'ಮಧುರ ಮಧುರವೀ ಮಂಜುಳ ಗಾನ' ಭಾಗ-2 ಕೃತಿ ಬಿಡುಗಡೆ!

By Suvarna NewsFirst Published Jan 31, 2020, 3:46 PM IST
Highlights

ಸಿನಿಮಾ ಹಾಡುಗಳ ಸಾಹಿತ್ಯ ಸಂಗ್ರಹದ ‘ಮಧುರ ಮಧುರವೀ ಮಂಜುಳ ಗಾನ’ಮಾಲಿಕೆಯ ಮತ್ತೊಂದು ಪುಸ್ತಕ ಹೊರ ಬಂದಿದೆ. ಹೆಸರಾಂತ ಸಂಗೀತ ನಿರ್ದೇಶಕ ಹಾಗೂ ‘ಸೌಂಡ್‌ ಆಫ್‌ ಮ್ಯೂಜಿಕ್‌’ಸಂಸ್ಥೆಯ ಸಂಸ್ಥಾಪಕ ಗುರುರಾಜ್‌,ತಮ್ಮ ಅವಿರತ ಪರಿಶ್ರಮದ ಮೂಲಕ ಈಗ ‘ಮಧುರ ಮಧುರವೀ ಮಂಜುಳ ಗಾನ ಭಾಗ -2’ ಸಾಹಿತ್ಯ ಭಂಡಾರವನ್ನು ಸಂಗೀತ ಪ್ರಿಯರಿಗೆ ಅರ್ಪಿಸಿದ್ದಾರೆ.

ಇತ್ತೀಚೆಗೆ ಈ ಕೃತಿಯನ್ನು ನಟ ಶರಣ್‌ ಬಿಡುಗಡೆಗೊಳಿಸಿದರು. ಇದೇ ವೇಳೆ ಮಾತನಾಡಿದ ಅವರು ಗುರುರಾಜ್‌ ಮತ್ತು ತಮ್ಮ ನಡುವಿನ ಅವಿನಾಭಾವ ನಂಟನ್ನು ಸ್ಮರಿಸಿಕೊಂಡರು.

ಜೈಪುರ ಲಿಟ್‌ ಫೆಸ್ಟ್: ತರುಣ ಲೇಖಕರ ಸಂಗದಲ್ಲಿ ಕಂಡಿದ್ದಿಷ್ಟು..!

‘ನಾವಿಬ್ಬರು ಉತ್ತರ ಕರ್ನಾಟಕದ ಭಾಗದಿಂದ ಬಂದವರು. ಅದೇ ಕಾರಣಕ್ಕೆ ಹಲವು ವರ್ಷಗಳಿಂದ ಒಳ್ಳೆಯ ಒಡನಾಟ ಹೊಂದಿದ್ದೇವೆ. ಅವರು ಬೆಂಗಳೂರಿಗೆ ಬಂದು ಆರ್ಕೆಸ್ಟ್ರಾ ಸಂಸ್ಥೆ ಕಟ್ಟಿಬೆಳೆದ ರೀತಿಯೇ ನನಗೆ ಸೋಜಿಗ.ಒಂದು ಕಾಲದಲ್ಲಿ ಅವರು ಆರ್ಕೆಸ್ಟ್ರಾ ಸ್ಟಾರ್‌. ಅದರಲ್ಲೂ ಕರೋಕೆ ಹಾಡುಗಳಲ್ಲಿ ದೊಡ್ಡ ಸುದ್ದಿ ಮಾಡಿದವರು. ಅವರು ಈಗ ಅತ್ಯುತ್ತಮ ಸಿನಿಮಾ ಗೀತೆಗಳ ಸಾಹಿತ್ಯವನ್ನು ಒಂದೆಡೆ ಮುದ್ರಿಸಿ, ಸಂಗೀತ ಪ್ರಿಯರಿಗೆ ತಲುಪಿಸುತ್ತಿರುವುದು ಖುಷಿ ವಿಚಾರ’ಎಂದು ಶರಣ್‌ ಹೇಳಿದರು.‘ಮಧುರ ಮಧುರವೀ ಮಂಜುಳ ಗಾನ-ಭಾಗ 2 ಹಲವು ಕಾರಣಕ್ಕೆ ವಿಶೇಷತೆ ಹೊಂದಿದೆ. ಕನ್ನಡದ ಅತ್ಯುತ್ತಮ ಸಿನಿಮಾ ಹಾಡುಗಳ ಸಾಹಿತ್ಯ ಮುದ್ರಣದ ಜತೆಗೆ ಅದು ಸಾಹಿತಿ, ಗಾಯಕ, ಸಂಗೀತ ನಿರ್ದೇಶಕರ ವಿವರ ಮತ್ತು ಭಾವಚಿತ್ರ ಹೊಂದಿದೆ. ಸಿನಿಮಾ ಗೀತೆಗಳ ಜತೆಗೆ ಕನ್ನಡದ ಅತ್ಯುತ್ತಮ ಭಾವಗೀತೆ, ಜಾನಪದ ಗೀತೆ, ಭಕ್ತಿ ಗೀತೆ ಹಾಗೂ ದೇಶಭಕ್ತಿ ಗೀತೆಗಳ ಸಾಹಿತ್ಯವೂ ಇಲ್ಲಿದೆ.

ಜೈಪುರ ಲಿಟ್‌ ಫೆಸ್ಟ್: ಕಂಡ, ಕೇಳಿಸಿಕೊಂಡ ಸಣ್ಣ ಕತೆಗಳು

‘ ಮೊದಲ ಪ್ರಯತ್ನಕ್ಕೆ ಸಿಕ್ಕ ಅಭೂತಪೂರ್ವ ಪ್ರತಿಕ್ರಿಯೆ ಇದಕ್ಕೆ ಪ್ರೇರಣೆ ನೀಡಿತು. ಮೂರ್ನಾಲ್ಕು ವರ್ಷಗಳಿಂದ ಅವಿರತವಾಗಿ ಶ್ರಮಿಸಿ, ಇದನ್ನು ಹೊರ ತಂದಿದ್ದೇನೆ. ನನ್ನ ಪ್ರಕಾರ ಇದು ವೈವಿಧ್ಯಮಯ ಅಪರೂಪದ ಗೀತೆಗಳ ಸಂಗ್ರಹ’ ಎಂದು ಕೃತಿ ಬಗ್ಗೆ ಮಾಹಿತಿ ನೀಡಿದರು ಗುರುರಾಜ್‌. ಉತ್ತರ ಕರ್ನಾಟಕ ಭಾಗದವರೇ ಆದ ಗುರುರಾಜ್‌ ಅವರ ಆತ್ಮೀಯ ಗೆಳೆಯ ರಮಾಕಾಂತ್‌ ಹಾಜರಿದ್ದು ಗುರುರಾಜ್‌ ಅವರ ಸಾಹಸಕ್ಕೆ ಮೆಚ್ಚುಗೆ ಹೇಳಿದರು. ಗುರುರಾಜ್‌ ಪುತ್ರ ಸಾಗರ್‌ ಗುರುರಾಜ್‌ ಸೇರಿದಂತೆ ಹಲವು ಗಾಯಕರು ಈ ಸಂದರ್ಭದಲ್ಲಿ ಹಾಜರಿದ್ದರು.

click me!