
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ (Puneeth Rajkumar) ಅವರಿಗೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹಲವಾರು ಗೆಳೆಯರಿದ್ದರು. ಆ ಪೈಕಿ ನಟ ಸೂರ್ಯ, ರಾಮ್ ಚರಣ್, ರಾಜೇಂದ್ರ ಪ್ರಸಾದ್, ವಿಜಯ್ ಸೇತುಪತಿ, ಜೂ.ಎನ್ಟಿಆರ್, ಅಕ್ಕಿನೇನಿ ನಾಗಾರ್ಜುನ ಸೇರಿದಂತೆ ಖ್ಯಾತ ದಿಗ್ಗಜ ನಟರೆಲ್ಲರೂ ಬೆಂಗಳೂರಿಗೆ ಆಗಮಿಸಿ ಪುನೀತ್ ಸಮಾಧಿಗೆ ಭೇಟಿಕೊಟ್ಟು ಅಂತಿಮ ನಮನ ಸಲ್ಲಿಸಿ, ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿ ತೆರಳಿದ್ದಾರೆ. ಇಂದು ಕಾಲಿವುಡ್ (Kollywood) ನಟ ಸಿದ್ದಾರ್ಥ್ (Siddharth) ಕೂಡ ಅಪ್ಪು ಸಮಾಧಿಗೆ ನಮನ ಸಲ್ಲಿಸಿ, ಕಂಬನಿ ಮಿಡಿದಿದ್ದಾರೆ.
ಈಗಲೂ ನಂಬುವುದಕ್ಕೆ ಆಗುತ್ತಿಲ್ಲ. ಪುನೀತ್ ಇಲ್ಲ ಅಂತ ಹೇಳಲು ಸಾಧ್ಯವಾಗುತ್ತಿಲ್ಲ. ಪುನೀತ್ ಇಲ್ಲ ಎಂಬುದನ್ನು ಹೇಗೆ ಹೇಳಬೇಕೋ ನನಗೆ ತಿಳಿಯುತ್ತಿಲ್ಲ. ಅವರು ಇದ್ದಾರೆ, ಯಾವಾಗಲೂ ಇರುತ್ತಾರೆ ಎನ್ನುತ್ತೇನೆ. ಅವರದ್ದು ಮಹಾನ್ ವ್ಯಕ್ತಿತ್ವ. ತುಂಬ ಪ್ರತಿಭಾವಂತ. ಪ್ರತಿ ಬಾರಿ ಅವರನ್ನು ಭೇಟಿ ಆದಾಗಲೂ ನಾನು ಅದೃಷ್ಟವಂತ ಎಂದುಕೊಳ್ಳುತ್ತಿದ್ದೆ. ಅವರು ಎಲ್ಲರ ಬಗ್ಗೆ ಕಾಳಜಿ ವಹಿಸುತ್ತಿದ್ದರು. ಯುವಜನತೆಗೆ ಸದಾ ಸಪೋರ್ಟ್ ಮಾಡುತ್ತಿದ್ದರು. ಪುನೀತ್ ರೀತಿ ಇನ್ನೊಬ್ಬ ವ್ಯಕ್ತಿ ಇರಲು ಸಾಧ್ಯವಿಲ್ಲ. ಕುಟುಂಬದವರಿಗೆ ಹಾಗೂ ಕೋಟ್ಯಂತರ ಅಭಿಮಾನಿಗಳಿಗೆ ಈ ನೋವು ತಡೆದುಕೊಳ್ಳುವ ಶಕ್ತಿ ಸಿಗಲಿ ಅಂತ ಪ್ರಾರ್ಥಿಸುತ್ತೇನೆ. ನಾನು ಕೂಡ ಪುನೀತ್ ರಾಜ್ಕುಮಾರ್ ಅಭಿಮಾನಿ ಎಂದು ಸಿದ್ದಾರ್ಥ್ ಭಾವುಕರಾಗಿದ್ದಾರೆ.
