
ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯ ನಟ ಚಿಕ್ಕಣ್ಣ ಇದೀಗ ನಾಯಕನಾಗಿ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ‘ಉಪಾಧ್ಯಕ್ಷ’ ಚಿತ್ರದ ಯಶಸ್ಸಿನ ಬಳಿಕ ಚಿಕ್ಕಣ್ಣ ನಾಯಕನಾಗಿ ನಟಿಸಿರುವ ಎರಡನೇ ಸಿನಿಮಾ ‘ಲಕ್ಷ್ಮೀಪುತ್ರ’ ಬಿಡುಗಡೆಗೆ ಸಿದ್ಧವಾಗಿದ್ದು, ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಚಿತ್ರತಂಡ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ.
ಚಿತ್ರತಂಡ ಒಟ್ಟಾಗಿ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸುವ ಮೂಲಕ ಸಂಭ್ರಮ ಹಂಚಿಕೊಂಡಿದ್ದು, ಇದೇ ಸಂದರ್ಭದಲ್ಲಿ ‘ಲಕ್ಷ್ಮೀಪುತ್ರ’ ಸಿನಿಮಾದ ಅಧಿಕೃತ ಬಿಡುಗಡೆ ದಿನಾಂಕವನ್ನೂ ಘೋಷಿಸಿದೆ. ನವೆಂಬರ್ 27ರಂದು ಸಿನಿಮಾ ರಾಜ್ಯಾದ್ಯಂತ ಚಿತ್ರಮಂದಿರಗಳಿಗೆ ಬರಲಿದೆ.
ನವೆಂಬರ್ 27ಕ್ಕೆ ‘ಲಕ್ಷ್ಮೀಪುತ್ರ’ ಎಂಟ್ರಿ
ಸಿನಿಮಾ ಬಿಡುಗಡೆ ದಿನಾಂಕ ಘೋಷಿಸಿರುವ ಚಿಕ್ಕಣ್ಣ, ತಮ್ಮ ವೃತ್ತಿಜೀವನದ ಆರಂಭದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಗಣೇಶೋತ್ಸವ ಹಾಗೂ ಕನ್ನಡ ರಾಜ್ಯೋತ್ಸವದ ವೇದಿಕೆಗಳು ತಮ್ಮ ಕಲಾ ಬದುಕಿಗೆ ಆರಂಭಿಕ ದಿನಗಳಲ್ಲಿ ಸಾಕಷ್ಟು ಬೆಂಬಲ ನೀಡಿದ್ದವು. ಇದೀಗ ರಾಜ್ಯೋತ್ಸವದ ಸಂಭ್ರಮದ ತಿಂಗಳಲ್ಲೇ ತಮ್ಮ ಸಿನಿಮಾ ಬಿಡುಗಡೆಯಾಗುತ್ತಿರುವುದು ವಿಶೇಷವಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಅದೇ ಕಾರಣಕ್ಕೆ ‘ಲಕ್ಷ್ಮೀಪುತ್ರ’ ಸಿನಿಮಾವನ್ನು ಪ್ರೇಕ್ಷಕರು ಕೂಡ ತಮ್ಮದೇ ಸಿನಿಮಾ ಎಂಬಂತೆ ಪ್ರೀತಿಸಿ, ಪ್ರೋತ್ಸಾಹಿಸಬೇಕು ಎಂದು ಚಿಕ್ಕಣ್ಣ ಮನವಿ ಮಾಡಿದ್ದಾರೆ.
‘ಲಕ್ಷ್ಮಿ’ ಎಂದರೆ ತಾಯಿ... ಕಥೆಯಲ್ಲಿದೆ ಕೌಟುಂಬಿಕ ಭಾವನೆ
‘ಲಕ್ಷ್ಮೀಪುತ್ರ’ ಚಿತ್ರದ ಕಥೆಯ ಬಗ್ಗೆ ಮಾತನಾಡಿರುವ ನಿರ್ಮಾಪಕ ಎ.ಪಿ. ಅರ್ಜುನ್, ‘ಲಕ್ಷ್ಮಿ’ ಎಂಬ ಪದ ಕೇಳಿದ ತಕ್ಷಣ ತಾಯಿ, ಅಕ್ಕ-ತಂಗಿ ಹಾಗೂ ಬಾಳಸಂಗಾತಿಯ ನೆನಪು ಬರುತ್ತದೆ ಎಂದು ಹೇಳಿದ್ದಾರೆ.
