
ಕನ್ನಡ ಚಿತ್ರರಂಗ (Sandalwood) ಕಂಡ ಅದ್ಭುತ ಡ್ಯಾನ್ಸರ್ (Dancer), ಫಿಟ್ನೆಸ್ ಫ್ರೀಕ್ (Fitness Freak) ಹಾಗೂ ಸಮಾಜ ಸೇವಕ ಪುನೀತ್ ರಾಜ್ಕುಮಾರ್ (Puneeth Rajkumar) ಹೃದಯಘಾತದಿಂದ ಇಹಲೋಕ ತ್ಯಜಿಸಿರುವ ವಿಚಾರ ಕೇಳಿ ಇಡೀ ಕರ್ನಾಟಕವೇ (Karnataka) ಶೋಕ ಸಾಗರದಲ್ಲಿ ಮುಳುಗಿದೆ. ಅಪ್ಪು ಕೊನೆಯುಸಿರೆಳೆದು ನಾಲ್ಕು ದಿನಗಳಾದರೂ, ಇನ್ನೂ ವಿಷಯವನ್ನು ಅರಗಿಸಿಕೊಳ್ಳುವ ಸ್ಥಿತಿಯಲ್ಲಿ ಯಾರೂ ಇಲ್ಲ. ಅಭಿಮಾನಿಗಳಿಗೇ ಇಷ್ಟು ದುಃಖ ತಂದಿರುವ ಈ ವಿಷಯ, ಇನ್ನು ಕುಟುಂಬದ ಸದಸ್ಯರಿಗೆ ಅದೆಷ್ಟು ಸಂಕಟವಾಗುತ್ತಿರಬಹುದು ಎಂಬುದನ್ನು ಊಹಿಸಿಕೊಳ್ಳಬಹುದು. ಸಮಾಧಿ ಮತ್ತು ನಿವಾಸದ ಬಳಿ ಮೂರನೇಯವರಿಗೆ ಪ್ರವೇಶ ಇಲ್ಲದಿದ್ದರೂ, ಸಾವಿರಾರು ಅಭಿಮಾನಿಗಳು ಬೇರೆ ಬೇರೆ ಊರುಗಳಿಂದ ಬೆಂಗಳೂರಿಗೆ ಬರುತ್ತಿದ್ದಾರೆ. ಇಂದು ನಡೆಯಲಿರುವ ಹಾಲು ತುಪ್ಪ ಕಾರ್ಯದ ನಂತರ ಅಭಿಮಾನಿಗಳಿಗೆ ಅವಕಾಶ ನೀಡುವಂತೆ ಕುಟುಂಬಸ್ಥರು ನಿರ್ಧರಿಸಿದ್ದಾರೆ.
ಶಿವರಾಜ್ಕುಮಾರ್ (Shivarajkumar)ಮತ್ತು ರಾಘವೇಂದ್ರ ರಾಜ್ಕುಮಾರ್ (Raghavendra Rajkumar) ಅವರ ಮುದ್ದಿನ ತಮ್ಮ ಪುನೀತ್ ಅಗಲಿಕೆ ಅಣ್ಣಂದಿರನ್ನು ಕುಗ್ಗಿಸಿದೆ. ನನ್ನನ್ನು ಉಳಿಸಿ ನನ್ನ ಮಕ್ಕಳ ಜೊತೆ ಇರು ಎಂದು ಹೇಳಿ, ನನ್ನನ್ನು ಬಿಟ್ಟು ಹೋದ ಎಂದು ರಾಘಣ್ಣ ಭಾವುಕರಾಗಿದ್ದಾರೆ. ತಮ್ಮ ಟ್ಟಿಟರ್ (Twitter) ಖಾತೆಯಲ್ಲಿ ಪುನೀತ್ ಜೊತೆ ಆಡಿದ ಕೊನೆಯ ಮಾತು ಹಾಗೂ ಕ್ಲಿಕ್ ಮಾಡಿಕೊಂಡ ಕೊನೆಯ ಫೋಟೋ ಹಂಚಿಕೊಂಡಿದ್ದಾರೆ.
