
ಯಶ್ ನಟನೆಯ ‘ಕೆಜಿಎಫ್ 2’ ಚಿತ್ರದ ಟ್ರೈಲರ್ ಐದು ಭಾಷೆಯಲ್ಲಿ ಬಿಡುಗಡೆಗೊಂಡಿದೆ. ಯಶ್, ಶಿವರಾಜ್ ಕುಮಾರ್, ಸಂಜಯ… ದತ್, ರವೀನಾ ಟಂಡನ್, ಪೃಥ್ವಿರಾಜ್ ಉಪಸ್ಥಿತಿಯಲ್ಲಿ, ಐದು ಭಾಷೆಯ ಮಾಧ್ಯಮದ ಮಂದಿಯ ಸಮ್ಮುಖದಲ್ಲಿ, ಕರಣ್ ಜೋಹರ್ ನಿರೂಪಣೆಯಲ್ಲಿ ಅದ್ದೂರಿಯಾಗಿ ಟ್ರೈಲರ್ ಬಿಡುಗಡೆ ಆಗಿದ್ದು ವಿಶೇಷ.
ಕನ್ನಡ ಟ್ರೈಲರ್ ಬಿಡುಗಡೆ ಮಾಡಿದ ಶಿವರಾಜ್ ಕುಮಾರ್ ಮಾತನಾಡಿ ‘ಯಶ್ ಮೊದಲಿಂದಲೂ ನನಗೆ ಇಷ್ಟ. ನನ್ನ ತಮ್ಮನ ಹಾಗೆ ಇರುವವರು ಅವರು. ಎಲ್ಲರಂತೆ ನಾನೂ ಸಿನಿಮಾಗಾಗಿ ಕಾಯುತ್ತಿದ್ದೇನೆ. ಮೊದಲ ದಿನ ಮೊದಲ ಶೋ ನೋಡುತ್ತೇನೆ’ ಎಂದರು.
ಮಲಯಾಳಂ ನಟ ಪೃಥ್ವಿರಾಜ್, ‘ಪ್ರಾದೇಶಿಕ ಭಾಷೆಯ ಸಿನೆಮಾ ಈ ಮಟ್ಟಕ್ಕೆ ಬಂದು ನಿಂತಿರುವುದು ನಮಗೆ ಎಲ್ಲರಿಗೂ ಹೆಮ್ಮೆಯ ವಿಚಾರ. ‘ಬಾಹುಬಲಿ’ ನಾವು ಕನಸು ಕಾಣಬಹುದು ಎಂದು ತೋರಿಸಿ ಕೊಟ್ಟಿತು. ಕೆಜಿಎಫ್ ಕನಸು ನನಸು ಮಾಡಬಹುದು ಎಂದು ನಂಬಿಕೆ ಹುಟ್ಟಿಸಿತು. ಇದು ಮುಂದಿನ ಶ್ರೇಷ್ಠ ಪ್ರಯಾಣದ ಆರಂಭ. ರಾಜಮೌಳಿ ಮತ್ತು ಪ್ರಶಾಂತ್ ನೀಲ… ಭಾರತ ಸಿನೆಮಾ ಕ್ಷೇತ್ರದ ಹೆಮ್ಮೆಯ ನಿರ್ದೇಶಕರು. ಈ ಸಿನೆಮಾ ವಿತರಣೆ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಈ ಸಿನೆಮಾದ ನಿರೂಪಣೆ ಕರಣ್ ಜೋಹರ್ ಮಾಡಿದ್ದಾರೆ. ಸಿನಿಮಾಗಾಗಿ ಇಡೀ ದೇಶ ಕಾಯುತ್ತಿದೆ. ಪ್ರಾದೇಶಿಕ ಸಿನೆಮಾ ಇಷ್ಟೆಲ್ಲಾ ಸಾಧ್ಯ ಮಾಡಿದ್ದು ನನಗೆ ದೊಡ್ಡ ಖುಷಿ’ ಎಂದರು.