ನಿಮ್ಮ ನಗು ಮೊಗದ ನೆನಪುಗಳಿಂದ ಎಲ್ಲ ನೋವುಗಳು ಮಾಯ: ನಟ ವಿಜಯ್ ರಾಘವೇಂದ್ರ
ಪುನೀತ್ 11 ನೇ ದಿನದ ಪುಣ್ಯತಿಥಿ ಕಾರ್ಯ ಬೆಳಗ್ಗೆ ಪುನೀತ್ ಮನೆಯಲ್ಲಿ ಹಾಗೂ ಕಂಠೀರವ ಸ್ಟುಡಿಯೋದಲ್ಲಿರುವ ಅವರ ಸಮಾಧಿ ಬಳಿ ಶಾಸ್ತ್ರೋಕ್ತವಾಗಿ ಪೂಜೆ ನಡೆದಿದೆ. ಅಪ್ಪು ನಿವಾಸದಲ್ಲಿ ಮಧ್ಯಾಹ್ನ ಅನ್ನಸಂತರ್ಪಣೆ ನಡೆದಿದ್ದು, ಸ್ಯಾಂಡಲ್ವುಡ್ ನಟ-ನಟಿಯರು, ಗಣ್ಯರು ಆಗಮಿಸಿದ್ದಾರೆ. ಉಪೇಂದ್ರ, ಶರಣ್, ಶೃತಿ, ಹಂಸಲೇಖ, ಬರಗೂರು ರಾಮಚಂದ್ರಪ್ಪ, ತೇಜಸ್ವಿನಿ ಅನಂತ್ಕುಮಾರ್, ಅವಿನಾಶ್ ದಂಪತಿ, ದತ್ತಣ್ಣ, ಟಾಲಿವುಡ್ ನಟ ಸಿದ್ದಾರ್ಥ್ ಸೇರಿ ಸಾಕಷ್ಟು ಮಂದಿ ಭಾಗಿಯಾಗಿದ್ದರು. ಹಾಗೂ ಅಪ್ಪು ಸರ್ ಕಳೆದುಕೊಂಡಿರುವುದು ಬಹಳ ನೋವಿನ ವಿಚಾರ. ಅವರೊಬ್ಬ ಪ್ರತಿಭಾನ್ವಿತ ನಟ, ಒಳ್ಳೆಯ ವ್ಯಕ್ತಿಯಾಗಿದ್ದರು. ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ಕೊಡಲಿ' ಎಂದು ಪ್ರಾರ್ಥಿಸಿದರು. ಜೊತೆಗೆ ಬಂದಿರುವ ಪ್ರತಿಯೊಬ್ಬರು ಪುನೀತ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.
ಬೆಂಗಳೂರಿನ ಪ್ರಮುಖ ಜಂಕ್ಷನ್ಗಳಿಗೆ ಪುನೀತ್ ರಾಜ್ಕುಮಾರ್ ಹೆಸರಿಡಲು ಮನವಿ ಪತ್ರ!
ಅಪ್ಪು ಸಮಾಧಿಗೆ ಪ್ರತಿ ದಿನ 20 ಸಾವಿರಕ್ಕೂ ಅಧಿಕ ಅಭಿಮಾನಿಗಳು ಬಂದು ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಮಕ್ಕಳು, ಮಹಿಳೆಯರು, ವೃದ್ಧರು ಕೂಡ ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಂತು ಬಂದು ಪುನೀತ್ಗೆ ನಮನ ಸಲ್ಲಿಸುತ್ತಿದ್ದಾರೆ. ಎಲ್ಲರೂ ಶಾಂತಿಯುತವಾಗಿ ಸಮಾಧಿ ದರ್ಶನ ಪಡೆಯಲು ಪೊಲೀಸರು ಸೂಕ್ತ ಭದ್ರತೆ ಕಲ್ಪಿಸಿದ್ದಾರೆ. ಇನ್ನು ಅಪ್ಪು ಪುಣ್ಯ ಸ್ಮರಣೆಯ ಅಂಗವಾಗಿ ನಗರದ ಅರಮನೆ ಮೈದಾನದಲ್ಲಿ ಮಂಗಳವಾರ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ತಿಥಿ ಕಾರ್ಯದ ಅಂಗವಾಗಿ ಅನ್ನ ಸಂತರ್ಪಣೆ ನೆರವೇರಲಿದೆ ಎಂದು ನಟ ಶಿವರಾಜ್ ಕುಮಾರ್ (Shiva Rajkumar) ಅವರು ಇಂದು ಮಾಹಿತಿ ನೀಡಿದ್ದಾರೆ. ನಾಳೆ ಬೆಳಗ್ಗೆ 11.30 ರಿಂದ ಪ್ಯಾಲೇಸ್ ಗ್ರೌಂಡ್ನಲ್ಲಿ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದ್ದು, ಏಕಕಾಲಕ್ಕೆ 5 ಸಾವಿರ ಜನರು ಕುಳಿತು ಊಟ ಮಾಡುವಂತಹ ವ್ಯವಸ್ಥೆ ಮಾಡಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.