ಪುನೀತ್, ರಾಘಣ್ಣ ಜೊತೆ 3 ಗಂಟೆ ಮಾತನಾಡಿದ್ದೆ: ನಿಖಿಲ್ ಕುಮಾರಸ್ವಾಮಿ

By Suvarna NewsFirst Published Nov 15, 2021, 3:16 PM IST
Highlights

ಪುನೀತ್‌ ರಾಜ್‌ಕುಮಾರ್ ಪುಣ್ಯ ಸ್ಮರಣೆಯಲ್ಲಿ ಭಾವುಕರಾದ ನಿಖಿಲ್ ಕುಮಾರಸ್ವಾಮಿ. ದೊಡ್ಡ ಮನೆಯವರೊಂದಿಗೆ ಇರುವ ಒಡನಾಟದ ಬಗ್ಗೆ ಮಾತನಾಡಿದ ಯುವರಾಜ. 

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅಗಲಿಕೆ ಯಾರಿಗೆ ನೋವು ಕೊಟ್ಟಿಲ್ಲ ಹೇಳಿ? 17 ದಿನಗಳು ಕಳೆದರೂ ಮನಸ್ಸಿಗೆ ಏನೋ ಭಾರ, ಮೊದ ಮೊದಲು ರಸ್ತೆಯಲ್ಲಿ ಫೋಟೋ ನೋಡಿದಾಗ ಯಾವುದೋ ಸಿನಿಮಾ ರಿಲೀಸ್ ಇರಬೇಕು ಎಂದೆನಿಸುತ್ತಿತ್ತು. ಆದರೆ ಅದಕ್ಕೆ ಹಾಕಿರುವ ಹಾರ ಮತ್ತು ಬರೆದಿರುವ ಸಾಲುಗಳನ್ನು ನೋಡಿದರೆ ಏನೋ ಹಿಂಸೆ. ಕರ್ನಾಟಕದಲ್ಲಿ (Karnataka) ಏನೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ ಮೊದಲು ಪುನೀತ್‌ಗೆ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.

ಇತ್ತೀಚಿಗೆ ರಾಮನಗರದ (Ramanagara) ಸುಗ್ಗನಹಳ್ಳಿಯಲ್ಲಿ ನಡೆದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಯುವನಟ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರು ಭಾಗಿಯಾಗಿ, ರಕ್ತದಾನ ಶಿಬಿರವನ್ನು ಉದ್ಘಾಟಿಸಿ, ಅನ್ನಸಂತರ್ಪಣೆ ಮಾಡುವ ಮೂಲಕ ಪುನೀತ್ ಜೊತೆ ಕಳೆದ ಕ್ಷಣಗಳನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ. 'ಪುನೀತ್‌ ರಾಜ್‌ಕುಮಾರ್ ನಿಧನವನ್ನು ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ. ನಮ್ಮ ಕುಟುಂಬದ ಸದಸ್ಯನನ್ನೇ ಕಳೆದುಕೊಂಡಂತೆ ಭಾಸವಾಗುತ್ತಿದೆ. ಚಲನಚಿತ್ರ ವಾಣಿಜ್ಯ ಮಂಡಳಿ (Karanataka Film Chamber) ನವೆಂಬರ್ 16ನೇ ತಾರೀಖು ನಡೆಯುವ ನುಡಿನಮನ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವೆ. ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ,' ಎಂದು ನಿಖಿಲ್ ಮಾತನಾಡಿದ್ದಾರೆ. 

'ಜಾಗ್ವಾರ್' (Jaquar) ಚಿತ್ರದ ಮೂಲಕ ಚಿತ್ರರಂಗಕ್ಕೆ ನಿಖಿಲ್ ಪಾದಾರ್ಪಣೆ ಮಾಡಿದ್ದು, ಹೀಗಾಗಿ ಮೊದಲ ಚಿತ್ರವೆಂದು ಅದ್ಧೂರಿಯಾಗಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರೂ, ಕೆಲವು ಕಾರಣಗಳಿಂದ  Appu ಭಾಗಿಯಾಗಲು ಆಗದ ಕಾರಣ ಹೂಗುಚ್ಛು ಕಳುಹಿಸಿ ಶುಭ ಕೋರಿದ್ದರಂತೆ. ಈ ಘಟನೆಯನ್ನು ನಿಖಿಲ್ ವೇದಿಕೆ ಮೇಲೆ ನೆನಪು ಮಾಡಿಕೊಂಡಿದ್ದಾರೆ. 

ಬಸ್ ನಿಲ್ದಾಣದಲ್ಲಿ ಅಪ್ಪು ಫೋಟೋಗೆ ಮುತ್ತಿಟ್ಟು ಕಣ್ಣೀರಿಟ್ಟ ಅಜ್ಜಿ!

'ಇತ್ತೀಚಿನ ದಿನಗಳಲ್ಲಿ ರಾಘಣ್ಣ (Raghavendra Rajkumar) ಹಾಗೂ ಅಪ್ಪು ಕುಟುಂಬದ ಜೊತೆ ತಮ್ಮ ಒಡನಾಟ ಬೆಳೆದಿತ್ತು. ಅವರ ಮನೆಗೆ ಊಟಕ್ಕಾಗಿ ಕರೆದು ಮೂರು ಗಂಟೆಗೂ ಹೆಚ್ಚು ಕಾಲ ಅವರೊಂದಿಗೆ ಸಮಯ ಕಳೆಯುವ ಜತೆಗೆ, ಮುಂಬರುವ ಚಿತ್ರಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ತಮಗೆ ಯಾವ ರೀತಿ ಪಾತ್ರಗಳ ಸೂಟ್ ಆಗುತ್ತವೆ ಎಂಬುದರ ಬಗ್ಗೆ ಮಾರ್ಗದರ್ಶನ ನೀಡಿದ್ದರು. ದೊಡ್ಡ ಮನೆಯವರು ಒಳ್ಳೆಯ ನಡವಳಿಕೆ ಇಡೀ ಜಗತ್ತಿಗೇ ಗೊತ್ತು. ಮೊನ್ನೆ ಅರಮನೆ ಮೈದಾನದಲ್ಲಿ ನಡೆದ ಊಟದ ವ್ಯವಸ್ಥೆಯನ್ನು ಇಲ್ಲಿವರೆಗೂ ದೇಶದಲ್ಲಿ ಯಾರೂ ಕೂಡ ಆ ರೀತಿಯ ಕಾರ್ಯಕ್ರಮವನ್ನು ಮಾಡಲು ಸಾಧ್ಯವಾಗಿಲ್ಲ. ದೊಡ್ಡಗುಣ ಇರುವ ಕುಟುಂಬಕ್ಕೆ ಇಂತಹ ಆಘಾತ ಆಗಬಾರದಿತ್ತು. ಎರಡೂವರೆ ತಿಂಗಳ ಹಿಂದೆ ನನ್ನನ್ನು ಪ್ರೀತಿಯಿಂದ ಕಂಡಿದ್ದ ಪುನೀತ್ ಇಂದು ನಮ್ಮೊಂದಿಗೆ ಇಲ್ಲ ಎಂಬುದು ಅರಗಿಸಿಕೊಳ್ಳಲು ಆಗುತ್ತಿಲ್ಲ,' ಎಂದು ನಿಖಿಲ್ ಮಾತನಾಡಿದ್ದಾರೆ.

 

click me!