ಕರ್ನಾಟಕದ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವತ್ಥ ನಾರಾಯಣ ಅವರು ಮಾತನಾಡಿ ‘ಕರ್ನಾಟಕದ ಹೆಮ್ಮೆಯಾಗಿದ್ದ ಯಶ್ ಈಗ ದೇಶದ ಹೆಮ್ಮೆ. ಕೆಜಿಎಫ್ ಮೇಕಿಂಗ್ ಹಾಲಿವುಡ್ ಥರ ಆಗಿದೆ. ಭಾರತ ಸಿನೆಮಾ ಜಗತ್ತು, ಜಗತ್ತಿನ ಸಿನೆಮಾ ಕ್ಷೇತ್ರದಲ್ಲಿ ಈ ಸಿನೆಮಾ ದೊಡ್ಡ ಬದಲಾವಣೆ ತರಲಿದೆ ಎಂಬ ನಂಬಿಕೆ ನನಗಿದೆ’ ಎಂದರು.
ಈ ಎಲ್ಲಕ್ಕೂ ಕಾರಣರಾದ ಹೊಂಬಾಳೆ ಫಿಲ್ಮಮ್ಸ್ನ ಸ್ಥಾಪಕ, ನಿರ್ಮಾಪಕ ವಿಜಯ… ಕಿರಗಂದೂರ್ ಜಾಸ್ತಿ ಮಾತನಾಡಲಿಲ್ಲ. ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.
ನಟಿ ರಾಧಿಕಾ ಪಂಡಿತ್, ತಮಿಳುನಾಡಿನಲ್ಲಿ ವಿತರಣೆ ಮಾಡುತ್ತಿರುವ ಎಸ್ ಆರ್ ಪ್ರಭು, ಹಿಂದಿ ವಿತರಕರಾದ ರಿತೇಶ್ ಸಿದ್ವಾನಿ, ಅನಿಲ… ತದಾನಿ, ತೆಲುಗು ವಿತರಕ ಸಾಯಿ ಕೊರಪಾಟಿ ಇದ್ದರು.
ನಾನು ನೋಡಿದ ಅತ್ಯಂತ ಶ್ರದ್ಧೆಯ, ಪ್ರೀತಿಯ ನಿರ್ದೇಶಕ ಪ್ರಶಾಂತ್ ನೀಲ್. ಯಶ್ ರಾಕಿಂಗ್ ಸ್ಟಾರ್ ಅಷ್ಟೇ ಅಲ್ಲ, ರಾಕಿಂಗ್ human being. ಯಶ್ ನನಗೆ, ನನ್ನ ಮಕ್ಕಳು ಎಲ್ಲರಿಗೂ ಇಷ್ಟ. - ರವೀನಾ ಟಂಡನ್
ಈ ಪ್ರಯಾಣ ನನಗೊಂದು ಪಾಠ. ಶ್ರದ್ಧೆ, ಒಗ್ಗಟ್ಟು ಹೇಗಿರಬೇಕು ಎಂದು ಕಲಿಸಿದ ಸಿನೆಮಾ. ಚಿತ್ರೀಕರಣ ಸಮಯದಲ್ಲಿ ಈ ತಂಡ ಒಂದು ಕುಟುಂಬ ಎಂಬ ಭಾವ ಹುಟ್ಟಿತ್ತು ನನ್ನಲ್ಲಿ. ಈಗ ಯಶ್ ನನ್ನ ತಮ್ಮನ ಥರ ಆಗಿದ್ದಾರೆ. ಇಡೀ ತಂಡಕ್ಕೆ ನನ್ನ ಪ್ರೀತಿ ಸಲ್ಲುತ್ತದೆ. ‘ಕೆಜಿಎಫ್’ ಮಾಡಲು ಕಾರಣಳಾದ ನನ್ನ ಪತ್ನಿಗೆ ಧನ್ಯವಾದ. - ಸಂಜಯ್ ದತ್
