
ರಜಿನಿ ಕಾಂತ್ ಅವರ ಕೆನ್ನೆಗೆ ಬಾರಿಸಿದ್ದ ಪುಟ್ಟಣ್ಣನ ಕಣಗಾಲ್ ಯಾವ ಚಿತ್ರದ ಸಂದರ್ಭದಲ್ಲಿ ಗೊತ್ತಾ?
1976ರ ಸಮಯ. ಕನ್ನಡ ಚಿತ್ರರಂಗದಲ್ಲಿ 'ಚಿತ್ರಬ್ರಹ್ಮ' ಪುಟ್ಟಣ್ಣ ಕಣಗಾಲ್ ಅವರದ್ದೇ ದರ್ಬಾರು. ಅವರು ಕಣ್ಣು ಬಿಟ್ಟರೆ ಎಂಥಾ ಘಟಾನುಘಟಿ ನಟರೂ ಸುಮ್ಮನಾಗುತ್ತಿದ್ದರು. ಅದೇ ಸಮಯದಲ್ಲಿ ತಮಿಳುನಾಡಿನಲ್ಲಿ ಬಸ್ ಕಂಡಕ್ಟರ್ ಆಗಿದ್ದ ಶಿವಾಜಿರಾವ್ ಎಂಬ ಯುವಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದ. ಆ ಯುವಕನೇ ಇಂದಿನ ಸೂಪರ್ ಸ್ಟಾರ್ ರಜನಿಕಾಂತ್!
ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ಕಥಾಸಂಗಮ' ಚಿತ್ರದಲ್ಲಿ ರಜನಿಕಾಂತ್ಗೆ ಒಂದು ಅವಕಾಶ ಸಿಕ್ಕಿತ್ತು. ಈ ಚಿತ್ರದಲ್ಲಿ ಮೂರು ವಿಭಿನ್ನ ಕಥೆಗಳಿದ್ದವು, ಅದರಲ್ಲಿ ಮೂರನೇ ಕಥೆಯೇ 'ಮುನಿತಾಯಿ'. ಅಂದಿನ ಟಾಪ್ ನಟಿ ಆರತಿ 'ಮುನಿತಾಯಿ'ಯಾಗಿ ನಟಿಸುತ್ತಿದ್ದರೆ, ಕಲ್ಯಾಣ್ ಕುಮಾರ್ ಅವರು ಅಂಧ ಪತಿಯಾಗಿ ನಟಿಸಿದ್ದರು. ಆ ಮುನಿತಾಯಿಯ ಮೇಲೆ ಕಣ್ಣು ಹಾಕುವ, ಕಾಮದ ದೃಷ್ಟಿಯಿಂದ ನೋಡುವ ಊರ ಪೋಕರಿ, ಕ್ರೂರಿ ವಿಲನ್ ಪಾತ್ರವನ್ನು ರಜನಿಕಾಂತ್ ಮಾಡುತ್ತಿದ್ದರು.
ಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ನಡೆಯುತ್ತಿತ್ತು. ಅಂಧ ಗಂಡನ ಮುಂದೆಯೇ ಮುನಿತಾಯಿಯ ಮೇಲೆ ರಜನಿಕಾಂತ್ ದೌರ್ಜನ್ಯ ಎಸಗುವ ಅತ್ಯಂತ ಕ್ರೂರವಾದ ದೃಶ್ಯವದು. ಈ ದೃಶ್ಯದಲ್ಲಿ ಪುಟ್ಟಣ್ಣನವರಿಗೆ ರಜನಿಕಾಂತ್ ಮುಖದಲ್ಲಿ ಒಂದು ಪೈಶಾಚಿಕ, ರಾಕ್ಷಸಿ ನಗು ಬೇಕಿತ್ತು. ಕಣ್ಣಲ್ಲಿ ಕಾಮ ಮತ್ತು ಕ್ರೌರ್ಯ ಎದ್ದು ಕಾಣಬೇಕಿತ್ತು. ಆದರೆ, ಎದುರುಗಡೆ ಆರತಿ ಮತ್ತು ಕಲ್ಯಾಣ್ ಕುಮಾರ್ ಅವರಂತಹ ದಿಗ್ಗಜ ನಟರು, ಕ್ಯಾಮೆರಾ ಹಿಂದೆ ಸಿಂಹದಂತಿದ್ದ ಪುಟ್ಟಣ್ಣ... ಹೊಸಬನಾಗಿದ್ದ ರಜನಿಗೆ ಭಯ ಶುರುವಾಗಿತ್ತು. ಎಷ್ಟೇ ಟೇಕ್ ತೆಗೆದುಕೊಂಡರೂ ಪುಟ್ಟಣ್ಣ ಅಂದುಕೊಂಡಿದ್ದ ಆ ಲೆವೆಲ್ನ ಕ್ರೌರ್ಯ ರಜನಿ ಮುಖದಲ್ಲಿ ಬರುತ್ತಲೇ ಇರಲಿಲ್ಲ!
