'ಬಡವ ರಾಸ್ಕಲ್' ಚಿತ್ರದ ಹೊಸ ಪೋಸ್ಟರ್ ಹಂಚಿಕೊಂಡ ಡಾಲಿ ಧನಂಜಯ್

By Suvarna NewsFirst Published Nov 17, 2021, 9:01 PM IST
Highlights

ಉಡುಪಿ ಹೋಟೆಲ್ಲು ನಂತರ ನಾನು ಬರೆದಿರುವ ಬಡವ ರಾಸ್ಕಲ್ ಸಿನಿಮಾದ ಆಗಾಗ ನೆನಪಾಗುತಾಳೆ ಕಣ್ಣೀರಿಗೆ ನೆಪವಾಗುತಾಳೆ ಹಾಡು ಶುಕ್ರವಾರ ಸಂಜೆ 4 ಗಂಟೆಗೆ ಬಿಡುಗಡೆಯಾಗುತ್ತಿದೆ ಎಂದು ಡಾಲಿ ಧನಂಜಯ್ ತಿಳಿಸಿದ್ದಾರೆ.

ಡಾಲಿ ಧನಂಜಯ್ (Dolly Dhananjay) ಅಭಿನಯದ  'ಬಡವ ರಾಸ್ಕಲ್' (Badava Rascal) ಚಿತ್ರ ತೆರೆಗೆ ಬರಲು ಸಜ್ಜಾಗಿದ್ದು, ಚಿತ್ರತಂಡ ಪ್ರಚಾರ ಕಾರ್ಯಗಳಿಗೆ ಸಿದ್ಧತೆಯನ್ನು ನಡೆಸುತ್ತಿದೆ. ಈ  ಹಿಂದೆ ಚಿತ್ರದ ಹಾಡು (Song) ಮತ್ತು ಗ್ಲಿಂಪ್ಸ್ (Glimpse) ವಿಡಿಯೋವನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಧನಂಜಯ್ ಹಾಗೂ ಅಮೃತಾ ಅಯ್ಯಂಗಾರ್ (Amrutha Iyengar) ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದ 'ಉಡುಪಿ ಹೋಟೆಲು' ಹಾಡು ಈಗಾಗಲೇ ಸಿನಿ ಪ್ರೇಮಿಗಳ ಮನಗೆದ್ದಿದೆ. ಇದೀಗ ಚಿತ್ರದ ಮತ್ತೊಂದು ಹಾಡನ್ನು ಬಿಡುಗಡೆ ಮಾಡುವುದಾಗಿ ಧನಂಜಯ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

ಹೌದು! ಡಾಲಿ ಧನಂಜಯ್ 'ಟಗರು' (Tagaru) ಚಿತ್ರದ ನಂತರ ಕನ್ನಡ ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಅವರ ಕೈಯಲ್ಲಿ ಸಾಲು ಸಾಲು ಚಿತ್ರಗಳಿವೆ. ಇದೀಗ ಅವರ ಅಭಿನಯದ 'ಬಡವ ರಾಸ್ಕಲ್' ಚಿತ್ರದ ಮತ್ತೊಂದು ಹಾಡು 'ಆಗಾಗ ನೆನಪಾಗುತಾಳೆ' ಬಿಡುಗಡೆಯಾಗುತ್ತಿದೆ. ಈ ಬಗ್ಗೆ ಧನಂಜಯ್, 'ಉಡುಪಿ ಹೋಟೆಲ್ಲು' ನಂತರ ನಾನು ಬರೆದಿರುವ ನಮ್ಮ 'ಬಡವ ರಾಸ್ಕಲ್' ಸಿನಿಮಾದ ಎರಡನೇ ಹಾಡು, ಆಗಾಗ ನೆನಪಾಗುತಾಳೆ, ಕಣ್ಣೀರಿಗೆ ನೆಪವಾಗುತಾಳೆ.. ಶುಕ್ರವಾರ ಸಂಜೆ 4 ಗಂಟೆಗೆ ಬಿಡುಗಡೆಯಾಗುತ್ತಿದೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಕ್ಯಾಪ್ಷನ್ ಬರೆದು ಕನ್ನಡ ಹಾಗೂ ತೆಲುಗು ಪೋಸ್ಟರ್‌ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

ಶಂಕರ್ ಅಲಿಯಾಸ್ 'ಬಡವ ರಾಸ್ಕಲ್': ಡಾಲಿ ಧನಂಜಯ್ ಹೊಸ ಅವತಾರ!