ಮಂಡ್ಯದ ಸೊಗಡಿನಲ್ಲಿ ಸಾಗುವ ಈ ಸಿನಿಮಾ ತಾಯಿ-ಮಗನ ಭಾವನಾತ್ಮಕ ಬಾಂಧವ್ಯ, ಪ್ರೀತಿ ಹಾಗೂ ಹಾಸ್ಯವನ್ನು ಪ್ರಮುಖವಾಗಿ ಒಳಗೊಂಡಿದೆ. ಆರಂಭದಿಂದ ಅಂತ್ಯದವರೆಗೂ ಪ್ರೇಕ್ಷಕರನ್ನು ನಗಿಸುವ ಜೊತೆಗೆ, ಮನಸ್ಸಿಗೆ ಹತ್ತಿರವಾಗುವ ಪ್ರೇಮಕಥೆಯನ್ನೂ ಸಿನಿಮಾ ಹೊಂದಿದೆ ಎಂದು ಅವರು ತಿಳಿಸಿದ್ದಾರೆ. ಹೀಗಾಗಿ ಚಿಕ್ಕಣ್ಣನ ಕಾಮಿಡಿ ಟೈಮಿಂಗ್ ಜೊತೆಗೆ ಕೌಟುಂಬಿಕ ಭಾವನೆಗಳೂ ಸಿನಿಮಾದ ಪ್ರಮುಖ ಆಕರ್ಷಣೆಯಾಗುವ ನಿರೀಕ್ಷೆ ಮೂಡಿದೆ.
‘ಲಕ್ಷ್ಮೀಪುತ್ರ’ ಬಗ್ಗೆ ನಾಯಕಿ ಹೇಳಿದ್ದೇನು?
ಚಿತ್ರದ ನಾಯಕಿ ವಂದಿತಾ ಗೌಡ ಕೂಡ ಸಿನಿಮಾದ ಬಗ್ಗೆ ಉತ್ಸಾಹ ವ್ಯಕ್ತಪಡಿಸಿದ್ದಾರೆ. ಚಿತ್ರ ಅತ್ಯುತ್ತಮವಾಗಿ ಮೂಡಿಬಂದಿದ್ದು, ಕಲಾವಿದರ ಬೆಳವಣಿಗೆಗೆ ಪ್ರೇಕ್ಷಕರ ಪ್ರೀತಿ ಮತ್ತು ಪ್ರೋತ್ಸಾಹವೇ ದೊಡ್ಡ ಶ್ರೀರಕ್ಷೆ ಎಂದು ಹೇಳಿದ್ದಾರೆ.
ವಿಜಯ್ ಎಸ್. ಸ್ವಾಮಿ ನಿರ್ದೇಶನದ ಈ ಚಿತ್ರಕ್ಕೆ ಎ.ಪಿ. ಅರ್ಜುನ್ ಕಥೆ, ಚಿತ್ರಕಥೆ ಹಾಗೂ ಸಾಹಿತ್ಯ ಒದಗಿಸಿದ್ದಾರೆ. ಅನ್ನಪೂರ್ಣ ಎ.ಪಿ. ಅರ್ಜುನ್ ನಿರ್ಮಿಸಿರುವ ಸಿನಿಮಾದಲ್ಲಿ ಚಿಕ್ಕಣ್ಣ ಮತ್ತು ವಂದಿತಾ ಗೌಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಾರಾ ಅನುರಾಧ, ಕುರಿ ಪ್ರತಾಪ್, ಧರ್ಮಣ್ಣ ಕಡೂರು, ಮಿತ್ರ ಸೇರಿದಂತೆ ಹಲವು ಪ್ರಮುಖ ಕಲಾವಿದರು ಚಿತ್ರತಂಡದಲ್ಲಿದ್ದಾರೆ.
ಇನ್ನು ಕೌಟುಂಬಿಕ ಕಥೆ, ಹಾಸ್ಯ, ಪ್ರೀತಿ ಹಾಗೂ ಮಂಡ್ಯದ ಸೊಗಡನ್ನು ಹೊತ್ತಿರುವ ‘ಲಕ್ಷ್ಮೀಪುತ್ರ’ ನವೆಂಬರ್ 27ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ‘ಉಪಾಧ್ಯಕ್ಷ’ ಬಳಿಕ ನಾಯಕನಾಗಿ ಚಿಕ್ಕಣ್ಣನ ಈ ಹೊಸ ಪ್ರಯತ್ನಕ್ಕೆ ಪ್ರೇಕ್ಷಕರು ಯಾವ ರೀತಿಯ ಸ್ವಾಗತ ನೀಡುತ್ತಾರೆ ಎಂಬ ಕುತೂಹಲ ಇದೀಗ ಹೆಚ್ಚಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.