ಪುಟ್ಟಣ್ಣನವರ ತಾಳ್ಮೆ ಮೀರಿತು. ಸೆಟ್ನಲ್ಲಿ ಪಿನ್ ಡ್ರಾಪ್ ಸೈಲೆನ್ಸ್. ಕ್ಯಾಮೆರಾ ಹಿಂದಿನಿಂದ ಎದ್ದುಬಂದ ಪುಟ್ಟಣ್ಣ, ನೇರವಾಗಿ ರಜನಿಕಾಂತ್ ಮುಂದೆ ಬಂದು ನಿಂತರು. ರಜನಿಗೆ ಏನಾಗುತ್ತಿದೆ ಎಂದು ಅರ್ಥವಾಗುವ ಮುನ್ನವೇ, ಎಲ್ಲರ ಮುಂದೆಯೇ ರಜನಿಕಾಂತ್ ಕೆನ್ನೆಗೆ 'ಛಟಾರ್' ಅಂತ ಒಂದು ಬಲವಾದ ಪೆಟ್ಟು ಬಿದ್ದೇ ಬಿಡ್ತು!
ಪುಟ್ಟಣ್ಣ ಹೊಡೆದ ಏಟ್ ನೋಡಿ ಇಡೀ ಸೆಟ್ ಬೆಚ್ಚಿಬಿದ್ದಿತು. ನೂರಾರು ಜನರ ಮುಂದೆ ಒಬ್ಬ ಡೈರೆಕ್ಟರ್ ತನಗೆ ಹೊಡೆದರಲ್ಲ ಎಂಬ ಅವಮಾನದಿಂದ ರಜನಿಕಾಂತ್ ಕಣ್ಣುಗಳು ಕೆಂಪಾದವು, ಮುಖದಲ್ಲಿ ರೋಷ, ಸಿಟ್ಟು ಕಟ್ಟೆಯೊಡೆಯಿತು. ಆತನ ಮುಖದಲ್ಲಿ ಆ ಕ್ಷಣಕ್ಕೆ ಕ್ರೌರ್ಯ ಮತ್ತು ಹತಾಶೆ ಒಟ್ಟಿಗೆ ಸೇರಿ ಪೈಶಾಚಿಕವಾಗಿ ಬದಲಾಗಿತ್ತು.
ರಜನಿಕಾಂತ್ ಏನಾದರೂ ರಿಯಾಕ್ಟ್ ಮಾಡುತ್ತಾರಾ ಎಂದು ಇಡೀ ಸೆಟ್ ನಡುಗುತ್ತಾ ನೋಡುತ್ತಿರುವಾಗಲೇ... "ಎಸ್.. ಕ್ಯಾಮೆರಾ.. ರೋಲ್.. ಆಕ್ಷನ್!" ಎಂದು ಜೋರಾಗಿ ಕಿರುಚಿದರು ಪುಟ್ಟಣ್ಣ!
ಆಗ ರಜನಿಕಾಂತ್ಗೆ ಅರ್ಥವಾಗಿದ್ದು, ಡೈರೆಕ್ಟರ್ ತನಗೆ ಹೊಡೆದಿದ್ದು ಕೋಪಕ್ಕಲ್ಲ, ಬದಲಿಗೆ ತನ್ನ ಒಳಗಡಗಿದ್ದ ಆ 'ರಾಕ್ಷಸ'ನನ್ನು ಹೊರತರಲು ಮಾಡಿದ ಮಾಸ್ಟರ್ ಪ್ಲ್ಯಾನ್ ಅದು ಎಂದು! ಅದೇ ಕೋಪದಲ್ಲಿ, ಅದೇ ಕೆಂಪಾದ ಕಣ್ಣುಗಳಲ್ಲಿ ರಜನಿಕಾಂತ್ ಆ ದೃಶ್ಯವನ್ನು ಅದ್ಭುತವಾಗಿ ನಟಿಸಿ ಒಂದೇ ಟೇಕ್ನಲ್ಲಿ ಓಕೆ ಮಾಡಿದರು. ಪರದೆಯ ಮೇಲೆ ಆ ದೃಶ್ಯವನ್ನು ನೋಡಿದ ಪ್ರೇಕ್ಷಕರು ಅಕ್ಷರಶಃ ಬೆಚ್ಚಿಬಿದ್ದರು.
ಆ ಒಂದು ಏಟು, ದಕ್ಷಿಣ ಭಾರತದ ಚಿತ್ರರಂಗದಲ್ಲಿ ಒಬ್ಬ ಭೀಕರ ವಿಲನ್ ಅನ್ನು ಹುಟ್ಟುಹಾಕಿತು. ಮುಂದೆ ಅದೇ ವಿಲನ್ ಭಾರತೀಯ ಚಿತ್ರರಂಗದ 'ಸೂಪರ್ ಸ್ಟಾರ್' ಆಗಿ ಬೆಳೆದದ್ದು ಈಗ ಇತಿಹಾಸ. ಕಲ್ಲಿಗೂ ಜೀವ ತುಂಬುವ, ಪಾತ್ರಕ್ಕಾಗಿ ಕಲಾವಿದರನ್ನೇ ಮರೆಸುವ ನಿಜವಾದ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಎಂದರೆ ಸುಮ್ಮನೆ ಅಲ್ಲ!
(ಕೃಪೆ- ವಿವಿಧ ವಿಸ್ಮಯ)
https://www.facebook.com/100090122438436/posts/900684662945607/?rdid=cZyZmuOof4SNp80G#
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.