5 ಮಿಲಿಯನ್‌ ದಾಟಿದ 'ಯುವರತ್ನ' ಟ್ರೇಲರ್‌; ಪವರ್‌ ಪ್ಯಾಕ್‌ ಡೈಲಾಗ್‌, ಪುನೀತ್‌ ಖದರ್‌!

By Kannadaprabha NewsFirst Published Mar 22, 2021, 9:22 AM IST
Highlights

ಪುನೀತ್‌ ರಾಜ್‌ಕುಮಾರ್‌ ಹಾಗೂ ಸಂತೋಷ್‌ ಆನಂದ್‌ರಾಮ್‌ ಕಾಂಬಿನೇಷನ್‌ನ ‘ಯುವರತ್ನ’ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಬೆಂಗಳೂರಿನಲ್ಲಿ ಟ್ರೇಲರ್‌ ಬಿಡುಗಡೆ ಮಾಡಿದ ಚಿತ್ರತಂಡ, ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ‘ಯುವಸಂಭ್ರಮ’ದ ಹೆಸರಿನಲ್ಲಿ ಪ್ರವಾಸ ಹೊರಟಿದೆ. ಇತ್ತ ಟ್ರೇಲರ್‌ ಪವರ್‌ ಪ್ಯಾಕ್‌ನಿಂದ ನೋಡಗರ ಗಮನ ಸೆಳೆಯುತ್ತಿದೆ. ನಿರೀಕ್ಷೆಯಂತೆ ಇಡೀ ಟ್ರೇಲರ್‌ ಪವರ್‌ಫುಲ್‌ ಡೈಲಾಗ್‌ಗಳಿಂದ ಕೂಡಿದ್ದು, ಇದನ್ನು ನೋಡಿದವರು ‘ಪವರ್‌ಪ್ಯಾಕ್‌’ ಟ್ರೇಲರ್‌ ಎನ್ನುತ್ತಿದ್ದಾರೆ.

‘ಓಂ ಸಿನಿಮಾ ನೋಡಿದ್ದಿಯಾ, ಹಾ, ಪ್ರೊಡ್ಯೂಸ್‌ ಮಾಡಿದ್ದು ನಾವೇ’, ‘ಧಮ್‌ ಹೊಡೀತೀಯಾ, ಧಮ್‌ ಇಲ್ಲಿದೆ’, ‘ಜನ ಕೊಟ್ಟಿರುವ ಸ್ಟಾರ್‌ ನಾವ್‌ ಇರೋತಕ ಇರುತ್ತೆ’ ಹೀಗೆ ಟ್ರೇಲರ್‌ನಲ್ಲಿ ಮೂಡಿ ಬಂದಿರುವ ಡೈಲಾಗ್‌ಗಳು ಪವರ್‌ಸ್ಟಾರ್‌ ಅಭಿಮಾನಿಗಳಲ್ಲಿ ಕ್ರೇಜ್‌ ಹೆಚ್ಚಿಸಿದೆ.

ಎಲ್ಲ ರೀತಿಯ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಚಿತ್ರವನ್ನು ಮಾಡಿದ್ದು. ಚಿತ್ರದ ಟ್ರೇಲರ್‌ನಲ್ಲೂ ಅದೇ ರೀತಿಯ ಅಂಶಗಳನ್ನು ಇವೆ. ಕತೆ, ಪವರ್‌ಫುಲ್‌ ಡೈಲಾಗ್‌, ಈಗಿನ ಸಮಾಜಕ್ಕೆ ಬೇಕಾದ ಸಂದೇಶ ಇವು ಚಿತ್ರದ ಹೈಲೈಟ್‌. ನಾನು ಈ ಚಿತ್ರದ ಭಾಗವಾಗಿದ್ದಕ್ಕೆ ಖುಷಿ ಆಗುತ್ತಿದೆ.- ಪುನೀತ್‌ರಾಜ್‌ಕುಮಾರ್‌, ನಟ

