ಸಂಕಷ್ಟದಲ್ಲಿದವರ ಜತೆ ನಿಲ್ಲುವುದು ನಮ್ಮ ಜವಾಬ್ದಾರಿ ಅಂದ ನಟಿ ರಾಗಿಣಿ ದ್ವಿವೇದಿ

By Kannadaprabha NewsFirst Published May 6, 2021, 8:55 AM IST
Highlights

ನಟಿ ರಾಗಿಣಿ ಈಗ ಕೊರೋನಾ ವಾರಿಯರ್‌ ಆಗಿದ್ದಾರೆ. ಕೊರೋನಾ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಪೊಲೀಸರು, ವೈದ್ಯಕೀಯ ಸಿಬ್ಬಂದಿ ಜೊತೆಗೆ ಚಿತಾಗಾರದಲ್ಲಿ ಹಗಲಿರುಳೂ ದುಡಿಯುತ್ತಿರುವ ಕೆಲಸಗಾರರ ನೆರವಿಗೆ ನಿಂತಿದ್ದಾರೆ. ಜೆನ್‌ನೆಕ್ಟ್ ಚಾರಿಟೇಬಲ್‌ ಟ್ರಸ್ಟ್‌ ಮಾಡಿಕೊಂಡು ಇದರ ಮೂಲಕ ಕೊರೋನಾ ಸಂಕಷ್ಟದಲ್ಲಿರುವವರಿಗೆ ನೆರವು ನೀಡುತ್ತಿದ್ದಾರೆ. ಹಿಂದಿನ ಲಾಕ್‌ಡೌನ್‌ ವೇಳೆ ಸಾಕಷ್ಟುಮಂದಿಗೆ ನೆರವು ನೀಡಿದ್ದ ತುಪ್ಪದ ಬೆಡಗಿ ಈಗ ಮತ್ತೆ ಬೀದಿಗಿಳಿದಿದ್ದಾರೆ. ತಮ್ಮ ಸಮಾಜಸೇವೆಯ ಬಗ್ಗೆ ಅವರು ಹೇಳುವ ಮಾತುಗಳು ಇಲ್ಲಿವೆ.

1. ಎಲ್ಲರೂ ಸಂಕಷ್ಟದಲ್ಲಿದ್ದಾರೆ. ಕೊರೋನಾ ಭಯ ಪ್ರತಿಯೊಬ್ಬರನ್ನು ಆವರಿಸಿಕೊಳ್ಳುತ್ತಿದೆ. ಇಂಥ ಸಮಯದಲ್ಲಿ ನಾವು ನಮ್ಮ ಜವಾಬ್ದಾರಿಗಳನ್ನು ತೋರಬೇಕಿದೆ. ಇದು ನಾವು ಮಾಡುತ್ತಿರುವ ನೆರವು ಅಥವಾ ಸೇವೆ ಅಂದುಕೊಳ್ಳಬಾರದು. ಇದು ನಮ್ಮ ಕರ್ತವ್ಯ.

2. ನಾವು ಹೋದ ಕಡೆಯೆಲ್ಲ ಬಹುತೇಕರ ಬೇಡಿಕೆ ಬೆಡ್‌ ಹಾಗೂ ಆಕ್ಸಿಜನ್‌. ನನಗೆ ಪರಿಚಯ ಇರುವವರ ಮೂಲಕ ಬೆಡ್‌ ಹಾಗೂ ಆಕ್ಸಿಜನ್‌ ಸಿಲಿಂಡರ್‌ ಕೊಡಿಸುವ ಪ್ರಯತ್ನಮಾಡುತ್ತಿದ್ದೇನೆ. ಜೊತೆಗೆ ನಮ್ಮ ಟ್ರಸ್ಟ್‌ ಮೂಲಕ ಮೆಡಿಕಲ್‌ ನೆರವು, ಹೋಮ್‌ ಐಸೋಲೇಶನ್‌ ಕಿಟ್‌ಗಳನ್ನು ನೀಡಲಾಗುತ್ತಿದೆ.

3. ಮುಖ್ಯವಾಗಿ ನನ್ನ ಗುರಿ ಈ ಸಂದರ್ಭದಲ್ಲಿ ಹಸಿವಿನ ಸಮಸ್ಯೆ ಎದುರಿಸುತ್ತಿರುವವರಿಗೆ ನೆರವಾಗುವುದು ಹಾಗೂ ತಮ್ಮ ಊರುಗಳಿಗೆ ತೆರಳಲು ಕಷ್ಟಪಡುತ್ತಿರುವವರನ್ನು ಅವರ ಊರುಗಳಿಗೆ ತಲುಪಿಸುವುದು.

