ಕೆ ಕಲ್ಯಾಣ್ ಪತ್ನಿ ಖಾತೆಯಿಂದ 45 ಲಕ್ಷ ವರ್ಗಾವಣೆ: ಗುರೂಜಿ ವಾಲಿ ಸೆರೆ

By Suvarna NewsFirst Published Oct 5, 2020, 2:51 PM IST
Highlights

ಕಲ್ಯಾಣ್ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಲು ಕಾರಣರಾದ ಗಂಗಾ ಹಾಗೂ ಗುರೂಜಿ ವಿರುದ್ಧ ಎಫ್‌ಐಆರ್ ದಾಖಲು.  ಆರೋಪಿ ಗಂಗಾ ನಾಪತ್ತೆ, ಮುಂದುವರೆದ ಪೊಲೀಸರ ಶೋಧ, ಖಾತೆಯಿಂದ 19 ಲಕ್ಷ ವರ್ಗಾವಣೆಯಾದ ದಾಖಲೆ. 

ಕನ್ನಡ ಚಿತ್ರರಂಗದ ಗಣ್ಯರಿಗೆ ಒಂದಾದ ಮೇಲೊಂದು ಸಂಕಷ್ಟ ಎದುರಾಗುತ್ತಿದೆ. ಖ್ಯಾತ ಕನ್ನಡ ಸಾಹಿತಿ ಕೆ.ಕಲ್ಯಾಣ್ ಅವರ 14 ವರ್ಷದ ಮಧುರ ದಾಂಪತ್ಯವೀಗ ಬೀದಿಗೆ ಬಂದು ನಿಂತಿದೆ. ಇದಕ್ಕೆ ಕಾರಣವೇ ಮಾಟ-ಮಂತ್ರ ಹಾಗೂ ಮನೆ ಕೆಲಸದವಳು ಗಂಗಾ ಹಾಗೂ ಬೆಳಗಾವಿ ಗುರೂಜಿ ಶಿವಾನಂದ ವಾಲಿ ಎಂದು ಖುದ್ದು ಕನ್ನಡ ಚಿತ್ರರಂಗದ ಖ್ಯಾತ ಸಾಹಿತಿ ಕಲ್ಯಾಣ್ ಆರೋಪಿಸಿದ್ದಾರೆ.

ಎಸ್‌ಪಿಬಿ ಬೆಂಗಳೂರಿಗೆ ಬಂದರೆ ತಪ್ಪದೇ ಇವರ ಮನೆಗೆ ಹೋಗುತ್ತಾರಂತೆ! 

ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಶಿವಾನಂದ ವಾಲಿ ಹಾಗೂ ಗಂಗಾ ವಿರುದ್ಧ FIR ದಾಖಲಾಗಿದೆ. ಪೊಲೀಸರು ಶಿವಾನಂದ ವಾಲಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಪಡೆದುಕೊಂಡರೆ, ಗಂಗಾ ಕಾಣೆಯಾಗಿದ್ದು, ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ದಾಂಪತ್ಯದ ಬಿರುಕಿನ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದ ಕಲ್ಯಾಣ್, ತಮ್ಮ ಅತ್ತೆ, ಮಾವ ಹಾಗೂ ಪತ್ನಿ ಖಾತೆಯಿಂದ ಸುಮಾರು  19 ಲಕ್ಷ 80 ಸಾವಿರ ವರ್ಗಾವಣೆ ಮಾಡಿಕೊಂಡಿದ್ದಾರೆ, ಎಂದು ಆರೋಪಿಸಿದ್ದಾರೆ. ಆದರೆ ಪೊಲೀಸರ ತನಿಖೆ ವೇಳೆ ಸುಮಾರು 45 ಲಕ್ಷ ರೂಪಾಯಿ ವರ್ಗಾವಣೆ ಆಗಿರುವ ಮಾಹಿತಿ ಲಭ್ಯವಾಗಿದೆ. ಈ ನಡುವೆ ಕಲ್ಯಾಣ್ ಪತ್ನಿಯನ್ನು ಪುಸಲಾಯಿಸಿ ಕಿಡ್ನಾಪ್ ಮಾಡಲಾಗಿದೆ, ಎನ್ನಲಾಗುತ್ತಿದೆ. ಮಾಳಮಾರುತಿ ಪೊಲೀಸರು ತಡ ರಾತ್ರಿ ಜಡ್ಜ್‌ ಎದುರು ಶಿವಾನಂದ ವಾಲಿಯನ್ನು ಹಾಜರು ಪಡಿಸಿದ್ದಾರೆ. 