ನೋಡ್ರಪ್ಪ! ಪುನೀತ್‌ ರಾಜ್‌ಕುಮಾರ್ 'ಯುವರತ್ನ' ಟ್ರೇಲರ್‌ ಸಖತ್‌ ಆಗಿದೆ

ಈಗಾಗಲೇ ಚಿತ್ರದ ಟ್ರೇಲರ್‌ ಹೊಂಬಾಳೆ ಫಿಲಮ್ಸ್‌ ಯೂಟ್ಯೂಬ್‌ನಲ್ಲಿ 5 ಮಿಲಿಯನ್‌ ಹಿಟ್ಸ್‌ ದಾಟಿದೆ. ತೆಲುಗಿನಲ್ಲೂ ಟ್ರೇಲರ್‌ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ‘ಯುವರತ್ನ’ ಚಿತ್ರದಲ್ಲಿ ನಟಿಸಿರುವ ಎಲ್ಲ ಕಲಾವಿದರ ಸಮ್ಮುಖದಲ್ಲಿ ಕಲರ್‌ಫುಲ್ಲಾಗಿ ಟ್ರೇಲರ್‌ಅನ್ನು ಬಿಡುಗಡೆ ಮಾಡಿದ್ದು ಕೂಡ ಸಾರ್ಥಕವಾಯಿತು ಎನ್ನುವ ಭಾವನೆ ಚಿತ್ರತಂಡದ್ದು. ಚಿತ್ರದ ಟ್ರೇಲರ್‌ ಈ ಮಟ್ಟಕ್ಕೆ ಗೆಲುವು ಕಾಣುತ್ತಿರುವ ಹೊತ್ತಿನಲ್ಲಿ ನಿರ್ದೇಶಕ ಸಂತೋಷ್‌ ಆನಂದ್‌ರಾಮ್‌ ಸಂಭ್ರಮ ವ್ಯಕ್ತಪಡಿಸಿದ್ದಾರೆ. ‘ಚಿತ್ರದ ಟ್ರೇಲರ್‌ನಿಂದ ಮತ್ತಷ್ಟುಭರವಸೆ ಹೆಚ್ಚಾಗಿದೆ. ಈಗಾಗಲೇ ಹಾಡುಗಳನ್ನು ಕೇಳಿ ಮೆಚ್ಚಿಕೊಂಡಿದ್ದಾರೆ. ಟೀಸರ್‌ ಕೂಡ ಇಷ್ಟವಾಗಿದೆ. ಈಗ ಟ್ರೇಲರ್‌ ನೋಡಿ ಚಿತ್ರದಲ್ಲಿ ಖಂಡಿತ ಒಂದು ಒಳ್ಳೆಯ ಕತೆ ಇರುತ್ತದೆಂಬ ನಂಬಿಕೆ ಪ್ರೇಕ್ಷಕರಿಗೆ ಬಂದಿದೆ. ಅದೇ ನಂಬಿಕೆ ಅವರನ್ನು ಚಿತ್ರಮಂದಿರಗಳಿಗೆ ಕರೆದುಕೊಂಡು ಬರುತ್ತದೆ. ಪುನೀತ್‌ರಾಜ್‌ಕುಮಾರ್‌ ಅವರ ಅಭಿಮಾನಿಗಳಿಗೂ ಸೇರಿದಂತೆ ಎಲ್ಲರಿಗೂ ಈ ಸಿನಿಮಾ ಇಷ್ಟಆಗುವುದರಲ್ಲಿ ಎರಡು ಮಾತಿಲ್ಲ. ಈ ಚಿತ್ರದ ಕತೆ ಹೇಳಿದಾಗ ನಟ ಪ್ರಕಾಶ್‌ ರೈ ಅವರಿಂದ ಶುರುವಾಗಿ ಇಡೀ ಚಿತ್ರತಂಡ ನನಗೆ ಕೊಟ್ಟಸಲಹೆ, ಧೈರ್ಯದಿಂದ ಈ ಸಿನಿಮಾ ಇಷ್ಟುದೊಡ್ಡ ಮಟ್ಟಕ್ಕೆ ಬಂದಿದೆ. ಟ್ರೇಲರ್‌ ಹಿಟ್‌ ಆದಂತೆ ಸಿನಿಮಾ ಕೂಡ ಗೆಲುವು ಕಾಣುತ್ತದೆ’ ಎನ್ನುತ್ತಾರೆ ನಿರ್ದೇಶಕ ಸಂತೋಷ್‌ ಆನಂದ್‌ರಾಮ್‌.

ದೇಶ ಸುತ್ತಿ ಬಂದಿದ್ದೇನೆ, ಬೇರೆ ಭಾಷೆಗಳ ಮುಂದೆ ಎದೆ ಎತ್ತಿ ನಿಲ್ಲುವೆ: ಪ್ರಕಾಶ್ ರೈ

ವಿಜಯ್‌ ಕಿರಗಂದೂರು ನಿರ್ಮಾಣದ ಈ ಸಿನಿಮಾ ಏಪ್ರಿಲ್‌ 1ಕ್ಕೆ ಕನ್ನಡ ಹಾಗೂ ತೆಲುಗಿನಲ್ಲಿ ಬಿಡುಗಡೆ ಆಗುತ್ತಿದೆ. ತಮಿಳಿನ ಸಾಯೇಷಾ ನಾಯಕಿಯಾಗಿ ನಟಿಸಿದ್ದಾರೆ. ಪ್ರಕಾಶ್‌ ರೈ, ರಂಗಾಯಣ ರಘು, ಧನಂಜಯ್‌, ಅವಿನಾಶ್‌, ಅಚ್ಯುತ್‌ ಕುಮಾರ್‌, ರಾಜೇಶ್‌ ನಟರಂಗ, ಸೋನು ಗೌಡ ಸೇರಿದಂತೆ ಹಲವರು ಚಿತ್ರದಲ್ಲಿ ನಟಿಸಿದ್ದಾರೆ.

click me!