4. ಆ ನಿಟ್ಟಿನಲ್ಲಿ ನನ್ನದೇ ತಂಡದ ಮೂಲಕ ಬೆಂಗಳೂರಿನ ಹಲವು ಪ್ರದೇಶಗಳಿಗೆ ಭೇಟಿ ಕೊಟ್ಟು ಸಾಕಷ್ಟುಜನರಿಗೆ ಆಹಾರ ಸಾಮಾಗ್ರಿ ನೀಡುತ್ತಿದ್ದೇನೆ. ಈಗಾಗಲೇ ಬೆಂಗಳೂರಿನ ಕಾಕ್ಸ್‌ ಟೌನ್‌ ಬಳಿಯ ಕಲ್ಪಹಳ್ಳಿ ಹಾಗೂ ಭಾರತಿನಗರ ಸ್ಮಶಾನ ಸಿಬ್ಬಂದಿಗೆ ಆಹಾರ ಸಾಮಾಗ್ರಿಗಳನ್ನು ವಿತರಣೆ ಮಾಡಲಾಗಿದೆ.

5. ಸಾವಿನ ಸಂಖ್ಯೆ ಹೆಚ್ಚುತ್ತಿವೆ. ಸ್ಮಶಾನದಲ್ಲಿ ಕೆಲಸ ಮಾಡುವವರು ಕೂಡ ಒತ್ತಡಕ್ಕೆ ಸಿಲುಕಿದ್ದಾರೆ. ಅವರಿಗೆ ಧೈರ್ಯ ತುಂಬುವುದು ಮಾತ್ರವಲ್ಲ, ಅವರ ಜೀವನಕ್ಕೆ ಬೇಕಾದ ಅಗತ್ಯ ಆಹಾರ ಸಾಮಾಗ್ರಿಗಳನ್ನು ನೀಡುವುದು ನಮ್ಮ ಜವಾಬ್ದಾರಿ. ಹೀಗಾಗಿ ಅವರ ಕಷ್ಟಕ್ಕೆ ಸ್ಪಂದಿಸುತ್ತಿದ್ದೇನೆ. ಅವರಿಗೂ ಜೀವ ಭಯ ಇದೆ, ಅದನ್ನು ದೂರ ಮಾಡಿಕೊಂಡು ಅವರು ಸತ್ತವರ ಅಂತ್ಯ ಸಂಸ್ಕಾರ ಮಾಡುವ ನಿಟ್ಟಿನಲ್ಲಿ ಧೈರ್ಯ ತುಂಬಬೇಕಿದೆ. ಈ ಕೆಲಸಕ್ಕೆ ಸಾಮಾಜಿಕ ಕಾರ್ಯಕರ್ತ ರವಿ ಅವರು ನನ್ನ ಜತೆ ಸಾಥ್‌ ನೀಡಿದ್ದಾರೆ.

'ಮಿ.ಜಾನಿ ವಾಕರ್‌' ಚಿತ್ರದಲ್ಲಿ ಮತ್ತೆ ಖಾಕಿ ತೊಟ್ಟರಾಗಿಣಿ; ವೇದಿಕ್‌ ವೀರ್‌ ನಿರ್ದೇಶನದ ಮರ್ಡರ್‌ ಮಿಸ್ಟ್ರಿ! 

6. ಕಳೆದ ಬಾರಿಯೂ ಕೋವಿಡ್‌ ಸಂದರ್ಭದಲ್ಲಿ ಬೆಂಗಳೂರಿನ ಸ್ಲಂ ಪ್ರದೇಶದ ಬಡವರಿಗೆ ವಿವಿಧ ಸಂಘ ಸಂಸ್ಥೆಗಳ ಮೂಲಕ ಆಹಾರ ಕಿಟ್‌ಗಳನ್ನು ವಿತರಣೆ ಮಾಡಲಾಗಿತ್ತು. ಈ ಬಾರಿ ಅದೇ ಕೆಲಸ ಮಾಡುವ ಜತೆಗೆ ಕೊರೋನಾ ವಾರಿಯರ್ಸ್‌ ಜತೆಗೂ ನಿಲ್ಲುತ್ತಿದ್ದೇವೆ.

7. ಎಲ್ಲಕ್ಕಿಂತ ಮುಖ್ಯವಾಗಿ ದಿನದ 24 ಗಂಟೆಯೂ ರಸ್ತೆಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿಕೊಂಡು ಕಾವಲು ಕಾಯುತ್ತಿರುವ ಪೊಲೀಸ್‌ ಸಿಬ್ಬಂದಿ ಪೈಕಿ ಸುಮಾರು 200 ಮಂದಿ ಪೊಲೀಸ್‌ ಸಿಬ್ಬಂದಿಗೆ ಒಂದು ಹೊತ್ತಿನ ಆಹಾರ ವಿತರಣೆ ಮಾಡಲಾಗಿದೆ.

8. ನಾನು ಒಬ್ಬಳೇ ಈ ಕೆಲಸಗಳನ್ನು ಮಾಡುತ್ತಿಲ್ಲ. ಹಲವರ ನೆರವು ಹಾಗೂ ಮಾರ್ಗದರ್ಶನ ತೆಗೆದುಕೊಂಡು ಜೆನ್‌ನೆಕ್ಟ್$್ಸ ಚಾರಿಟೆಬಲ್‌ ಟ್ರಸ್ಟ್‌ ಮಾಡಿಕೊಂಡಿದ್ದು, ಇದರ ಮೂಲಕ ಕೆಲಸಗಳನ್ನು ಮಾಡುತ್ತಿದ್ದೇವೆ

 

click me!