ನನಗೆ ರೀನಾ ಕೊಟ್ಟಿದ್ದಕ್ಕೆ ಇಡೀ ತಂಡಕ್ಕೆ ಧನ್ಯವಾದ. ನನಗೆ ಈ ಸಿನೆಮಾ ಒಂದು ಆಶೀರ್ವಾದ. - ಶ್ರೀನಿಧಿ ಶೆಟ್ಟಿ
ಎಂಟು ವರ್ಷದ ಪ್ರಯಾಣ ಇದು. ಕಥೆ ಹೇಳಲು ಏನೇನು ಸಾಧ್ಯವೋ ಅದನ್ನೆಲ್ಲಾ ಮಾಡಿದ್ದೇವೆ. ಇನ್ನು ನೀವು ಸಿನೆಮಾ ನೋಡುವ ದಿನಕ್ಕಾಗಿ ಕಾಯುತ್ತಿದ್ದೇನೆ. ನಮ್ಮ ಕನ್ನಡ ಸಿನೆಮಾಗೆ ಇಡೀ ಇಂಡಿಯಾದಲ್ಲಿ ಒಂದು ಸ್ಥಾನ ಸಿಕ್ಕಿದೆ. ಅದಕ್ಕೆ ಮೂಲ ಕಾರಣಕರ್ತರಾದ ಕನ್ನಡ ಜನತೆಗೆ ನನ್ನ ನಮಸ್ಕಾರ- ಪ್ರಶಾಂತ್ ನೀಲ್
ಯಶ್ ಮಾತುಗಳು
- ನಾನು ಯವತ್ತೂ ಯಾವುದರ ಬಗ್ಗೆಯೂ ನರ್ವಸ್ ಆಗುವವನಲ್ಲ. ಇವತ್ತು ಒಂಥರಾ ಅನ್ನಿಸುತ್ತಿದೆ. ಈ ಕ್ಷಣ ನಾನು ಪುನೀತ್ ಸರ್ನ ತುಂಬಾ ಮಿಸ್ ಮಾಡಿ ಕೊಳ್ಳುತ್ತಿದ್ದೇನೆ. ಅವರು ಯಾವತ್ತೂ ನಮ್ಮ ಮಧ್ಯೆ ಇರುತ್ತಾರೆ.
- ಕನ್ನಡ ಜನತೆ, ಕನ್ನಡ ಇಂಡಸ್ಟ್ರಿ, ಕನ್ನಡ ಮಾಧ್ಯಮದಿಂದ ನಾನು ಇಲ್ಲಿ ನಿಂತಿದ್ದೇನೆ. ಈ ಪಯಣದಲ್ಲಿ ನನಗೆ ಸಿಗಬೇಕಾದ ಶ್ರೇಯ ತುಂಬಾ ಕಡಿಮೆ.
- ವಿಜಯ… ಕಿರಗಂದೂರ್, ಹೊಂಬಾಳೆ ಈ ಹೆಸರು ನೆನಪಿಟ್ಟುಕೊಳ್ಳಿ. ಈ ಕನಸು ಹಂಚಿಕೊಂಡಾಗ ಬಹುತೇಕರು ನಮಗೆ ಹುಚ್ಚು ಅಂದಿದ್ದರು. ಆದರೆ ಈ ವ್ಯಕ್ತಿ ವಿಷನ್ ಅರ್ಥ ಮಾಡಿಕೊಂಡು ಬೆನ್ನೆಲುಬಾಗಿ ನಿಂತರು.
- ಈ ಕನಸು ನನಸಾಗಲು ದೊಡ್ಡ ಕಾರಣ ಪ್ರಶಾಂತ್ ನೀಲ್. ಅವರ ಶ್ರದ್ಧೆ ಅಪರಿಮಿತ.
- ನಮ್ಮ ತಂತ್ರಜ್ಞರು, ನಮ್ಮ ತಂಡದಂತ ತಂಡ ಬೇರೆ ಎಲ್ಲೂ ಸಿಗಲ್ಲ. ಎಲ್ಲರಿಗೂ ಧನ್ಯವಾದ.
- ನನ್ನ ಅಭಿಮಾನಿಗಳು, ನನ್ನ ಅಣ್ತಮ್ಮಂದಿರಿಗೆ ಪ್ರೀತಿ. ನೀವು ಮೆಚ್ಚುವಂತಹ ಸಿನೆಮಾ ಮಾಡಿದ್ದೇವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.