
ಅಜಯ್ ರಾವ್ ಮತ್ತು ರಚಿತಾ ರಾಮ್ ಅಭಿನಯಿಸುತ್ತಿರುವ 'ಲವ್ ಯು ರಚ್ಚು' ಸಿನಿಮಾ ಚಿತ್ರೀಕರಣದ ವೇಳೆ ವಿದ್ಯುತ್ ತಂತಿ ತಗಲಿ ಫೈಟಲ್ ವಿವೇಕ್ ಸ್ಥಳದಲ್ಲಿಯೇ ಕೊನೆ ಉಸಿರೆಳೆಯುತ್ತಾರೆ. ಈ ಪ್ರಕರಣದ ವೇಳೆ ಚಿತ್ರ ನಿರ್ಮಾಪಕರು ಗುರು ದೇಶಪಾಂಡೆ ಯಾರ ಕೈಗೂ ಸಿಗದೇ ಹೋಗಿದ್ದರು. ಪತ್ನಿ ಪ್ರೆಸ್ಮೀಟ್ ಮಾಡುವ ಮೂಲಕ ಕುಟುಂಬಸ್ಥರಿಗೆ ಪರಿಹಾರ ನೀಡುವುದಾಗಿ ತಿಳಿಸಿದ್ದರು.
ಸೆಪ್ಟೆಂಬರ್ 1ರಂದು ಗುರು ದೇಶಪಾಂಡೆ ವಿವೇಕ್ ಮನೆಗೆ ಭೇಟಿ ನೀಡಿ, ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ 5 ಲಕ್ಷ ರೂ.ಗಳ ಪರಿಹಾರದ ಚೆಕ್ ನೀಡಿದ್ದಾರೆ. ಘಟನೆ ನಂತರ ಮೊದಲ ಬಾರಿ ಮಾಧ್ಯಮಗಳ ಎದುರು ಬಂದು ಘಟನೆ ಬಗ್ಗೆ ಮಾತನಾಡಿದ್ದಾರೆ. 'ಯಾರು ಬೇಕು ಅಂತ ಮಾಡಲ್ಲ. ಕೋಟ್ಯಂತರ ಹಣ ಹಾಕಿ ಸಿನಿಮಾ ಮಾಡುತ್ತಿರುತ್ತೇವೆ. ಎಲ್ಲವನ್ನೂ ನಿರ್ಮಾಪಕರ ಮೇಲೆ ಹಾಕಬೇಡಿ. ಕಥೆ ಆಯ್ಕೆ ಮಾಡಿ ನಿರ್ದೇಶಕರನ್ನು ಸೆಲೆಕ್ಟ್ ಮಾಡಿ ಸಿನಿಮಾ ಮಾಡೋಕೆ ಏನು ವ್ಯವಸ್ಥೆ ಬೇಕೋ ಅವೆಲ್ಲವನ್ನೂ ನಿರ್ಮಾಪಕ ಮಾಡ್ತಾನೆ. ಅಲ್ಲಿ ಹೋಗಿ ಅವನು ದೃಶ್ಯದ ಚಿತ್ರೀಕರಣಕ್ಕೆ ಬೇಕಾಗುವ ಸೆಟ್ ಹಾಕುವುದಿಲ್ಲ. ನಾನು ಅವತ್ತು ಅಲ್ಲಿರಲಿಲ್ಲ. ಅಲ್ಲದೆ ನಾನು ನಾಪತ್ತೆಯಾಗಿದ್ದೇನೆ ಅನ್ನೋ ಮಾತುಗಳು ಬಂತು. ನಾನು ತೆಲೆ ಮರಿಸಿಕೊಂಡಿರಲಿಲ್ಲ. ಕಾನೂನಾತ್ಮಕವಾಗಿ ಹೋರಾಟ ಮಾಡೋದಿತ್ತು. ಹಾಗಾಗಿ ಬೇಲ್ ತೆಗೆದುಕೊಂಡು ಬಂದಿದ್ದೀನಿ. ಈಗಲೂ ನಾನು ವಿಚಾರಣೆ ಎದುರಿಸುತ್ತೇನೆ,' ಎಂದು ಮಾತನಾಡಿದ್ದಾರೆ.
'ವಿವೇಕ್ ಕುಟುಂಬಕ್ಕೆ ಸಾಂತ್ವನ ಹೇಳಿದ್ದೇನೆ. ಅಂಥ ಒಂದು ಘಟನೆ ಆಗಬಾರದಿತ್ತು. ಅದಕ್ಕಾಗಿ ಕ್ಷಮೆ ಕೇಳಿದ್ದೇನೆ. ಧನ ಸಹಾಯವನ್ನೂ ಮಾಡಿದ್ದೇನೆ. ಘಟನೆ ನಡೆದ ದಿನದಿಂದಲೂ ನಾನು ಸತತವಾಗಿ ಅವರ ಕುಟುಂಬದೊಂದಿಗೆ ಟಚ್ನಲ್ಲಿದ್ದೇನೆ. 10 ಲಕ್ಷ ರೂ. ಪರಿಹಾರ ನೀಡುತ್ತೇನೆ ಎಂದು ಹೇಳಿದ್ದೇನೆ. ಇದನ್ನು ಯಾರೂ ಡಿಮ್ಯಾಂಡ್ ಮಾಡಿಲ್ಲ. ಆದರೂ ನನ್ನ ಮನಃ ಸಾಕ್ಷಿಯಿಂದ ಅವರಿಗೆ ಪರಿಹಾರ ನೀಡುತ್ತಿದ್ದೇನೆ. ಮುಂದೆಯೂ ವಿವೇಕ್ ಕುಟುಂಬದವರ ಜೊತೆಗೆ ನಾನು ಇರುತ್ತೇನೆ. ನಿರ್ಮಾಪಕರು ಎಂದ ಕೂಡಲೇ ಅವರ ಬಳಿ ಕೋಟಿಗಟ್ಟಲೇ ದುಡ್ಡು ಇರುವುದಿಲ್ಲ. ನಾವು ಸಿನಿಮಾದಿಂದಲೇ ದುಡ್ಡು ಗಳಿಸಬೇಕು. ನಮ್ಮ ಕಷ್ಟಗಳನ್ನು ಸಮಾಜವೂ ನೋಡುತ್ತಿದೆ. ವಿವೇಕ್ ಅವರ ಸಹೋದರನ ವಿದ್ಯಾಭ್ಯಾಸಕ್ಕೆ ನಾನು ಸಹಾಯ ಮಾಡಲಿದ್ದೇನೆ,' ಎಂದು ಗುರು ದೇಶಪಾಂಡೆ ತಿಳಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.