ಸಾಗರಕ್ಕೆ ಬಿದ್ದಿದ್ದಾರೆ. ಹಡಗೂ ಅವರದು ಕಡಲೂ ಅವರದೂ. ಸಿನಿಮಾ ಜಗತ್ತಲ್ಲಿ ಗೆಲ್ಲಲಿ ಎಂಬ ಆಶಯ ಮಾತ್ರ ನಮ್ಮದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.