ಕಾವೇರಿ ನದಿಯಲ್ಲಿ ಕಿಚ್ಚ ಸುದೀಪ್​ ತಾಯಿ ಅಸ್ಥಿ ವಿಸರ್ಜನೆ: ಭಾವುಕನಾದ ನಟ- ವಿಡಿಯೋ ವೈರಲ್​

By Suchethana DFirst Published Oct 22, 2024, 3:42 PM IST
Highlights

ಕಳೆದ ಭಾನುವಾರ ಸುದೀಪ್​ ಅವರ ತಾಯಿ ಸರೋಜಮ್ಮನವರು ವಿಧಿವಶರಾಗಿದ್ದು, ಇಂದು ಮಂಗಳವಾರ ಕಾವೇರಿ ನದಿಯಲ್ಲಿ ಕಿಚ್ಚ ಸುದೀಪ್​   ಅಸ್ಥಿ ವಿಸರ್ಜನೆ ಮಾಡಿದ್ದಾರೆ. ಇದರ ವಿಡಿಯೋ ವೈರಲ್​ ಆಗಿದೆ. 
 

ನಟ   ಸುದೀಪ್ (Kichcha Sudeep) ಅವರ ತಾಯಿ ಸರೋಜಾ ಕಳೆದ ಭಾನುವಾರ ನಿಧನರಾಗಿದ್ದಾರೆ. ನ್ಯುಮೋನಿಯಾದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ  ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ   ಇಹಲೋಕ ತ್ಯಜಿಸಿದ್ದಾರೆ.  ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಹಿಂದೂ ಸಂಪ್ರದಾಯದಂತೆ ಸುದೀಪ್ ತಾಯಿಯ ಅಂತ್ಯಕ್ರಿಯೆ ನಡೆದಿತ್ತು. ಇಂದು ಮಂಡ್ಯ  ಜಿಲ್ಲೆ ಶ್ರೀರಂಗಪಟ್ಟಣದ  ಗೋಸಾಯಿಘಾಟ್ ಬಳಿಯ ಕಾವೇರಿ ನದಿಯಲ್ಲಿ ಸರೋಜಮ್ಮನವರ ಅಸ್ಥಿ ವಿಸರ್ಜಿಸಲಾಗಿದೆ.   ವಿಧಿ ವಿಧಾನ ಕಾರ್ಯದಲ್ಲಿ ಕುಟುಂಬಸ್ಥರು ಮಾತ್ರ ಭಾಗಿಯಾಗಿದ್ದು ಅದರ ವಿಡಿಯೋ ವೈರಲ್​ ಆಗಿದೆ.

 ಅಸ್ಥಿ ವಿಸರ್ಜನೆ ಕಾರ್ಯ ಚಿತ್ರೀಕರಿಸದಂತೆ ಮಾಧ್ಯಮಗಳಿಗೆ ಸುದೀಪ್ ಮನವಿ ಮಾಡಿದ್ದರು. ಸರೋಜಮ್ಮನವರ ನಿಧನದ ದಿನ  ಸುದೀಪ್ ಅವರ ಜೆಪಿ ನಗರದ ನಿವಾಸದ ಬಳಿ ಚಿತ್ರರಂಗ, ರಾಜಕೀಯ ಗಣ್ಯರು ಮತ್ತು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಹಾಗೆಯೇ ಈ ಬಗ್ಗೆ ವರದಿ ಬಿತ್ತರಿಸಲು ಮಾಧ್ಯಮದ ಸಿಬ್ಬಂದಿಯೂ ನೆರೆದಿದ್ದರು. ತಮ್ಮ ನಿವಾಸದ ಬಳಿ ನೆರೆದಿದ್ದ ಜನರು ಜೋರಾಗಿ ಕಿರುಚುತ್ತಾ ಮೊಬೈಲ್ ಹಿಡಿದು ವಿಡಿಯೋ ಮಾಡುತ್ತಾ ಗಲಾಟೆ ಮಾಡಿದ್ದವರ ಬಗ್ಗೆ ಸುದೀಪ್ ಪುತ್ರಿ ಸಾನ್ವಿ ಬೇಸರ ಹೊರ ಹಾಕಿದ್ದರು. ಇದು ನಮ್ಮ ಕುಟುಂಬಕ್ಕೆ ಅತ್ಯಂತ ಕಷ್ಟಕರವಾದ ದಿನವಾಗಿದೆ. ನನ್ನ ಅಜ್ಜಿಯನ್ನು ಕಳೆದುಕೊಂಡ ದುಃಖಕ್ಕಿಂತ ನಮ್ಮ ಮನೆ ಮುಂದೆ ಸೇರಿದ ಜನರ ಜೋರಾಗಿ ಚೀರುವುದು ಹೆಚ್ಚು ನೋವುಂಟು ಮಾಡಿದೆ. ನಾನು ಅಳುತ್ತಿರುವಾಗ ನನ್ನ ಸುತ್ತಲೇ ಕ್ಯಾಮೆರಾಗಳು ಸುತ್ತುವರೆದಿದ್ದವು, ಇಷ್ಟೊಂದು ಅಮಾನುಷವಾಗಿ ನಡೆದುಕೊಳ್ಳುತ್ತಾರೆ ಎಂದು ನಾನು ತಿಳಿದುಕೊಂಡಿರಲಿಲ್ಲ. ತಾಯಿಯನ್ನು ಕಳೆದುಕೊಂಡಿದ್ದ ನನ್ನ ತಂದೆ ಅಳುತ್ತಿದ್ದಾಗ ಜನರು ನಮ್ಮನ್ನು ತಳ್ಳಾಡುತ್ತಿದ್ದರು. ಕಳೆದುಕೊಂಡ ಪ್ರೀತಿ ಪಾತ್ರರನ್ನು ಗೌರವದಿಂದ ಕಳುಹಿಸಿಕೊಡುವುದು ನಮ್ಮ ಜವಾಬ್ದಾರಿ ಮತ್ತು ಅದಕ್ಕೆ ಅವರು ಅರ್ಹರಾಗಿರುತ್ತಾರೆ ಎಂದು ಸಾನ್ವಿ ಬರೆದುಕೊಂಡಿದ್ದರು. ಈ ಕುರಿತು ಇನ್‌ಸ್ಟಾಗ್ರಾಂ ಸ್ಟೇಟಸ್‌ನಲ್ಲಿ ಬರೆದುಕೊಂಡಿರುವ ಸಾನ್ವಿ ತಮ್ಮ ಅಸಮಾಧಾನ ತೋಡಿಕೊಂಡಿದ್ದರು. ಅಸ್ಥಿ ವಿಸರ್ಜನೆ ಕಾರ್ಯ ಚಿತ್ರೀಕರಿಸದಂತೆ ಮಾಧ್ಯಮಗಳಿಗೆ ಸುದೀಪ್ ಮನವಿ ಮಾಡಿದ್ದರು. 

