ಬಹುತೇಕ ಕರಾವಳಿ ಪ್ರತಿಭೆಗಳೇ ಸೇರಿ ಮಾಡಿರುವ ಸಿನಿಮಾ ‘ಪೆನ್ಸಿಲ್ ಬಾಕ್ಸ್’. ಹೆಸರೇ ಹೇಳುವಂತೆ ಇದು ಮಕ್ಕಳ ಸಿನಿಮಾ. ಆದರೂ ದೊಡ್ಡವರು ಕೂಡ ಚಿತ್ರವನ್ನು ನೋಡಬಹುದು ಎಂಬುದು ಚಿತ್ರದ ನಿರ್ದೇಶಕ ರಜಾಕ್ ಪುತ್ತೂರು ಮಾತು. ದಯಾನಂದ ಎಸ್ ರೈ ಬೆಟ್ಟಂಪಾಡಿ ಚಿತ್ರದ ನಿರ್ಮಾಪಕರು.
ದೀಕ್ಷಾ ಡಿ ರೈ, ಸಮೃದ್್ಧ, ಶ್ರೇಷ್ಠ, ಅರವಿಂದ್ ಬೋಳಾರ್, ಭೋಜರಾಜ ವಾಮಂಜೂರು, ರಮೇಶ್ ರೈ ಕುಕ್ಕವಳ್ಳಿ, ದಯಾನಂದ ರೈ ಬೆಟ್ಟಂಪಾಡಿ, ದಿವ್ಯಶ್ರೀ ಹೀಗೆ ಹಲವರು ನಟಿಸಿದ್ದರು. ಹಿರಿಯರು ಹಾಗೂ ಕಿರಯರ ಸಂಗಮದಂತಿರುವ ಈ ಸಿನಿಮಾ ಏಪ್ರಿಲ್ 9ಕ್ಕೆ ತೆರೆಗೆ ಬರುತ್ತಿದೆ. ಸರ್ಕಾರಿ ಶಾಲೆ ಹಾಗೂ ಖಾಸಗಿ ಶಾಲೆಗಳ ವಸ್ತು ಸ್ಥಿತಿ, ತಮ್ಮ ಮಕ್ಕಳನ್ನು ಪ್ರತಿಷ್ಠಿತ ಶಾಲೆಗಳಿಗೆ ಸೇರಿಸಬೇಕೆಂದು ಪರಿತಪಿಸುವ ಪೋಷಕರು, ಇದರ ಅರಿವೇ ಇಲ್ಲದೆ ಇರುವ ಮುಗ್ಧ ಮಕ್ಕಳ... ಸುತ್ತ ಚಿತ್ರದ ಕತೆ ಸಾಗುತ್ತದೆ.
ಚಿತ್ರದ ಮುಖ್ಯ ಪಾತ್ರಧಾರಿ ದೀಕ್ಷಾ ಡಿ ರೈ. ಡ್ಯಾನ್ಸ್ ಡ್ಯಾನ್ಸ್ ಜೂನಿಯರ್, ಭರ್ಜರಿ ಕಾಮಿಡಿ ಮುಂತಾದ ರಿಯಾಲಿಟಿ ಶೋಗಳಲ್ಲಿ ಗುರುತಿಸಿಕೊಂಡಿರುವ ಪ್ರತಿಭೆ. ಈಗ ಈ ಚಿತ್ರದ ಮೂಲಕ ಬಾಲ ನಟಿಯಾಗಿ ಬೆಳ್ಳಿತೆರೆಗೆ ಆಗಮಿಸುತ್ತಿದ್ದಾರೆ. ‘ಇದು ಮಕ್ಕಳ ಸಿನಿಮಾ. ಆದರೆ, ಚಿತ್ರದಲ್ಲಿ ದೊಡ್ಡವರಿಗೆ ಸಂದೇಶ ಇದೆ. ಈ ಕಾರಣಕ್ಕೆ ಈ ಚಿತ್ರವನ್ನು ಎಲ್ಲರು ನೋಡಬೇಕು’ ಎಂದರು ನಿರ್ದೇಶಕ ರಜಾಕ್ ಪುತ್ತೂರು.
ಹೀರೋ ಆದ ಹಾಸ್ಯ ನಟ ಕೆಂಪೇಗೌಡ; ಆತ್ಮ, ದೇಹದ ಕತೆ ಹೇಳುವ ಕಟ್ಲೆ!
ಜಯಕಾರ್ತಿಕ್ ಸಂಗೀತ, ಮೋಹನ್ ಪಡ್ರೆ ಕ್ಯಾಮೆರಾ ಚಿತ್ರಕ್ಕಿದೆ. ‘ತುಳು ನಾಡಿನ ಹಾಸ್ಯ ಕಲಾವಿದರು, ಬಾಲ ಕಲಾವಿದರು ಸೇರಿ ಮಾಡಿರುವ ಸಿನಿಮಾ. ಈಗಿನ ಪೋಷಕರು ಈ ಚಿತ್ರವನ್ನು ನೋಡಲೇಬೇಕು ಎನ್ನುವ ಕಾರಣಕ್ಕೆ ಈ ಚಿತ್ರವನ್ನು ನಿರ್ಮಿಸಿದ್ದೇವೆ’ ಎಂಬುದು ನಿರ್ಮಾಪಕರ ಮಾತು. ಈ ಮಕ್ಕಳ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಗೆಲ್ಲಿಸಿ ಎನ್ನುವುದು ಚಿತ್ರತಂಡದ ಮನವಿ.