'ಇತ್ತೀಚಿಗೆ ನನಗೆ ದಾದಾ ಸಾಹೇಬ್ ಫಾಲ್ಕೆ ಘೋಷಣೆಯಾಗಿತ್ತು. MSK ಟ್ರಸ್ಟ್ ವತಿಯಿಂದ 'ಜೀವಮಾನ ಸಾಧನೆ ಪ್ರಶಸ್ತಿ' ಬಂದ ಸಂದರ್ಭದಲ್ಲಿ ಅಪ್ಪುವಿಗೆ ಎಲ್ಲಿಲ್ಲದ ಸಂತೋಷ. ನನ್ನನ್ನು ತಕ್ಷಣ ಭೇಟಿ ಮಾಡಿ, ಈ ಸೆಲ್ಫಿ ತೆಗೆದು 'ರಾಘಣ್ಣ ನಾವು ಸಹ ಈ ಮೂರ್ತಿಯ ರೂಪದ ಹಾಗೆ ಅಪ್ಪಾಜಿಯವರ ಮೂರ್ತಿಯನ್ನು ಮಾಡೋಣ. ಎಂದಿನಂತೆ ಡಾ|| ರಾಜ್ ಕುಮಾರ್ ಟ್ರಸ್ಟ್ನಿಂದ (Dr. Rajkumar trust) ನೀಡುವ ಪ್ರಶಸ್ತಿಯನ್ನು ಇದೇ ರೂಪದಲ್ಲಿ ಕೊಡೋಣ,' ಎಂದು ಹೇಳಿದ್ದ. ಅಪ್ಪು ನಿನ್ನ ಈ ಆಲೋಚನೆಗೆ ನನ್ನದೊಂದು ನಮನ. ಲವ್ ಯು ಮಗನೇ,' ಎಂದು ರಾಘವೇಂದ್ರ ರಾಜ್ಕುಮಾರ್ ಟ್ಟೀಟ್ ಮಾಡಿದ್ದಾರೆ. ರಾಘಣ್ಣ ಈ ಪ್ರಶಸ್ತಿಯನ್ನು ಹಿಡಿದುಕೊಂಡು ಅಪ್ಪು ಜೊತೆ ಸೆಲ್ಫಿಗೆ ಸ್ಮೈಲ್ ಮಾಡಿದ್ದಾರೆ.
ಇಡೀ ಕುಟುಂಬ ಪುನೀತ್ ಚಿಕ್ಕ ಹುಡುಗ. ಆತನು ನಮ್ಮ ಮಗ ಎಂದೇ ಹೇಳುತ್ತಾರೆ. ಪುನೀತ್ ಸಾವಿನ ಗಾಬರಿಯಲ್ಲಿ ಇಡೀ ಕುಟುಂಬ ಇದ್ದಾಗ, ಸ್ವತಃ ರಾಘಣ್ಣ ಅವರು ನಾರಾಯಣ ನೇತ್ರಾಲಯಕ್ಕೆ (Narayana Nethralaya) ಕರೆ ಮಾಡಿ, ನನ್ನ ಮಗ ಅಪ್ಪು ಹೋಗ್ಬಿಟ್ಟ. ನೀವು ಬಂದು ಆತನ ಕಣ್ಣು ತೆಗೆದುಕೊಳ್ಳಿ, ಎಂದು ಹೇಳಿದರಂತೆ. ಇಂಥ ದುಃಖದಲ್ಲೂ ಕುಟುಂಬ ತಮ್ಮ ಕರ್ತವ್ಯ ಮರೆತಿಲ್ಲ, ಎಂದು ವೈದ್ಯರು ಹೇಳುತ್ತಿದ್ದರು. ಅಪ್ಪು ಪಾರ್ಥೀವ ಶರೀರವನ್ನು ಅಭಿಮಾನಿಗಳು ದರ್ಶನ ಪಡೆಯಲು ವ್ಯವಸ್ಥೆ ಮಾಡುವಾಗಲೂ ಮಾಧ್ಯಮಗಳ ಮೂಲಕ ರಾಘಣ್ಣ ಮನವಿ ಮಾಡಿಕೊಂಡ ಪರಿಯೂ ಅಭಿಮಾನಗಳಲ್ಲಿ ಗೌರವ ಹೆಚ್ಚಿಸಿತು. ದಯವಿಟ್ಟು ಯಾರೂ ಯಾರಿಗೂ ತೊಂದರೆ ಕೊಡಬಾರದು. ಅಪ್ಪುವನ್ನು ಪ್ರತಿಯೊಬ್ಬರು