ಈ ಹಿಂದೆ 'ಬಡವ ರಾಸ್ಕಲ್' ಚಿತ್ರತಂಡ ಚಿತ್ರದ ಗ್ಲಿಂಪ್ಸ್ ವಿಡಿಯೋವನ್ನು ಬಿಡುಗಡೆ ಮಾಡಿತ್ತು. ವಿಡಿಯೋದಲ್ಲಿ ಧನಂಜಯ್, ಶಂಕರ್ ಅಲಿಯಾಸ್ ಬಡವ ರಾಸ್ಕಲ್... ಎಂದು ಮಾಸ್ ಎಂಟ್ರಿ ಕೊಟ್ಟಿದ್ದು, ಜೊತೆಯಲ್ಲಿ ಪಿಟ್ಟ, ಪ್ಯಾಕೆಟ್, ಕಬಾಬ್, ಬೆಂಕಿ,  ಸಣ್ಣಪ್ಪ, ಡೌನ್ ಟು ಅರ್ಥ್, ನಾಗ ಎಂಬ ಪಾತ್ರಗಳ ಪರಿಚಯವಿದೆ. ಜೊತೆಗೆ ಚಿತ್ರತಂಡ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸಿ, ಡಿಸೆಂಬರ್ 24 ಕ್ರಿಸ್‌ಮಸ್ (Christmas) ಹಬ್ಬದಂದು ಚಿತ್ರ ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು. ಮಧ್ಯಮ ವರ್ಗದ ಜನರ ದಿನನಿತ್ಯದ ಜೀವನದಲ್ಲಿ ನಡೆಯುವ ಘಟನೆಗಳ ಸುತ್ತ ನಡೆಯುವ ಈ ಚಿತ್ರದಲ್ಲಿ ಧನಂಜಯ್‌ ಆಟೋ ಡ್ರೈವರ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

'ಡಾಲಿ ಪಿಕ್ಚರ್' (Dolly Picture) ಬ್ಯಾನರ್‌ನಲ್ಲಿ ಸಾವಿತ್ರಮ್ಮ ಅಡವಿ ಸ್ವಾಮಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಶಂಕರ್‌ ಗುರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಡಾಲಿ ಧನಂಜಯ ಅವರಿಗೆ ನಾಯಕಿಯಾಗಿ ಅಮೃತ ಅಯ್ಯಂಗಾರ್‌ ಅಭಿನಯಿಸುತ್ತಿದ್ದಾರೆ. ಉಳಿದಂತೆ ರಂಗಾಯಣ ರಘು (Rangayana Raghu), ತಾರಾ, ಸ್ಪರ್ಶ ರೇಖಾ, ನಾಗಭೂಷಣ್‌, ಪೂರ್ಣಚಂದ್ರ ಮುಂತಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ವಿಶೇಷವಾಗಿ ಈ ಚಿತ್ರದಲ್ಲಿ 'ಮಠ' ಗುರುಪ್ರಸಾದ್‌ (Guruprasad) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಡೀ ಕತೆಗೆ ತಿರುವು ಕೊಡುವ ಪಾತ್ರ ಇದಾಗಿದ್ದು, ಚಿತ್ರದಲ್ಲಿನ ಅವರ ಗೆಟಪ್‌ ಈ ಹಿಂದೆ ರಿವೀಲ್ ಆಗಿತ್ತು. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ವಾಸುಕಿ ವೈಭವ್‌ (Vasuki Vaibhav) ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. 

ಬಡವ ರಾಸ್ಕಲ್‌ ಚಿತ್ರದಲ್ಲಿ ಮಠ ಗುರುಪ್ರಸಾದ್‌

ಇನ್ನು 'ಬಡವ ರಾಸ್ಕಲ್' ಚಿತ್ರಕ್ಕೆ ಪ್ರೀತ ಜಯರಾಮನ್‌ ಛಾಯಾಗ್ರಹಣ, ನಿರಂಜನ್‌ ದೇವರಮನೆ ಸಂಕಲನ ಹಾಗೂ ವಿನೋದ್‌ ಸಾಹಸ ನಿರ್ದೇಶನವಿದೆ. ಬಾಲಾಜಿ ಡಿಜಿಟಲ್‌ ಸ್ಟುಡಿಯೋದಲ್ಲಿ ಚಿತ್ರದ ಡಬ್ಬಿಂಗ್ ನಡೆದಿದ್ದು, ಬೆಂಗಳೂರು, ಮೈಸೂರು ಹಾಗೂ ಪಾಂಡವಪುರ ಮೊದಲಾದ ಕಡೆಗಳಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಸದ್ಯ ಧನಂಜಯ್ ಎಸಿಪಿ ಪೊಲೀಸ್ ಪಾತ್ರದಲ್ಲಿ ನಟಿಸಿರುವ 'ಸಲಗ' (Salaga) ಚಿತ್ರ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇತ್ತ ಓಟಿಟಿ ಫ್ಲಾಟ್‌ಪಾರ್ಮ್‌ನಲ್ಲಿ 'ರತ್ನನ್ ಪ್ರಪಂಚ'  (Rathnan Prapancha) ಚಿತ್ರದಲ್ಲಿ ರತ್ನಾಕರನಾಗಿ ಮಧ್ಯಮ ವರ್ಗದ ಕುಟುಂಬದ ವ್ಯಕ್ತಿಯಾಗಿ ಧನಂಜಯ್ ನಟಿಸಿ ಪ್ರೇಕ್ಷಕರಿಂದ ಸೈ ಎನಿಸಿಕೊಂಡಿದ್ದಾರೆ. 
 

 
 
 
 
 
 
 
 
 
 
 
 
 
 
 

A post shared by Dhananjaya (@dhananjaya_ka)

click me!