Latest Videos

ಸಾವಿನ ಭಯದಿಂದ ನಡುಗುತ್ತಿರೋ ಸಲ್ಲು, ಅಮ್ಮನ ಕಳ್ಕೊಂಡ ಆತ್ಮೀಯ ಕಿಚ್ಚನಿಗೂ ಹೇಳಲಿಲ್ಲ ಸಂತಾಪ!

ಅದೆ ಇನ್ನೊಂದೆಡೆ,  ಸುದೀಪ್ ಸಹ ಸಾಮಾಜಿಕ ಜಾಲತಾಣದಲ್ಲಿ ತಾಯಿ ಬಗ್ಗೆ ಭಾವುಕರಾಗಿ ಬರೆದುಕೊಂಡಿದ್ದರು. ಪ್ರತಿದಿನ ಬೆಳಗ್ಗೆ 5.30ಕ್ಕೆ ಗುಡ್ ಮಾರ್ನಿಂಗ್ ಕಂದಾ ಎಂಬ ಮೆಸೇಜ್ ಬರುತ್ತಿತ್ತು. ಶುಕ್ರವಾರ ಅಮ್ಮನಿಂದ ಕೊನೆಯ ಬಾರಿ ನನಗೆ ಮೆಸೇಜ್ ಬಂದಿದ್ದು ಎಂಬ ವಿಷಯವನ್ನು ಸುದೀಪ್ ಶೇರ್ ಮಾಡಿಕೊಂಡಿದ್ದರು. 24 ಗಂಟೆಯಲ್ಲಿ ಅಮ್ಮನ ಆರೋಗ್ಯದಲ್ಲಿ ಏನೇನಾಯ್ತು ಎಂಬ ವಿಷಯವನ್ನು ಸುದೀಪ್ ವಿವರವಾಗಿ ಬರೆದುಕೊಂಡಿದ್ದರು.

ಅಸ್ಥಿ ವಿಸರ್ಜನೆ ವೇಳೆ ಸುದೀಪ್‌ ಭಾವುಕರಾಗಿರುವುದನ್ನು ವಿಡಿಯೋದಲ್ಲಿ ನೋಡಬಹುದು.  ವಿಧಿ ವಿಧಾನ ಕಾರ್ಯದ ಬಳಿಕ ಬೆಂಗಳೂರಿನತ್ತ ಸುದೀಪ್‌ ತೆರಳಿದ್ದಾರೆ.  ಸುದೀಪ್​ ಅವರು ನಿನ್ನೆಯಷಟೇ ತಮ್ಮ ಅಮ್ಮನ ಬಗ್ಗೆ ಸುದೀರ್ಘವಾದ ಭಾವುಕ ಪತ್ರವೊಂದನ್ನು ಬರೆದು ತಮ್ಮ ಸೋಷಿಯಲ್ ಮೀಡಿಯಾ 'ಎಕ್ಸ್‌ ( X)' ನಲ್ಲಿ ಶೇರ್ ಮಾಡಿದ್ದರು.  ಅದಕ್ಕೆ, ಬಾಲಿವುಡ್ ನಟ ರಣಬೀರ್ ಕಪೂರ್ ಸೇರಿದಂತೆ ಹಲವು ಸಿನಿಮಾ ತಾರೆಯರು ಪ್ರತಿಕ್ರಿಯಿಸಿದ್ದಾರೆ.

click me!