ನೋಡಿಕೊಂಡು, ಹೋಗಬಹುದು. ಅಪ್ಪಾಜಿ ಅಸುನೀಗಿದಾಗ ಆದ ಘಟನೆ ಇನ್ನೂ ನಮ್ಮ ಮನಸ್ಸಿನಿಂದ ಮರೆಯಾಗಿಲ್ಲ. ಅಪ್ಪು ವಿಷಯದಲ್ಲಿ ಹಾಗೆ ಆಗಬಾರದು. ಯಾರೂ ಉದ್ವೇಗಕ್ಕೆ ಒಳಗಾಗಬಾರದು. ಶಾಂತಿ ಕಾಪಾಡಿಕೊಳ್ಳಬೇಕು. ಅಪ್ಪು ಕನ್ನಡ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟಾಗ ಸಂತೋಷದಿಂದ ಅಪ್ಪಿಕೊಂಡಿದ್ದೀರಿ. ಅವನ ಸಾವು ಎಲ್ಲರಿಗೂ ಆಘಾತ ತಂದಿದೆ. ಆದರೂ ಸಂತೋಷವಾಗಿ ಕಳುಹಿಸಿಕೊಡೋಣ. ಅಪ್ಪು ಇದೆಲ್ಲಾ ಇಷ್ಟ ಪಡುವುದಿಲ್ಲ ನಿಮಗೆ, ನಮ್ಮ ಮೇಲೆ ಗೌರವ ಪ್ರೀತಿ ಇದ್ದರೆ, ಎಲ್ಲವೂ ಶಾಂತಿಯಿಂದ ನಡೆಸಿ ಕೊಡೋಣವೆಂದು ನನಗೆ ಮಾತು ಕೊಡಿ,' ಎಂದಿದ್ದರು.
ಪುನೀತ್ ಅಂತ್ಯಕ್ರಿಯೆ ಮುಗಿದ ಬಳಿಕವೂ ಮಾಧ್ಯಮಗಳಲ್ಲಿ ರಾಘಣ ಮಾತನಾಡಿದ್ದಾರೆ. ಪೊಲೀಸರಿಗೆ ಸರ್ಕಾರಕ್ಕೆ ಹಾಗೂ ಅಭಿಮಾನಿಗಳ ಪ್ರೀತಿಗೆ ಧನ್ಯವಾದಗಳನ್ನು ಹೇಳಿದ್ದಾರೆ. ನೀವೇ ನೋವಿನಲ್ಲಿದ್ದೀರಿ. ಆದರೂ ಬೇರೊಂದು ಜೀವದ ಬಗ್ಗೆ ಚಿಂತಿಸುತ್ತಿದ್ದೀರಿ. ಇದು ದೊಡ್ಡ ಮನೆ ಅವರಿಗೆ ಮಾತ್ರ ಸಾಧ್ಯ. ನೀವು ನಿಜಕ್ಕೂ ದೊಡ್ಮನೆಯವರು ಎಂದು ಗೊತ್ತಾಯಿತು,' ಎಂದು ಅಭಿಮಾನಿಗಳು ಮಾತನಾಡಿದ್ದಾರೆ.
ಅಕ್ಟೋಬರ್ 29ರಂದು ಸ್ವಲ್ಪ ಬಳಸಿದ ಪುನೀತ್ ರಾಜ್ಕುಮಾರ್ ಅವರನ್ನು ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಕೊನೆಯುಸಿರೆಳೆದಿದ್ದರು. ಆರೋಗ್ಯವಾಗಿಯೇ ಇದ್ದ ಅಪ್ಪು ಅಕಾಲಿಕ ಸಾವು ಇಡೀ ಕನ್ನಡ ಚಿತ್ರರಂಗ ಮಾತ್ರವಲ್ಲ, ಭಾರತೀಯ ಚಿತ್ರರಂಗವನ್ನೇ ಶಾಕ್ಗೆ ಒಳಗಾಗುವಂತೆ ಮಾಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.