ಕೆ.ಕಲ್ಯಾಣ್‌ ಪತ್ನಿ ಕುಟುಂಬದ ಆಪ್ತನ ಬಂಧನ: ಮಾಟ, ಮಂತ್ರದ ವಸ್ತುಗಳು ಪತ್ತೆ..! 

ಪ್ರಕರಣದ ನಂ.1 ಆರೋಪಿ, ನಾಪತ್ತೆಯಾಗಿರುವ ಗಂಗಾಳನ್ನು ಹುಡುಕಲು ಪೊಲೀಸರು ತ್ರೀವ ಶೋಧ ನಡೆಸುತ್ತಿದ್ದಾರೆ. 45 ಲಕ್ಷ ವರ್ಗಾವಣೆ ಮಾಡಿಕೊಂಡು ಶಿವಾನಂದ ವಾಲಿ ಖರೀದಿ ಮಾಡಿರುವ 10 ವಾಹನಗಳನ್ನು ಬಾಡಿಗೆಗೆ ನೀಡಿದ್ದರು. ಈಗ ಅದನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಸದ್ಯಕ್ಕೆ ಕಲ್ಯಾಣ್ ಪತ್ನಿಗೆ ಮನೋವೈದ್ಯರಿಂದ ಅಗತ್ಯ ಕೌನ್ಸೆಲಿಂಗ್ ಕೊಡಿಸಲಾಗುತ್ತಿದೆ.

ಬಂಧಿತ ಕುಲಕರ್ಣಿ ಪತ್ನಿ ಹೇಳೋದಿಷ್ಟು:
ಚಿತ್ರ ಸಾಹಿತಿ ಕೆ.ಕಲ್ಯಾಣ್ ಅವರ ದಾಂಪತ್ಯ ಕಲಹ ನಂಟಿನ ವಿಚಾರವಾಗಿ ಬಂಧಿತ ಶಿವಾನಂದ ವಾಲಿ ಪತ್ನಿ ಭಾರತಿ ಹಾಗೂ ಅಳಿಯ ಈರಣ್ಣ ಅವರು ಮಾತನಾಡಿದ್ದು, ತಮ್ಮ ಪತಿ ಮುಗ್ಧರೆಂದು ಹೇಳಿಕೊಂಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬೂದಿಹಾಳದ ನಿವಾಸಿಯಾಗಿದ್ದ ಶಿವಾನಂದ ವಾಲಿ ಪತ್ನಿ ಭಾರತಿ, 'ನನ್ನ ಪತಿ ಶಿವಾನಂದ ಅವರದ್ದು ಈ ದಾಂಪತ್ಯ ಕಲಹದಲ್ಲಿ ಯಾವುದೇ ತಪ್ಪಿಲ್ಲ. ವಿನಾಕಾರಣ ನನ್ನ ಪತಿಯನ್ನು ಈ ಪ್ರಕರಣದಲ್ಲಿ ಸಿಕ್ಕಿಸಲಾಗುತ್ತಿದೆ. ನಾನು ನಮ್ಮ ಮಗನೊಂದಿಗೆ ಕಿರಾಣಿ ವ್ಯಾಪಾರ ಮಾಡಿಕೊಂಡಿದ್ದೇವೆ. ನನ್ನ ಪತಿ ಯಾವುದೇ ಮಾಟ ಮಂತ್ರ ಮಾಡುವಂತವನಲ್ಲ. ಗಂಗಾ ಕುಲಕಣಿ೯ ಪರಿಚಯವೇ ನಮಗಿಲ್ಲ,' ಎಂದಿದ್ದಾರೆ.

'ಈಗ ನನ್ನ ಪತಿಯನ್ನು ಪೊಲೀಸರು ವಶಕ್ಕೆ ಪಡೆದಿರುವ ವಿಷಯ ಗೊತ್ತಾಗಿದೆ. ಅವರನ್ನು ಜಾಮೀನು ಮೂಲಕ ಹೊರ ತರುವ ಪ್ರಯತ್ನ ಮಾಡುತ್ತೇವೆ. ಇಬ್ಬರು ಪೋಲಿಸರು ಬಂದು ನನ್ನ ಪತಿಯನ್ನು ಕರೆದೋಯ್ದರು. ಎಲ್ಲವೂ ಟಿವಿಯಲ್ಲಿ ಬಂದ ಮೇಲೆಯೇ ನಮಗೆ ಗೊತ್ತಾಗಿದ್ದು, ನನ್ನ ಪತಿ ಶಿವಾನಂದರದ್ದು ನಿರಪರಾಧಿ,' ಎಂದು ಹೇಳಿದ್ದಾರೆ.

"

click me!